Article Image

ಶಿಶಿಲ: ಪ್ರೀತಮ್ ಜೈನ್ ಇಂಡಿಯನ್ ಆರ್ಮಿಗೆ ಆಯ್ಕೆ

Article Image

ಶಿಶಿಲ: ಪ್ರೀತಮ್ ಜೈನ್ ಇಂಡಿಯನ್ ಆರ್ಮಿಗೆ ಆಯ್ಕೆ

ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಕ್ಷೇತ್ರ ಚಂದ್ರಪುರ ಶಿಶಿಲದ ಆಡಳಿತ ಮಂಡಳಿ ವತಿಯಿಂದ ಬೆಳ್ತಂಗಡಿಯ ಕೊಕ್ಕಡದ ಎಳ್ನೀರಿನ ಸಂಪತ್ ಕುಮಾರ್ ಹಾಗೂ ಶೋಭಿತರವರ ಪುತ್ರ ಪ್ರೀತಮ್ ಜೈನ್ ಇವರು ಇಂಡಿಯನ್ ಆರ್ಮಿಗೆ ಆಯ್ಕೆಯಾಗಿರುವುದಕ್ಕೆ ಸನ್ಮಾನಿಸಿ, ಶುಭಹಾರೈಸಲಾಯಿತು. ಇವರು ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಬಿಕಾಂ ಪದವಿಧರರಾಗಿದ್ದು ಕೃಷಿಕರಾಗಿರುತ್ತಾರೆ. ಶಿಶಿಲ ಬಸದಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರಿಯರಾಗುತ್ತಿದ್ದರು. ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಹೆಚ್. ವಿಜಯ ಕುಮಾರ್ ಜೈನ್, ಫಣಿರಾಜ್ ಜೈನ್, ಪಿ ಅತಶಯ ಜೈನ್, ಪ್ರೀತಮ್ ಜೈನ್, ಸಂಪತ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

Article Image

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

‘ಧಾರವಾಡದಲ್ಲಿ ಪ್ರಪ್ರಥಮ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ವತಿಯಿಂದ ಹಿರಿಯ ಚಿತ್ರಕಲಾವಿದ ಮಹಾವೀರ ರಾಯಪ್ಪಾ ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳ ಪೈಕಿ ಒಂದು ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ, ಅವರ ಸಾಧನೆಯನ್ನು ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ “ಸಾಧಕರೊಂದಿಗೆ ಸಂವಾದ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಎಮ್. ಆರ್. ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಸಂವಾದ ಮಾಡಲಾಗುತ್ತಿದೆ ಎಂದರು. ಎಮ್. ಆರ್. ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆ ಗುರುತಿಸಿ, 2023ರಲ್ಲಿ ಜರುಗಿದ ಹುಕ್ಕೇರಿ ತಾಲೂಕಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಮ್. ಆರ್. ಬಾಳಿಕಾಯಿ ಅವರು, ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತ, ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಪಿಸುತ್ತೇನೆ ಎಂದರು. ಜೀವನದಲ್ಲಿ ನಾವು ಎಷ್ಟು ಕಷ್ಟಗಳನ್ನು ಅನುಭವಿಸಿತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅನುಭವವೇ ನನ್ನ ಜೀವನಕ್ಕೆ ದಾರಿದೀಪವಾಗಿದೆ. ಸತ್ಯದ ಹಾದಿಯಲ್ಲಿ ನಡೆದರೆ ಜೀವನ ಸುಗಮವಾಗಿರುತ್ತದೆ ಎಂದರು. ತಮ್ಮ ಸಾಧನೆಯ ಮಾರ್ಗವನ್ನು ಮತ್ತು ಗುರು-ಶಿಷ್ಯರುಗಳ ಬೆಸುಗೆಯ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು. ನಂತರ ಜರುಗಿದ ಸಂವಾದದಲ್ಲಿ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ. ಬಿ. ಎಲ್. ಚೌಹಾನ, ಪಿ. ಎಸ್. ಕಡೇಮನಿ, ಡಾ. ಎಸ್. ಸಿ. ಪಾಟೀಲ, ಎಮ್. ಎಸ್. ಚೌಧರಿ, ಡಿ. ಎಮ್. ಬಡಿಗೇರ, ಬಿ. ಐ. ಈಳಗೇರ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಎಮ್. ಆರ್. ಬಾಳಿಕಾಯಿ ಅವರ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸುರೇಶ ಹಾಲಭಾವಿ, ಡಾ. ಶಶಿಧರ ನರೇಂದ್ರ, ಡಾ. ಬಸವರಾಜ ಕುರಿಯವರ, ಎನ್. ಆರ್. ನಾಯ್ಕರ್, ಡಾ. ರಾಯಪ್ಪಾ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್. ಬಿ. ಕಂಕಣವಾಡಿ, ರಮೇಶಕುಮಾರ ಬಾಳಿಕಾಯಿ, ಎಸ್. ಪಿ. ಸತ್ಯನಾಯಕ ಇನ್ನಿತರರು ಇದ್ದರು. ವರದಿ: ಡಾ. ರಾಯಪ್ಪಾ ಬಾಳಿಕಾಯಿ

ಅಮಿತ್ ಕೆ ಜೈನ್ ಅವರಿಗೆ PHD ಪದವಿ ಪ್ರದಾನ

Article Image

ಅಮಿತ್ ಕೆ ಜೈನ್ ಅವರಿಗೆ PHD ಪದವಿ ಪ್ರದಾನ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಉಪನ್ಯಾಸಕರಾದ ಅಮಿತ್ ಕೆ ಜೈನ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಯಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಇವರು ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ “Facial Expression Classification Through Machine Learning Algorithms: Extracting Discernible Patterns for Enhanced Recognition” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಯಶಸ್ವಿಯಾಗಿ ಪ್ರಬಂಧ ಮಂಡಿಸಿದ್ದಾರೆ. ಅವರ ಸಂಶೋಧನೆಯು ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಯಂತ್ರ ಕಲಿಕೆ (Machine Learning) ತಂತ್ರಜ್ಞಾನಗಳ ನೆರವಿನಿಂದ ಮಾನವರ ಮುಖಭಾವಗಳನ್ನು ನಿಖರವಾಗಿ ಗುರುತಿಸುವ ವಿಧಾನಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ. ಸಂತೋಷ, ದುಃಖ, ಕೋಪ, ಆಶ್ಚರ್ಯ, ಭಯ ಸೇರಿದಂತೆ ವಿವಿಧ ಭಾವನೆಗಳನ್ನು ಕಂಪ್ಯೂಟರ್ ವ್ಯವಸ್ಥೆಗಳು ಸ್ವಯಂಚಾಲಿತವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವ ಹೊಸ ತಂತ್ರಗಳನ್ನು ಈ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ. ಮುಖಭಾವ ಗುರುತಿಸುವಿಕೆ (Facial Expression Recognition) ತಂತ್ರಜ್ಞಾನವು ಭವಿಷ್ಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಉಪಯುಕ್ತವಾಗುವ ನಿರೀಕ್ಷೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ಭಾವನಾತ್ಮಕ ಸ್ಥಿತಿಯನ್ನು ವಿಶ್ಲೇಷಿಸಲು, ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ, ಆಟಿಸಂ ಹಾಗೂ ವಿಶೇಷ ಅಗತ್ಯತೆ ಹೊಂದಿರುವ ಮಕ್ಕಳ ವರ್ತನೆ ಅಧ್ಯಯನಕ್ಕೆ ಇದು ನೆರವಾಗಲಿದೆ. ಜೊತೆಗೆ ಸ್ಮಾರ್ಟ್ ಶಿಕ್ಷಣ ವ್ಯವಸ್ಥೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಅಳೆಯಲು, ಭದ್ರತಾ ವ್ಯವಸ್ಥೆಗಳಲ್ಲಿ ಅನುಮಾನಾಸ್ಪದ ವರ್ತನೆಗಳನ್ನು ಗುರುತಿಸಲು ಹಾಗೂ ಮಾನವ-ಯಂತ್ರ ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ಮುಂದಿನ ದಿನಗಳಲ್ಲಿ ರೋಬೋಟಿಕ್ಸ್, ಸ್ವಯಂಚಾಲಿತ ವಾಹನಗಳು, ಡಿಜಿಟಲ್ ಆರೋಗ್ಯ ಸೇವೆಗಳು ಹಾಗೂ ಸ್ಮಾರ್ಟ್ ಸಾಧನಗಳ ಅಭಿವೃದ್ಧಿಯಲ್ಲಿಯೂ ಇಂತಹ ಸಂಶೋಧನೆಗಳು ಹೊಸ ಸಾಧ್ಯತೆಗಳನ್ನು ತೆರೆದಿಡಲಿವೆ. ಅಮಿತ್ ಕೆ ಜೈನ್ ಅವರು ಸಂಸೆಯ ನಿವೃತ್ತ ಉಪ ತಹಶೀಲ್ದಾರ್ ಕೀರ್ತಿ ಜೈನ್ ಹಾಗೂ ಕಲ್ಪನಾ ಕೆ ಜೈನ್ ದಂಪತಿಗಳ ಪುತ್ರ. ಪ್ರಸ್ತುತ ಇವರು ಮೂಡಬಿದಿರೆಯಲ್ಲಿ ನೆಲೆಸಿರುತ್ತಾರೆ.

ರಸಿಕ ಕಂಬಳಿ- ನಿಧನ

Article Image

ರಸಿಕ ಕಂಬಳಿ- ನಿಧನ

ಮೂಡುಬಿದಿರೆ: ಮಹಾವೀರ ಕಾಲೇಜು ಬಳಿಯ ಕಂಬಳಿ ಬಾಗ್ ನಿವಾಸಿ, ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕ, ಪೆರಿಂಜೆ ಗುತ್ತು ಜಯರಾಜ ಕಂಬಳಿರವರ ಧರ್ಮಪತ್ನಿ ರಸಿಕ ಕಂಬಳಿರವರು ಇಂದು ನಿಧನ ಹೊಂದಿದರು. ಇವರು ಪತಿ ಮತ್ತು ಮಕ್ಕಳಾದ ನೌವೇಶ್ ಕಂಬಳಿ, ನವ್ಯ ಕಂಬಳಿ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ಶ್ರುತ ಪಂಚಮಿ- ಜೇಷ್ಠ ಶುದ್ಧ ಪಂಚಮಿ

Article Image

ಶ್ರುತ ಪಂಚಮಿ- ಜೇಷ್ಠ ಶುದ್ಧ ಪಂಚಮಿ

ಭರತ ಭೂಮಿಯಲ್ಲಿ ಜೈನ ಧರ್ಮವು ಅತ್ಯಂತ ಪುರಾತನ ಧರ್ಮವಾಗಿದೆ.ಅಹಿಂಸಾಧಾರಿತ ಜೈನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ.ಈ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ.ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿದ್ದರೂ ಅದರ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆಯಿಲ್ಲ. ಜೈನ ಸಂಪ್ರದಾಯದ ಎಲ್ಲಾ ಹಬ್ಬಗಳೂ ಆತ್ಮಶುದ್ಧಿ ಮತ್ತು ಆತ್ಮಕಲ್ಯಾಣಕ್ಕಾಗಿ ಇವೆ. ಶ್ರುತ ಎಂದರೆ ಸಂಸ್ಕೃತದಲ್ಲಿ ಕೇಳಿದ್ದು ಅಥವಾ ಕೇಳಿಸಿಕೊಂಡಿರುವ ಎಂದರ್ಥ. ಪಂಚಮಿ ಎಂದರೆ ಪ್ರತೀ ಚಾಂದ್ರಮಾನ ಮಾಸದ ಶುಕ್ಲ ಅಥವಾ ಕೃಷ್ಣ ಪಕ್ಷದ ಐದನೇ ದಿನ ( ತಿಥಿ).ಈ ದಿನವು ಅತ್ಯಂತ ಮಂಗಳಕರವಾಗಿದ್ದು, ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಶ್ರುತ ಎಂದರೆ ಇನ್ನೊಂದು ಅರ್ಥ ಶಾಸ್ತ್ರ ಶ್ರುತ ಪಂಚಮಿಯು ಜೈನರಿಗೆ ಮಹತ್ವದ ಹಬ್ಬವಾಗಿದ್ದು, ಇದನ್ನು ಜೇಷ್ಠ ಶುದ್ಧ ಪಂಚಮಿಯಂದು ಆಚರಿಸುತ್ತಾರೆ. ಆ ದಿನ ಜಿನ ಮಂದಿರಗಳಲ್ಲಿ ಸರಸ್ವತಿ ಮಾತೆಯ ಪೂಜೆಯನ್ನೂ , ಶಾಸ್ತ್ರ ಗ್ರಂಥಗಳ ಪೂಜೆಯನ್ನೂ ಮಾಡುತ್ತಾರೆ. ತೀರ್ಥಂಕರರ ವಾಣಿಯೇ ಸರಸ್ವತಿ,ಎಂಬುವುದು ಜೈನರ ಸಿದ್ಧಾಂತ.ಈ ದೃಷ್ಟಿಯಿಂದ ಶ್ರುತ ಪಂಚಮಿಯ ಆರಾಧನೆಯೆಂದರೆ, ಜೈನರಿಗೆ ಜ್ಞಾನದ ಆರಾಧನೆಯೇ ಆಗಿದೆಯೆನ್ನಬಹುದು.ಈ ಜ್ಞಾನದ ಅಥವಾ ಶಾಸ್ತ್ರದ ಮೂಲ ಪುರುಷರು ತೀರ್ಥಂಕರರು.ಅವರ ದಿವ್ಯ ಧ್ವನಿಯ ಸಾರವೇ ಶ್ರುತ. ಈ ಭರತ ಕ್ಷೇತ್ರದಲ್ಲಿ ಜೈನ ಶಾಸ್ತ್ರಕ್ಕೆ ಮೂಲ ಪುರುಷರಾದ ವೃಷಭ ಮೊದಲಾದ ಇಪ್ಪತ್ತನಾಲ್ಕು ತೀರ್ಥಂಕರರು ಯಥಾಕ್ರಮವಾಗಿ ತಮ್ಮ ತಮ್ಮ ಕಾಲದಲ್ಲಿ ಶಾಸ್ತ್ರದ ಉಪದೇಶ ಮಾಡಿ ಜೈನ ಮತವನ್ನು ಪ್ರಕಾಶಪಡಿಸಿದರು. ವರ್ತಮಾನ ಕಾಲದ ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಕ್ರಿ.ಪೂ.569 ರಲ್ಲಿ ಜನಿಸಿ,ಬಾಲ್ಯ ಕಾಲವನ್ನು ಕಳೆದ ನಂತರ ವೈಭವವನ್ನು ತೊರೆದು ಮುನಿ ದೀಕ್ಷೆಯನ್ನು ಹೊಂದಿ ತಪಸ್ಸಿನಲ್ಲಿ ತೊಡಗಿದರು.ಹನ್ನೆರಡು ವರ್ಷಗಳವರೆಗೆ ಅಖಂಡ ತಪಸ್ಸನ್ನು ಆಚರಿಸಿ,ಘಾತಿಕರ್ಮಗಳನ್ನು ಕೆಡಿಸಿ,ಕೇವಲ ಜ್ಞಾನವನ್ನು ಪಡೆದರು. ದಿವ್ಯ ಸಮವಸರಣದಲ್ಲಿ ವಿರಾಜಮಾನರಾದ ಭಗವಂತನ ಮುಖ ಕಮಲದಲ್ಲಿ ಓಂ ಕಾರ ದಿವ್ಯಧ್ವನಿ ಹೊರಟು ದ್ವಾದಶಾಂಗ ಚತುರ್ದಶ ಪೂರ್ವ ಶಾಸ್ತ್ರರೂಪಿ ಉಪದೇಶವನ್ನು ಆಚಾರ್ಯ ಪರಂಪರೆಯು ನಾಲ್ಕು ಅನುಯೋಗ ಗ್ರಂಥಗಳಲ್ಲಿ ಹಿಡಿದಿಟ್ಟಿತು. ಅವು ಈ ಕೆಳಗಿನಂತಿವೆ-; ಪ್ರಥಮಾನುಯೋಗ;- ಕೋಟ್ಯಾನುಕೋಟಿ ವರುಷಗಳಿಂದ ಹಿಡಿದು ಆ ಕಾಲದವರೆಗಿನ ಪುಣ್ಯ ಪುರುಷರ ಚರಿತ್ರೆಯೇ ಪ್ರಥಮಾನುಯೋಗ. 2.ಕರಣಾನುಯೋಗ;- ಇದು ಯುಗ ಪರಿವರ್ತನೆ,ಲೋಕಾ ಲೋಕಾ ವಿಭಾಗ,ನರಕ ಚತುರ್ಗತಿಯನ್ನು ತಿಳಿಸುವುದು. 3.ಚರಣಾನುಯೋಗ-; ಗೃಹಸ್ಥ ಮತ್ತು ತ್ಯಾಗಿಗಳ ಆಚರಣೆಯನ್ನು ತಿಳಿಸುವುದೇ ಚರಣಾನುಯೋಗ. 4.ದ್ರವ್ಯಾನುಯೋಗ-; ಜೀವಾದಿ ಪದಾರ್ಥಗಳ ಬಗ್ಗೆ ತಿಳಿಸುವ ವೇದವೇ ದ್ರವ್ಯಾನುಯೋಗ. ಈ ನಾಲ್ಕು ಅಂಗಗಳನ್ನು ಹನ್ನೆರಡು ವಿಭಾಗಗಳನ್ನಾಗಿ ಮಾಡಲಾಗಿದೆ.ಈ ಎಲ್ಲಾ ವಿಭಾಗಗಳನ್ನು ಸೇರಿಸಿ,ಜೈನರ ಪವಿತ್ರ ಗ್ರಂಥ ದ್ವಾದಶಾಂಗ ಎಂದು ಕರೆಯಲಾಗಿದೆ. ಹನ್ನೆರಡು ಅಂಗಗಳು ಈ ಕೆಳಗಿನಂತಿವೆ -; ಆಚಾರಾಂಗ, ಸೂತ್ರ ಕೃತಾಂಗ,ಸ್ಥಾನಾಂಗ,ಸಮವಾಯಾಂಗ,ವ್ಯಾಖ್ಯಾಪ್ರಜ್ಞಪ್ತಂಗ,ಜ್ಞಾತೃಕೃಥಾಂಗ,ಉಪಾಸಕಾಧ್ಯಯನಾಂಗ,ಅಂತಕೃದ್ದಶಾಂಗ,ಅನುತ್ತರೌಪ ಪಾದಿಕದಶಾಂಗ,ಪ್ರಶ್ನಾ ವ್ಯಾಕರಣಾಂಗ,ವಿಪಾಕಸೂತ್ರಾಂಗ, ದೃಷ್ಟಿವಾದಾಂಗ.ಭ.ಮಹಾವೀರರು ಈ ವೇದ ಶಾಸ್ತ್ರವನ್ನು ದಿವ್ಯಧ್ವನಿ ಮೂಲಕ ಸಮವಸರಣದಲ್ಲಿ ಉಪದೇಶ ಮಾಡಿ ಕ್ರಿ.ಪೂ.569 ರಲ್ಲಿ ನಿರ್ವಾಣ ಹೊಂದಿದರು.ಆ ನಂತರ ಗೌತಮ ಗಣಧರರು, ಆಚಾರ್ಯರು, ದಿವ್ಯಧ್ವನಿಯನ್ನು ಧಾರಣೆ ಮಾಡಿ ಇದನ್ನು ಉಪದೇಶ ಮಾಡುತ್ತಾ ಬಂದರು.ಈ ವೇದ ಶಾಸ್ತ್ರಗಳನ್ನು,ಅಪಾರವಾದ ಶಬ್ದ ರಾಶಿಯನ್ನು ಬರೆಯುವ ಪದ್ಧತಿ ಇರಲಿಲ್ಲ.ಸಾಧ್ಯವೂ ಇರಲಿಲ್ಲ.ಹೀಗೆ ಮಹಾವೀರ ಭಗವಂತರ ನಿರ್ವಾಣದ ಬಳಿಕ ಒಬ್ಬರ ನಂತರ ಒಬ್ಬರಾಗಿ 33 ಜನ ಆಚಾರ್ಯರು ನಿರಂತರ ಉಪದೇಶವನ್ನು ನೀಡಿದರು. ಆ ಕಾಲದವರೆಗೆ ವೇದಶಾಸ್ತ್ರ ತಿಳಿದ ಕುಶಾಗ್ರ ಬುದ್ಧಿಯ ಮುನಿಗಳು ತಮ್ಮ ಧಾರಣಾ ಶಕ್ತಿಯಿಂದ ಗ್ರಹಣ ಮಾಡುತ್ತಾ ಬಂದರಲ್ಲದೆ ಬರೆದಿಡುವ ಪದ್ಧತಿ ಇರಲಿಲ್ಲ.ಅಂದರೆ ಶಾಸ್ತ್ರವು ಶ್ರುತ ರೂಪದಲ್ಲಿಯೇ ಇತ್ತು,ಅದು ಲಿಪಿಬದ್ಧಗೊಂಡಿರಲಿಲ್ಲ. ಆ ಅವಸರ್ಪಿಣಿ ಕಾಲದಲ್ಲಿ ( ಋದ್ಧಿ ಹೀನ ಕಾಲ) ಮನುಷ್ಯನ ಶರೀರ ಪ್ರಮಾಣ, ಆಯುಷ್ಯ ಪ್ರಮಾಣ,ಬುದ್ಧಿ ಶಕ್ತಿ....ಎಲ್ಲವೂ ಕುಂದುತ್ತಾ ಬರುವುದು ಸ್ವಾಭಾವಿಕವಾದುದರಿಂದ ಗುರು ಪರಂಪರೆಯ ಧಾರಣಾ ಶಕ್ತಿ ( ನೆನಪಿನ ಶಕ್ತಿ) ಕಡಿಮೆಯಾಗುತ್ತಾ ಬಂತು.ಕ್ರಿ.ಶ.156 ನೇ ವರ್ಷದ ಕಾಲಕ್ಕೆ ಅಹಿಬಲ್ಯಾಚಾರ್ಯ ಮೊದಲಾದ ಆಚಾರ್ಯರಲ್ಲಿ ಕೇವಲ ಒಂದು ಅಂಗದ ಜ್ಞಾನ ಮಾತ್ರ ಉಳಿದಿತ್ತು.ಜೈನ ಪುರಾಣದ ಉಲ್ಲೇಖದ ಪ್ರಕಾರ ಶಾಸ್ತ್ರವು ಲಿಪಿಬದ್ಧಗೊಂಡ ಹಿನ್ನೆಲೆ ಈ ರೀತಿಯಾಗಿದೆ-;....ಈ ಸಮಯದಲ್ಲಿ ಜೈನ ಮಹಾಮುನಿ ಧರಸೇನಾಚಾರ್ಯರು ಎಂದಿನಂತೆ ಪ್ರವಚನ ಮಾಡುವಾಗ ಅವರು ಹೇಳಿದ ವಚನವನ್ನು ಪುನಃ ಹೇಳಿ ಎಂದು ನೆರೆದ ಭಕ್ತರು ಒಬ್ಬರು ಹೇಳಿದರಂತೆ.ಆಗ ಆಚಾರ್ಯರಿಗೆ ಮನುಷ್ಯರ ಸ್ಮರಣ ಶಕ್ತಿ ಕಡಿಮೆಯಾಗುತ್ತಾ ಇದೆ,ಅಲ್ಲದೆ ಪ್ರವಚನ ಕೇಳುವವರು ಕೂಡಾ ಕಡಿಮೆ ಜನರು ಎಂದು ತಿಳಿಯಿತು.ಆಗ ಅವರು ಜೈನರ ತೀರ್ಥ ಕ್ಷೇತ್ರವಾದ ಗಿರ್ನಾರ್ ನಲ್ಲಿ ಧ್ಯಾನ ಮಗ್ನರಾಗಿದ್ದರು.ಹೇಗಾದರೂ ಮಾಡಿ ಪರಮ ಪವಿತ್ರ ಶ್ರುತ ವಾಣಿಯ ರಕ್ಷಣೆ ಮಾಡಬೇಕೆನ್ನುವ ಸಂಕಲ್ಪ ಕೈಗೊಂಡರು. ಮುಂದಿನ ಕ್ರಮವಾಗಿ ದಕ್ಷಿಣ ಭಾರತದಿಂದ ಯೋಗ್ಯ ಶಿಷ್ಯರನ್ನು ಕಳುಹಿಸಬೇಕೆಂದು ಆಚಾರ್ಯರಿಗೆ ತಿಳಿಸಿದರು.ಆ ಪ್ರಕಾರ ಆಚಾರ್ಯರು ಇಬ್ಬರು ಅತ್ಯಂತ ಯೋಗ್ಯ ಶಿಷ್ಯರನ್ನು ಗಿರ್ ನಾರ್ ಗೆ ಕಳುಹಿಸಿದರು.ಅದೇ ದಿನ ರಾತ್ರಿ ಧರಸೇನಾಚಾರ್ಯರಿಗೆ ಒಂದು ಶುಭ ಸ್ವಪ್ನ ಬಿತ್ತು.ಆ ಸ್ವಪ್ನದಲ್ಲಿ ಎರಡು ಶ್ವೇತ ವರ್ಣದ ಎತ್ತುಗಳನ್ನು ಕಂಡರು.ಈ ಸ್ವಪ್ನದ ಫಲವನ್ನು ತಿಳಿದ ಧರಸೇನಾಚಾರ್ಯರು ಇಲ್ಲಿಗೆ ಬರುವ ಶಿಷ್ಯರು ಸಮರ್ಥರೂ ಅತೀ ವಿನಯಿಗಳೂ ಎಂದು ತಿಳಿದರು.ಮರುದಿನವೇ ಇಬ್ಬರು ಶಿಷ್ಯರು ಗಿರ್ ನಾರ್ ಗೆ ಬಂದು ಧರಸೇನಾಚಾರ್ಯರ ಚರಣ ಕಮಲಗಳಿಗೆ ಭಕ್ತಿ ಪೂರ್ವಕ ನಮಸ್ಕಾರ ಮಾಡಿದರು.ಆಚಾರ್ಯರು ಅವರ ಪಾಂಡಿತ್ಯ ಪರೀಕ್ಷೆ ಮಾಡಲು ಬಯಸಿದರು.ಅದಕ್ಕಾಗಿ ಒಬ್ಬರಿಗೆ ಒಂದು ಅಕ್ಷರ ಕಡಿಮೆ ಇರುವ ವಿದ್ಯಾಮಂತ್ರವನ್ನೂ, ಇನ್ನೊಬ್ಬರಿಗೆ ಒಂದು ಅಕ್ಷರ ಹೆಚ್ಚು ಇರುವ ವಿದ್ಯಾ ಮಂತ್ರವನ್ನು ನೀಡಿದರು.ಉಪವಾಸ ವ್ರತಾದಿಗಳನ್ನು ಮಾಡಿ ನಿಯತ್ತಿನಲ್ಲಿ ಗ್ರಂಥ ರಚನೆ ಮಾಡಲು ಆದೇಶಿಸಿದರು. ಶಿಷ್ಯರು ವಿದ್ಯಾದೇವಿಯನ್ನು ಭಕ್ತಿಯಿಂದ ಸ್ಮರಿಸಿದಾಗ ಅವರ ಎದುರು ಎರಡು ದೇವಿಯರು ಪ್ರತ್ಯಕ್ಷರಾದರು.ಆ ದೇವಿಯರು ಹೇಗಿದ್ದರು....? ಒಂದು ದೇವಿಗೆ ಒಂದೇ ಕಣ್ಣು.ಇನ್ನೊಂದು ದೇವಿಗೆ ಅಧಿಕ ಹಲ್ಲು ಇತ್ತು.ಒಟ್ಟಿನಲ್ಲಿ ವಿಕಾರ ರೂಪದ ದೇವಿಯರು ಪ್ರತ್ಯಕ್ಷವಾಗಿದ್ದರು.( ಈ ದೇವಿಯರ ವಿಗ್ರಹಗಳು ಶ್ರೀ ಕ್ಷೇತ್ರ ಕಂಬದಹಳ್ಳಿಯಲ್ಲಿದೆ ). ಇದನ್ನು ತಿಳಿದ ಶಿಷ್ಯರು ಗುರುಗಳು ಕೊಟ್ಟಿದ್ದ ವಿದ್ಯಾ ಮಂತ್ರದಲ್ಲಿ ಕಡಿಮೆ ಮತ್ತು ಅಧಿಕ ಅಕ್ಷರಗಳಿದ್ದುದನ್ನು ಗಮನಿಸಿ ಅದನ್ನು ಸರಿಪಡಿಸಿದರು.ಆಗ ಎರಡು ಕಣ್ಣುಗಳಿರುವ,ಸುಂದರವಾದ ದಂತಪಂಕ್ತಿಯುಳ್ಳ ಸುಂದರವಾದ ವಿದ್ಯಾದೇವತೆಗಳು ಪ್ರತ್ಯಕ್ಷರಾದರು. "ನಾವು ಏನು ಮಾಡಬೇಕು, ಆಜ್ಞೆ ಕೊಡಿ" ಎಂದರು.ಆಗ ಮುನಿ ಶ್ರೀಯವರು "ನೀವು ಏನೂ ಮಾಡಬೇಕಾಗಿಲ್ಲ, ನಾವು ಗುರುಗಳ ಆಜ್ಞೆಯನ್ನು ಪಾಲಿಸಲು ವಿದ್ಯಾದೇವಿಯ ಆರಾಧನೆಯನ್ನು ಮಾಡಿದೆವು",ಎಂದರು.ಅದನ್ನು ಕೇಳಿ ದೇವಿಯರು ಅವರವರ ಸ್ಥಾನಕ್ಕೆ ಹೋದರು.ಧರಸೇನಾಚಾರ್ಯರ ಪದತಲದಲ್ಲಿ ಈ ಮುನಿಗಳಿಬ್ಬರೂ ಷಟ್ಖಂಡಾಗಮದ ಗಂಭೀರ ಅಧ್ಯಯನ ಮಾಡಿದರು.ಗುರುಗಳು ತನ್ನ ಮೃತ್ಯು ಸಮೀಪಿಸಿದುದನ್ನು ತಿಳಿದು ಶಿಷ್ಯರನ್ನು ವಿಹಾರಕ್ಕೆ ಕಳುಹಿಸಿದರು.ಪುಷ್ಪದಂತರು ಬನವಾಸಿಗೂ,ಭೂತಬಲಿ ಮಥುರಾ ನಗರಕ್ಕೂ ಬಂದರು.ಪುಷ್ಪದಂತರು ಷಟ್ಖಂಡಾಗಮವನ್ನು ಲಿಪಿಬದ್ಧ ಗೊಳಿಸಲು ಆರಂಭಿಸಿದರು.ಇವರು ಪ್ರಥಮ ಖಂಡದ 177 ಸೂತ್ರಗಳನ್ನು ಮಾತ್ರ ಪೂರ್ಣಗೊಳಿಸಿದರು.ನಂತರ ತನ್ನ ಅಲ್ಪ ಆಯುವಿನ ಅರಿವಾಗಿ ಅದನ್ನು ಪೂರ್ಣಗೊಳಿಸಲು ಭೂತಬಲಿ ಮಹಾರಾಜರಿಗೆ ರವಾನಿಸಿದರು. ಭೂತಬಲಿ ಮಹಾರಾಜರು ಪ್ರಥಮ ಖಂಡದ ಶೇಷ ಭಾಗವನ್ನೂ ಮತ್ತು ಉಳಿದ ಐದು ಖಂಡಗಳನ್ನೂ ಸಂಪೂರ್ಣ ಮಾಡಿದರು.ಹೀಗೆ ಜಿನೇಂದ್ರ ಭಗವಂತರು ಪ್ರತಿಪಾದಿಸಿದ ಮೌಲ್ಯಗಳು ಆಚಾರ್ಯ ಧರಸೇನರ ನಿಮಿತ್ತದಿಂದ ಆಚಾರ್ಯ ಪುಷ್ಪದಂತ, ಮತ್ತು ಆಚಾರ್ಯ ಭೂತಬಲಿಮಹಾರಾಜರ ಬರವಣಿಗೆಯಿಂದ ಪರಮ ಪವಿತ್ರ ಷಟ್ಖಂಡಾಗಮ ಜೇಷ್ಠ ಶುದ್ಧ ಪಂಚಮಿಯಂದು ಲಿಪಿ ಬದ್ಧವಾಗಿ ರೂಪುಗೊಂಡಿತು. ಈ ಗ್ರಂಥ ಮುಂದೆ ಮುಸ್ಲಿಮರ ಆಕ್ರಮಣ ಆದಾಗ ಆ ಗ್ರಂಥಗಳನ್ನು ಶ್ರವಣಬೆಳಗೊಳದ ಮಹಾ ಸ್ವಾಮೀಜಿಯವರಿಗೆ ಒಪ್ಪಿಸಿದ ದಿನ ಕೂಡಾ ಜೇಷ್ಠ ಶುದ್ಧ ಪಂಚಮಿ. ಕಾಲಾಂತರದಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ವಿಷ್ಣುವರ್ಧನ ನಾದಾಗ ಜೈನ ಬಸದಿಗಳನ್ನು ಕೆಡವಿದಾಗ ಶಾಸನ ಗ್ರಂಥದಲ್ಲಿ ಇವೇ ಗ್ರಂಥಗಳನ್ನು ಮೂಡುಬಿದಿರೆ ಭಟ್ಟಾರಕರು ಇವರಿಗೆ ಐದು ಜನ ಸ್ಥಳೀಯ ಶೆಟ್ಟರ ಸಮ್ಮುಖದಲ್ಲಿ ಒಪ್ಪಿಸಲಾಯಿತಂತೆ.ಆ ದಿನ ಸಹಾ ಜೇಷ್ಠ ಶುದ್ಧ ಪಂಚಮಿ. ಮುಂದೆ 1999 ರ ನಂತರ ಶ್ರವಣಬೆಳಗೊಳದ ಧರ್ಮ ಯೋಗಿ, ಕರ್ಮಯೋಗಿ,ಭಟ್ಟಾರಕ ಮಹಾ ಶ್ರೀ ಚಾರುಕೀರ್ತಿ ಸ್ವಾಮೀಜಿ ಯವರು ಈ ಮೂರು ಗ್ರಂಥಗಳನ್ನು ವಿದ್ವಾಂಸರ ಸಹಾಯದಿಂದ ಕನ್ನಡ ಭಾಷೆಗೆ ಭಾಷಾಂತರ ಮಾಡಿ ಬಿಡುಗಡೆ ಮಾಡಿದ ದಿನ ಕೂಡಾ ಜೇಷ್ಠ ಶುದ್ಧ ಪಂಚಮಿ. (ಆದುದರಿಂದ ಶ್ರವಣಬೆಳಗೊಳದಲ್ಲಿ ಶ್ರುತ ಪಂಚಮಿ ಹಬ್ಬ ವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ). ಈ ಎಲ್ಲಾ ಕಾರಣಗಳಿಂದ ಶ್ರುತ ಪಂಚಮಿ ಜೈನ ಶಾಸ್ತ್ರದ ಶ್ರೇಷ್ಠತೆಯನ್ನು ಅರ್ಥೈಸುವ ಪವಿತ್ರ ಹಬ್ಬವಾಗಿದೆ. ಲಿಪಿಬದ್ಧವಾಗಿ ರೂಪುಗೊಂಡ ಗ್ರಂಥವನ್ನು ಜೇಷ್ಠ ಶುದ್ಧ ಪಂಚಮಿಯಂದು ಮುನಿ,ಆರ್ಯಿಕಾ,ಶ್ರಾವಕ ಶ್ರಾವಿಕೆಯರೆಂಬ ಚತು:ಸ್ಸಂಗ ಸೇರಿಸಿ ಆ ಗ್ರಂಥಗಳನ್ನೆಲ್ಲಾ ಪೂಜಿಸಿದರು.ಅಂದಿನಿಂದ ಜೈನರಿಗೆ ಜೇಷ್ಠ ಶುದ್ಧ ಪಂಚಮಿ ಎಂಬ ಪವಿತ್ರ ಪರ್ವ ತಿಥಿಯಾಗಿರುವುದು.ಈ ಪರ್ವವನ್ನು ನಾವು ಭಕ್ತಿ ಪೂರ್ವಕವಾಗಿ ಆಚರಿಸುತ್ತಿದ್ದೇವೆ. ಅದೇ ಶ್ರುತ ಪಂಚಮಿ ಜೈನಾಗಮ ನಮ್ಮ ಏಳಿಗೆಗೆ ಕಾರಣ.ಇವುಗಳನ್ನು ಉಳಿಸಿ, ಬೆಳೆಸಿದ ಗಣಧರಾದಿ ಆಚಾರ್ಯ ಪರಂಪರೆಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಶ್ರುತ ಪಂಚಮಿಯ ಆಚರಣೆಯ ಹಿಂದಿನ ಉದ್ದೇಶ. ಶಾಸ್ತ್ರ, ಗ್ರಂಥಗಳನ್ನು ದಿನದಲ್ಲಿ ಕನಿಷ್ಠ ಹತ್ತು ನಿಮಿಷ ಆದರೂ ಓದಿ, ನಮ್ಮ ಜ್ಞಾನವನ್ನು ಇನ್ನೊಬ್ಬರಿಗೂ ಹಂಚಿಕೊಂಡು ಜಿನವಾಣಿಯ ಸೇವೆ ಮಾಡೋಣ..ಎಂಬ ಶುಭ ಸಂಕಲ್ಪವನ್ನು ಈ ಶುಭ ದಿನದಂದು ಮಾಡೋಣ. ಮಾಲತಿ ವಸಂತರಾಜ್, ಕಾರ್ಕಳ.

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

Article Image

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ಕರ್ನಾಟಕ ಮಿಡಿಯಾ ಕ್ಲಬ್ ವತಿಯಿಂದ ಕೊಡಮಾಡುವ “ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ”ಯನ್ನು ವೈಶಾಲಿ ಚಂದ್ರಪ್ರಭುರವರ ಮಾಧ್ಯಮ ಕ್ಷೇತ್ರದ ಅಪೂರ್ವ ಸಾಧನೆ ಬದುಕಿನ ಧೃಡತೆ, ಮಾನವೀಯ ಮೌಲ್ಯಗಳೊಂದಿಗೆ ಈ ಸಮಾಜಕ್ಕಾಗಿ ಸಾಧಿಸಿದ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಜೂ. 5ರಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ): ನಿಧನ

Article Image

ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ): ನಿಧನ

ಕಾರ್ಕಳ ತಾಲೂಕು ಹೊಸ್ಮಾರು ‘ಧರ್ಮಶ್ರೀ’ ನಿವಾಸಿ ಎನ್. ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ) ಇವರು ಜೂ. 9 ರಂದು ನಿಧನ ಹೊಂದಿದರು. ಇವರು ಪತ್ನಿ ಭಾರತಿ (ಟೀಚರ್) ಹಾಗೂ ಓರ್ವ ಪುತ್ರಿ ಡಾ| ಪ್ರತಿಮಾ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ. ಇವರು ಜೈನ ಧರ್ಮದ ಕಣ್ಮಣಿಯಾಗಿದ್ದು ನಾರಾವಿ ಮಾಗಣಿ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ಉದಾರ ದಾನಿಯಾಗಿದ್ದು ತುಳುನಾಡಿನ ಒಬ್ಬ ಪ್ರಮುಖ ಧಾರ್ಮಿಕ ಮುಖಂಡ ಹಾಗೂ ಉದ್ಯಮಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

ಮೂಡುಬಿದಿರೆ: ಪ್ರೋತ್ಸಾಹ ಧನ ವಿತರಣೆ

Article Image

ಮೂಡುಬಿದಿರೆ: ಪ್ರೋತ್ಸಾಹ ಧನ ವಿತರಣೆ

ಮೂಡುಬಿದಿರೆ, ಜೂ.8: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನ 7ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಲಿಖಿತ್, ಸ್ತುತಿ ಮತ್ತು ನಿಶ್ಚಿತಾ ಜೈನ್ ಇವರಿಗೆ ನಮ್ಮ ಶಾಲೆಯ ಹಿತೈಷಿ ಕೊಡುಗೈದಾನಿಯಾಗಿರುವ ಟೆಲಿಕಾಂನ ನಿವೃತ್ತ ಎ.ಜಿ.ಎಂ. ಅಧಿಕಾರಿಯಾಗಿರುವ ಶ್ರೀಯುತ ಎಂ. ವಾರಿಸೇನ ಶೆಟ್ಟಿ ಇವರು ಪ್ರೋತ್ಸಾಹ ಧನ ನೀಡಿ ಗೌರವಹಿಸಿದರು. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದು ಆಶಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ ಜೈನ್ , 7ನೇ ತರಗತಿಯ ಶಿಕ್ಷಕಿ ಮಂಜುಳಾ.ಪಿ. ಪೂಜಾರಿ ಉಪಸ್ಥಿತರಿದ್ದರು.

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

Article Image

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

ಮೂಡುಬಿದಿರೆ, ಜೂ. 6: ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ ) ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ದಾಖಲಿಸಿದ್ದು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಬಿಎಸ್ಸಿ ಕೃಷಿ, ನರ್ಸಿಂಗ್ ಪ್ರವೇಶಕ್ಕೆ ನೂರರ ಒಳಗಿನ rankಗಳನ್ನು ಪಡೆದಿರುತ್ತಾರೆ. ಕಾಲೇಜಿನ ತನ್ಮಯಿಕೋಟಿ, ( 18 ನೇ) ತನುಶ್ರೀಎಚ್ಆರ್ ( 23 ನೇ) ಧ್ರುವಂತ್ಕೆ (41ನೇ) , ನಿಖಿಲ್ಎಸ್ಎಸ್ ( 41 ನೇ) ನಿಶ್ಚಲ್ ( 58 ನೇ ) rank ಪಡೆದು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿವಿಧ ವೃತ್ತಿಪರ ಕೋಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು rank ಗಳಿಸಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಅಧ್ಯಕ್ಷರಾದ ಯುವರಾಜಜೈನ್, ಕಾರ್ಯದರ್ಶಿ ರಶ್ಮಿತಾಜೈನ್, ಪ್ರಾಂಶುಪಾಲರಾದ ಪುಷ್ಪರಾಜ್, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕ ಡಾಕ್ಟರ್ ಪ್ರಶಾಂತ್ ಹೆಗಡೆ , ಸಿಇಟಿ ಸಮನ್ವಯಕಾರ ರಂಜಿತ್ ಜೈನ್ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ. ನಿರಂತರ ಶೈಕ್ಷಣಿಕ ಮಾರ್ಗದರ್ಶನ, ಪರೀಕ್ಷಾ ಪೂರ್ವ ತರಬೇತಿ, ವಿಶೇಷ ಅಭ್ಯಾಸ ತರಗತಿಗಳು, ಈ ಯಶಸ್ಸಿಗೆ ಕಾರಣವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ: ಖ್ಯಾತ ಚಿತ್ರಕಲಾವಿದರು, ಧಾರವಾಡ

Article Image

ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ: ಖ್ಯಾತ ಚಿತ್ರಕಲಾವಿದರು, ಧಾರವಾಡ

ಶ್ರೀ ಎಮ್. ಆರ್. ಬಾಳಿಕಾಯಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ 1 ಜೂನ್ 1941 ರಲ್ಲಿ ಜನಿಸಿದರು. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಕಾರಣ ಆರ್ಟ್ ಮಾಸ್ಟರ್ ಕೋರ್ಸ್‌ನ್ನು ಅಧ್ಯಯನ ಮಾಡಿ ಸರ್ಕಾರಿ ಪ್ರೌಢಶಾಲೆ ಬಾಣಾವರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ದಿನಾಂಕ: 31.10.1962 ರಿಂದ ನೇಮಕಗೊಂಡರು. ನಂತರ 1970ಮೇ 11 ರಿಂದ ಧಾರವಾಡದ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಮಾಡಿದರು. ತದನಂತರ 16.05.1972 ರಿಂದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡ ಇಲ್ಲಿ ಹಿರಿಯ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, 31.05.1999 ರಂದು ನಿವೃತ್ತರಾದರು. ನಿವೃತ್ತಿ ನಂತರ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಗೌರವ ಚಿತ್ರಕಲಾ ಉಪನ್ಯಾಸಕರಾಗಿ ದಿನಾಂಕ: 14.08.2001 ರಿಂದ 15.09.2004ರ ವರೆಗೆ ಸೇವೆ ಸಲ್ಲಿಸಿದರು. ಧಾರವಾಡ ಶ್ರೀ ಎಂ.ಆರ್.ಬಾಳಿಕಾಯಿ ಅವರ ಕಾರ್ಯಕ್ಷೇತ್ರವಾಗಿದೆ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಕಲಾಗುರುಗಳಾಗಿ ಅನೇಕ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನಾಡಿನ ತುಂಬಾ ಅನೇಕ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿದ್ದಾರೆ. ಚಿತ್ರಕಲಾ ಶಿಬಿರ, ಕಲಾಮೇಳ, ಕಲಾ ಪ್ರಾತ್ಯಕ್ಷಿಕೆ, ಚರ್ಚೆ-ಸಂವಾದ ಸೇರಿದಂತೆ ಅನೇಕ ಕಲಾಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಕಲಾಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ತೈಲ ಮತ್ತು ಜಲವರ್ಣ ಮಾಧ್ಯಮದಲ್ಲಿ ಅನೇಕ ಭಾವಚಿತ್ರ, ಪ್ರಕೃತಿಚಿತ್ರ ಮತ್ತು ಸಂಯೋಜನೆ ಚಿತ್ರಗಳನ್ನು ರಚಿಸಿ ಕಲಾಸಕ್ತರ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದ್ದಾರೆ. 5000ಕ್ಕೂ ಹೆಚ್ಚು ರೇಖಾ ಚಿತ್ರಗಳನ್ನು ರಚಿಸಿ ಕಲಾಲೋಕಕ್ಕೊಂದು ವಿಶೇಷ ಕೊಡುಗೆ ನೀಡಿದ್ದಾರೆ. ೮೫ರ ಇಳಿವಯಸ್ಸಿನಲ್ಲೂ ಕಲಾಲೋಕದಲ್ಲಿ ತುಂಬಾ ಚಟುವಟಿಕೆಗಳಿಂದ ಕೂಡಿರುವ ಇವರು ಅನೇಕ ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಶ್ರೀ ಎಂ.ಆರ್. ಬಾಳಿಕಾಯಿ ಅವರಿಗೆ 1995ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಜೀವಮಾನ ಸಾಧಕ ಸನ್ಮಾನ, 2012-13ರ ನಾಡೋಜ ಆರ್. ಎಮ್. ಹಡಪದ ಪ್ರಶಸ್ತಿ, 2016ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ,2023ರಲ್ಲಿ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗ, ಬೆಳಗಾವಿ ಇವರ ವತಿಯಿಂದ ಧಾರವಾಡದ ಸುವರ್ಣ ಸಾಂಸೃತಿಕ ಸಮುಚ್ಚಯ ಸಭಾಂಗಣ, ರಂಗಾಯನಾ ಆವರಣ ಜೂ.6ರಂದು ನಡೆಯಲಿರುವ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಹಾವೀರ ರಾಯಪ್ಪ ಬಾಳಿಕಾಯಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಆರ್.ಎ.ಬಾಳಿಕಾಯಿ

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

Article Image

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಆವಾರ್ಡ್ & ಕಾನ್ಪರೆನ್ಸ್ 2026 ರಲ್ಲಿ ಕರ್ನಾಟಕದ ಹುಬ್ಬಳ್ಳಿಯ ವರೂರಿನ ಎ.ಜಿ.ಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಗೆ 2026ರ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಯಿತು. ಶೈಕ್ಷಣಿಕ, ನಾವೀನ್ಯತೆ ಮತ್ತು ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಾಂಶುಪಾಲರಾದ ಡಾ. ಸಂದೀಪ್ ಕ್ಯಾತನವರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕರ್ನಾಟಕದ ಖ್ಯಾತ ಇಬ್ಬರು ಶಾಸ್ತ್ರೀಗಳಿಗೆ ರಾಷ್ಟ್ರ ಮಟ್ಟದ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ

Article Image

ಕರ್ನಾಟಕದ ಖ್ಯಾತ ಇಬ್ಬರು ಶಾಸ್ತ್ರೀಗಳಿಗೆ ರಾಷ್ಟ್ರ ಮಟ್ಟದ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ

ಜೈನ ಧರ್ಮದ ಸಂಸ್ಕೃತಿ ಪರಂಪರೆ ಹಾಗೂ ಧರ್ಮಪ್ರಭಾವನೆಗೆ ಮಹತ್ತರವಾದ ಕೊಡುಗೆ ನೀಡುತ್ತಿರುವವರು ಈ ದೇಶದ ಅಪಾರವಾದ ಜ್ಞಾನ ಪಾಂಡಿತ್ಯ ಹೊಂದಿದ ಶಾಸ್ತ್ರೀಗಳು ವಿದ್ವಾಂಸರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವರಿಂದಲೇ ಸಂಸ್ಕಾರ ವೃದ್ಧಿಯಾಗುವುದು ಮತ್ತು ಪರಂಪರೆ ರಕ್ಷಣೆಯಾಗುವುದು ಈ ಹಿನ್ನಲೆಯಲ್ಲಿ ನಾಡಿನ ಅನೇಕ ಶಾಸ್ತ್ರೀಗಳು ತಮ್ಮನ್ನು ತಾವು ಜೈನ ಧರ್ಮದ ಪ್ರಭಾವಕ್ಕೆ ಪ್ರಚಾರಕ್ಕಾಗಿ ತೊಡಗಿಸಿಕೊಂಡಿದ್ದಾರೆ ಇವರುಗಳ ಸಾಲಿನಲ್ಲಿ ಕರ್ನಾಟಕದ ಇಬ್ಬರು ಹೆಸರಾಂತ ಶಾಸ್ತ್ರೀಗಳನ್ನು ಗುರುತಿಸಿ ದೇಶದ ಪ್ರತಿಷ್ಠಿತ ಅಖಿಲ ಭಾರತ ದಿಗಂಬರ ಜೈನ ಶಾಸ್ತ್ರೀ ಪರಿಷತ್ ಸಂಸ್ಥೆಯು " ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ " ನೀಡಿ ಗೌರವಿಸಿದೆ. ಅವರೇ ವಿದ್ಯಾ ವಾಚಸ್ಪತಿ ಡಾ. ಮೋಹನಕುಮಾರ ಶಾಸ್ತ್ರೀ ಮತ್ತು ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರೀ ಇವರು. ದಿನಾಂಕ ಮೇ 30 ರಂದು ರಾಜಸ್ಥಾನದ ಕೋಟಾ ಜಿಲ್ಲೆಯ ದಿಗಂಬರ ಜೈನ ಅತಿಶಯ ಕ್ಷೇತ್ರ ಕೇಶವರಾಯ ಪಟಾನ್ ಇಲ್ಲಿ ಭಾರತ ಗೌರವ ಗಣನಿ ಆರ್ಯಾಕಾ ಸ್ವಸ್ತಿಭೂಷಣ ಪೂಜ್ಯ ಮಾತಾಜಿ ಇವರ ಸಾನಿದ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಇಬ್ಬರಲ್ಲಿ ಒಂದು ಸಾಮ್ಯತೆ ಇದೆ ಅದೇನೆಂದರೆ ಡಾ. ಮೋಹನಕುಮಾರ ಶಾಸ್ತ್ರೀ ಮೂಲತಃ ಜೈನ ಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳ ಇವರ ಜನ್ಮಭೂಮಿ ಆದರೆ ಇವರ ಕರ್ಮಭೂಮಿ ಸಾಂಸ್ಕೃತಿಕ ನಗರ ಮೈಸೂರು ಇಲ್ಲಿ ಆಚಾರ್ಯ ಗುರುಕುಲದ ಮೂಲಕ ಈ ಭಾಗದಲ್ಲಿ ಧರ್ಮಪ್ರಭಾವನೆ ಮಾಡಿದವರು ಇನ್ನೊಬ್ಬರು ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರೀ ಇವರ ಜನ್ಮಭೂಮಿ ಮೂಲತಃ ಜೈನರ ಬೀಡು ಎಂದೇ ಹೆಸರಾದ ಬೆಳಗಾವಿ ಜಿಲ್ಲೆಯ ಯಲಿಮುನ್ನೋಳಿಯವರು ಆದರೆ *ಕರ್ಮಭೂಮಿ ಶ್ರವಣಬೆಳಗೊಳ ಎಂಬುದು ಗಮನಾರ್ಹ. ತನ್ಮೂಲಕ ಇವರಿರ್ವರ ಜ್ಞಾನ ಜರಿ ಈ ನಾಡಿನಾದ್ಯಂತ ಹರಿದು ಧರ್ಮಪ್ರಭಾವನೆಗೆ ಕಾರಣವಾಗಿದೆ. ಇವರೀರ್ವರ ಸಾಧನೆ ಸೇವೆಗೆ ಅಖಿಲ ಭಾರತ ದಿಗಂಬರ ಜೈನ ಶಾಸ್ತ್ರಿ ಪರಿಷದ್ ವತಿಯಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಭಾಜನರಾದ ಇರ್ವರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು. ವಿದ್ಯಾ ವಾಚಸ್ಪತಿ ಡಾ. ಮೋಹನ ಕುಮಾರ ಶಾಸ್ತ್ರಿ, ಕುಲ ಸಚಿವರು ಆಚಾರ್ಯ ಗುರುಕುಲ ಮೈಸೂರು ಇವರ ಸಂಕ್ಷಿಪ್ತ ಪರಿಚಯ : ಈ ನಾಡು,ಸಮಾಜ ಕಂಡ ಅಪರೂಪದ ಚಿಂತಕ ಸಾಹಿತಿ ಶಿಕ್ಷಣ ಪ್ರೇಮಿ ವಿದ್ಯಾವಾಚಸ್ಪತಿ ಡಾ ಎಚ್ ಪಿ ಮೋಹನಕುಮಾರ ಶಾಸ್ತ್ರಿಯವರು ಮೈಸುರು ಆಚಾರ್ಯ ಗುರುಕುಲ ವಿದ್ಯಾಲಯವನ್ನು ಕಳೆದ ದಶಕಗಳಿಂದ ಇವರು ಅತ್ಯಂತ ಸಮರ್ಥತವಾಗಿ ಮುನ್ನಡೆಸುತ್ತಿದ್ದು ಈ ಸಂಸ್ಥೆಯ ಕುಲಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ಮುಖಾಂತರ ಜೈನ ಆಗಮ ಜೈನ ಸಂಸ್ಕೃರಕ್ಷಣೆ ಗ್ರಂಥ ಪ್ರಕಟನೆ ಪ್ರಸಾರ ಪ್ರಚಾರ ಉಪನ್ಯಾಸ ಪ್ರವಚನ ಇತ್ಯಾದಿಗಳನ್ನು ಆನ್ಲೈನ್ ಮೂಲಕ ಜೈನ ಪಾಠ ಬೋಧನೆಗಳನ್ನು ಪ್ರಪಂಚದಾದ್ಯಂತ ಜೈನರಿಗೆ ತಲುಪಿಸಿದ್ದಾರೆ ಮತ್ತು ಈಗಲೂ ಮುಂದುವರಿದಿದ್ದಾರೆ, ಈ ಮೂಲಕ ಯುವ ಜನಾಂಗಕ್ಕೆ ಜೈನ ಜಾಗ್ರತಿ ರಕ್ಷಣೆ ಮತ್ತು ಅರಿವು ಮೂಡಿಸುವ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಾ ಜೈನ ಮಠಗಳ ಪೂಜ್ಯ ಭಟ್ಟಾರಕ ಮಹಾಸ್ವಾಮಿಗಳ ಶುಭಾಶೀರ್ವಾದ ಮತ್ತು ಪ್ರೇರಣೆಯಿಂದ ಕಳೆದ ಎರಡು ವರ್ಷಗಳಿಂದ ಮಹಾಕವಿ ರತ್ನಾಕರವರ್ಣಿ ಅವರ ಶತಕ, ಅಪರಾಜಿತ ಶತಕ ನಿರಂಜನ ಸ್ತುತಿ ಭರತೇಶ ವೈಭವ ಅಣ್ಣನ ಪದಗಳು ಇತ್ಯಾದಿ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಬಹಳ ಸುಂದರವಾಗಿ ವ್ಯಖ್ಯಾನ ಸಹಿತ ಕಾವ್ಯವಾಚನ ಮಾಡುತ್ತಾ ಇವುಗಳ ಪ್ರಚಾರ ಮತ್ತು ಪ್ರಸಾರ ಮೂಲಕ ಸಾಮಾನ್ಯರಿಗೂ ಕಾವ್ಯದ ಸ್ವಾದವನ್ನು ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಶ್ರವಣಬೆಳಗೊಳದ ಪ್ರಾಕೃತ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರು : ಜೈನ ಧರ್ಮದ ಸಾರವನ್ನು, ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಆಳವಾದ ಜ್ಞಾನವನ್ನು ಜಗತ್ತಿಗೆ ಪಸರಿಸುತ್ತಿರುವ ಅಪರೂಪದ ಸಾಧಕರಲ್ಲಿ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಪ್ರಮುಖರು. ಬೆಳಗಾವಿ ಜಿಲ್ಲೆಯ ಯಲಿಮುನ್ನೋಳಿಯ ಪುಣ್ಯಭೂಮಿಯಲ್ಲಿ ಅಣ್ಣಾಸಾಹೇಬ್ ಮತ್ತು ಶ್ರೀಮತಿ ಜೀವಕ್ಕ ದಂಪತಿಗಳ ಸುಪುತ್ರನಾಗಿ 24 ಅಕ್ಟೋಬರ್ 1980 ರಂದು ಜನಿಸಿದ ಇವರು, ಇಂದು ಶ್ರವಣಬೆಳಗೊಳದ ಪವಿತ್ರ ಕ್ಷೇತ್ರದಲ್ಲಿ ತಮ್ಮ ಜ್ಞಾನದೀವಿಗೆಯನ್ನು ಬೆಳಗುತ್ತಿದ್ದಾರೆ. ಬಾಲ್ಯದಿಂದಲೇ ಜ್ಞಾನಪಿಪಾಸುವಾಗಿದ್ದ ರಾಜೇಂದ್ರ ಅವರು ಸಂಸ್ಕೃತ, ಪ್ರಾಕೃತ ಮತ್ತು ಜೈನಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ವಿಶೇಷವೆಂದರೆ 2006ರಲ್ಲಿ ಬಿಹಾರ ರಾಜ್ಯಕ್ಕೆ ಪ್ರಾಕೃತ ವಿಷಯದಲ್ಲಿ ಮೊದಲ ಶ್ರೇಣಿ (69.5%)ಪಡೆದು 'ಚಿನ್ನದ ಪದಕ'ಕ್ಕೆ (Gold Medal) ಭಾಜನರಾಗಿದ್ದಾರೆ. ಯುಜಿಸಿ ನೆಟ್ (NET) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಇವರು, ತಮ್ಮ ವಿದ್ವತ್ಪೂರ್ಣ ಸಂಶೋಧನೆಗಾಗಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವೃತ್ತಿ ಜೀವನ: ಪ್ರಸ್ತುತ ಶ್ರವಣಬೆಳಗೊಳದ NIPSAR ಸಂಸ್ಥೆಯಲ್ಲಿ ಪ್ರಾಕೃತ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರಾಗಿ (HOD) ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯ ಸಹಾಯಕರಿಂದ ಆರಂಭಿಸಿ ಉಪನ್ಯಾಸಕರವರೆಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಇವರು, ಕಳೆದ ಮೂರು ದಶಕಗಳಿಂದ (1995 ರಿಂದ 2026) ಶಿಕ್ಷಣ ಮತ್ತು ಧರ್ಮ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಧನೆ ಮತ್ತು ಪ್ರಶಸ್ತಿಗಳು: ಇವರ ನಿಸ್ವಾರ್ಥ ಸೇವೆಗೆ ಅನೇಕ ಗೌರವಗಳು ಸಂದಿವೆ: 2023 ಆಚಾರ್ಯ ವಿಮಲಸಾಗರ ಪ್ರಶಸ್ತಿ. 2022 ಆದರ್ಶ ಜೈನ ಶಿಕ್ಷಕ ಪ್ರಶಸ್ತಿ. 2026 ಈಗ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ ಮತ್ತೊಂದು ಗರಿ ಸೇರ್ಪಡೆಯಾಗಿದೆ. 2012: ದೆಹಲಿ ದೂರದರ್ಶನದಲ್ಲಿ ಭಗವಾನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ. ಸಾಹಿತ್ಯ ಸೇವೆ: ಈಗಾಗಲೇ ಇವರ 5 ಪುಸ್ತಕಗಳು ಲೋಕಾರ್ಪಣೆಗೊಂಡಿದ್ದು, ಮತ್ತೊಂದು 5 ಕೃತಿಗಳು ಬಿಡುಗಡೆಗೆ ಸಜ್ಜಾಗಿವೆ. ಬಹುಮುಖ ಪ್ರತಿಭೆ: ಕೇವಲ ಅಧ್ಯಾಪನಕ್ಕೆ ಸೀಮಿತವಾಗದ ಶಾಸ್ತ್ರಿಗಳು, ಧಾರ್ಮಿಕ ಶಿಬಿರಗಳಲ್ಲಿ ಪಾಠ ಪ್ರವಚನ ನೀಡುವುದು, ಪೂಜಾ ವಿಧಾನಗಳನ್ನು ನಡೆಸಿಕೊಡುವುದು ಮತ್ತು ಸುಶ್ರಾವ್ಯವಾಗಿ ಭಜನೆಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರು. ಎನ್.ಎಸ್.ಎಸ್ (NSS) ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಇವರ ಜ್ಞಾನದ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸಲು 'drrajendrapatilshastri7492' ಎಂಬ ಯೂಟ್ಯೂಬ್ ಚಾನಲ್ ಮೂಲಕವೂ ಸಕ್ರಿಯರಾಗಿದ್ದಾರೆ. ಕೌಟುಂಬಿಕ ಹಿನ್ನೆಲೆ: ಧರ್ಮಪತ್ನಿ ಶ್ರೀಮತಿ ಜೀವರತ್ನ ಮತ್ತು ಪುತ್ರ ಸಮ್ಯಕ್ ಆರ್. ಜೈನ ಅವರೊಂದಿಗೆ ಶ್ರವಣಬೆಳಗೊಳದಲ್ಲಿ ನೆಲೆಸಿರುವ ಇವರು, ಸಂಸಾರದ ಜೊತೆಗೆ ಸಂಯಮದ ಜೀವನವನ್ನು ನಡೆಸುತ್ತಿದ್ದಾರೆ. ಪ್ರಾಕೃತ ಭಾಷೆಯ ಉಳಿವಿಗಾಗಿ ಮತ್ತು ಜೈನ ಧರ್ಮದ ಪ್ರಚಾರಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸೋಣ. ಇದೀಗ ಅಖಿಲ ಭಾರತ ವರ್ಷಿಯ ಶಾಸ್ತ್ರೀ ಪರಿಷತ್ ವತಿಯಿಂದ " ಶ್ರೇಷ್ಟಿ ಶ್ರೀ ಜೋರಾವಲ್ ರಜನ್ ದೇವಿ ಜೈನ ದುಮ್ ದುಮಾ ಸ್ಮೃತಿ ಶಾಸ್ತ್ರೀ ಪರಿಷತದ್ ಪುರಸ್ಕಾರ " ಗಳಿಗೆ ಭಾಜನರಾದ ಇಬ್ಬರೂ ವಿದ್ವಾಂಸರಿಗೆ ಅಭಿನಂದನೆಗಳು. ಶಾಂತರಾಜ ಮಲ್ಲಸಮುದ್ರ ಲೇಖಕರು

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

Article Image

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

ಮೂಡುಬಿದಿರೆ ನಾಗರಕಟ್ಟೆ ರಸ್ತೆಯ ಕೆನರಾ ಟ್ರೇಡ್ ಸೆಂಟರ್ ಕಟ್ಟಡದಲ್ಲಿ ಸಿ.ಎ ಅಕ್ಷಯ ಜೈನ್, ಲೆಕ್ಕ ಪರಿಶೋಧಕರು (Chartered Accountant) ಇವರ ನೂತನ ಕಛೇರಿಯ ಶುಭಾರಂಭವು ಜರುಗಿತು. ಈ ಸಂದರ್ಭದಲ್ಲಿ ಸಿ.ಎ ಪ್ರಭಾತ ಕುಮಾರ್, ಸಿ.ಎ ಅಭಿನಯ್ ಕುಲಾಲ್, ಡಾ. ಅಶೋಕ ಜೈನ್, ಕತ್ತೋಡಿ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಎಕ್ಸಲೆಂಟ್: ನೂತನ ಪ್ರಾಂಶುಪಾಲರಾಗಿ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ

Article Image

ಎಕ್ಸಲೆಂಟ್: ನೂತನ ಪ್ರಾಂಶುಪಾಲರಾಗಿ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರಸಿದ್ಧ ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾದ ಪುಷ್ಪರಾಜ್ ಬಿ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇದೇ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ (Academic Director) ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಬರೋಬ್ಬರಿ 30 ವರ್ಷಗಳ ಸುದೀರ್ಘ ಬೋಧನಾ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಪುಷ್ಪರಾಜ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪರಿಚಿತ ಹಾಗೂ ಗೌರವಾನ್ವಿತ ಹೆಸರಾಗಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಆಪ್ತಸಮಾಲೋಚಕರು (Counsellor), ತರಬೇತುದಾರರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ವಿಧಾನಗಳ ಕುರಿತು ತರಬೇತಿ ನೀಡಿದ್ದಾರೆ. ಇದರೊಂದಿಗೆ, ರಾಜ್ಯದಾದ್ಯಂತ ವಿವಿಧ ಕಾಲೇಜುಗಳ 20,000 ಕ್ಕೂ ಹೆಚ್ಚು ಶಿಕ್ಷಕರಿಗೆ 'ತರಗತಿ ನಿರ್ವಹಣೆ' (Classroom Management) ಕುರಿತು ವಿಶೇಷ ಕಾರ್ಯಾಗಾರ ಹಾಗೂ ತರಬೇತಿಯನ್ನು ನೀಡಿದ್ದಾರೆ. ದಕ್ಷ ಆಡಳಿತಗಾರರಾಗಿರುವ ಪುಷ್ಪರಾಜ್ ಬಿ. ಅವರು ಇದೀಗ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಈ ಸಂದರ್ಭದಲ್ಲಿ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್, ಅವರು ನೂತನ ಪ್ರಾಂಶುಪಾಲರನ್ನು ಅಭಿನಂದಿಸಿ, ಇವರ ಸಮರ್ಥ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕವಾಗಿ ಮತ್ತಷ್ಟು ಉನ್ನತ ಯಶಸ್ಸನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪುಣೆ: ವಧು ವರರ ಪರಿಚಯಾತ್ಮಕ ಮಹಾಮೇಳ

Article Image

ಪುಣೆ: ವಧು ವರರ ಪರಿಚಯಾತ್ಮಕ ಮಹಾಮೇಳ

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವರನಿಗೆ ವಧು, ವಧುವಿಗೆ ವರ ಸುಲಭವಾಗಿ ಸಿಕ್ಕಿ ಮದುವೆಯಾಗುವುದು ತುಂಬಾ ಕಷ್ಟಸಾಧ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವುದೇ ಗಂಭೀರವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಎಲ್ಲಾ ಸಮುದಾಯದಲ್ಲೂ ಇದೆ ಆದರೆ ಜೈನ ಸಮುದಾಯದಲ್ಲಿ ತುಸು ಹೆಚ್ಚು ಎಂದೇ ಹೇಳಬೇಕು. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅನೇಕ ಮಾಹಿತಿ ಕೇಂದ್ರಗಳು, ಮೇಳಗಳು ಮತ್ತು ಮೆಟ್ರಿಮೊನಿ ಇತ್ಯಾದಿ ಸಂಸ್ಥೆಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇದನ್ನು ಮನಗಂಡು ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯೊಂದು "ಮನೋಮಿಲನ್ " ಎಂಬ ಹೆಸರಿನಿಂದ ಜೈನ ಸಮಾಜದ ಹಿತದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ "ಆರ್ಯನ್ ಸಂಸ್ಥೆ ಪ್ರಾಯೋಜಕತ್ವದಲ್ಲಿ "*ಮನೋಮಿಲನ್ " ಎಂಬ ವಧು ವರರ ಪರಿಚಯಾತ್ಮಕ ಮಹಾ ಮೇಳ ( 2026 ) ವನ್ನು *ಪುಣೆ * ಯಲ್ಲಿ ಆಯೋಜಿಸಿದ್ದಾರೆ. ಇದರ ಪ್ರಯೋಜನವನ್ನು ಅಗತ್ಯವಿರುವವರು ಪಡೆದುಕೊಳ್ಳಬಹುದು. “ಮನೋಮಿಲನ” ಎಂದರೆ ಹೃದಯಗಳ ಒಂದಾಗುವಿಕೆ, “ಇಲ್ಲಿ ಮನಗಳು ಒಂದಾಗುತ್ತವೆ… ಸಂಬಂಧಗಳು ಬೆಸೆಯುತ್ತವೆ.” ಇದೇ ಉದ್ದೇಶ ಹೊಂದಿದ ಈ ಸಂಸ್ಥೆಯ ಪ್ರಾಮಾಣಿಕ ಸಮಾಜ ಸೇವಾ ಪ್ರಯತ್ನ ಇದು. ಮಹಾಮೇಳ ನಡೆಯುವ ಸ್ಥಳ : ಆರ್ಯನ್ ವರ್ಲ್ಡ್ ಸ್ಕೂಲ್, ಭೀಲಾರೆವಾಡಿ, ಕತರಾಜ್ ಸಮೀಪ ಪುಣೆ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 7030912526 ಮೇಳ ನೆಡೆಯುವ ದಿನಾಂಕ: ಮೇ 30 ಶನಿವಾರ ಮತ್ತು 31 ರವಿವಾರ ಮೇಳದ ವೈಶಿಷ್ಠೆಗಳು : * ದೇಶದ ವಿವಿಧ ಪ್ರಮುಖ ಸ್ಥಳಗಳಿಂದ ಸುಸಂಸ್ಕೃತ ಮತ್ತು ಉತ್ತಮ ಸ್ಥಾನ ಮಾನ ಹೊಂದಿದ ಕುಟುಂಬ ಪರಿವಾರ ಭಾಗವಹಿಸುತ್ತಾರೆ. * ವೇದಿಕೆಯಲ್ಲಿ ಪರಸ್ಪರ ಪರಿಚಯದೊಂದಿಗೆ ಸಂದರ್ಶನದ ಅವಕಾಶ. * ಅಭ್ಯರ್ಥಿಗಳ ವ್ಯಕ್ತಿಯ ಬಗೆಗಿನ ವ್ಯಕ್ತಿಚಿತ್ರದ ವಿವರಗಳ ಪ್ರಕಟಣೆ. * ಕುಟುಂಬಗಳ ಚರ್ಚೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ. * ಕತ್ರಾಜ ಮತ್ತು ಸ್ವರ್ಗೆಟ್ ಗಳಿಂದ ಉಚಿತ ವಾಹನದ ವ್ಯವಸ್ಥೆ * ಬೇರೆ ಸ್ಥಳಗಳಿಂದ ಬರುವವರಿಗೆ ವಾಸ್ತವ್ಯದ ವ್ಯವಸ್ಥೆ * ಮಾತನಾಡುವ ಕಲೆ ಅಭಿವೃದ್ಧಿಗೆ ತರಬೇತಿ * ರಿಯಾಯತಿ ದರದಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆ * 7000 ಕ್ಕೂ ಹೆಚ್ಚು ವಧು ವರರ ಡಾಟಾಬ್ಯಾಂಕ್ ವಿತರಿಸುವ ಸೌಲಭ್ಯ * ನೋಂದಣಿ ಶುಲ್ಕ ಕೇವಲ ₹ 700/- ಈ ಸಂಸ್ಥೆಯ ವಿಶೇಷವೆಂದರೆ ಭಾರತವೂ ಸೇರಿದಂತೆ ಇಡೀ ಪ್ರಪಂಚದಾದ್ಯಂತ ಯಾವುದೇ ಸ್ಥಳದಿಂದಲೂ ಜೈನ ವಧುವರ ಆಕಾಂಕ್ಷಿಗಳು ಸಂಸ್ಥೆಯ ವೆಬ್ಸೈಟ್ ಮೂಲಕ ಸುಲಭ ಸರಳ ಹಾಗೂ ಸುರಕ್ಷಿತ ಆರು ಹಂತದ ಕ್ರಿಯೆಗಳನ್ನು ಉಪಯೋಗಿಸಿ ತಮಗೆ ಬೇಕಾದವರನ್ನು ಆಯ್ಕೆಮಾಡಲು ಅನುಕೂಲವಾಗುವಂತೆ ವಿಪುಲವಾದ ಪ್ರೊಫೈಲ್ ಗಳನ್ನು ಪರಿಶೀಲಿಸಬಹುದಾಗಿದೆ ಮತ್ತು ನೇರವಾಗಿ ಸಂಪರ್ಕಿಸಬಹುದಾಗಿದೆ. ಇಂತ ವಿಶೇಷತೆ ಯಾವುದೇ ಮೆಟ್ರಿಮೊನಿಗಳಲ್ಲಿ ಇರುವುದಿಲ್ಲ. ಇದು ಅತ್ಯಂತ ಅನುಕೂಲವಾಗಿರುವುದರಿಂದ ಪ್ರತಿಯೊಬ್ಬ ಅನ್ವೇಷಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ - ವೆಬ್ ಸೈಟ್ : wwwaaryanamanomilan.com ಬಳಸಬಹುದು. ಪ್ರಮುಖ ಸಂಘಟಕರು : * ಶ್ರೀ ಮಿಳಿಂದ ಲಡ್ಗೆ - ಆರ್ಯನ್ ವರ್ಲ್ಡ್ ಸ್ಕೂಲ್ ಮತ್ತು ಆರ್ಯನ್ ಮನೋಮಿಲನ್ ಸಂಸ್ಥೆಯ ಸಂಸ್ಥಾಪಕರು. ಮೊಬೈಲ್ ನಂ -7030912526 ಕರ್ನಾಟಕದ ಸಂಘಟನಾ ಕಮಿಟಿ ಮುಖ್ಯಸ್ಥರು: * ಶ್ರೀ ರಾಜೇಂದ್ರ ಹರ್ದಿ ಮೊಬೈಲ್ ನಂ 9341690909 ವರದಿ : ಎಸ್ ಆರ್ ಮಲ್ಲಸಮುದ್ರ

ಶೃತ ಪಂಚಮಿ ಆಚರಣೆ

Article Image

ಶೃತ ಪಂಚಮಿ ಆಚರಣೆ

ಹೊಂಬುಜ: ಅತಿಶಯ ಶ್ರೀಕ್ಷೇತ್ರದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ ಶೃತ ಪಂಚಮಿ ಮಹೋತ್ಸವವನ್ನು ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜೂನ್. 19 ಶುಕ್ರವಾರದಂದು ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ: 08185-262722, 9481453653, 9483801460

ಪ್ರೊ. ಅಪ್ಪಣ್ಣ ಹಂಜೆ: ವಿಷಯ ಪರಿಣಿತರಾಗಿ ನೇಮಕ

Article Image

ಪ್ರೊ. ಅಪ್ಪಣ್ಣ ಹಂಜೆ: ವಿಷಯ ಪರಿಣಿತರಾಗಿ ನೇಮಕ

ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳ ಆದೇಶದಂತೆ ಕುಲಸಚಿವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅಪ್ಪಣ್ಣ ಹಂಜೆ ಅವರನ್ನು 2026-27 ಮತ್ತು 2027-28ರ ಸಾಲಿಗೆ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಷಯದ ಸ್ನಾತಕ ಅಭ್ಯಾಸ ಮಂಡಳಿಯ ವಿಷಯ ಪರಿಣಿತರಾಗಿ ನೇಮಕ ಮಾಡಿದ್ದಾರೆ. ಇವರು ಜೈನ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಮಾಜ, ವಾಸ್ತುಕಲೆ, ಶಿಲ್ಪಕಲೆ, ಶಾಸನಗಳು, ಮುನಿಪರಂಪರೆ, ಕವಿಗಳು ಮುಂತಾದ ವಿಷಯಗಳ ಕುರಿತು ತಲಸ್ಪರ್ಶಿ ಸಂಶೋಧನ ಅಧ್ಯಯನ ಕೈಗೊಂಡು ಮೌಲ್ಯಯುತ ಕೃತಿಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಸಂಯೋಜಿತ ಉಜಿರೆಯ ಹಾಮಾನಾ ಸಂಶೋಧನ ಕೇಂದ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಬಾಹ್ಯ ಮಾರ್ಗದರ್ಶಕರಾಗಿ ಹಾಗೂ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಶೈಕ್ಷಣಿಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

Article Image

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

ಹುಬ್ಬಳ್ಳಿ:- ಡಾ| ರಾಜಶ್ರೀ ಕೆ.ಸೂಜಿರವರು 2026 ಸಾಲಿನ ಮಾರ್ಚ್ ತಿಂಗಳಿನಲ್ಲಿ ಆರ್ಯುವೇದ ವಾಚಸ್ಪತಿ (ಮಾಸ್ಟರ್ಸ್ ಪದವಿ)ಯನ್ನು ಆರ್ಯುವೇದ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಹುಬ್ಬಳ್ಳಿಯ ಶಕುಂತಳ ಎಂ.ಸೂಜಿರವರ ಮೊಮ್ಮಗಳು ಮತ್ತು ಆಸ್ಮಿತಾ ಕಿರಣ್ ಸೂಜಿ ಮತ್ತು ಕಿರಣ್ ಎಂ. ಸೂಜಿರವರ ಪುತ್ರಿ.

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

Article Image

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

ಕಾಗವಾಡ: ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಸಂಪತ್ತಿಗಿಂತ ಸತ್ಯ ಮುಖ್ಯ ಇಂಥಹ ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಿದಲ್ಲಿ ಸಮೃದ್ಧವಾದ ದೇಶ ನಿರ್ಮಾಣವಾಗಲು ಸಾಧ್ಯ ಅಂಥ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅವರು ಕಾಗವಾಡ ತಾಲೂಕಿನ ಸುಕ್ಷೇತ್ರ ಉಗಾರ ಬುದ್ರುಕ್‌ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ, ಭೋಜನ ಶಾಲೆ, ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಭಾಷೆಯ ಶಿಕ್ಷಣ ಕೊಡಿಸಿದರೂ ಕೂಡ ಜೈನ ಧರ್ಮದ ಆಚಾರ, ವಿಚಾರಗಳನ್ನು ಪ್ರತಿದಿನ ಮಕ್ಕಳಿಗೆ ಬೋದಿಸುವುದರ ಜೊತೆಗೆ ತಾವೂ ಕೂಡ ಅಹಿಂಸಾ ಪರಮೋಧರ್ಮದ ತತ್ವಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ತಾವೆಲ್ಲರು ಭಕ್ತಿ ಮಾರ್ಗದಲ್ಲಿ ನಡೆಯಿರಿ, ಆ ತಾಯಿ ಪದ್ಮಾವತಿ ನಿಮಗೆ ಆಶೀರ್ವದಿಸುತ್ತಾಳೆ. ಯಾರ ಬಳಿ ಭಕ್ತಿ ಇದೇಯೋ ಅಲ್ಲಿ ಶಕ್ತಿ ಇದೆ ಎಂದರು. ಪರಮಪೂಜ್ಯ ಜಗದ್ಗುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯಮಹಾಸ್ವಾಮಿಗಳು ಮಾತನಾಡುತ್ತ ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಯುಕ್ತಿ, ಸಂಪಾದಿಸಿದರೆ ಪದ್ಮಾವತಿ ದೇವಿ ತಮಗೆ ಖಂಡಿತವಾಗಿಯೂ ಒಲಿದು ತಮಗೆ ಬಂದಂತಾ ಕಷ್ಟಗಳನ್ನು ದೂರವಾಡುವ ಶಕ್ತಿ ಆ ತಾಯಿಗಿದೆ ಎಂದರು. ರಾಜ್ಯಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಹೊಂದಿರುವ ಉಗಾರ ಶ್ರೀ ಪದ್ಮಾವತಿ ದೇವಿಯ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಇಲ್ಲಿ ಬಂದು ಹೋಗುವ ಶ್ರಾವಕ,ಶ್ರಾವಕಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಾತ್ರಿ ನಿವಾಸ, ಭವನ ನಿರ್ಮಿಸಿರುವ ಧರ್ಮದರ್ಶಿ ಶೀತಲಗೌಡ ಪಾಟೀಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಸೌಂದಾಮ ಹುಮಜಾ ಮಠಗಳ ವಾತಾವರಣ ಈಗ ಉಗಾರ ಪದ್ಮಾವತಿ ಮಂದಿರದಲ್ಲಿ ನಿರ್ಮಾಣವಾಗಿದೆ. ಧಾರ್ಮಿಕ ಕಾರ್ಯದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ಕೆ.ಎ ವನಜೋಳ ಅವರ ಹಾಗೆ ಧರ್ಮ ಕಾರ್ಯದಲ್ಲಿ ಕೈ ಜೋಡಿಸಬೇಕಾಗುತ್ತದೆ. ನಾನು ಮತ್ತು ಶಾಸಕ ಅಭಯ ಪಾಟೀಲರು ಕೂಡ ಧರ್ಮದ ಕೆಲಸದಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ವಿವರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮುಗೆಣ್ಣವರ, ಮೋಹನರಾವ್‌ ಶಹಾ, ಸಂಜಯ ಪಾಟೀಲ, ಮಹಾವೀರ ನಿಲಜಗಿ, ಡಾ.ಮಹಾವೀರ ದಾನಿಗೊಂಡ, ಬಾಹುಬಲಿ ನಾಗನೂರಿ, ಸುನೀಲ ಪಾಟೀಲ, ಮಹಾವೀರ ಕಾತ್ತಾಳೆ, ಸಂಜಯ ನಾಡಗೌಡ, ಅಭಯಕುಮಾರ ಅಕಿವಾಟೆ, ಅಶೋಕ ಚೌಗುಲೆ, ಕಲ್ಲಪ್ಪ ವನಜೋಳ, ಎಮ್.ಎಚ್.ನಂದಗಾಂವ, ಸಂಜಯ ಕುಚನೂರೆ, ಮಹೇಂದ್ರ ಖೇಮಲಾಪೂರೆ, ಡಾ.ನೀರಜಾ ನಾಗೇಂದ್ರಕುಮಾರ, ಬಮ್ಮಣ್ಣ ಚೌಗಲೆ, ವರ್ಧಮಾನ ಕೋರಿ, ಪ್ರದೀಪ ಚಿಂಚವಾಡೆ, ಆದಿನಾಥ ವಸವಾಡೆ ಉಪಸ್ಥಿತರಿದ್ದರು. ಈ ವೇಳೆ ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಜ್ರಕುಮಾರ ಮಗದುಮ್‌ ಸ್ವಾಗತಿಸಿ ವಂದಿಸಿದರು.

ಪೂಜಾ ಮಹೋತ್ಸವ

Article Image

ಪೂಜಾ ಮಹೋತ್ಸವ

ಗದಗ: ಭ|| ಶ್ರೀ 1008 ನೇಮಿನಾಥ ಸ್ವಾಮಿ ಜಿನಮಂದಿರದ 38ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸೋಂದಾ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಮೇ 18ರಂದು ಜರುಗಲಿದೆ.

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ದೇವರಿಗೆ ಸಹಸ್ರನಾಮ ಪುಷ್ಪಾರ್ಚನೆ ನಡೆಯಿತು. ಶ್ರದ್ಧಾಅಮಿತ್ ಮತ್ತು ಊರಿನ ಶ್ರಾವಕರು, ಶ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತೋರಣಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

Article Image

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

ಮೂಡುಬಿದಿರೆ: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿಗೆ ಮೂಡುಬಿದಿರೆ ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷೆ, ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಗೌರವ ಪೂರ್ವಕವಾಗಿ ನೇಮಕ ಮಾಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಇಂದು ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳ ಆಯೋಜನೆ, ಶೂನ್ಯ ತ್ಯಾಜ್ಯ ಕ್ಯಾಂಪಸ್ ಗಳ ರಚನೆಗಾಗಿ ಹಾಗೂ ಸ್ವಚ್ಛತೆಯ ಸಂದೇಶವನ್ನು ಸಾರುವ ಸಲುವಾಗಿ ಈ ನೇಮಕ ಮಾಡಲಾಗಿದೆ. ನ್ಯಾಯವಾದಿ ಶ್ವೇತಾ ಜೈನ್ ಅವರು ಭಾರತೀಯ ಜೈನ್ ಮಿಲನ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವ ಜೊತೆಗೆ ಬಸದಿ ಸ್ವಚ್ಛತಾ ತಂಡವನ್ನು ಕಟ್ಟಿಕೊಂಡು ಅವಿಭಜಿತ ಜಿಲ್ಲೆಯ ಹಲವು ಬಸದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜನಿತರಾಗಿದ್ದಾರೆ.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು,ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ

ಜೈನ ತತ್ತ್ವಗಳು ವಿಶ್ವಕ್ಕೆ ಶಾಂತಿಯ ಶ್ರೀ ರಕ್ಷೆ: ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ಕ್ಷೇತ್ರ ಕನಕಗಿರಿ: ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು, ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

Article Image

ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿನಿ ಲಾಸ್ಯ ಕರ್ನಾಟಕ ರಾಜ್ಯ ವನಿತೆಯರ ಯುವ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಉಜಿರೆಯ ಉದ್ಯಮಿ ಸಿದ್ಧಾಂತಕೀರ್ತಿರಾಜ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರಿ. ಇವಳು ಸಿದ್ದವನದ ಸಂತ ಜೈನ ಸಂಸ್ಕೃತ ವಿದ್ವಾoಸರಾಗಿದ್ದ ನ್ಯಾಯತೀರ್ಥ ಜಿನರಾಜ ಶಾಸ್ತ್ರೀಗಳ ಮರಿಮಗಳು, ಖ್ಯಾತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದರಾಗಿದ್ದ ದಿ. ನರೇಂದ್ರಕುಮಾರ್ ರ ಮೊಮ್ಮಗಳು, ಪ್ರಸ್ತುತ ಪೆರಿಂಜೆ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜೇಂದ್ರ ಅವರ ಸೊಸೆ. ಕಳೆದ ಐದು ವರ್ಷಗಳಿಂದ ಕಾಲೇಜಿನ ದೈಹಿಕ ಶಿಕ್ಷಕರಾದ ರಮೇಶ್ ಅವರಲ್ಲಿ ಲಾಸ್ಯ ನಿರಂತರ ತರಬೇತಿ ಪಡೆಯುತ್ತಿದ್ದಾಳೆ.

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

Article Image

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಜೈನಶಾಸ್ತ್ರ ಅಧ್ಯಯನ ಪೀಠ ಮತ್ತು ಜೆ. ಎಸ್. ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 12-3-2026 ರಂದು ಗುರುವಾರ ಧಾರವಾಡ ಜೆ.ಎಸ್.ಎಸ್.ಡಿ.ಆರ್.ಎಚ್. ಸಭಾ ಭವನದಲ್ಲಿ "ಸಾಹಿತ್ಯ ಸಂಸ್ಕೃತಿ" ಕುರಿತಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಮುಂಜಾನೆ 10.30 ಗಂಟೆಗೆ ಧಾರವಾಡ ಜೆ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತಪ್ರಸಾದ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿ ಡಾ. ಎಎಮ್ ಖಾನ್ ಇವರು ಉದ್ಘಾಟಿಸಲಿದ್ದಾರೆ. ಡಾ. ಜೆ.ಎಮ್. ನಾಗಯ್ಯ ನಿವೃತ್ತ ಪ್ರಾಧ್ಯಾಪಕರು ಕ ವಿ ವಿ ಇವರು ದಿಕ್ಸೂಚಿ ನುಡಿಗಳನ್ನಾಡುವರು. 11.30 ಗಂಟೆಗೆ ಮೊದಲ ಗೋಷ್ಠಿ "ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ" ವಿಷಯವಾಗಿ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಡಾ. ವೈ ಎಂ ಭಜಂತ್ರಿ ಇವರು ಉಪನ್ಯಾಸ ನೀಡಲಿದ್ದು ಅಧ್ಯಕ್ಷತೆಯನ್ನು ಖ್ಯಾತ ಶಾಸನ ತಜ್ಞರು ಹಿರಿಯ ಸಾಹಿತಿ ಹನುಮಾಕ್ಷಿ ಗೋಗಿ ವಹಿಸುವರು. ಊಟದ ವಿರಾಮದ ನಂತರ ಮಧ್ಯಾನ್ಹ 2 ಗಂಟೆಗೆ ಎರಡನೇ ಗೋಷ್ಠಿ "ಸರ್ವ ಧರ್ಮ ಸಮನ್ವಯ ಕೇಂದ್ರ : ಶ್ರೀ ಕ್ಷೇತ್ರ ಧರ್ಮಸ್ಥಳ " ವಿಷಯವಾಗಿ ರಂಗ ಕರ್ಮಿ ಸಾಹಿತಿ ಡಾ. ಶಶಿಧರ ನರೇಂದ್ರ ಮಾತನಾಡುವರು. ಅಧ್ಯಕ್ಷತೆಯನ್ನು ಸಾಹಿತಿ ಪ್ರಾಧ್ಯಾಪಕಿ ಡಾ. ವೀಣಾಯಲಿಗಾರ ವಹಿಸುವರು. ಮಧ್ಯಾನ್ಹ 3.30 ಗಂಟೆಗೆ ಜನತಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತಪ್ರಸಾದ ಇವರ ಗೌರವ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು ಹಿರಿಯ ಸಾಹಿತಿ ಪ್ರೊ ಕೆ. ಎಸ್. ಕೌಜಲಗಿ ಇವರ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಇದೇ ಸಂದರ್ಭದಲ್ಲಿ 'ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ 'ಎಂಬ ವಿಷಯ ಕುರಿತು ಆಯೋಜಿಸಿದ್ದ ಲೇಖನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಹಾಗೂ ಸಲಹಾ ಸಮಿತಿ ಸದಸ್ಯರಾದ ಧರಣೇಂದ್ರ ಜವಳಿ, ಶಾಂತಿನಾಥ ಹೊತಪೇಟಿ, ಧನಪಾಲ ಮುನ್ನೊಳ್ಳಿ, ಡಾ. ರಾಯಪ್ಪ ಬಾಳಿಕಾಯಿ ಹಾಗೂ ಶಾಂತರಾಜ ಮಲ್ಲಸಮುದ್ರ ಉಪಸ್ಥಿತರಿರುವರು. ಅತ್ಯಂತ ವಿದ್ವತ್ಪೂರ್ಣ ಈ ವಿಚಾರ ಸಂಕಿರಣದಲ್ಲಿ ತಾವುಗಳು ತಪ್ಪದೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ವರದಿ: ಎಸ್ ಆರ್ ಮಲ್ಲಸಮುದ್ರ

ಗೃಹರಕ್ಷಕ ಪಾಂಡುರಾಜ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

Article Image

ಗೃಹರಕ್ಷಕ ಪಾಂಡುರಾಜ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ತಾಲೂಕು ಗೃಹರಕ್ಷಕ ದಳ ಘಟಕದ ಹಿರಿಯ ಗೃಹ ರಕ್ಷಕ, ಘಟಕಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಪಾ೦ಡುರಾಜ ಅವರ ಸೇವೆ ಗುರುತಿಸಿ 2024-25ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವ ನೀಡಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಅವರಿಗೆ ನೀಡಲಾಗುವ ಗೌರವಕ್ಕೆ ದ.ಕ ಜಿಲ್ಲೆಯಿಂದ ಏಕೈಕ ಪ್ರತಿನಿಧಿಯಾಗಿ ಪಾಂಡುರಾಜ ಈ ಗೌರವ ಸ್ವೀಕರಿಸಿದ್ದಾರೆ. ಬೆಂಗಳೂರಿನ ಆ‌ರ್.ವಿ. ಮುಂಡೂರ್‌ ಅಗ್ನಿಶಾಮಕ ತರಬೇತಿ ಅಕಾಡೆಮಿ ಆವರಣದಲ್ಲಿ ಕಳೆದ ಮಂಗಳವಾರ ಜರಗಿದ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್‌ಸೇವಾಸಾಧಕರಿಗೆ ಪದಕಪ್ರದಾನ ಮಾಡಿ ಗೌರವಿಸಿದರು. ಗೃಹರಕ್ಷಕರಾಗಿ 1986 ರಿಂದ ಹಾಗೂ ಘಟಕಾಧಿಕಾರಿಯಾಗಿ 2015ರಿಂದ 2024 ರ ಅವಧಿಗೆ ಒಟ್ಟು 38 ವರ್ಷಗಳ ಕರ್ತವ್ಯ ನಿರ್ವಹಿಸಿದ್ದಾರೆ.

ರತ್ನತ್ರಯ ಜೈನ ಮಿಲನ್ ಸಭೆ

Article Image

ರತ್ನತ್ರಯ ಜೈನ ಮಿಲನ್ ಸಭೆ

ದಿನಾಂಕ 06-03-2026ಶುಕ್ರವಾರದಂದು ರತ್ನತ್ರಯ ಜೈನ ಮಿಲನ್ ಆನ್‌ಲೈನ್ ಸಭೆ ಜರುಗಿತು. ಮುಖ್ಯ ಅತಿಥಿಗಳಾಗಿ ತ್ರಿಶಲಾ ಬ್ರಹ್ಮಯ್ಯ ಹಾಗೂ ರತ್ನತ್ರಯ ಜೈನ್ ಮಿಲನ್ ಅಧ್ಯಕ್ಷರಾದ ನವೀನ್ ಕುಮಾರ್ ಉಪಸ್ಥಿತರಿದ್ದರು. ಸಾಮೂಹಿಕ ಪಂಚ ನಮಸ್ಕಾರ ಪಠಣೆ, ಅತಿಥಿಗಳಿಂದ ದೀಪ ಪ್ರಜ್ವಲನೆ ಹಾಗೂ ಭಾಮಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಣಿ ಪ್ರಫುಲ್ಲ ಅವರು ಸ್ವಾಗತ ಭಾಷಣ ಮಾಡಿದರು. ಸುನೀತಾ ಸುಂದರರಾಜ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮ ಸೂರಿ ಅವರು ಪರ್ವವಾಚನ ಮಾಡಿದರು. ಶ್ವೇತಾ ನವೀನ್ ಅವರು ಹಿಂದಿನ ಸಭೆಯ ವರದಿಯನ್ನು ಪ್ರಸ್ತುತಪಡಿಸಿದರು. ಶೋಭಿತಾ ನವೀನ್ ಅವರು ಮಾರ್ಚ್ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ್ ಸದಸ್ಯರಿಗೆ ಶುಭ ಕೋರಿದರು. ಚಂದನ ಸುರೇಂದ್ರ ಅವರು ಜಿನ ಭಕ್ತಿ ಗೀತೆಯನ್ನು ಹಾಡಿದರು. ಮಹಾವೀರ ಕುಮಾರ್ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ‌ ಆಗಮಿಸಿದ್ದ ತ್ರಿಶಲಾ ಬ್ರಹ್ಮಯ್ಯ ಅವರು ‘ಬದಲಾಗುತ್ತಿರುವ ಸಮಾಜದಲ್ಲಿ ಜೈನ ಧರ್ಮ’ ಈ ಕುರಿತು ಅತ್ಯಂತ ಉಪಯುಕ್ತ ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತರವರು ನಡೆಸಿಕೊಟ್ಟರು. ಉಷಾ ರಾಣಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದ ಕುರಿತು ಸಂಶೋಧನಾ ಪ್ರಬಂಧ ಮಂಡನೆ

Article Image

ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದ ಕುರಿತು ಸಂಶೋಧನಾ ಪ್ರಬಂಧ ಮಂಡನೆ

ಚೆನ್ನೈ, ಫೆಬ್ರವರಿ 28, 2026: ಚೆನ್ನೈನ "ಸಿ.ಪಿ. ರಾಮಸ್ವಾಮಿ ಅಯ್ಯರ್ ಇಂಡೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಚೆನ್ನೈ" ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾದ ನವದೆಹಲಿಯ "ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್" (ICHR) ಸಂಯುಕ್ತವಾಗಿ ಸಿ.ಪಿ.ರಾಮಸ್ವಾಮಿ ಅಯ್ಯರ್ ಫೌಂಡೇಶನ್‌ನಲ್ಲಿ 27–28 ಫೆಬ್ರವರಿ 2026 ರಂದು “ದಕ್ಷಿಣ ಭಾರತದಲ್ಲಿ ಜೈನಧರ್ಮ – ಇತಿಹಾಸ, ಕಲೆ ಮತ್ತು ಸಂಸ್ಕೃತಿ” ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ “ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸ” ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಜೈನ ಸಂಶೋಧಕ ಬೆಂಗಳೂರಿನ ನಿತಿನ್ ಹೆಚ್.ಪಿ.ರವರು ಮಂಡಿಸಿದರು. ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ - www.jainheritagecentres.com ಅಂತರ್ಜಾಲತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್‌ರವರು ಶ್ರೀ ಭದ್ರಬಾಹು ಮುನಿಗಳ ಆಗಮನದಿಂದ ಆರಂಭವಾದ ಕರ್ನಾಟಕದ ಜೈನಧರ್ಮದ ಶಾಸನೋಕ್ತ ಇತಿಹಾಸ, ಮುನಿ ಹಾಗೂ ಭಟ್ಟಾರಕ ಪರಂಪರೆ, ಜೈನಧರ್ಮಕ್ಕೆ ರಾಜಮನೆತನಗಳ ಪೋಷಣೆ, ಸಾಹಿತ್ಯಿಕ ಕೊಡುಗೆ, ಕರ್ನಾಟಕದಲ್ಲಿ ಜೈನಧರ್ಮಕ್ಕೆ ಅನ್ಯಧರ್ಮಗಳಿಂದುಂಟಾದ ದಾಳಿಗಳು, ಬಸದಿಗಳು ಅವುಗಳ ಬೆಳವಣಿಗೆ ಮತ್ತು ವಾಸ್ತುಶಿಲ್ಪ ಹೀಗೆ ಇನ್ನೂ ಹಲವು ವಿಷಯಗಳನ್ನೊಳಗೊಂಡಂತೆ ವಿಸ್ತೃತವಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಭಾರತದಾದ್ಯಂತದಿಂದ 23 ಸಂಶೋಧಕರು ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಿದರು.

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

Article Image

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

ಉಜಿರೆ: ಪುದುವೆಟ್ಟು ಗ್ರಾಮದ ನಿಡ್ವಾಳ ಬಸದಿಯಲ್ಲಿ ಭಾನುವಾರ ಕೇವಲಜ್ಞಾನ ಕಲ್ಯಾಣ, ಸಮವಸರಣ ಪೂಜೆ, ಭವ್ಯ ಅಗ್ರೋಧಕ ಮೆರವಣಿಗೆ ಬಳಿಕ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಮೂರ್ತಿಗೆ ೧೦೦೮ ಕಲಶಗಳಿಂದ ಅಭಿಷೇಕ ಹಾಗೂ ಮಹಾಮಂಗಲಾರತಿಯೊಂದಿಗೆ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನಗೊಂಡಿತು. ಪೂಜ್ಯ ಏಲಾಚಾರ್ಯ ಪ್ರಸಂಗ ಸಾಗರ ಮುನಿಮಹಾರಾಜರು ಮತ್ತು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶಾಮೃತ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಪ್ರತಿಷ್ಠಾಚಾರ್ಯ ಜಯರಾಜ ಇಂದ್ರರು ಮತ್ತು ಧರಣೇಂದ್ರ ಕುಮಾರ್ ಹಾಗೂ ಸ್ಥಳ ಪುರೋಹಿತರಾದ ಶ್ರೀಕೀರ್ತಿ ಇಂದ್ರರು, ಬೈಲಂಗಡಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಕೋಟ್ಯಣ್ಣ ಬಂಟರಾದ ಸುರೇಂದ್ರಕುಮಾರ್ ಜೈನ್, ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಧನಕೀರ್ತಿ ಆರಿಗ, ಉಪಾಧ್ಯಕ್ಷ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ಚಂದ್ರನಾಥ ಜೈನ್, ಸಂಚಾಲಕ ಜಯವರ್ಮ ಕಾಜವ ಮತ್ತು ಕೋಶಾಧಿಕಾರಿ ಅಜಯ್ ಕುಮಾರ್ ಹಾಗೂ ಸರ್ವಸದಸ್ಯರು ಮತ್ತು ಊರಿನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು

First Previous

Showing 1 of 21 pages

Next Last