Article Image

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Article Image

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜೈನ ಜಿಲ್ಲಾ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ:- ಮಹಾಮಂಡಲೇಶ್ವರಿ ಚನ್ನಭೈರಾದೇವಿ ನಿಯಮಗಳು: ಪ್ರಬಂಧ ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲರೂ ಭಾಗವಹಿಸಬಹುದು, ಕೈ ಅಕ್ಷರಗಳಲ್ಲಿ ಹಾಗೂ ಟೈಪ್ ಮಾಡಬಹುದು, ಎರಡು ಪುಟ ಮೀರಬಾರದು, ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ, ಸ್ಪರ್ಧಿಯ ಹೆಸರು ವಿಳಾಸ ಫೋನ್ ನಂಬರ್ ಬರೆಯಬೇಕು, ಅಂಜೆ (Post office) ಮೂಲಕ ಕಳುಹಿಸಬೇಕು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: 5-8-2026 ಕಳುಹಿಸುವ ವಿಳಾಸ: ಕೆ ಆರ್.ಪದ್ಮ ಬಾಹುಬಲಿ ಜೈನ್, ಎ ಪಿ ಎಂ ಸಿ ರೋಡ್, ಶ್ರೀಧರ ನಗರ, 2ನೇ ಕ್ರಾಸ್, ಸಾಗರ, ಪೋಸ್ಟ್ ಸಾಗರ, ಸಾಗರ (ತಾ) ಶಿವಮೊಗ್ಗ( ಜಿಲ್ಲೆ) ಸಾಗರ, ಪಿನ್ ನಂ:- 577421 ವಿವರಗಳಿಗೆ ಸಂಪರ್ಕಿಸಿ: 94822 04767, 94824 80220, 94497 06582, 94800 72644, 95916 83980

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

Article Image

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

ಇಂಗ್ಲೆಂಡ್: ಸ್ಲೋಘ್‌ನಲ್ಲಿರುವ ಶಾಂತಿನಾಥ ದಿಗಂಬರ ಜೈನ ಬಸದಿಯಲ್ಲಿ ಮೊದಲಿಗೆ ಪೂಜಾ ಕಾರ್ಯಕ್ರಮಗಳು ನಡೆದು, ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಚಾರ್ಯ ಶ್ರೀ ವಿದ್ಯಾಸಾಗರ ದಿಗಂಬರ ಜೈನ ಚಾರಿಟೇಬಲ್ ಟ್ರಸ್ಟ್ ಲಂಡನ್ ಇದರ ಟ್ರಸ್ಟಿ ಸಂತೋಷ್ ಕುಮಾರ್ ಜೈನ್ ಅವರು ಟ್ರಸ್ಟ್ ಬೆಳೆದು ಬಂದ ದಾರಿ , ಬಸದಿಯ ನಿರ್ಮಾಣ, ಉದ್ದೇಶ ಹಾಗೂ ಆಶಯಗಳ ಬಗ್ಗೆ ಮಾಹಿತಿ ನೀಡಿದರು. ಮಿಲನ್ ಉಪಾಧ್ಯಕ್ಷ ನಿಖಿಲ್ B.A ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿ, ಮುಂದಿನ ಜೈನ್ ಮಿಲನ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಜೈನ್ ಮಿಲನ್ ಲಂಡನ್ ಅಧ್ಯಕ್ಷ Dr. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಜೈನ ಧರ್ಮದ ತತ್ವ ಸಿದ್ಧಾಂತಗಳ ಪಾಲನೆ ಮತ್ತು ಆಚರಣೆಯಿಂದ ಜೀವನದಲ್ಲಿ ಆರೋಗ್ಯಕರವಾಗಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕೈವಲ್ಯ ಜೈನ್, ಕೇವಲ್ ಜೈನ್, ಧೀಮನ್ ಬಲ್ಲಾಳ್ ಜಿನ ಭಜನೆ ಹಾಡಿದರು. ಅಕ್ಷಯ , ಸಂಪದ , ದೀಕ್ಷಾ ಮತ್ತು ಸಂಧ್ಯಾ ಅವರ ತಂಡ ಜಿನ ಭಜನೆ ಹಾಡಿದರು. ಸಾರ್ಥಕ್ ಜೈನ್ ಬಾಹುಬಲಿ ಸ್ವಾಮಿಯ ಕಥೆ ಹೇಳಿದರು. ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ಹಿಂಸೆ ಅಥವಾ ಅಹಿಂಸೆ ಎಂದು ಪರಿಗಣಿಸುವ ಕರ್ಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಮತ್ತು ಸಾಧಕರಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಲಾಯಿತು. ಆರವ್ ಜೈನ್ ಅವರು ಗಿಟಾರ್ ಮೂಲಕ ಪಂಚ ನಮಸ್ಕಾರ ಮಂತ್ರವನ್ನು ನುಡಿಸಿ ಮತ್ತು ಆಖ್ಯ ಹೆಗ್ಡೆ ಅವರು ಗಿಟಾರ್ ನುಡಿಸುತ್ತಾ ಪಾರ್ಶ್ವನಾಥ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು . ಕೋಶಾಧಿಕಾರಿ Dr. ವೈಶಾಕ್ ವಿದ್ಯಾಧರ್ ವಂದಿಸಿದರು. ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮ ದ ನಂತರ ಸದಸ್ಯರಿಗೆ ಮೋಜಿನ ಸ್ಪರ್ಧೆಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮದ ಆತಿಥೇಯರಾಗಿ ಸಾಯಿನಾಥ್ ಹೆಗ್ಡೆ, ಉಜ್ವಲ್ ಶ್ರೇಯಸ್, Dr.ವೈಶಾಕ್ ವಿದ್ಯಾಧರ್, ದಯಾನಂದ ಪಾಟೀಲ್ ಕುಟುಂಬದವರು ಸಹಕರಿಸಿದರು. ವರದಿ ಧೀರೇಂದ್ರ ಬಲ್ಲಾಳ್

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

Article Image

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್: ವಿವೇಕ್ ಆಳ್ವ ನೇಮಕ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ರವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಡಾ ಪಿ.ಜಿ.ಆರ್. ಸಿಂಧಿಯಾ ರವರ ಶಿಫಾರಸಿನ ಮೇರೆಗೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಮುಖ್ಯ ರಾಷ್ಟ್ರೀಯ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಕೆ.ಕೆ. ಖಂಡೇಲ್ವಾಲ್ ಇವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಕರ್ನಾಟಕಕ್ಕೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರಾಷ್ಟ್ರೀಯ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳನ್ನು ರೂಪಿಸುವುದು, ರಾಷ್ಟ್ರೀಯ ಸಮಗ್ರತಾ ಶಿಬಿರಗಳು, ಯುವ ವಿನಿಮಯ ಯೋಜನೆಗಳು, ಸಾಂಸ್ಕೃತಿಕ ಜಾಂಬೂರಿಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಯುವ ಸಂವಾದಗಳು ಹಾಗೂ ವಿಶ್ವ ಸ್ಕೌಟ್ಸ್–ಗೈಡ್ಸ್ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ವಿವಿಧ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನಡುವೆ ಪರಸ್ಪರ ಗೌರವ, ರಾಷ್ಟ್ರೀಯ ಐಕ್ಯತೆ ಹಾಗೂ ವೈವಿಧ್ಯದಲ್ಲಿ ಏಕತೆ ಎಂಬ ಭಾರತದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯಕ್ಕೂ ಅವರು ನಾಯಕತ್ವ ವಹಿಸಲಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯಗಳ ಪ್ರತಿಭಾವಂತ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ರಾಷ್ಟ್ರೀಯ ವೇದಿಕೆ ಕಲ್ಪಿಸುವುದು, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸುವುದು, ಯುವಜನರಲ್ಲಿ ನಾಯಕತ್ವ ಕೌಶಲ್ಯ, ಸಂವಹನ ಸಾಮರ್ಥ್ಯ ಮತ್ತು ಅಂತರಾಷ್ಟ್ರೀಯ ದೃಷ್ಟಿಕೋನವನ್ನು ಬೆಳೆಸುವ ಯೋಜನೆಗಳನ್ನು ಜಾರಿಗೊಳಿಸುವಲ್ಲಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ. ವಿವೇಕ್ ಆಳ್ವರವರು ಹಲವು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದು, ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ, ರಾಷ್ಟ್ರೀಯ ಸಮಗ್ರತಾ ಶಿಬಿರ, ಯುವ ನಾಯಕತ್ವ ತರಬೇತಿಗಳು ಹಾಗೂ ವಿವಿಧ ರಾಷ್ಟ್ರೀಯ ಮಟ್ಟದ ಸ್ಕೌಟ್ಸ್–ಗೈಡ್ಸ್ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಿಶೇಷವಾಗಿ ಮೂಡುಬಿದಿರೆಯಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಯಶಸ್ವಿ ಸಂಘಟನೆಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದಾರೆ.

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

Article Image

ಸಂತಶಿರೋಮಣಿ ಆಚಾರ್ಯ ವಿದ್ಯಾಸಾಗರ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆ

ದಿಗಂಬರ ಜೈನ ಸಮಾಜದ ಅತಿದೊಡ್ಡ ನಕ್ಷತ್ರ ಎಂದೇ ಹೆಸರಾಗಿದ್ದ, ವಿಶ್ವ ವಂದನೀಯ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜರ 59ನೇ ದೀಕ್ಷಾ ದಿನ ಆಚರಣೆಯು ಧಾರವಾಡ ಚಿಕ್ಕಮಲ್ಲಿಗವಾಡ ಹೊರವಲಯದ ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಇವರ ನಿವಾಸದಲ್ಲಿ ಪರಮಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಮತ್ತು ಪ.ಪೂ ಮುನಿಶ್ರೀ ಪುರಾಣ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವೈಭವದಿಂದ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಶ್ರಾವಕ ಶ್ರಾವಕಿಯರಿಂದ ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ ಪೂಜಾ ಅಷ್ಟಕ ಜರುಗಿತು. ಹಿರಿಯ ನ್ಯಾಯಾಧೀಶ ರಾಜಶೇಖರ್ ತಿಳಗಂಜಿ ಮತ್ತು ಪರಿವಾರದವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ತೀರ್ಥಂಕರರನ್ನು ನಾವು ನೋಡಿಲ್ಲ ಆದರೆ ದೇಶದಾದ್ಯಂತ ಶಾಂತಿ ಅಹಿಂಸೆ ಸಂದೇಶಗಳ ಮೂಲಕ ಧರ್ಮ ಪ್ರಭಾವನೆ ಮಾಡುತ್ತಿರುವ ಕಣ್ಣಿಗೆ ಕಾಣುವ ತೀರ್ಥಂಕರರನ್ನೇ ದಿಗಂಬರ ಮುನಿ ಮಹಾರಾಜರು ಇಂಥ ಮುನಿ ಮಹಾರಾಜರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದು ತಿಳಿಸಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಕೆ ಜೆ ರಪಾಟಿ, ಎಸ್ ಆರ್ ಮಲ್ಲಸಮುದ್ರ ಮುಂತಾದವರು ಮಾತನಾಡಿದರು. ಪರಮಪೂಜ್ಯ ಮುನಿಶ್ರೀ ಪುರಾಣ ಸಾಗರ ಮಹಾರಾಜರು ತಮ್ಮ ಪ್ರವಚನದಲ್ಲಿ ಆಚಾರ್ಯಶ್ರೀಗಳ ಗುಣಗಾನ ಮಾಡಿ ಸ್ಮರಿಸಿದರು. ಸಾನಿಧ್ಯ ವಹಿಸಿ ಪ್ರವಚನ ದಯಪಾಲಿಸಿದ ಆಚಾರ್ಯ ಶ್ರೀ ಪುಣ್ಯಸಾಗರ ಮಹಾರಾಜರು ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಭಾರತ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಭಾವಿ ಆಚಾರ್ಯರಾಗಿದ್ದರು ಅವರು ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ದಿಗಂಬರ ಜೈನ ಸರೋವರದ ರಾಜಹಂಸ ಎಂದು ಕರೆಯಲ್ಪಡುತ್ತಿದ್ದರು, ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿ ಶ್ರೀಮತಿದೇವಿ ಹಾಗೂ ಶ್ರೀ ಮಲ್ಲಪ್ಪಾಜಿಯವರ ಸುಪುತ್ರರಾಗಿ ದಿನಾಂಕ 10-10-1946 ಜನಿಸಿದರು. ಬಾಲ್ಯದಿಂದಲೂ ಆದ್ಯಾತ್ಮದ ಕಡೆ ಒಲವು ಹೊಂದಿದ್ದರು, ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಅನೇಕ ಸ್ಥಳಗಲ್ಲಿ ಸಂಚಾರಿಸುತ್ತ ಧರ್ಮದ ಅಧ್ಯಯನ ಮಾಡಿದರು. ಪೂಜ್ಯ ಜ್ಞಾನ ಸಾಗರ ಮಹಾರಾಜರಿಂದ ದಿನಾಂಕ 30-6-1968 ರಲ್ಲಿ ದಿಗಂಬರ ದೀಕ್ಷೆ ಪಡೆದು ಇಂದಿಗೆ 58 ವರ್ಷ ಮುಗಿದು 59ನೇ ವರ್ಷಕ್ಕೆ ಜೈನ ಮುನಿಯಾದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು. ಆಶ್ಚರ್ಯವೆಂದರೆ ಆಚಾರ್ಯರ ಮೂಕ ಮಾಟಿ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟವಾಗಿದೆ. ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಇಂಥ ಗುರುವರ್ಯರಿಂದ ನನ್ನನ್ನೂ ಸೇರಿ ಹಲವಾರು ಮುನಿಗಳು ದೀಕ್ಷೆ ಪಡೆದು ಧನ್ಯರಾಗಿದ್ದೇವೆ ಎಂದು ದೀಕ್ಷಾ ಗುರುಗಳನ್ನು ಸ್ಮರಿಸಿದರು. ನಂತರ 59 ದೀಪಗಳಿಂದ ಮಹಾ ಮಂಗಳಾರತಿ ವೈಭವದಿಂದ ನಡೆಯಿತು. ಸಮಾರಂಭದಲ್ಲಿ ಹುಬ್ಬಳ್ಳಿ ನವನಗರ ಧಾರವಾಡ ಮುಮ್ಮಿಗಟ್ಟಿ ಗದಗ ಮುಂತಾದ ಊರುಗಳಿಂದ ಹಲವಾರು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಕುಶಲ ಅವಲಕ್ಕಿ ಅವರು ಪ್ರಾರ್ಥಿಸಿ, ಎಸ್ ಆರ್ ಮಲ್ಲಸಮುದ್ರರವರು ಸ್ವಾಗತಿಸಿ, ನಂದಿನಿ ಗೊಟೂರೆ ಇವರಿಂದ ಮಂಗಳಾಚರಣೆ ನೆರವೇರಿತು. ವರದಿ : ಶಾಂತರಾಜ ಮಲ್ಲಸಮುದ್ರ.

ಆರ್.ಅನನ್ಯಾ ಜೈನ್-ತೇರ್ಗಡೆ

Article Image

ಆರ್.ಅನನ್ಯಾ ಜೈನ್-ತೇರ್ಗಡೆ

ಮೂಡುಬಿದಿರೆ: ಇಟಲಿಯ ಮಿಲನ್‌ನ ಪ್ರತಿಷ್ಠಿತ ಪಾಲಿಟೆಕ್ನಿಕೊ ಡಿ ಮಿಲನೋ ವಿಶ್ವವಿದ್ಯಾಲಯದಲ್ಲಿ ಆರ್.ಅನನ್ಯಾ ಜೈನ್‌ರವರು ವಾಸ್ತುಶಿಲ್ಪ ವಿನ್ಯಾಸ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಮೂಡುಬಿದಿರೆಯ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ವೀರಶ್ರೀ ದಂಪತಿಗಳ ಪುತ್ರಿ.

ಹಲಸು ನಾ ನಿನ್ನ ಮರೆಯಲಾರೆ

Article Image

ಹಲಸು ನಾ ನಿನ್ನ ಮರೆಯಲಾರೆ

ಹಲಸು ( ಪಿಲಕ್ಕಯಿ ) ತುಳುನಾಡಿನ ಸಂಸ್ಕೃತಿ, ಪರಂಪರೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ತುಳುನಾಡಿನಲ್ಲಿ ಹಲಸು ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಬಡವರಿಗೆ ಅದು ಸ್ವರ್ಗ ಸೋಪಾನವಾಗಿತ್ತು, ಜೀವನಧಾರವಾಗಿತ್ತು. ಆದರಿಂದು ಆಧುನಿಕ ಬದುಕಿನ ಓಟದಲ್ಲಿ ಹಲಸು ನಮಗೆ ಬೇಡವೆನಿಸುತ್ತಿದೆ. ಅಂದು ನಾವು ಚಿಕ್ಕವರಿದ್ದಾಗ ಹೊಟ್ಟೆ ಬಟ್ಟೆಗೆ ಬಹಳ ಬರವಿತ್ತು. ಮಕ್ಕಳಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಹೊಟ್ಟೆ ತುಂಬಬೇಕು, ಆಟ ಆಡಬೇಕು ಅಷ್ಟೇ. ಮನೆಯ ಕಷ್ಟ ತಂದೆ ತಾಯಿಗಳಿಗೆ ಗೊತ್ತಿರೋದು. ಲೋಕದಲ್ಲಿರುವ ಸಮಸ್ಯೆ ನಮ್ಮ ಮನೆಯಲ್ಲೂ ಇತ್ತು. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು ಹೊಟ್ಟೆಯ ದಾಹ ಜಾಸ್ತಿಯಾಗುವುದು. 0.38 ಎಕರೆ ಅಂದರೆ 38 ಸೆನ್ಸ್ ಗದ್ದೆ ಇರುವ ನಮ್ಮಲ್ಲಿ ಎಂಟು ಜನರಿಗೆ ಉಣ್ಣಲು ಅಕ್ಕಿ ಸಾಲುತ್ತಿರಲಿಲ್ಲ. ತಂದೆ ಹೊರಗಡೆ ಹೋಗಿ ದುಡಿದು ತಂದರೂ ಹೊಟ್ಟೆ ತುಂಬುವ ಪರಿಸ್ಥಿತಿ ಇರಲಿಲ್ಲ. ಆಗ ನಮ್ಮ ಅಪ್ಪಾಜಿ ಕಂಡುಕೊಂಡ ದಾರಿಯೇನೆಂದರೆ ಹಲಸಿನಿಂದ ಹೊಟ್ಟೆ ತುಂಬಿಸಿಕೊಳ್ಳುವ ಮಾರ್ಗ. ಹಲಸು ಪ್ರಾರಂಭವಾದ ದಿನದಿಂದ ಹಿಡಿದು ಹಲಸು ಮುಗಿಯುವವರೆಗೆ ನಮಗೆ ಮುಖ್ಯ ಆಹಾರಗಳಲ್ಲಿ ಹಲಸೂ ಕೂಡ ಆಗಿತ್ತು. ಕಾಯಿ ಹಲಸಿನ ಉಪ್ಪುಕಾರಿ ಅಂದರೆ ಹಲಸನ್ನು ಬೇಯಿಸಿ ತಿನ್ನುವುದು, ರಾಶಿ ರಾಶಿ ಹಪ್ಪಳ ಹಾಕುವುದು ನಮ್ಮ ಮನೆಯಲ್ಲಿ ಖಾಯಂ. ನಮಗೂ ಅನ್ನದ ಬದಲಿಗೆ ಹಲಸಿನ ಉಪ್ಪುಕಾರಿ ( ಉರುವೆಲ್ ) ಬಹಳ ಅಪ್ಯಾಯಮಾನವಾಗುತ್ತಿತ್ತು. ಒಮ್ಮೊಮ್ಮೆ ಮೂರು ಹೊತ್ತೂ ಇದೇ ಇರುತ್ತಿತ್ತು. ಆದರೆ ಅಮ್ಮ ಬಯ್ಯುತ್ತಿದ್ದರು ಮೂರೂ ಹೊತ್ತೂ ಇದನ್ನೇ ತಿಂದರೆ ಮಕ್ಕಳ ಆರೋಗ್ಯ ಏನಾಗಬಹುದು ಎಂಬುದು ಅವರ ಕಳವಳ. ನಮ್ಮ ಮನೆಯ ಹಪ್ಪಳವಂತೂ ನಮಗೆ ಪಂಚ ಪ್ರಾಣ. ಹಪ್ಪಳವೇ ಮನೆಗೆ ಬರುವ ನೆಂಟರಿಗೆ ಅತಿಥಿ ಸತ್ಕಾರ. ಧೋ.. ಎಂದು ಸುರಿಯವ ಜಡಿ ಮಳೆಗೆ ಜಿಗಿಜಿಗಿ ಕೆಂಡದಲ್ಲಿ ಹಾಕಿ ಬೇಯಿಸಿದ ಹಪ್ಪಳ ಮತ್ತು ತೆಂಗಿನಕಾಯಿ ಚೂರುಗಳು ಆಹಾ ಜಗತ್ತಿನಲ್ಲಿ ಇದಕ್ಕಿಂತ ರುಚಿಯಾದ ತಿನಿಸೇ ಇಲ್ಲವಾಗಿತ್ತು ನಮಗೆ. ಯಾವಾಗ ನೋಡಿದರೂ ಹಲಸಿನ ಪಲ್ಯ, ಊಟಕ್ಕಿಂತ ಎರಡು ಪಾಲು ಜಾಸ್ತಿ ಹಾಕಿಸಿಕೊಳ್ಳುವ ಪಲ್ಯ, ಕಾಯಿ ಹಲಸನ್ನು ಉಪ್ಪಿನ ದ್ರಾವಣದಲ್ಲಿ ಹಾಕಿಟ್ಟರೆ ಆವಾಗವಾಗ ಬೇಕದಾಗ ಖಾರ ಪಲ್ಯ ಹೊಟ್ಟೆಯೂ ತುಂಬುತ್ತಿತ್ತು ಅಕ್ಕಿಯ ಸಮಸ್ಯೆಯೂ ನೀಗುತ್ತಿತ್ತು. ಹಲಸು ಹಣ್ಣಾದ ಮೇಲೆ ಮತ್ತೊಂದು ರೀತಿಯ ಸಂಭ್ರಮ. ಹಲಸಿನ ಹಣ್ಣಿನ ಕಡುಬು ( ಗಟ್ಟಿ ) , ದೋಸೆ ( ಗಾರಿಯಾ ), ಹಂಗುಲಿ, ಹಲಸು ಹಣ್ಣಿನ ಉಪ್ಪುಕಾರಿ ವಾಹ್ ಎಂತೆಂತಾ ತಿಂಡಿಗಳು ನಮಗೆಲ್ಲರಿಗೂ ಅದು ಅಂದು ದೇವಲೋಕದ ಆಹಾರದಂತೆ ಆಗಿತ್ತು. ಇನ್ನು ಹಲಸಿನ ಬೀಜ ಅದನ್ನು ಮಣ್ಣಿನ ನೆಲದಲ್ಲಿ ಬತ್ತದ ಹೊಟ್ಟಿನ ಜೊತೆ ಶೇಖರಣೆ ಮಾಡುತ್ತಾರೆ. ಬಿಸಿಲು ಇಲ್ಲದ ಕಾರಣ ಹಲಸಿನ ಬೀಜವನ್ನು ಒಣಗಿಸುವ ವಿಧಾನ ಹಾಗೂ ಇದರಿಂದ ಹಲಸಿನ ಬೀಜ ಸಂರಕ್ಷಿತವಾಗಿರುತ್ತದೆ. ಒಣಗಿದ ಹಲಸಿನ ಬೀಜವನ್ನು ನಿಗಿ ನಿಗಿ ಕೆಂಡದಲ್ಲಿ ಹದವಾಗಿ ಬೇಯಿಸಿ ತಿನ್ನುವುದೆಂದರೆ ಈಗಿನ ಯಾವ ವಿಷಕಾರಿ ಚಾಕಲೇಟ್ ಮುಂತಾದ ಆಧುನಿಕ ತಿಂಡಿಗೂ ಸರಿ ಬರುವುದಿಲ್ಲ. ಹಲಸಿನ ಬೀಜದ ಪಲ್ಯ, ಉಪ್ಪಕಾರಿ ( ಉಪ್ಪಿಟ್ಟು ), ಹಲಸಿನ ಬೀಜದ ರೊಟ್ಟಿ, ವಡೆ ಇತ್ಯಾದಿ ಒಂದೇ ಎರಡೇ ಬಗೆಬಗೆ ತಿಂಡಿಗಳು ಆರೋಗ್ಯಕ್ಕೂ, ದೇಹಕ್ಕೂ, ಮನಸ್ಸಿಗೂ ಅದರಲ್ಲೂ ಮುಖ್ಯವಾಗಿ ಇದು ಬಡವರ ಪಾಲಿನ ಕಾಮಧೇನುವಾಗಿತ್ತು. ಮಳೆಗಾಲದಲ್ಲಿ ನಮ್ಮ ಅಪ್ಪಾಜಿಗೆ ಹಲಸು ಒಟ್ಟು ಮಾಡುವುದೇ ಕೆಲಸ. ಭೋರ್ಗರೆಯು ನದಿಯನ್ನು ದಾಟಿ ಕುದ್ಯಾಡಿ ಕೃಷ್ಣ ಭಟ್ಟರ ಮನೆಯಿಂದ, ಕೊಕ್ರಾಡಿ ಕಜಂಗೆಯಿಂದ ಹಲಸು ಹೊತ್ತು ತರುವುದು ಅವರ ಸಾಹಸಮಯ ವೀರೋಚಿತ ಗಾಥೆಯಾಗಿದೆ. ಪ್ರಾಕೃತಿಕವಾಗಿ ಬೆಳೆಯುವ ಹಲಸು ಪೋಷಕಾಂಶಗಳ ಆಗರವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಮತ್ತು ಹೃದಯದ ಆರೋಗ್ಯಕ್ಕೆ, ಕಣ್ಣು ಹಾಗೂ ಚರ್ಮದ ಕಾಂತಿಗೆ ತುಂಬಾ ಒಳ್ಳೆಯದು. ಇದು ನಾರಿನಂಶ, ವಿಟಮಿನ್ ಸಿ, ಮತ್ತು ಪೊಟ್ಯಾಸಿಯಮ್ ಅನ್ನು ಒಳಗೊಂಡಿದೆ. ಆದರಿಂದು ಹಲಸು ಬಹುತೇಕರಿಗೆ ಅಪಥ್ಯವಾಗುತ್ತಿದೆ. ನಮ್ಮ ಮನೆಯಲ್ಲೂ ಹಲಸು ಬಳಕೆ ಕಮ್ಮಿಯಾಗುತ್ತಿದೆ. ಗ್ರಾಮೀಣ ಪ್ರದೇಶದವರೂ ಕೂಡ ಈಗ ತಿನ್ನುವುದನ್ನು ಕಡಿಮೆ ಮಾಡಿದ್ದಾರೆ. ಹಲಸು ದೂರವಾಗುತ್ತಿದೆ. ಹಲಸು ತಿಂದರೆ ಅಜೀರ್ಣ, ಗ್ಯಾಷ್ಟ್ರಿಕ್ ಸಮಸ್ಯೆ ಬರುತ್ತಿದೆ ಎಂದು ಅನ್ನುತ್ತಿದ್ದಾರೆ. ರಾಸಾಯನಿಕಗಳನ್ನು ಬಳಸಿ ಬೆಳೆಸಿದ ತರಕಾರಿಯೇ ಆಗಬಹುದು ಅನ್ನುತ್ತಿದ್ದಾರೆ. ಅಮೃತದ ಬದಲು ವಿಷವೇ ಪ್ರಿಯವಾಗುತ್ತಿದೆ. ಹಣ್ಣಾದ ಹಲಸುಗಳನ್ನು ಇಂದು ಪ್ರಾಣಿ ಪಕ್ಷಿಗಳು ಬಂದು ತಿನ್ನುವುದು ನೋಡಿ ಅವುಗಳಾದರೂ ತಿಂದವಲ್ಲ ಎಂದು ಮನಸಿಗೆ ಸಮಾಧಾನವಾಗುತ್ತದೆ. ಆದರೆ ನನಗಂತೂ ಹಲಸು ಇಂದಿಗೂ ಪ್ರಿಯವೇ ಇದೆ. ಹಲಸು ನಾ ನಿನ್ನ ಎಂದೂ ಮರೆಯಲಾರೆ ..... ನಿರಂಜನ್ ಜೈನ್ ಕುದ್ಯಾಡಿ

ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ

Article Image

ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪ್ರಥಮ ವಿದೇಶ ಪ್ರವಾಸ. ಸಿಂಗಾಪುರದಲ್ಲಿ ಹೊಸ ಜಿನಾಲಯದಲ್ಲಿ 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ ವಿಧಿ ವಿಧಾನ ಪೂರ್ವಕ ಅದ್ದೂರಿಯಾಗಿ ಪೂಜ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು. ಒಂದು ವಾರ ಸಿಂಗಾಪುರ ಮತ್ತು ಮಲೇಶಿಯಾ ಧಾರ್ಮಿಕ ವಿಜಯ ಯಾತ್ರೆಯನ್ನು ಮುಗಿಸಿ ಶ್ರವಣಬೆಳಗೊಳಕ್ಕೆ ಬಂದಾಗ ಸಿಂಗಾಪುರ ಜೈನ್ ಮಿಲನ್ ಅಧ್ಯಕ್ಷ ಸುಮಂತ್ ಪ್ರಕಾಶ್ ಮೈಸೂರಿನ ಪ್ರಕಾಶ್ ಮತ್ತು ಪ್ರಮೀಳಾ ಹಾಗೂ ಪ್ರಸನ್ನ ಕುಮಾರ್ ಮತ್ತು ನಾಗರತ್ನ ರವರು ಪೂಜ್ಯರನ್ನು ಭೇಟಿ ಮಾಡಿದ್ದರು. ಪೂಜ್ಯ ಸ್ವಾಮೀಜಿಯವರು ಸಿಂಗಾಪುರ ಜಿನಬಿಂಬ ಪ್ರತಿಷ್ಠಾ ಕಾರ್ಯಕ್ರಮದ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

Article Image

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

ಲಕ್ನೋ ಬಳಿಯ ಕಾಕೋರಿ ದಿಗಂಬರ ಜೈನ ಅತಿಶಯ ಕ್ಷೇತ್ರದಲ್ಲಿ ಭಗವಾನ್ ಅಧಿನಾಥ ಸ್ವಾಮಿ ಪಂಚ ಕಲ್ಯಾಣ, ಕರ‍್ಕಳ ಶಿಲೆಯಲ್ಲಿ ನಿರ್ಮಾಣಗೊಂಡ ನೂತನ ಮೂರು ಅಡಿಯ ಪದ್ಮಾವತಿದೇವಿ ಮೂರ್ತಿಯ ಪ್ರತಿಷ್ಠಾಪನೆಯು ಆಚಾರ್ಯ 108 ವಿಶುದ್ಧ ಸಾಗರ, ಆಚಾರ್ಯ ಸುಬಲ ಸಾಗರ, ವಿವಿಕ್ತ ಶ್ರೀ ಮಾತಾಜಿಗಳವರುಗಳ ಪಾವನ ಸಾನಿಧ್ಯದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಜಿನ ಆಗ ಮೊಕ್ತ ರೀತಿಯಲ್ಲಿ ನೆರವೇರಿತು. ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರು ಜ್ಞಾನವೇ ಸರ್ವರಿಗೂ ಹಿತವನ್ನು ಉಂಟು ಮಾಡುವುದು ಸಮಾನತೆ-ಸಭ್ಯತೆಯ ಪ್ರತೀಕ ಸಮವ ಸರಣ. ಉ.ಪ್ರ ಅವಧ್ಯ ಪ್ರಾಂತ್ಯದಲ್ಲಿ ಅತೀ ಹೆಚ್ಚು 18 ತೀರ್ಥಂಕರರು ಜನ್ಮ ಪಡೆದ ಪವಿತ್ರ ಭೂಮಿ ಭಗವಂತರ ಭಕ್ತಿ ಮುಕ್ತಿಗೆ ಸೋಪಾನ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ರವೀಂದ್ರ ಕೀರ್ತಿ ಸ್ವಾಮೀಜಿ ಹಸ್ತಿ ನಾಪುರ, ನರೇಶ್ ಪಂಡಿತ್,ಪ್ರವೀಣ್ ಶಾಸ್ತ್ರೀ, ಭೂಪಾಲ್, ಚಂದೇರಿ ಬ್ರ. ಬನಾರಸಿ ದಾಸ್ ಕ್ಷೇತ್ರದ ಅಧ್ಯಕ್ಷ ಕೈಲಾಶ್, ಸಂದೀಪ್, ಸನ್ಮತ್, ಸಜಲ್ ಜೈನ್, ಪಣಿರಾಜ್, ಅನುರಾಗ ಮಿಶ್ರ ಜಿಲ್ಲಾ ನ್ಯಾಯಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಳಿಕ 21 ಅಡಿಯ ಭಗವಾನ್ ಅಧಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕದಿಂದ ಮಹಾ ಮಸ್ತಕಾಭಿಷೇಕ ನೆರವೇರಿತು.

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ

Article Image

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ 2025–2026ನೇ ಸಾಲಿನಲ್ಲಿ ಸಮಾಜಮುಖಿ ಸೇವಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ದಾಖಲಿಸಿದ್ದು, 55 ಇನ್ನರ್ ವೀಲ್ ಕ್ಲಬ್‌ಗಳ ಪೈಕಿ ಅತ್ಯಧಿಕ ಸಂಖ್ಯೆಯ 200 ಸಮಾಜಮುಖಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ "Special Recognition for Remarkable Highest Number of Projects" ವಿಶೇಷ ಗೌರವವನ್ನು ಪಡೆದುಕೊಂಡಿದೆ. ಕ್ಲಬ್‌ನ ಅಧ್ಯಕ್ಷೆ ಶ್ವೇತ ಜೈನ್ ಅವರ ಸಮರ್ಥ ನಾಯಕತ್ವ, ದೂರದೃಷ್ಟಿ ಮತ್ತು ಸಮಾಜಸೇವೆಯ ಬದ್ಧತೆಯ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ,ಮಕ್ಕಳ ಹಕ್ಕುಗಳು, ಹಿರಿಯ ನಾಗರಿಕರ care, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈ ಸಾಧನೆಗೆ ಕಾರ್ಯದರ್ಶಿ ಅನಿತಾ ಪೃತ್ವಿರಾಜ್ ಶೆಟ್ಟಿ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯೆಯರ ಶ್ರಮ, ಸಹಕಾರ ಮತ್ತು ಸಮರ್ಪಿತ ಸೇವೆಯೂ ಪ್ರಮುಖ ಕಾರಣವಾಗಿದೆ ಎಂಬುದನ್ನು ಅಧ್ಯಕ್ಷರು ನೆನಪಿಸಿಕೊಳ್ಳುತ್ತಾರೆ.

ಮೈಸೂರು: 20ನೇ ವಲಯ ಸಮ್ಮೇಳನ

Article Image

ಮೈಸೂರು: 20ನೇ ವಲಯ ಸಮ್ಮೇಳನ

ಮೈಸೂರು: ಭಾರತೀಯ ಜೈನ್ ಮಿಲನ್ ವಲಯ 8ರ 20ನೇ ವಲಯ ಸಮ್ಮೇಳನವು ಇತ್ತೀಚೆಗೆ ಮಾನಸ ಗಂಗೋತ್ರಿಯ ಸೆನೆಟ್ ಹಾಲ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ರವರು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೈನ್ ಮಿಲನ್ ಗಳ ಬಗ್ಗೆ ಮಾಹಿತಿ ನೀಡಿದರು. ದುಬೈ, ಜರ್ಮನಿ, ಲಂಡನ್, ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿ ಜೈನ್ ಮಿಲನ್ ಶಾಖೆಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಬಹಳ ಜನಪ್ರಿಯವಾಗಿವೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಸೇರಿದಂತೆ ಗಣ್ಯಾತೀಗಣ್ಯರು ಉಪಸ್ಥಿತರಿದ್ದರು.

ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Article Image

ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಮೇ 2026ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಬಿ.ಕಾಂ. ವಿದ್ಯಾರ್ಥಿಗಳಾದ ಗೋಡ್ವಿಲ್ ವಿನ್ಸ್ಟಾನ್ ವಾಸ್ (355), ಶೆಟ್ಟಿ ರಾಹುಲ್ ಉಮೇಶ್(313), ಎನ್. ಚಿರಂತನಾ(312) ಹಾಗೂ ರೋಹಿತ್ ಪೂಜಾರಿ (304) ಗ್ರೂಪ್-01 ಮತ್ತು ಗ್ರೂಪ್-02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಇಂಟರ್ ಮೀಡಿಯಟ್ ಗ್ರೂಪ್-01 ವಿಭಾಗದಲ್ಲಿ ಪ್ರಸ್ಮಿಯಾ (162), ಪನ್ನಗ ಜೈನ್ (157), ವಿಜಯ್ ಕುಮಾರ್(164), ಸಾನಿಯಾ (150), ಪ್ರಸಿದ್ಧ್ ಪೂಜಾರಿ(150), ಮೋನಿಶಾ ಕುಂದರ್(163) ಹಾಗೂ ಶ್ರೇಯಾ ಸುರೇಂದ್ರ ಪೂಜಾರಿ(150) ಉತ್ತೀರ್ಣರಾಗಿರುತ್ತಾರೆ. ಇಂಟರ್ ಮೀಡಿಯಟ್ ಗ್ರೂಪ್-02 ವಿಭಾಗದಲ್ಲಿ ಗಿರೀಶ್ (179) ಹಾಗೂ ತರುಣ್ ಕುಮಾರ್(152) ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

ದಿಯಾ ಆಳ್ವಾ :-ರಾಜ್ಯಕ್ಕೆ 10 ನೇ ರ‍್ಯಾಂಕ್

Article Image

ದಿಯಾ ಆಳ್ವಾ :-ರಾಜ್ಯಕ್ಕೆ 10 ನೇ ರ‍್ಯಾಂಕ್

ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಮೂಡುಬಿದಿರೆ ಡಿ.ಜೆ.ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ. ದಿಯಾ ಆಳ್ವಾರವರು 625ಕ್ಕೆ 616 ಅಂಕಗಳನ್ನು ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕನ್ನು ಪಡೆದಿರುತ್ತಾರೆ. ಇವರು ಮೂಡುಬಿದಿರೆಯ ಪ್ರಕಾಶ್ ಮತ್ತು ಪ್ರಸನ್ನ ದಂಪತಿಗಳ ಪುತ್ರಿ. ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಸಾಧನೆಗಳು:- *ನಮ್ಮ T.V ರಿಯಾಲಿಟಿ ಶೋ ಸೀಸನ್ 2 ರಾಜ್ಯ ಮಟ್ಟದ ಡಾನ್ಸ್ ಸ್ಪರ್ಧೆಯ ವಿನ್ನರ್ ಆಗಿ ಹೊರಹೊಮ್ಮಿರುತ್ತಾರೆ. *ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮಂಗಳೂರು, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನಲ್ಲಿ ನಡೆದ ತುಳು ಹಾಗೂ ಕನ್ನಡ ಸಾಹಿತ್ಯೋತ್ಸವದಲ್ಲಿ ‘ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ’ ಗೆ ಭಾಜನರಾಗಿರುತ್ತಾರೆ. * ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಜೈನಮಠ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಇದರ ಸಹಯೋಗದಲ್ಲಿ 13-05-2022ರಂದು ಉಡುಪಿನಲ್ಲಿ ದಡೆದ 12 ನೇ ಅಖಿಲ ಕರ್ನಾಟಕ ಬೆಳಂದಿಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ’ಯನ್ನು ಪಡೆದಿರುತ್ತಾರೆ. * ಶಟಲ್, ವಾಲಿಬಾಲ್ ಜಿಲ್ಲಾಮಟ್ಟ, ಅತ್ಲೆಟಿಕ್ ಕ್ರೀಡೆಗಳಲ್ಲಿ ರಾಜ್ಯ ಮಟ್ಟದವರೆಗೆ ಪ್ರತಿನಿಧಿಸಿದ್ದಾರೆ. * ಮಕ್ಕಿಮನೆ ಕಲಾವೃಂದದ ಸಕ್ರಿಯ ಸದಸ್ಯೆಯಾಗಿ ರಾಜ್ಯಾಂದತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.

ಡಾ. ಅರ್ಹಂತ್ ಕುಮಾರ್ ಎ. ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

Article Image

ಡಾ. ಅರ್ಹಂತ್ ಕುಮಾರ್ ಎ. ಅವರಿಗೆ ಪಿಎಚ್.ಡಿ. ಪದವಿ ಪ್ರದಾನ

ಆಯುರ್ವೇದ, ಸಂಸ್ಕೃತ ಹಾಗೂ ವೈದ್ಯಕೀಯ ಹಸ್ತಪ್ರತಿಶಾಸ್ತ್ರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉಡುಪಿಯ ಡಾ. ಅರ್ಹಂತ್ ಕುಮಾರ್ ಎ. ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಬೆಂಗಳೂರು ವತಿಯಿಂದ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದೆ. ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಿಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಕೇಂದ್ರದಲ್ಲಿ ಸಂಗ್ರಹಿಸಲ್ಪಟ್ಟ ಆಚಾರ್ಯ ಪೂಜ್ಯಪಾದ ವಿರಚಿತ ವೈದ್ಯಕೀಯ ತಾಳೆಗರಿ ಗ್ರಂಥಗಳ ಕುರಿತು ನಡೆಸಿದ ಮಹತ್ವದ ಸಂಶೋಧನೆಗಾಗಿ ಈ ಗೌರವ ಅವರಿಗೆ ಲಭಿಸಿದೆ. ಅವರ ಸಂಶೋಧನಾ ವಿಷಯ “Compendious Literary Research on the Medical Literatures of Acharya Pujyapada: A Regional Jaina Vaidya of Karnataka” ಆಗಿದ್ದು, ಈ ಸಂಶೋಧನೆಯನ್ನು ಮೈಸೂರಿನ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶೈಕ್ಷಣಿಕ ಸಾಧನೆಗಳ ಪಯಣ: ಡಾ. ಅರ್ಹಂತ್ ಕುಮಾರ್ ಅವರು ಸುಳ್ಯದ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಬಿ.ಎ.ಎಂ.ಎಸ್. ಪದವಿಯನ್ನು ಪಡೆದಿದ್ದಾರೆ. ಬಳಿಕ ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಿಂದ ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ ವಿಭಾಗದಲ್ಲಿ ಎಂ.ಡಿ. ಪದವಿ ಪಡೆದರು. ಇದರ ಜೊತೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ. ಪದವಿ ಹಾಗೂ ಮುಂಬೈ ವಿಶ್ವವಿದ್ಯಾಲಯದಿಂದ ಹಸ್ತಪ್ರತಿಶಾಸ್ತ್ರ (Manuscriptology) ವಿಷಯದಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ. ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ: ವೈದ್ಯಕೀಯ ಹಸ್ತಪ್ರತಿಶಾಸ್ತ್ರ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಡಾ. ಅರ್ಹಂತ್ ಕುಮಾರ್ ಅವರು 26ಕ್ಕೂ ಅಧಿಕ ಆಯುರ್ವೇದ ಗ್ರಂಥಗಳನ್ನು ರಚಿಸಿದ್ದಾರೆ. ಫ್ಲೋರಲ್ ಮೆಡಿಸಿನ್ ಇನ್ ಆಯುರ್ವೇದ, ವೈದ್ಯವಲ್ಲಭ ಹಾಗೂ ವೈದ್ಯಕೌಸ್ತುಭ ಮೊದಲಾದ ಕೃತಿಗಳು ವಿಶೇಷವಾಗಿ ಪ್ರಸಿದ್ಧಿ ಪಡೆದಿವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ 100ಕ್ಕೂ ಹೆಚ್ಚು ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿರುವ ಅವರು, ಆಯುರ್ವೇದ ಜ್ಞಾನ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿ: ಆಯುರ್ವೇದ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಸಂಶೋಧನಾ ಕೊಡುಗೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ, 2025ರಲ್ಲಿ ಬೆಂಗಳೂರಿನಲ್ಲಿ ನಡೆದ ದ್ವಿತೀಯ ವಿಶ್ವ ಆಯುರ್ವೇದ ಶೃಂಗಸಭೆಯಲ್ಲಿ ಇವರಿಗೆ ಪ್ರತಿಷ್ಠಿತ “ಆಯುರ್ವೇದ ವಿಶ್ವರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಪ್ರಸ್ತುತ ಸೇವೆ: ಡಾ. ಅರ್ಹಂತ್ ಕುಮಾರ್ ಅವರು ಉಡುಪಿ ಜಿಲ್ಲೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ನಾತಕೋತ್ತರ ಸಂಹಿತಾ, ಸಿದ್ಧಾಂತ ಮತ್ತು ಸಂಸ್ಕೃತ ವಿಭಾಗದಲ್ಲಿ ವೈದ್ಯರು ಹಾಗೂ ಸಹ ಪ್ರಾಧ್ಯಾಪಕರಾಗಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕುಟುಂಬ ಮತ್ತು ವ್ಯಕ್ತಿತ್ವ: ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಚಂದ್ರಶೇಖರ್ ಮತ್ತು ನಾಗರತ್ನ ದಂಪತಿಗಳ ಪುತ್ರರಾಗಿರುವ ಡಾ. ಅರ್ಹಂತ್ ಕುಮಾರ್ ಅವರು ಆಯುರ್ವೇದ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ವಿದ್ವಾಂಸರು ಹಾಗೂ ವೈದ್ಯರಾಗಿದ್ದಾರೆ. ಇವರ ಪತ್ನಿ ನಂದಶ್ರೀ ಅವರು ಹಾಗೂ ಪುತ್ರರಾದ ಸರ್ವಾರ್ಥ್ ಮತ್ತು ಸಿದ್ಧಾಂತ್ ಇವರ ಸಾಧನೆಗೆ ಸದಾ ಬೆಂಬಲವಾಗಿದ್ದಾರೆ.

ಹಂಸಶ್ರೀ- ಪಿ.ಎಚ್.ಡಿ. ಪದವಿ

Article Image

ಹಂಸಶ್ರೀ- ಪಿ.ಎಚ್.ಡಿ. ಪದವಿ

ಹಂಸಶ್ರೀ ಅವರು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT), ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಸ್ಕೂಲ್ ಆಫ್ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಪೂರ್ಣಚಂದ್ರ ಪಂಡಿತ್ ಅವರ ಮಾರ್ಗದರ್ಶನದಲ್ಲಿ “Mechanical and Durability Performance of One-Part Alkali-Activated Concrete Incorporating Concrete Wash Water” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ, ಯಶಸ್ವಿಯಾಗಿ ಪ್ರಬಂಧ ಮಂಡಿಸಿ, ಪಿ.ಎಚ್.ಡಿ. ಪದವಿ ಪಡೆದಿರುತ್ತಾರೆ. ಇವರು ಮೂಡಬಿದ್ರೆಯ ನಿವೃತ್ತ ಬ್ಯಾಂಕ್ ಉದ್ಯೋಗಿ ಶಾಂತಿರಾಜ್ ಕೆ. ಹಾಗೂ ನಿವೃತ್ತ ಶಿಕ್ಷಕಿ ಶೋಭಾ ಕೆ. ಅವರ ಪುತ್ರಿ.

ಶಿಶಿಲ: ಪ್ರೀತಮ್ ಜೈನ್ ಇಂಡಿಯನ್ ಆರ್ಮಿಗೆ ಆಯ್ಕೆ

Article Image

ಶಿಶಿಲ: ಪ್ರೀತಮ್ ಜೈನ್ ಇಂಡಿಯನ್ ಆರ್ಮಿಗೆ ಆಯ್ಕೆ

ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿ ಕ್ಷೇತ್ರ ಚಂದ್ರಪುರ ಶಿಶಿಲದ ಆಡಳಿತ ಮಂಡಳಿ ವತಿಯಿಂದ ಬೆಳ್ತಂಗಡಿಯ ಕೊಕ್ಕಡದ ಎಳ್ನೀರಿನ ಸಂಪತ್ ಕುಮಾರ್ ಹಾಗೂ ಶೋಭಿತರವರ ಪುತ್ರ ಪ್ರೀತಮ್ ಜೈನ್ ಇವರು ಇಂಡಿಯನ್ ಆರ್ಮಿಗೆ ಆಯ್ಕೆಯಾಗಿರುವುದಕ್ಕೆ ಸನ್ಮಾನಿಸಿ, ಶುಭಹಾರೈಸಲಾಯಿತು. ಇವರು ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಬಿಕಾಂ ಪದವಿಧರರಾಗಿದ್ದು ಕೃಷಿಕರಾಗಿರುತ್ತಾರೆ. ಶಿಶಿಲ ಬಸದಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದು ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರಿಯರಾಗುತ್ತಿದ್ದರು. ಈ ಸಂದರ್ಭದಲ್ಲಿ ಡಾ. ಕೆ. ಜಯಕೀರ್ತಿ ಜೈನ್, ಹೆಚ್. ವಿಜಯ ಕುಮಾರ್ ಜೈನ್, ಫಣಿರಾಜ್ ಜೈನ್, ಪಿ ಅತಶಯ ಜೈನ್, ಪ್ರೀತಮ್ ಜೈನ್, ಸಂಪತ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಡಾ. ಪದ್ಮಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

Article Image

ಡಾ. ಪದ್ಮಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಬೆಳ್ರಂಗಡಿ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಪದ್ಮಪ್ರಸಾದ್ ರವರು ಡಾ.ಪಾಂಡುರಂಗರಾವ್ ಎಂ. ವಿರವರ ಮಾರ್ಗದರ್ಶನದಲ್ಲಿ “ಎ ಡೀಪ್ ಲರ್ನಿಂಗ್ ಹೈಬ್ರಿಡ್ ಮಾಡೆಲ್ ಫಾರ್ ಇಂಪ್ರೂವಿಂಗ್ ಮಷಿನ್ ಟ್ರಾನ್ಸ್‌ಲೇಶನ್ ಆಫ್ ಲೋ-ರಿಸೋರ್ಸ್ ಲ್ಯಾಂಗ್ವೇಜ್” ಎಂಬ ಸಂಶೋಧನಾ ಪ್ರಬಂಧಕ್ಕೆ ಜೈನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ “ಡಾಕ್ಟರ್ ಆಫ್ ಫಿಲಾಸಫಿ” (PHD) ಪದವಿ ಪ್ರದಾನಗೊಂಡಿದೆ. ಇವರು ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ರತ್ನವರ್ಮ ಜೈನ್ ಮತ್ತು ವಸಂತಿ ಜೈನ್ ದಂಪತಿಗಳ ಪುತ್ರ.

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ ಕುರಿತು ಜಾಗೃತಿ ಕಾರ್ಯಕ್ರಮ

Article Image

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ ಕುರಿತು ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ,ಕಲ್ಲಬೆಟ್ಟು: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ’ ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಮತ್ತು ಜೈವಿಕ ವೈವಿಧ್ಯತೆಯ ಕುರಿತು ಅರಿವು ಮೂಡಿಸುವುದು, ಕಾರ್ಯಕ್ರಮದ ಉದ್ದೇಶವಾಗಿತ್ತು. ಸಂಪನ್ಮೂಲ ವ್ಯಕ್ತಿ ಎಂ. ದಿನೇಶ್ ನಾಯಕ್ ಅವರು ನಾಗ ಸಂಪಿಗೆ, ಗುಲಗುಂಜಿ, ಕಾಗೆ ಮಾರಿ ಬಳ್ಳಿ, ಹೊಳೆ ದಾಸವಾಳ, ಅಗ್ನಿ, ಶಿಖೆ, ಅಮೃತ ಬಳ್ಳಿ, ಸೀತಾ ಅಶೋಕ ಸೇರಿದಂತೆ ಅಪರೂಪದ ಔಷಧೀಯ ಸಸ್ಯಗಳ ಮಹತ್ವ ಮತ್ತು ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರವನ್ನು ವಿವರಿಸಿದರು. ಅರಣ್ಯ ನಾಶ ಹಾಗೂ ಹವಮಾನ ಬದಲಾವಣೆಯಿಂದ ಸಸ್ಯ ವೈವಿಧ್ಯತೆಗೆ ಉಂಟಾಗುವ ಅಪಾಯಗಳ ಬಗ್ಗೆಯೂ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಇವರು ಮಾತಾನಾಡುತ್ತಾ ಪಶ್ಚಿಮ ಘಟ್ಟವು ಅತ್ಯಂತ ಅಧಿಕ ಸಂಖ್ಯೆಯ ವೈವಿಧ್ಯಮಯ ಸಸ್ಯ ಪ್ರಭೇದವನ್ನು ಹೊಂದಿದ್ದು, ಹೆಚ್ಚಿನ ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ನಮ್ಮ ಸುತ್ತಲಿನ ಪರಿಸರದಲ್ಲಿರುವ ಇಂತಹ ಔಷಧೀಯ ಸಸ್ಯಗಳ ಬಗ್ಗೆಯೂ ಕೂಡ ನಾವು ತಿಳಿಯುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಸ್ಥಳೀಯ ಔಷದೀಯ ಸಸ್ಯಗಳ ಪ್ರದರ್ಶನವನ್ನು ಆಯೋಜಿಸಿ ಅವುಗಳ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಉಪಮುಖ್ಯೋಪಾಧ್ಯಾಯ ಜಯಶೀಲ ಅವರು ಅತಿಥಿ ಪರಿಚಯ ಮಾಡಿದರು. ಶಿಕ್ಷಕಿ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಹಾಗೂ ಶಿಕ್ಷಕ ವೃಂದವು ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

Article Image

ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ

‘ಧಾರವಾಡದಲ್ಲಿ ಪ್ರಪ್ರಥಮ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ವತಿಯಿಂದ ಹಿರಿಯ ಚಿತ್ರಕಲಾವಿದ ಮಹಾವೀರ ರಾಯಪ್ಪಾ ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳ ಪೈಕಿ ಒಂದು ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ, ಅವರ ಸಾಧನೆಯನ್ನು ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ “ಸಾಧಕರೊಂದಿಗೆ ಸಂವಾದ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಎಮ್. ಆರ್. ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಸಂವಾದ ಮಾಡಲಾಗುತ್ತಿದೆ ಎಂದರು. ಎಮ್. ಆರ್. ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆ ಗುರುತಿಸಿ, 2023ರಲ್ಲಿ ಜರುಗಿದ ಹುಕ್ಕೇರಿ ತಾಲೂಕಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಮ್. ಆರ್. ಬಾಳಿಕಾಯಿ ಅವರು, ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತ, ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಪಿಸುತ್ತೇನೆ ಎಂದರು. ಜೀವನದಲ್ಲಿ ನಾವು ಎಷ್ಟು ಕಷ್ಟಗಳನ್ನು ಅನುಭವಿಸಿತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅನುಭವವೇ ನನ್ನ ಜೀವನಕ್ಕೆ ದಾರಿದೀಪವಾಗಿದೆ. ಸತ್ಯದ ಹಾದಿಯಲ್ಲಿ ನಡೆದರೆ ಜೀವನ ಸುಗಮವಾಗಿರುತ್ತದೆ ಎಂದರು. ತಮ್ಮ ಸಾಧನೆಯ ಮಾರ್ಗವನ್ನು ಮತ್ತು ಗುರು-ಶಿಷ್ಯರುಗಳ ಬೆಸುಗೆಯ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು. ನಂತರ ಜರುಗಿದ ಸಂವಾದದಲ್ಲಿ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ. ಬಿ. ಎಲ್. ಚೌಹಾನ, ಪಿ. ಎಸ್. ಕಡೇಮನಿ, ಡಾ. ಎಸ್. ಸಿ. ಪಾಟೀಲ, ಎಮ್. ಎಸ್. ಚೌಧರಿ, ಡಿ. ಎಮ್. ಬಡಿಗೇರ, ಬಿ. ಐ. ಈಳಗೇರ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಎಮ್. ಆರ್. ಬಾಳಿಕಾಯಿ ಅವರ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸುರೇಶ ಹಾಲಭಾವಿ, ಡಾ. ಶಶಿಧರ ನರೇಂದ್ರ, ಡಾ. ಬಸವರಾಜ ಕುರಿಯವರ, ಎನ್. ಆರ್. ನಾಯ್ಕರ್, ಡಾ. ರಾಯಪ್ಪಾ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್. ಬಿ. ಕಂಕಣವಾಡಿ, ರಮೇಶಕುಮಾರ ಬಾಳಿಕಾಯಿ, ಎಸ್. ಪಿ. ಸತ್ಯನಾಯಕ ಇನ್ನಿತರರು ಇದ್ದರು. ವರದಿ: ಡಾ. ರಾಯಪ್ಪಾ ಬಾಳಿಕಾಯಿ

ಅಮಿತ್ ಕೆ ಜೈನ್ ಅವರಿಗೆ PHD ಪದವಿ ಪ್ರದಾನ

Article Image

ಅಮಿತ್ ಕೆ ಜೈನ್ ಅವರಿಗೆ PHD ಪದವಿ ಪ್ರದಾನ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಉಪನ್ಯಾಸಕರಾದ ಅಮಿತ್ ಕೆ ಜೈನ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಯಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಇವರು ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ “Facial Expression Classification Through Machine Learning Algorithms: Extracting Discernible Patterns for Enhanced Recognition” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಯಶಸ್ವಿಯಾಗಿ ಪ್ರಬಂಧ ಮಂಡಿಸಿದ್ದಾರೆ. ಅವರ ಸಂಶೋಧನೆಯು ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಯಂತ್ರ ಕಲಿಕೆ (Machine Learning) ತಂತ್ರಜ್ಞಾನಗಳ ನೆರವಿನಿಂದ ಮಾನವರ ಮುಖಭಾವಗಳನ್ನು ನಿಖರವಾಗಿ ಗುರುತಿಸುವ ವಿಧಾನಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿದೆ. ಸಂತೋಷ, ದುಃಖ, ಕೋಪ, ಆಶ್ಚರ್ಯ, ಭಯ ಸೇರಿದಂತೆ ವಿವಿಧ ಭಾವನೆಗಳನ್ನು ಕಂಪ್ಯೂಟರ್ ವ್ಯವಸ್ಥೆಗಳು ಸ್ವಯಂಚಾಲಿತವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವ ಹೊಸ ತಂತ್ರಗಳನ್ನು ಈ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ. ಮುಖಭಾವ ಗುರುತಿಸುವಿಕೆ (Facial Expression Recognition) ತಂತ್ರಜ್ಞಾನವು ಭವಿಷ್ಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಉಪಯುಕ್ತವಾಗುವ ನಿರೀಕ್ಷೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ಭಾವನಾತ್ಮಕ ಸ್ಥಿತಿಯನ್ನು ವಿಶ್ಲೇಷಿಸಲು, ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ, ಆಟಿಸಂ ಹಾಗೂ ವಿಶೇಷ ಅಗತ್ಯತೆ ಹೊಂದಿರುವ ಮಕ್ಕಳ ವರ್ತನೆ ಅಧ್ಯಯನಕ್ಕೆ ಇದು ನೆರವಾಗಲಿದೆ. ಜೊತೆಗೆ ಸ್ಮಾರ್ಟ್ ಶಿಕ್ಷಣ ವ್ಯವಸ್ಥೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಅಳೆಯಲು, ಭದ್ರತಾ ವ್ಯವಸ್ಥೆಗಳಲ್ಲಿ ಅನುಮಾನಾಸ್ಪದ ವರ್ತನೆಗಳನ್ನು ಗುರುತಿಸಲು ಹಾಗೂ ಮಾನವ-ಯಂತ್ರ ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಈ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದೆ. ಮುಂದಿನ ದಿನಗಳಲ್ಲಿ ರೋಬೋಟಿಕ್ಸ್, ಸ್ವಯಂಚಾಲಿತ ವಾಹನಗಳು, ಡಿಜಿಟಲ್ ಆರೋಗ್ಯ ಸೇವೆಗಳು ಹಾಗೂ ಸ್ಮಾರ್ಟ್ ಸಾಧನಗಳ ಅಭಿವೃದ್ಧಿಯಲ್ಲಿಯೂ ಇಂತಹ ಸಂಶೋಧನೆಗಳು ಹೊಸ ಸಾಧ್ಯತೆಗಳನ್ನು ತೆರೆದಿಡಲಿವೆ. ಅಮಿತ್ ಕೆ ಜೈನ್ ಅವರು ಸಂಸೆಯ ನಿವೃತ್ತ ಉಪ ತಹಶೀಲ್ದಾರ್ ಕೀರ್ತಿ ಜೈನ್ ಹಾಗೂ ಕಲ್ಪನಾ ಕೆ ಜೈನ್ ದಂಪತಿಗಳ ಪುತ್ರ. ಪ್ರಸ್ತುತ ಇವರು ಮೂಡಬಿದಿರೆಯಲ್ಲಿ ನೆಲೆಸಿರುತ್ತಾರೆ.

ರಸಿಕ ಕಂಬಳಿ- ನಿಧನ

Article Image

ರಸಿಕ ಕಂಬಳಿ- ನಿಧನ

ಮೂಡುಬಿದಿರೆ: ಮಹಾವೀರ ಕಾಲೇಜು ಬಳಿಯ ಕಂಬಳಿ ಬಾಗ್ ನಿವಾಸಿ, ಭಾರತೀಯ ಜೈನ್ ಮಿಲನ್ ವಲಯ 8ರ ನಿರ್ದೇಶಕ, ಪೆರಿಂಜೆ ಗುತ್ತು ಜಯರಾಜ ಕಂಬಳಿರವರ ಧರ್ಮಪತ್ನಿ ರಸಿಕ ಕಂಬಳಿರವರು ಇಂದು ನಿಧನ ಹೊಂದಿದರು. ಇವರು ಪತಿ ಮತ್ತು ಮಕ್ಕಳಾದ ನೌವೇಶ್ ಕಂಬಳಿ, ನವ್ಯ ಕಂಬಳಿ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ಶ್ರುತ ಪಂಚಮಿ- ಜೇಷ್ಠ ಶುದ್ಧ ಪಂಚಮಿ

Article Image

ಶ್ರುತ ಪಂಚಮಿ- ಜೇಷ್ಠ ಶುದ್ಧ ಪಂಚಮಿ

ಭರತ ಭೂಮಿಯಲ್ಲಿ ಜೈನ ಧರ್ಮವು ಅತ್ಯಂತ ಪುರಾತನ ಧರ್ಮವಾಗಿದೆ.ಅಹಿಂಸಾಧಾರಿತ ಜೈನ ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ.ಈ ಧರ್ಮದಲ್ಲಿ ಆಚರಿಸುವ ಹಬ್ಬಗಳು ಕೆಲವೊಂದು ರೀತಿಯಲ್ಲಿ ಭಿನ್ನವಾಗಿವೆ.ಆಚರಣೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿದ್ದರೂ ಅದರ ಉದ್ದೇಶ ಮತ್ತು ಸಾಫಲ್ಯತೆಯಲ್ಲಿ ಭಿನ್ನತೆಯಿಲ್ಲ. ಜೈನ ಸಂಪ್ರದಾಯದ ಎಲ್ಲಾ ಹಬ್ಬಗಳೂ ಆತ್ಮಶುದ್ಧಿ ಮತ್ತು ಆತ್ಮಕಲ್ಯಾಣಕ್ಕಾಗಿ ಇವೆ. ಶ್ರುತ ಎಂದರೆ ಸಂಸ್ಕೃತದಲ್ಲಿ ಕೇಳಿದ್ದು ಅಥವಾ ಕೇಳಿಸಿಕೊಂಡಿರುವ ಎಂದರ್ಥ. ಪಂಚಮಿ ಎಂದರೆ ಪ್ರತೀ ಚಾಂದ್ರಮಾನ ಮಾಸದ ಶುಕ್ಲ ಅಥವಾ ಕೃಷ್ಣ ಪಕ್ಷದ ಐದನೇ ದಿನ ( ತಿಥಿ).ಈ ದಿನವು ಅತ್ಯಂತ ಮಂಗಳಕರವಾಗಿದ್ದು, ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಶ್ರುತ ಎಂದರೆ ಇನ್ನೊಂದು ಅರ್ಥ ಶಾಸ್ತ್ರ ಶ್ರುತ ಪಂಚಮಿಯು ಜೈನರಿಗೆ ಮಹತ್ವದ ಹಬ್ಬವಾಗಿದ್ದು, ಇದನ್ನು ಜೇಷ್ಠ ಶುದ್ಧ ಪಂಚಮಿಯಂದು ಆಚರಿಸುತ್ತಾರೆ. ಆ ದಿನ ಜಿನ ಮಂದಿರಗಳಲ್ಲಿ ಸರಸ್ವತಿ ಮಾತೆಯ ಪೂಜೆಯನ್ನೂ , ಶಾಸ್ತ್ರ ಗ್ರಂಥಗಳ ಪೂಜೆಯನ್ನೂ ಮಾಡುತ್ತಾರೆ. ತೀರ್ಥಂಕರರ ವಾಣಿಯೇ ಸರಸ್ವತಿ,ಎಂಬುವುದು ಜೈನರ ಸಿದ್ಧಾಂತ.ಈ ದೃಷ್ಟಿಯಿಂದ ಶ್ರುತ ಪಂಚಮಿಯ ಆರಾಧನೆಯೆಂದರೆ, ಜೈನರಿಗೆ ಜ್ಞಾನದ ಆರಾಧನೆಯೇ ಆಗಿದೆಯೆನ್ನಬಹುದು.ಈ ಜ್ಞಾನದ ಅಥವಾ ಶಾಸ್ತ್ರದ ಮೂಲ ಪುರುಷರು ತೀರ್ಥಂಕರರು.ಅವರ ದಿವ್ಯ ಧ್ವನಿಯ ಸಾರವೇ ಶ್ರುತ. ಈ ಭರತ ಕ್ಷೇತ್ರದಲ್ಲಿ ಜೈನ ಶಾಸ್ತ್ರಕ್ಕೆ ಮೂಲ ಪುರುಷರಾದ ವೃಷಭ ಮೊದಲಾದ ಇಪ್ಪತ್ತನಾಲ್ಕು ತೀರ್ಥಂಕರರು ಯಥಾಕ್ರಮವಾಗಿ ತಮ್ಮ ತಮ್ಮ ಕಾಲದಲ್ಲಿ ಶಾಸ್ತ್ರದ ಉಪದೇಶ ಮಾಡಿ ಜೈನ ಮತವನ್ನು ಪ್ರಕಾಶಪಡಿಸಿದರು. ವರ್ತಮಾನ ಕಾಲದ ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರು ಕ್ರಿ.ಪೂ.569 ರಲ್ಲಿ ಜನಿಸಿ,ಬಾಲ್ಯ ಕಾಲವನ್ನು ಕಳೆದ ನಂತರ ವೈಭವವನ್ನು ತೊರೆದು ಮುನಿ ದೀಕ್ಷೆಯನ್ನು ಹೊಂದಿ ತಪಸ್ಸಿನಲ್ಲಿ ತೊಡಗಿದರು.ಹನ್ನೆರಡು ವರ್ಷಗಳವರೆಗೆ ಅಖಂಡ ತಪಸ್ಸನ್ನು ಆಚರಿಸಿ,ಘಾತಿಕರ್ಮಗಳನ್ನು ಕೆಡಿಸಿ,ಕೇವಲ ಜ್ಞಾನವನ್ನು ಪಡೆದರು. ದಿವ್ಯ ಸಮವಸರಣದಲ್ಲಿ ವಿರಾಜಮಾನರಾದ ಭಗವಂತನ ಮುಖ ಕಮಲದಲ್ಲಿ ಓಂ ಕಾರ ದಿವ್ಯಧ್ವನಿ ಹೊರಟು ದ್ವಾದಶಾಂಗ ಚತುರ್ದಶ ಪೂರ್ವ ಶಾಸ್ತ್ರರೂಪಿ ಉಪದೇಶವನ್ನು ಆಚಾರ್ಯ ಪರಂಪರೆಯು ನಾಲ್ಕು ಅನುಯೋಗ ಗ್ರಂಥಗಳಲ್ಲಿ ಹಿಡಿದಿಟ್ಟಿತು. ಅವು ಈ ಕೆಳಗಿನಂತಿವೆ-; ಪ್ರಥಮಾನುಯೋಗ;- ಕೋಟ್ಯಾನುಕೋಟಿ ವರುಷಗಳಿಂದ ಹಿಡಿದು ಆ ಕಾಲದವರೆಗಿನ ಪುಣ್ಯ ಪುರುಷರ ಚರಿತ್ರೆಯೇ ಪ್ರಥಮಾನುಯೋಗ. 2.ಕರಣಾನುಯೋಗ;- ಇದು ಯುಗ ಪರಿವರ್ತನೆ,ಲೋಕಾ ಲೋಕಾ ವಿಭಾಗ,ನರಕ ಚತುರ್ಗತಿಯನ್ನು ತಿಳಿಸುವುದು. 3.ಚರಣಾನುಯೋಗ-; ಗೃಹಸ್ಥ ಮತ್ತು ತ್ಯಾಗಿಗಳ ಆಚರಣೆಯನ್ನು ತಿಳಿಸುವುದೇ ಚರಣಾನುಯೋಗ. 4.ದ್ರವ್ಯಾನುಯೋಗ-; ಜೀವಾದಿ ಪದಾರ್ಥಗಳ ಬಗ್ಗೆ ತಿಳಿಸುವ ವೇದವೇ ದ್ರವ್ಯಾನುಯೋಗ. ಈ ನಾಲ್ಕು ಅಂಗಗಳನ್ನು ಹನ್ನೆರಡು ವಿಭಾಗಗಳನ್ನಾಗಿ ಮಾಡಲಾಗಿದೆ.ಈ ಎಲ್ಲಾ ವಿಭಾಗಗಳನ್ನು ಸೇರಿಸಿ,ಜೈನರ ಪವಿತ್ರ ಗ್ರಂಥ ದ್ವಾದಶಾಂಗ ಎಂದು ಕರೆಯಲಾಗಿದೆ. ಹನ್ನೆರಡು ಅಂಗಗಳು ಈ ಕೆಳಗಿನಂತಿವೆ -; ಆಚಾರಾಂಗ, ಸೂತ್ರ ಕೃತಾಂಗ,ಸ್ಥಾನಾಂಗ,ಸಮವಾಯಾಂಗ,ವ್ಯಾಖ್ಯಾಪ್ರಜ್ಞಪ್ತಂಗ,ಜ್ಞಾತೃಕೃಥಾಂಗ,ಉಪಾಸಕಾಧ್ಯಯನಾಂಗ,ಅಂತಕೃದ್ದಶಾಂಗ,ಅನುತ್ತರೌಪ ಪಾದಿಕದಶಾಂಗ,ಪ್ರಶ್ನಾ ವ್ಯಾಕರಣಾಂಗ,ವಿಪಾಕಸೂತ್ರಾಂಗ, ದೃಷ್ಟಿವಾದಾಂಗ.ಭ.ಮಹಾವೀರರು ಈ ವೇದ ಶಾಸ್ತ್ರವನ್ನು ದಿವ್ಯಧ್ವನಿ ಮೂಲಕ ಸಮವಸರಣದಲ್ಲಿ ಉಪದೇಶ ಮಾಡಿ ಕ್ರಿ.ಪೂ.569 ರಲ್ಲಿ ನಿರ್ವಾಣ ಹೊಂದಿದರು.ಆ ನಂತರ ಗೌತಮ ಗಣಧರರು, ಆಚಾರ್ಯರು, ದಿವ್ಯಧ್ವನಿಯನ್ನು ಧಾರಣೆ ಮಾಡಿ ಇದನ್ನು ಉಪದೇಶ ಮಾಡುತ್ತಾ ಬಂದರು.ಈ ವೇದ ಶಾಸ್ತ್ರಗಳನ್ನು,ಅಪಾರವಾದ ಶಬ್ದ ರಾಶಿಯನ್ನು ಬರೆಯುವ ಪದ್ಧತಿ ಇರಲಿಲ್ಲ.ಸಾಧ್ಯವೂ ಇರಲಿಲ್ಲ.ಹೀಗೆ ಮಹಾವೀರ ಭಗವಂತರ ನಿರ್ವಾಣದ ಬಳಿಕ ಒಬ್ಬರ ನಂತರ ಒಬ್ಬರಾಗಿ 33 ಜನ ಆಚಾರ್ಯರು ನಿರಂತರ ಉಪದೇಶವನ್ನು ನೀಡಿದರು. ಆ ಕಾಲದವರೆಗೆ ವೇದಶಾಸ್ತ್ರ ತಿಳಿದ ಕುಶಾಗ್ರ ಬುದ್ಧಿಯ ಮುನಿಗಳು ತಮ್ಮ ಧಾರಣಾ ಶಕ್ತಿಯಿಂದ ಗ್ರಹಣ ಮಾಡುತ್ತಾ ಬಂದರಲ್ಲದೆ ಬರೆದಿಡುವ ಪದ್ಧತಿ ಇರಲಿಲ್ಲ.ಅಂದರೆ ಶಾಸ್ತ್ರವು ಶ್ರುತ ರೂಪದಲ್ಲಿಯೇ ಇತ್ತು,ಅದು ಲಿಪಿಬದ್ಧಗೊಂಡಿರಲಿಲ್ಲ. ಆ ಅವಸರ್ಪಿಣಿ ಕಾಲದಲ್ಲಿ ( ಋದ್ಧಿ ಹೀನ ಕಾಲ) ಮನುಷ್ಯನ ಶರೀರ ಪ್ರಮಾಣ, ಆಯುಷ್ಯ ಪ್ರಮಾಣ,ಬುದ್ಧಿ ಶಕ್ತಿ....ಎಲ್ಲವೂ ಕುಂದುತ್ತಾ ಬರುವುದು ಸ್ವಾಭಾವಿಕವಾದುದರಿಂದ ಗುರು ಪರಂಪರೆಯ ಧಾರಣಾ ಶಕ್ತಿ ( ನೆನಪಿನ ಶಕ್ತಿ) ಕಡಿಮೆಯಾಗುತ್ತಾ ಬಂತು.ಕ್ರಿ.ಶ.156 ನೇ ವರ್ಷದ ಕಾಲಕ್ಕೆ ಅಹಿಬಲ್ಯಾಚಾರ್ಯ ಮೊದಲಾದ ಆಚಾರ್ಯರಲ್ಲಿ ಕೇವಲ ಒಂದು ಅಂಗದ ಜ್ಞಾನ ಮಾತ್ರ ಉಳಿದಿತ್ತು.ಜೈನ ಪುರಾಣದ ಉಲ್ಲೇಖದ ಪ್ರಕಾರ ಶಾಸ್ತ್ರವು ಲಿಪಿಬದ್ಧಗೊಂಡ ಹಿನ್ನೆಲೆ ಈ ರೀತಿಯಾಗಿದೆ-;....ಈ ಸಮಯದಲ್ಲಿ ಜೈನ ಮಹಾಮುನಿ ಧರಸೇನಾಚಾರ್ಯರು ಎಂದಿನಂತೆ ಪ್ರವಚನ ಮಾಡುವಾಗ ಅವರು ಹೇಳಿದ ವಚನವನ್ನು ಪುನಃ ಹೇಳಿ ಎಂದು ನೆರೆದ ಭಕ್ತರು ಒಬ್ಬರು ಹೇಳಿದರಂತೆ.ಆಗ ಆಚಾರ್ಯರಿಗೆ ಮನುಷ್ಯರ ಸ್ಮರಣ ಶಕ್ತಿ ಕಡಿಮೆಯಾಗುತ್ತಾ ಇದೆ,ಅಲ್ಲದೆ ಪ್ರವಚನ ಕೇಳುವವರು ಕೂಡಾ ಕಡಿಮೆ ಜನರು ಎಂದು ತಿಳಿಯಿತು.ಆಗ ಅವರು ಜೈನರ ತೀರ್ಥ ಕ್ಷೇತ್ರವಾದ ಗಿರ್ನಾರ್ ನಲ್ಲಿ ಧ್ಯಾನ ಮಗ್ನರಾಗಿದ್ದರು.ಹೇಗಾದರೂ ಮಾಡಿ ಪರಮ ಪವಿತ್ರ ಶ್ರುತ ವಾಣಿಯ ರಕ್ಷಣೆ ಮಾಡಬೇಕೆನ್ನುವ ಸಂಕಲ್ಪ ಕೈಗೊಂಡರು. ಮುಂದಿನ ಕ್ರಮವಾಗಿ ದಕ್ಷಿಣ ಭಾರತದಿಂದ ಯೋಗ್ಯ ಶಿಷ್ಯರನ್ನು ಕಳುಹಿಸಬೇಕೆಂದು ಆಚಾರ್ಯರಿಗೆ ತಿಳಿಸಿದರು.ಆ ಪ್ರಕಾರ ಆಚಾರ್ಯರು ಇಬ್ಬರು ಅತ್ಯಂತ ಯೋಗ್ಯ ಶಿಷ್ಯರನ್ನು ಗಿರ್ ನಾರ್ ಗೆ ಕಳುಹಿಸಿದರು.ಅದೇ ದಿನ ರಾತ್ರಿ ಧರಸೇನಾಚಾರ್ಯರಿಗೆ ಒಂದು ಶುಭ ಸ್ವಪ್ನ ಬಿತ್ತು.ಆ ಸ್ವಪ್ನದಲ್ಲಿ ಎರಡು ಶ್ವೇತ ವರ್ಣದ ಎತ್ತುಗಳನ್ನು ಕಂಡರು.ಈ ಸ್ವಪ್ನದ ಫಲವನ್ನು ತಿಳಿದ ಧರಸೇನಾಚಾರ್ಯರು ಇಲ್ಲಿಗೆ ಬರುವ ಶಿಷ್ಯರು ಸಮರ್ಥರೂ ಅತೀ ವಿನಯಿಗಳೂ ಎಂದು ತಿಳಿದರು.ಮರುದಿನವೇ ಇಬ್ಬರು ಶಿಷ್ಯರು ಗಿರ್ ನಾರ್ ಗೆ ಬಂದು ಧರಸೇನಾಚಾರ್ಯರ ಚರಣ ಕಮಲಗಳಿಗೆ ಭಕ್ತಿ ಪೂರ್ವಕ ನಮಸ್ಕಾರ ಮಾಡಿದರು.ಆಚಾರ್ಯರು ಅವರ ಪಾಂಡಿತ್ಯ ಪರೀಕ್ಷೆ ಮಾಡಲು ಬಯಸಿದರು.ಅದಕ್ಕಾಗಿ ಒಬ್ಬರಿಗೆ ಒಂದು ಅಕ್ಷರ ಕಡಿಮೆ ಇರುವ ವಿದ್ಯಾಮಂತ್ರವನ್ನೂ, ಇನ್ನೊಬ್ಬರಿಗೆ ಒಂದು ಅಕ್ಷರ ಹೆಚ್ಚು ಇರುವ ವಿದ್ಯಾ ಮಂತ್ರವನ್ನು ನೀಡಿದರು.ಉಪವಾಸ ವ್ರತಾದಿಗಳನ್ನು ಮಾಡಿ ನಿಯತ್ತಿನಲ್ಲಿ ಗ್ರಂಥ ರಚನೆ ಮಾಡಲು ಆದೇಶಿಸಿದರು. ಶಿಷ್ಯರು ವಿದ್ಯಾದೇವಿಯನ್ನು ಭಕ್ತಿಯಿಂದ ಸ್ಮರಿಸಿದಾಗ ಅವರ ಎದುರು ಎರಡು ದೇವಿಯರು ಪ್ರತ್ಯಕ್ಷರಾದರು.ಆ ದೇವಿಯರು ಹೇಗಿದ್ದರು....? ಒಂದು ದೇವಿಗೆ ಒಂದೇ ಕಣ್ಣು.ಇನ್ನೊಂದು ದೇವಿಗೆ ಅಧಿಕ ಹಲ್ಲು ಇತ್ತು.ಒಟ್ಟಿನಲ್ಲಿ ವಿಕಾರ ರೂಪದ ದೇವಿಯರು ಪ್ರತ್ಯಕ್ಷವಾಗಿದ್ದರು.( ಈ ದೇವಿಯರ ವಿಗ್ರಹಗಳು ಶ್ರೀ ಕ್ಷೇತ್ರ ಕಂಬದಹಳ್ಳಿಯಲ್ಲಿದೆ ). ಇದನ್ನು ತಿಳಿದ ಶಿಷ್ಯರು ಗುರುಗಳು ಕೊಟ್ಟಿದ್ದ ವಿದ್ಯಾ ಮಂತ್ರದಲ್ಲಿ ಕಡಿಮೆ ಮತ್ತು ಅಧಿಕ ಅಕ್ಷರಗಳಿದ್ದುದನ್ನು ಗಮನಿಸಿ ಅದನ್ನು ಸರಿಪಡಿಸಿದರು.ಆಗ ಎರಡು ಕಣ್ಣುಗಳಿರುವ,ಸುಂದರವಾದ ದಂತಪಂಕ್ತಿಯುಳ್ಳ ಸುಂದರವಾದ ವಿದ್ಯಾದೇವತೆಗಳು ಪ್ರತ್ಯಕ್ಷರಾದರು. "ನಾವು ಏನು ಮಾಡಬೇಕು, ಆಜ್ಞೆ ಕೊಡಿ" ಎಂದರು.ಆಗ ಮುನಿ ಶ್ರೀಯವರು "ನೀವು ಏನೂ ಮಾಡಬೇಕಾಗಿಲ್ಲ, ನಾವು ಗುರುಗಳ ಆಜ್ಞೆಯನ್ನು ಪಾಲಿಸಲು ವಿದ್ಯಾದೇವಿಯ ಆರಾಧನೆಯನ್ನು ಮಾಡಿದೆವು",ಎಂದರು.ಅದನ್ನು ಕೇಳಿ ದೇವಿಯರು ಅವರವರ ಸ್ಥಾನಕ್ಕೆ ಹೋದರು.ಧರಸೇನಾಚಾರ್ಯರ ಪದತಲದಲ್ಲಿ ಈ ಮುನಿಗಳಿಬ್ಬರೂ ಷಟ್ಖಂಡಾಗಮದ ಗಂಭೀರ ಅಧ್ಯಯನ ಮಾಡಿದರು.ಗುರುಗಳು ತನ್ನ ಮೃತ್ಯು ಸಮೀಪಿಸಿದುದನ್ನು ತಿಳಿದು ಶಿಷ್ಯರನ್ನು ವಿಹಾರಕ್ಕೆ ಕಳುಹಿಸಿದರು.ಪುಷ್ಪದಂತರು ಬನವಾಸಿಗೂ,ಭೂತಬಲಿ ಮಥುರಾ ನಗರಕ್ಕೂ ಬಂದರು.ಪುಷ್ಪದಂತರು ಷಟ್ಖಂಡಾಗಮವನ್ನು ಲಿಪಿಬದ್ಧ ಗೊಳಿಸಲು ಆರಂಭಿಸಿದರು.ಇವರು ಪ್ರಥಮ ಖಂಡದ 177 ಸೂತ್ರಗಳನ್ನು ಮಾತ್ರ ಪೂರ್ಣಗೊಳಿಸಿದರು.ನಂತರ ತನ್ನ ಅಲ್ಪ ಆಯುವಿನ ಅರಿವಾಗಿ ಅದನ್ನು ಪೂರ್ಣಗೊಳಿಸಲು ಭೂತಬಲಿ ಮಹಾರಾಜರಿಗೆ ರವಾನಿಸಿದರು. ಭೂತಬಲಿ ಮಹಾರಾಜರು ಪ್ರಥಮ ಖಂಡದ ಶೇಷ ಭಾಗವನ್ನೂ ಮತ್ತು ಉಳಿದ ಐದು ಖಂಡಗಳನ್ನೂ ಸಂಪೂರ್ಣ ಮಾಡಿದರು.ಹೀಗೆ ಜಿನೇಂದ್ರ ಭಗವಂತರು ಪ್ರತಿಪಾದಿಸಿದ ಮೌಲ್ಯಗಳು ಆಚಾರ್ಯ ಧರಸೇನರ ನಿಮಿತ್ತದಿಂದ ಆಚಾರ್ಯ ಪುಷ್ಪದಂತ, ಮತ್ತು ಆಚಾರ್ಯ ಭೂತಬಲಿಮಹಾರಾಜರ ಬರವಣಿಗೆಯಿಂದ ಪರಮ ಪವಿತ್ರ ಷಟ್ಖಂಡಾಗಮ ಜೇಷ್ಠ ಶುದ್ಧ ಪಂಚಮಿಯಂದು ಲಿಪಿ ಬದ್ಧವಾಗಿ ರೂಪುಗೊಂಡಿತು. ಈ ಗ್ರಂಥ ಮುಂದೆ ಮುಸ್ಲಿಮರ ಆಕ್ರಮಣ ಆದಾಗ ಆ ಗ್ರಂಥಗಳನ್ನು ಶ್ರವಣಬೆಳಗೊಳದ ಮಹಾ ಸ್ವಾಮೀಜಿಯವರಿಗೆ ಒಪ್ಪಿಸಿದ ದಿನ ಕೂಡಾ ಜೇಷ್ಠ ಶುದ್ಧ ಪಂಚಮಿ. ಕಾಲಾಂತರದಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ವಿಷ್ಣುವರ್ಧನ ನಾದಾಗ ಜೈನ ಬಸದಿಗಳನ್ನು ಕೆಡವಿದಾಗ ಶಾಸನ ಗ್ರಂಥದಲ್ಲಿ ಇವೇ ಗ್ರಂಥಗಳನ್ನು ಮೂಡುಬಿದಿರೆ ಭಟ್ಟಾರಕರು ಇವರಿಗೆ ಐದು ಜನ ಸ್ಥಳೀಯ ಶೆಟ್ಟರ ಸಮ್ಮುಖದಲ್ಲಿ ಒಪ್ಪಿಸಲಾಯಿತಂತೆ.ಆ ದಿನ ಸಹಾ ಜೇಷ್ಠ ಶುದ್ಧ ಪಂಚಮಿ. ಮುಂದೆ 1999 ರ ನಂತರ ಶ್ರವಣಬೆಳಗೊಳದ ಧರ್ಮ ಯೋಗಿ, ಕರ್ಮಯೋಗಿ,ಭಟ್ಟಾರಕ ಮಹಾ ಶ್ರೀ ಚಾರುಕೀರ್ತಿ ಸ್ವಾಮೀಜಿ ಯವರು ಈ ಮೂರು ಗ್ರಂಥಗಳನ್ನು ವಿದ್ವಾಂಸರ ಸಹಾಯದಿಂದ ಕನ್ನಡ ಭಾಷೆಗೆ ಭಾಷಾಂತರ ಮಾಡಿ ಬಿಡುಗಡೆ ಮಾಡಿದ ದಿನ ಕೂಡಾ ಜೇಷ್ಠ ಶುದ್ಧ ಪಂಚಮಿ. (ಆದುದರಿಂದ ಶ್ರವಣಬೆಳಗೊಳದಲ್ಲಿ ಶ್ರುತ ಪಂಚಮಿ ಹಬ್ಬ ವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ). ಈ ಎಲ್ಲಾ ಕಾರಣಗಳಿಂದ ಶ್ರುತ ಪಂಚಮಿ ಜೈನ ಶಾಸ್ತ್ರದ ಶ್ರೇಷ್ಠತೆಯನ್ನು ಅರ್ಥೈಸುವ ಪವಿತ್ರ ಹಬ್ಬವಾಗಿದೆ. ಲಿಪಿಬದ್ಧವಾಗಿ ರೂಪುಗೊಂಡ ಗ್ರಂಥವನ್ನು ಜೇಷ್ಠ ಶುದ್ಧ ಪಂಚಮಿಯಂದು ಮುನಿ,ಆರ್ಯಿಕಾ,ಶ್ರಾವಕ ಶ್ರಾವಿಕೆಯರೆಂಬ ಚತು:ಸ್ಸಂಗ ಸೇರಿಸಿ ಆ ಗ್ರಂಥಗಳನ್ನೆಲ್ಲಾ ಪೂಜಿಸಿದರು.ಅಂದಿನಿಂದ ಜೈನರಿಗೆ ಜೇಷ್ಠ ಶುದ್ಧ ಪಂಚಮಿ ಎಂಬ ಪವಿತ್ರ ಪರ್ವ ತಿಥಿಯಾಗಿರುವುದು.ಈ ಪರ್ವವನ್ನು ನಾವು ಭಕ್ತಿ ಪೂರ್ವಕವಾಗಿ ಆಚರಿಸುತ್ತಿದ್ದೇವೆ. ಅದೇ ಶ್ರುತ ಪಂಚಮಿ ಜೈನಾಗಮ ನಮ್ಮ ಏಳಿಗೆಗೆ ಕಾರಣ.ಇವುಗಳನ್ನು ಉಳಿಸಿ, ಬೆಳೆಸಿದ ಗಣಧರಾದಿ ಆಚಾರ್ಯ ಪರಂಪರೆಗೆ ಕೃತಜ್ಞತೆ ವ್ಯಕ್ತಪಡಿಸುವುದೇ ಶ್ರುತ ಪಂಚಮಿಯ ಆಚರಣೆಯ ಹಿಂದಿನ ಉದ್ದೇಶ. ಶಾಸ್ತ್ರ, ಗ್ರಂಥಗಳನ್ನು ದಿನದಲ್ಲಿ ಕನಿಷ್ಠ ಹತ್ತು ನಿಮಿಷ ಆದರೂ ಓದಿ, ನಮ್ಮ ಜ್ಞಾನವನ್ನು ಇನ್ನೊಬ್ಬರಿಗೂ ಹಂಚಿಕೊಂಡು ಜಿನವಾಣಿಯ ಸೇವೆ ಮಾಡೋಣ..ಎಂಬ ಶುಭ ಸಂಕಲ್ಪವನ್ನು ಈ ಶುಭ ದಿನದಂದು ಮಾಡೋಣ. ಮಾಲತಿ ವಸಂತರಾಜ್, ಕಾರ್ಕಳ.

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

Article Image

ವೈಶಾಲಿ ಚಂದ್ರಪ್ರಭುರವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ಕರ್ನಾಟಕ ಮಿಡಿಯಾ ಕ್ಲಬ್ ವತಿಯಿಂದ ಕೊಡಮಾಡುವ “ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ”ಯನ್ನು ವೈಶಾಲಿ ಚಂದ್ರಪ್ರಭುರವರ ಮಾಧ್ಯಮ ಕ್ಷೇತ್ರದ ಅಪೂರ್ವ ಸಾಧನೆ ಬದುಕಿನ ಧೃಡತೆ, ಮಾನವೀಯ ಮೌಲ್ಯಗಳೊಂದಿಗೆ ಈ ಸಮಾಜಕ್ಕಾಗಿ ಸಾಧಿಸಿದ ಸಾಧನೆಯನ್ನು ಗುರುತಿಸಿ, ಬೆಂಗಳೂರಿನ ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಜೂ. 5ರಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ): ನಿಧನ

Article Image

ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ): ನಿಧನ

ಕಾರ್ಕಳ ತಾಲೂಕು ಹೊಸ್ಮಾರು ‘ಧರ್ಮಶ್ರೀ’ ನಿವಾಸಿ ಎನ್. ಪ್ರೇಮ್ ಕುಮಾರ್ ಜೈನ್ (ಅಣ್ಣಾಜಿ) ಇವರು ಜೂ. 9 ರಂದು ನಿಧನ ಹೊಂದಿದರು. ಇವರು ಪತ್ನಿ ಭಾರತಿ (ಟೀಚರ್) ಹಾಗೂ ಓರ್ವ ಪುತ್ರಿ ಡಾ| ಪ್ರತಿಮಾ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ. ಇವರು ಜೈನ ಧರ್ಮದ ಕಣ್ಮಣಿಯಾಗಿದ್ದು ನಾರಾವಿ ಮಾಗಣಿ ಬಸದಿಯ ಆಡಳಿತ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸರ್ವ ಧರ್ಮಾನುರಾಗಿಗಳು ಹಾಗೂ ಉದಾರ ದಾನಿಯಾಗಿದ್ದು ತುಳುನಾಡಿನ ಒಬ್ಬ ಪ್ರಮುಖ ಧಾರ್ಮಿಕ ಮುಖಂಡ ಹಾಗೂ ಉದ್ಯಮಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.

ಮೂಡುಬಿದಿರೆ: ಪ್ರೋತ್ಸಾಹ ಧನ ವಿತರಣೆ

Article Image

ಮೂಡುಬಿದಿರೆ: ಪ್ರೋತ್ಸಾಹ ಧನ ವಿತರಣೆ

ಮೂಡುಬಿದಿರೆ, ಜೂ.8: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಸಾಲಿನ 7ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಲಿಖಿತ್, ಸ್ತುತಿ ಮತ್ತು ನಿಶ್ಚಿತಾ ಜೈನ್ ಇವರಿಗೆ ನಮ್ಮ ಶಾಲೆಯ ಹಿತೈಷಿ ಕೊಡುಗೈದಾನಿಯಾಗಿರುವ ಟೆಲಿಕಾಂನ ನಿವೃತ್ತ ಎ.ಜಿ.ಎಂ. ಅಧಿಕಾರಿಯಾಗಿರುವ ಶ್ರೀಯುತ ಎಂ. ವಾರಿಸೇನ ಶೆಟ್ಟಿ ಇವರು ಪ್ರೋತ್ಸಾಹ ಧನ ನೀಡಿ ಗೌರವಹಿಸಿದರು. ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದು ಆಶಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ ಜೈನ್ , 7ನೇ ತರಗತಿಯ ಶಿಕ್ಷಕಿ ಮಂಜುಳಾ.ಪಿ. ಪೂಜಾರಿ ಉಪಸ್ಥಿತರಿದ್ದರು.

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

Article Image

ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ಅದ್ಭುತ ಸಾಧನೆ

ಮೂಡುಬಿದಿರೆ, ಜೂ. 6: ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ ) ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ದಾಖಲಿಸಿದ್ದು ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಬಿಎಸ್ಸಿ ಕೃಷಿ, ನರ್ಸಿಂಗ್ ಪ್ರವೇಶಕ್ಕೆ ನೂರರ ಒಳಗಿನ rankಗಳನ್ನು ಪಡೆದಿರುತ್ತಾರೆ. ಕಾಲೇಜಿನ ತನ್ಮಯಿಕೋಟಿ, ( 18 ನೇ) ತನುಶ್ರೀಎಚ್ಆರ್ ( 23 ನೇ) ಧ್ರುವಂತ್ಕೆ (41ನೇ) , ನಿಖಿಲ್ಎಸ್ಎಸ್ ( 41 ನೇ) ನಿಶ್ಚಲ್ ( 58 ನೇ ) rank ಪಡೆದು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರೊಂದಿಗೆ ವಿವಿಧ ವೃತ್ತಿಪರ ಕೋಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು rank ಗಳಿಸಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಅಧ್ಯಕ್ಷರಾದ ಯುವರಾಜಜೈನ್, ಕಾರ್ಯದರ್ಶಿ ರಶ್ಮಿತಾಜೈನ್, ಪ್ರಾಂಶುಪಾಲರಾದ ಪುಷ್ಪರಾಜ್, ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ದೇಶಕ ಡಾಕ್ಟರ್ ಪ್ರಶಾಂತ್ ಹೆಗಡೆ , ಸಿಇಟಿ ಸಮನ್ವಯಕಾರ ರಂಜಿತ್ ಜೈನ್ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ. ನಿರಂತರ ಶೈಕ್ಷಣಿಕ ಮಾರ್ಗದರ್ಶನ, ಪರೀಕ್ಷಾ ಪೂರ್ವ ತರಬೇತಿ, ವಿಶೇಷ ಅಭ್ಯಾಸ ತರಗತಿಗಳು, ಈ ಯಶಸ್ಸಿಗೆ ಕಾರಣವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ: ಖ್ಯಾತ ಚಿತ್ರಕಲಾವಿದರು, ಧಾರವಾಡ

Article Image

ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ: ಖ್ಯಾತ ಚಿತ್ರಕಲಾವಿದರು, ಧಾರವಾಡ

ಶ್ರೀ ಎಮ್. ಆರ್. ಬಾಳಿಕಾಯಿ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ 1 ಜೂನ್ 1941 ರಲ್ಲಿ ಜನಿಸಿದರು. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಕಾರಣ ಆರ್ಟ್ ಮಾಸ್ಟರ್ ಕೋರ್ಸ್‌ನ್ನು ಅಧ್ಯಯನ ಮಾಡಿ ಸರ್ಕಾರಿ ಪ್ರೌಢಶಾಲೆ ಬಾಣಾವರದಲ್ಲಿ ಚಿತ್ರಕಲಾ ಶಿಕ್ಷಕರಾಗಿ ದಿನಾಂಕ: 31.10.1962 ರಿಂದ ನೇಮಕಗೊಂಡರು. ನಂತರ 1970ಮೇ 11 ರಿಂದ ಧಾರವಾಡದ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಮಾಡಿದರು. ತದನಂತರ 16.05.1972 ರಿಂದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಧಾರವಾಡ ಇಲ್ಲಿ ಹಿರಿಯ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, 31.05.1999 ರಂದು ನಿವೃತ್ತರಾದರು. ನಿವೃತ್ತಿ ನಂತರ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಗೌರವ ಚಿತ್ರಕಲಾ ಉಪನ್ಯಾಸಕರಾಗಿ ದಿನಾಂಕ: 14.08.2001 ರಿಂದ 15.09.2004ರ ವರೆಗೆ ಸೇವೆ ಸಲ್ಲಿಸಿದರು. ಧಾರವಾಡ ಶ್ರೀ ಎಂ.ಆರ್.ಬಾಳಿಕಾಯಿ ಅವರ ಕಾರ್ಯಕ್ಷೇತ್ರವಾಗಿದೆ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಕಲಾಗುರುಗಳಾಗಿ ಅನೇಕ ಕಲಾವಿದರನ್ನು ರೂಪಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ನಾಡಿನ ತುಂಬಾ ಅನೇಕ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿದ್ದಾರೆ. ಚಿತ್ರಕಲಾ ಶಿಬಿರ, ಕಲಾಮೇಳ, ಕಲಾ ಪ್ರಾತ್ಯಕ್ಷಿಕೆ, ಚರ್ಚೆ-ಸಂವಾದ ಸೇರಿದಂತೆ ಅನೇಕ ಕಲಾಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಕಲಾಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ತೈಲ ಮತ್ತು ಜಲವರ್ಣ ಮಾಧ್ಯಮದಲ್ಲಿ ಅನೇಕ ಭಾವಚಿತ್ರ, ಪ್ರಕೃತಿಚಿತ್ರ ಮತ್ತು ಸಂಯೋಜನೆ ಚಿತ್ರಗಳನ್ನು ರಚಿಸಿ ಕಲಾಸಕ್ತರ ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಪಡೆದಿದ್ದಾರೆ. 5000ಕ್ಕೂ ಹೆಚ್ಚು ರೇಖಾ ಚಿತ್ರಗಳನ್ನು ರಚಿಸಿ ಕಲಾಲೋಕಕ್ಕೊಂದು ವಿಶೇಷ ಕೊಡುಗೆ ನೀಡಿದ್ದಾರೆ. ೮೫ರ ಇಳಿವಯಸ್ಸಿನಲ್ಲೂ ಕಲಾಲೋಕದಲ್ಲಿ ತುಂಬಾ ಚಟುವಟಿಕೆಗಳಿಂದ ಕೂಡಿರುವ ಇವರು ಅನೇಕ ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಶ್ರೀ ಎಂ.ಆರ್. ಬಾಳಿಕಾಯಿ ಅವರಿಗೆ 1995ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2017ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಜೀವಮಾನ ಸಾಧಕ ಸನ್ಮಾನ, 2012-13ರ ನಾಡೋಜ ಆರ್. ಎಮ್. ಹಡಪದ ಪ್ರಶಸ್ತಿ, 2016ರಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ,2023ರಲ್ಲಿ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ಕುಂಚ ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗ, ಬೆಳಗಾವಿ ಇವರ ವತಿಯಿಂದ ಧಾರವಾಡದ ಸುವರ್ಣ ಸಾಂಸೃತಿಕ ಸಮುಚ್ಚಯ ಸಭಾಂಗಣ, ರಂಗಾಯನಾ ಆವರಣ ಜೂ.6ರಂದು ನಡೆಯಲಿರುವ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಹಾವೀರ ರಾಯಪ್ಪ ಬಾಳಿಕಾಯಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ.ಆರ್.ಎ.ಬಾಳಿಕಾಯಿ

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

Article Image

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಆವಾರ್ಡ್ & ಕಾನ್ಪರೆನ್ಸ್ 2026 ರಲ್ಲಿ ಕರ್ನಾಟಕದ ಹುಬ್ಬಳ್ಳಿಯ ವರೂರಿನ ಎ.ಜಿ.ಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಗೆ 2026ರ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಯಿತು. ಶೈಕ್ಷಣಿಕ, ನಾವೀನ್ಯತೆ ಮತ್ತು ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಾಂಶುಪಾಲರಾದ ಡಾ. ಸಂದೀಪ್ ಕ್ಯಾತನವರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕರ್ನಾಟಕದ ಖ್ಯಾತ ಇಬ್ಬರು ಶಾಸ್ತ್ರೀಗಳಿಗೆ ರಾಷ್ಟ್ರ ಮಟ್ಟದ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ

Article Image

ಕರ್ನಾಟಕದ ಖ್ಯಾತ ಇಬ್ಬರು ಶಾಸ್ತ್ರೀಗಳಿಗೆ ರಾಷ್ಟ್ರ ಮಟ್ಟದ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ

ಜೈನ ಧರ್ಮದ ಸಂಸ್ಕೃತಿ ಪರಂಪರೆ ಹಾಗೂ ಧರ್ಮಪ್ರಭಾವನೆಗೆ ಮಹತ್ತರವಾದ ಕೊಡುಗೆ ನೀಡುತ್ತಿರುವವರು ಈ ದೇಶದ ಅಪಾರವಾದ ಜ್ಞಾನ ಪಾಂಡಿತ್ಯ ಹೊಂದಿದ ಶಾಸ್ತ್ರೀಗಳು ವಿದ್ವಾಂಸರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇವರಿಂದಲೇ ಸಂಸ್ಕಾರ ವೃದ್ಧಿಯಾಗುವುದು ಮತ್ತು ಪರಂಪರೆ ರಕ್ಷಣೆಯಾಗುವುದು ಈ ಹಿನ್ನಲೆಯಲ್ಲಿ ನಾಡಿನ ಅನೇಕ ಶಾಸ್ತ್ರೀಗಳು ತಮ್ಮನ್ನು ತಾವು ಜೈನ ಧರ್ಮದ ಪ್ರಭಾವಕ್ಕೆ ಪ್ರಚಾರಕ್ಕಾಗಿ ತೊಡಗಿಸಿಕೊಂಡಿದ್ದಾರೆ ಇವರುಗಳ ಸಾಲಿನಲ್ಲಿ ಕರ್ನಾಟಕದ ಇಬ್ಬರು ಹೆಸರಾಂತ ಶಾಸ್ತ್ರೀಗಳನ್ನು ಗುರುತಿಸಿ ದೇಶದ ಪ್ರತಿಷ್ಠಿತ ಅಖಿಲ ಭಾರತ ದಿಗಂಬರ ಜೈನ ಶಾಸ್ತ್ರೀ ಪರಿಷತ್ ಸಂಸ್ಥೆಯು " ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ " ನೀಡಿ ಗೌರವಿಸಿದೆ. ಅವರೇ ವಿದ್ಯಾ ವಾಚಸ್ಪತಿ ಡಾ. ಮೋಹನಕುಮಾರ ಶಾಸ್ತ್ರೀ ಮತ್ತು ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರೀ ಇವರು. ದಿನಾಂಕ ಮೇ 30 ರಂದು ರಾಜಸ್ಥಾನದ ಕೋಟಾ ಜಿಲ್ಲೆಯ ದಿಗಂಬರ ಜೈನ ಅತಿಶಯ ಕ್ಷೇತ್ರ ಕೇಶವರಾಯ ಪಟಾನ್ ಇಲ್ಲಿ ಭಾರತ ಗೌರವ ಗಣನಿ ಆರ್ಯಾಕಾ ಸ್ವಸ್ತಿಭೂಷಣ ಪೂಜ್ಯ ಮಾತಾಜಿ ಇವರ ಸಾನಿದ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಇಬ್ಬರಲ್ಲಿ ಒಂದು ಸಾಮ್ಯತೆ ಇದೆ ಅದೇನೆಂದರೆ ಡಾ. ಮೋಹನಕುಮಾರ ಶಾಸ್ತ್ರೀ ಮೂಲತಃ ಜೈನ ಕಾಶಿ ಎಂದೇ ಹೆಸರಾದ ಶ್ರವಣಬೆಳಗೊಳ ಇವರ ಜನ್ಮಭೂಮಿ ಆದರೆ ಇವರ ಕರ್ಮಭೂಮಿ ಸಾಂಸ್ಕೃತಿಕ ನಗರ ಮೈಸೂರು ಇಲ್ಲಿ ಆಚಾರ್ಯ ಗುರುಕುಲದ ಮೂಲಕ ಈ ಭಾಗದಲ್ಲಿ ಧರ್ಮಪ್ರಭಾವನೆ ಮಾಡಿದವರು ಇನ್ನೊಬ್ಬರು ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರೀ ಇವರ ಜನ್ಮಭೂಮಿ ಮೂಲತಃ ಜೈನರ ಬೀಡು ಎಂದೇ ಹೆಸರಾದ ಬೆಳಗಾವಿ ಜಿಲ್ಲೆಯ ಯಲಿಮುನ್ನೋಳಿಯವರು ಆದರೆ *ಕರ್ಮಭೂಮಿ ಶ್ರವಣಬೆಳಗೊಳ ಎಂಬುದು ಗಮನಾರ್ಹ. ತನ್ಮೂಲಕ ಇವರಿರ್ವರ ಜ್ಞಾನ ಜರಿ ಈ ನಾಡಿನಾದ್ಯಂತ ಹರಿದು ಧರ್ಮಪ್ರಭಾವನೆಗೆ ಕಾರಣವಾಗಿದೆ. ಇವರೀರ್ವರ ಸಾಧನೆ ಸೇವೆಗೆ ಅಖಿಲ ಭಾರತ ದಿಗಂಬರ ಜೈನ ಶಾಸ್ತ್ರಿ ಪರಿಷದ್ ವತಿಯಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಭಾಜನರಾದ ಇರ್ವರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು. ವಿದ್ಯಾ ವಾಚಸ್ಪತಿ ಡಾ. ಮೋಹನ ಕುಮಾರ ಶಾಸ್ತ್ರಿ, ಕುಲ ಸಚಿವರು ಆಚಾರ್ಯ ಗುರುಕುಲ ಮೈಸೂರು ಇವರ ಸಂಕ್ಷಿಪ್ತ ಪರಿಚಯ : ಈ ನಾಡು,ಸಮಾಜ ಕಂಡ ಅಪರೂಪದ ಚಿಂತಕ ಸಾಹಿತಿ ಶಿಕ್ಷಣ ಪ್ರೇಮಿ ವಿದ್ಯಾವಾಚಸ್ಪತಿ ಡಾ ಎಚ್ ಪಿ ಮೋಹನಕುಮಾರ ಶಾಸ್ತ್ರಿಯವರು ಮೈಸುರು ಆಚಾರ್ಯ ಗುರುಕುಲ ವಿದ್ಯಾಲಯವನ್ನು ಕಳೆದ ದಶಕಗಳಿಂದ ಇವರು ಅತ್ಯಂತ ಸಮರ್ಥತವಾಗಿ ಮುನ್ನಡೆಸುತ್ತಿದ್ದು ಈ ಸಂಸ್ಥೆಯ ಕುಲಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ಮುಖಾಂತರ ಜೈನ ಆಗಮ ಜೈನ ಸಂಸ್ಕೃರಕ್ಷಣೆ ಗ್ರಂಥ ಪ್ರಕಟನೆ ಪ್ರಸಾರ ಪ್ರಚಾರ ಉಪನ್ಯಾಸ ಪ್ರವಚನ ಇತ್ಯಾದಿಗಳನ್ನು ಆನ್ಲೈನ್ ಮೂಲಕ ಜೈನ ಪಾಠ ಬೋಧನೆಗಳನ್ನು ಪ್ರಪಂಚದಾದ್ಯಂತ ಜೈನರಿಗೆ ತಲುಪಿಸಿದ್ದಾರೆ ಮತ್ತು ಈಗಲೂ ಮುಂದುವರಿದಿದ್ದಾರೆ, ಈ ಮೂಲಕ ಯುವ ಜನಾಂಗಕ್ಕೆ ಜೈನ ಜಾಗ್ರತಿ ರಕ್ಷಣೆ ಮತ್ತು ಅರಿವು ಮೂಡಿಸುವ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಎಲ್ಲಾ ಜೈನ ಮಠಗಳ ಪೂಜ್ಯ ಭಟ್ಟಾರಕ ಮಹಾಸ್ವಾಮಿಗಳ ಶುಭಾಶೀರ್ವಾದ ಮತ್ತು ಪ್ರೇರಣೆಯಿಂದ ಕಳೆದ ಎರಡು ವರ್ಷಗಳಿಂದ ಮಹಾಕವಿ ರತ್ನಾಕರವರ್ಣಿ ಅವರ ಶತಕ, ಅಪರಾಜಿತ ಶತಕ ನಿರಂಜನ ಸ್ತುತಿ ಭರತೇಶ ವೈಭವ ಅಣ್ಣನ ಪದಗಳು ಇತ್ಯಾದಿ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಬಹಳ ಸುಂದರವಾಗಿ ವ್ಯಖ್ಯಾನ ಸಹಿತ ಕಾವ್ಯವಾಚನ ಮಾಡುತ್ತಾ ಇವುಗಳ ಪ್ರಚಾರ ಮತ್ತು ಪ್ರಸಾರ ಮೂಲಕ ಸಾಮಾನ್ಯರಿಗೂ ಕಾವ್ಯದ ಸ್ವಾದವನ್ನು ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಶ್ರವಣಬೆಳಗೊಳದ ಪ್ರಾಕೃತ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರು : ಜೈನ ಧರ್ಮದ ಸಾರವನ್ನು, ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಆಳವಾದ ಜ್ಞಾನವನ್ನು ಜಗತ್ತಿಗೆ ಪಸರಿಸುತ್ತಿರುವ ಅಪರೂಪದ ಸಾಧಕರಲ್ಲಿ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಪ್ರಮುಖರು. ಬೆಳಗಾವಿ ಜಿಲ್ಲೆಯ ಯಲಿಮುನ್ನೋಳಿಯ ಪುಣ್ಯಭೂಮಿಯಲ್ಲಿ ಅಣ್ಣಾಸಾಹೇಬ್ ಮತ್ತು ಶ್ರೀಮತಿ ಜೀವಕ್ಕ ದಂಪತಿಗಳ ಸುಪುತ್ರನಾಗಿ 24 ಅಕ್ಟೋಬರ್ 1980 ರಂದು ಜನಿಸಿದ ಇವರು, ಇಂದು ಶ್ರವಣಬೆಳಗೊಳದ ಪವಿತ್ರ ಕ್ಷೇತ್ರದಲ್ಲಿ ತಮ್ಮ ಜ್ಞಾನದೀವಿಗೆಯನ್ನು ಬೆಳಗುತ್ತಿದ್ದಾರೆ. ಬಾಲ್ಯದಿಂದಲೇ ಜ್ಞಾನಪಿಪಾಸುವಾಗಿದ್ದ ರಾಜೇಂದ್ರ ಅವರು ಸಂಸ್ಕೃತ, ಪ್ರಾಕೃತ ಮತ್ತು ಜೈನಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ವಿಶೇಷವೆಂದರೆ 2006ರಲ್ಲಿ ಬಿಹಾರ ರಾಜ್ಯಕ್ಕೆ ಪ್ರಾಕೃತ ವಿಷಯದಲ್ಲಿ ಮೊದಲ ಶ್ರೇಣಿ (69.5%)ಪಡೆದು 'ಚಿನ್ನದ ಪದಕ'ಕ್ಕೆ (Gold Medal) ಭಾಜನರಾಗಿದ್ದಾರೆ. ಯುಜಿಸಿ ನೆಟ್ (NET) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಇವರು, ತಮ್ಮ ವಿದ್ವತ್ಪೂರ್ಣ ಸಂಶೋಧನೆಗಾಗಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ವೃತ್ತಿ ಜೀವನ: ಪ್ರಸ್ತುತ ಶ್ರವಣಬೆಳಗೊಳದ NIPSAR ಸಂಸ್ಥೆಯಲ್ಲಿ ಪ್ರಾಕೃತ ಮತ್ತು ಹಿಂದಿ ವಿಭಾಗದ ಮುಖ್ಯಸ್ಥರಾಗಿ (HOD) ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯ ಸಹಾಯಕರಿಂದ ಆರಂಭಿಸಿ ಉಪನ್ಯಾಸಕರವರೆಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಇವರು, ಕಳೆದ ಮೂರು ದಶಕಗಳಿಂದ (1995 ರಿಂದ 2026) ಶಿಕ್ಷಣ ಮತ್ತು ಧರ್ಮ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಧನೆ ಮತ್ತು ಪ್ರಶಸ್ತಿಗಳು: ಇವರ ನಿಸ್ವಾರ್ಥ ಸೇವೆಗೆ ಅನೇಕ ಗೌರವಗಳು ಸಂದಿವೆ: 2023 ಆಚಾರ್ಯ ವಿಮಲಸಾಗರ ಪ್ರಶಸ್ತಿ. 2022 ಆದರ್ಶ ಜೈನ ಶಿಕ್ಷಕ ಪ್ರಶಸ್ತಿ. 2026 ಈಗ ಜೈನ ಸ್ಮೃತಿ ಶಾಸ್ತ್ರೀ ಪರಿಷತ್ ಪ್ರಶಸ್ತಿ ಮತ್ತೊಂದು ಗರಿ ಸೇರ್ಪಡೆಯಾಗಿದೆ. 2012: ದೆಹಲಿ ದೂರದರ್ಶನದಲ್ಲಿ ಭಗವಾನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ. ಸಾಹಿತ್ಯ ಸೇವೆ: ಈಗಾಗಲೇ ಇವರ 5 ಪುಸ್ತಕಗಳು ಲೋಕಾರ್ಪಣೆಗೊಂಡಿದ್ದು, ಮತ್ತೊಂದು 5 ಕೃತಿಗಳು ಬಿಡುಗಡೆಗೆ ಸಜ್ಜಾಗಿವೆ. ಬಹುಮುಖ ಪ್ರತಿಭೆ: ಕೇವಲ ಅಧ್ಯಾಪನಕ್ಕೆ ಸೀಮಿತವಾಗದ ಶಾಸ್ತ್ರಿಗಳು, ಧಾರ್ಮಿಕ ಶಿಬಿರಗಳಲ್ಲಿ ಪಾಠ ಪ್ರವಚನ ನೀಡುವುದು, ಪೂಜಾ ವಿಧಾನಗಳನ್ನು ನಡೆಸಿಕೊಡುವುದು ಮತ್ತು ಸುಶ್ರಾವ್ಯವಾಗಿ ಭಜನೆಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರು. ಎನ್.ಎಸ್.ಎಸ್ (NSS) ಚಟುವಟಿಕೆಗಳ ಮೂಲಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಇವರ ಜ್ಞಾನದ ಲಾಭವನ್ನು ಜನಸಾಮಾನ್ಯರಿಗೆ ತಲುಪಿಸಲು 'drrajendrapatilshastri7492' ಎಂಬ ಯೂಟ್ಯೂಬ್ ಚಾನಲ್ ಮೂಲಕವೂ ಸಕ್ರಿಯರಾಗಿದ್ದಾರೆ. ಕೌಟುಂಬಿಕ ಹಿನ್ನೆಲೆ: ಧರ್ಮಪತ್ನಿ ಶ್ರೀಮತಿ ಜೀವರತ್ನ ಮತ್ತು ಪುತ್ರ ಸಮ್ಯಕ್ ಆರ್. ಜೈನ ಅವರೊಂದಿಗೆ ಶ್ರವಣಬೆಳಗೊಳದಲ್ಲಿ ನೆಲೆಸಿರುವ ಇವರು, ಸಂಸಾರದ ಜೊತೆಗೆ ಸಂಯಮದ ಜೀವನವನ್ನು ನಡೆಸುತ್ತಿದ್ದಾರೆ. ಪ್ರಾಕೃತ ಭಾಷೆಯ ಉಳಿವಿಗಾಗಿ ಮತ್ತು ಜೈನ ಧರ್ಮದ ಪ್ರಚಾರಕ್ಕಾಗಿ ಅಹರ್ನಿಶಿ ಶ್ರಮಿಸುತ್ತಿರುವ ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ ಅವರ ಸೇವೆ ನಿರಂತರವಾಗಿರಲಿ ಎಂದು ಹಾರೈಸೋಣ. ಇದೀಗ ಅಖಿಲ ಭಾರತ ವರ್ಷಿಯ ಶಾಸ್ತ್ರೀ ಪರಿಷತ್ ವತಿಯಿಂದ " ಶ್ರೇಷ್ಟಿ ಶ್ರೀ ಜೋರಾವಲ್ ರಜನ್ ದೇವಿ ಜೈನ ದುಮ್ ದುಮಾ ಸ್ಮೃತಿ ಶಾಸ್ತ್ರೀ ಪರಿಷತದ್ ಪುರಸ್ಕಾರ " ಗಳಿಗೆ ಭಾಜನರಾದ ಇಬ್ಬರೂ ವಿದ್ವಾಂಸರಿಗೆ ಅಭಿನಂದನೆಗಳು. ಶಾಂತರಾಜ ಮಲ್ಲಸಮುದ್ರ ಲೇಖಕರು

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

Article Image

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

ಮೂಡುಬಿದಿರೆ ನಾಗರಕಟ್ಟೆ ರಸ್ತೆಯ ಕೆನರಾ ಟ್ರೇಡ್ ಸೆಂಟರ್ ಕಟ್ಟಡದಲ್ಲಿ ಸಿ.ಎ ಅಕ್ಷಯ ಜೈನ್, ಲೆಕ್ಕ ಪರಿಶೋಧಕರು (Chartered Accountant) ಇವರ ನೂತನ ಕಛೇರಿಯ ಶುಭಾರಂಭವು ಜರುಗಿತು. ಈ ಸಂದರ್ಭದಲ್ಲಿ ಸಿ.ಎ ಪ್ರಭಾತ ಕುಮಾರ್, ಸಿ.ಎ ಅಭಿನಯ್ ಕುಲಾಲ್, ಡಾ. ಅಶೋಕ ಜೈನ್, ಕತ್ತೋಡಿ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಎಕ್ಸಲೆಂಟ್: ನೂತನ ಪ್ರಾಂಶುಪಾಲರಾಗಿ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ

Article Image

ಎಕ್ಸಲೆಂಟ್: ನೂತನ ಪ್ರಾಂಶುಪಾಲರಾಗಿ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರಸಿದ್ಧ ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾದ ಪುಷ್ಪರಾಜ್ ಬಿ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇದೇ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ (Academic Director) ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಬರೋಬ್ಬರಿ 30 ವರ್ಷಗಳ ಸುದೀರ್ಘ ಬೋಧನಾ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಪುಷ್ಪರಾಜ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪರಿಚಿತ ಹಾಗೂ ಗೌರವಾನ್ವಿತ ಹೆಸರಾಗಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಆಪ್ತಸಮಾಲೋಚಕರು (Counsellor), ತರಬೇತುದಾರರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ವಿಧಾನಗಳ ಕುರಿತು ತರಬೇತಿ ನೀಡಿದ್ದಾರೆ. ಇದರೊಂದಿಗೆ, ರಾಜ್ಯದಾದ್ಯಂತ ವಿವಿಧ ಕಾಲೇಜುಗಳ 20,000 ಕ್ಕೂ ಹೆಚ್ಚು ಶಿಕ್ಷಕರಿಗೆ 'ತರಗತಿ ನಿರ್ವಹಣೆ' (Classroom Management) ಕುರಿತು ವಿಶೇಷ ಕಾರ್ಯಾಗಾರ ಹಾಗೂ ತರಬೇತಿಯನ್ನು ನೀಡಿದ್ದಾರೆ. ದಕ್ಷ ಆಡಳಿತಗಾರರಾಗಿರುವ ಪುಷ್ಪರಾಜ್ ಬಿ. ಅವರು ಇದೀಗ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಈ ಸಂದರ್ಭದಲ್ಲಿ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್, ಅವರು ನೂತನ ಪ್ರಾಂಶುಪಾಲರನ್ನು ಅಭಿನಂದಿಸಿ, ಇವರ ಸಮರ್ಥ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕವಾಗಿ ಮತ್ತಷ್ಟು ಉನ್ನತ ಯಶಸ್ಸನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

First Previous

Showing 2 of 23 pages

Next Last