ಜೈನ್ ಮಿಲನ್ ಮಾಸಿಕ ಸಭೆ
Published Date: 11-Aug-2026
ಕಾರ್ಕಳ: ಭಾರತೀಯ ಜೈನ್ ಮಿಲನ್ ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯು ತ್ಯಾಗಿ ಭವನದಲ್ಲಿ ಏಲಾಚಾರ್ಯ 108 ಪ್ರಸಂಗ ಸಾಗರ ಮಹಾರಾಜರ ಮತ್ತು ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಇವರ ಪಾವನ ಸಾನ್ನಿಧ್ಯದೊಂದಿಗೆ ನೆರವೇರಿತು. ಅತಿಥಿಗಳಾಗಿ ಆಗಮಿಸಿದ ವಲಯ 8 ರ ನಿರ್ದೇಶಕರಾದ ಶ್ವೇತಾ ಜೈನ್ ವಕೀಲರು, ಮೂಡಬಿದ್ರೆ ಇವರು ಮುನಿಧರ್ಮ ಮತ್ತು ಶ್ರಾವಕ ಧರ್ಮದ ಬಗ್ಗೆ ಮಾತನಾಡುತ್ತಾ ಮುನಿ ಪರಂಪರೆ ಶ್ರೇಷ್ಠವಾದದ್ದು, ಶ್ರಾವಕರಾದವರು ಮುನಿಗಳ ಸೇವೆಯಲ್ಲಿ ತೊಡಗಿ ಪುಣ್ಯ ಸಂಪಾದನೆ ಮಾಡಬೇಕು ಎಂದು ಹೇಳಿದರು. ನಂತರ ನೂತನ ವಲಯ ನಿರ್ದೇಶಕರಾದ ಎನ್ ಪ್ರಭಾತ್ ಕುಮಾರ್ ಇವರಿಗೆ ಅಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು. ಆಗಸ್ಟ್ ತಿಂಗಳಲ್ಲಿ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದವರಿಗೆ ಶುಭಾಶಯ ಕೋರಲಾಯಿತು. ಅಶೋಕ್ ಎಚ್ ಎಂ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ನಂತರ ಮುನಿ ಮಹಾರಾಜರಿಗೆ ಮತ್ತು ಸ್ವಾಮೀಜಿಯವರಿಗೆ ಪಾದ ಪೂಜೆಯೊಂದಿಗೆ ಜಿನಾವಾಣಿಯನ್ನು ಸಮರ್ಪಿಸಲಾಯಿತು. ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಪಂಚಮ ಕಾಲದಲ್ಲಿ ನಿರ್ಗ್ರಂಥ ಮುನಿಗಳು ನಮ್ಮ ಊರಿಗೆ ಬಂದು ಚಾತುರ್ಮಾಸ ಮಾಡುವುದು ಸೌಭಾಗ್ಯವೇ ಸರಿ. ತಾವೆಲ್ಲ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು. ನಂತರ ಪರಮಪೂಜ್ಯ ಪ್ರಸಂಗ ಸಾಗರ ಮುನಿ ಮಹಾರಾಜರ ಧಾರ್ಮಿಕ ಪ್ರವಚನ ನಡೆಯಿತು. ವೀಕ್ಷಿತ ಏ ಜೈನ್ ಹಾಗೂ ರಿಧಿ ಜೈನ್ ಪ್ರಾರ್ಥಿಸಿದರು. ಕಾರ್ಯದರ್ಶಿಯಾದ ವಸಂತ್ ಕುಮಾರ್ ಬಂಗ ರವರು ಸ್ವಾಗತಿಸಿದರು.