ಧಾರವಾಡ: ಸನ್ಮತಿ ಸೇವಾ ಸಮಾಜ ಆಯೋಜಿಸಿದ ಚಾತುರ್ಮಾಸದ ಯಾತ್ರೆ
ಧಾರವಾಡ ಸನ್ಮತಿ ಸೇವಾ ಸಮಾಜದ ವತಿಯಿಂದ ಚಾತುರ್ಮಾಸದ ನಿಮಿತ್ಯವಾಗಿ ಆಗಸ್ಟ್ 2 ರಂದು ಒಂದು ದಿನದ ಧಾರ್ಮಿಕ ಪ್ರವಾಸವನ್ನು ಕೆ. ಜೆ. ರಪಾಟಿ ಇವರ ಉಸ್ತುವಾರಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆಗೊಂಡಿತು. ಈ ಗುಂಪಿನಲ್ಲಿ ಅತ್ಯಂತ ಆಸಕ್ತಿ ಭಕ್ತಿಯಿಂದ ದೇವ, ಗುರು, ಶಾಸ್ತ್ರ ನಿತ್ಯ ಆಚರಣೆಯಲ್ಲಿರುವ ಇಪ್ಪತ್ತು ಜನ ಧರ್ಮಾನುರಾಗಿಗಳು ಭಾಗಿಯಾಗಿದ್ದರು. ಮುಂಜಾನೆ 9 ಗಂಟೆಗೆ ಸನ್ಮತಿ ಜಿನ ಮಂದಿರದಿಂದ ಭಗವಂತನ ದರ್ಶನದೊಂದಿಗೆ ಪ್ರವಾಸ ಪ್ರಾರಂಭಿಸಲಾಯಿತು. ಛೆಬ್ಬಿ ಗ್ರಾಮದಲ್ಲಿರುವ ಭ| ಶಾಂತಿನಾಥ ತೀರ್ಥಂಕರ ಜಿನ ಮಂದಿರಕ್ಕೆ ಹೋಗಿ ದರ್ಶನ ಮಾಡಿಕೊಂಡು ಹಾಗೇ ವರ್ಷಾಯೋಗ ಅನುಷ್ಠಾನದಲ್ಲಿರುವ ಬಾಲಾಚಾರ್ಯ ಮುನಿಶ್ರೀ ಸಿದ್ಧಸೇನ ಮಹಾರಾಜರ ದರ್ಶನಮಾಡಿ ಆಶೀರ್ವಾದ ಪಡೆದುಕೊಂಡು ನೇರವಾಗಿ ವರೂರು ಕ್ಷೇತ್ರಕ್ಕೆ ಹೋಗಿ ಅಲ್ಲಿ ದರ್ಶನದನಂತರ ಪರಮ ಪೂಜ್ಯ ಆಚಾರ್ಯ ಗುಣದರನಂದಿ ಮಹಾರಾಜರ ಆಶೀರ್ವಾದ ಪಡೆದು ಅರಟಾಳ ಕ್ಷೇತ್ರದತ್ತ ಪಯಣ ಮುಂದುವರೆಸಲಾಯಿತು. ಅರಟಾಳ ಕ್ಷೇತ್ರದಲ್ಲಿ ಪರಮ ಪೂಜ್ಯ ಆಚಾರ್ಯ ಪುಣ್ಯಸಾಗರ ಮಹಾರಾಜರ ಮುನಿಶ್ರೀ ಪುರಾಣ ಸಾಗರ ಮುನಿಮಹಾರಾಜರ ಮತ್ತು ಬಾಲ ಬ್ರಹ್ಮಚಾರಿ ಪೂಜ್ಯ ಶ್ರೀ ಸೋಮದೇವ ಬೈಯಾಜಿ ಇವರ ಉಪಸ್ಥಿತಿಯಲ್ಲಿ ಚಾತುರ್ಮಾಸ ಅನುಷ್ಠಾನ ಕಳಸಸ್ಥಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಪ್ರವಾಸದ ಮುಖ್ಯ ಉದ್ದೇಶದಂತೆ ಇಡೀ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಯಿಂದ ಭಾಗವಹಿಸಿ ಸಂಭ್ರಮಿಸಲಾಯಿತು. ಕುಟುಂಬ ಪರಿವಾರ ಜೊತೆ ಮಾಡಿರುವ ಪ್ರವಾಸಕ್ಕಿಂತ ಸಮಾನ ಮನಸ್ಕ ಶ್ರಾವಕ ಶ್ರಾವಕಿಯರ ಪರಿವಾರದೊಂದಿಗೆ ಮಾಡಿದ ಪ್ರವಾಸವು ವಿಭಿನ್ನವಾಗಿರುತ್ತದೆ ಎನ್ನುವದ ಅನುಭವದ ಮಾತು. ಏಕೆಂದರೆ ಇಲ್ಲಿ ಸೇರಿರುವರೆಲ್ಲ ಒಂದೇ ಕುಟುಂಬದ ಸದಸ್ಯರಂತೆ ಅನಿಸಿತು. ಪ್ರವಾಸ ಎಂದರೆ ಕೇವಲ ಹೊಸ ಹೊಸ ಸ್ಥಳಗಳನ್ನು ವಿಕ್ಸಿಸುವುದಷ್ಟೇ ಅಲ್ಲ , ಬದಲಿಗೆ ಅದೊಂದು ರೋಮಾಂಚನಕಾರಿ ಕಲಿಕೆಯ ಅನುಭವ. ಇದು ದೈನಂದಿನ ದಿನಚರಿಯಿಂದ ಮುಕ್ತಿ ನೀಡಿ, ಹಲವಾರು ಮಾನಸಿಕ ಒತ್ತಡ ಮರೆತು ದೇವರ ಸನ್ನಿದಿಯಲ್ಲಿ ಮುನಿ ಮಹಾರಾಜರ ಮತ್ತು ಬಟ್ಟಾರಕ ಸ್ವಾಮೀಜಿಯವರ ದರ್ಶನದಿಂದ ಮನಸ್ಸಿಗೆ ಒಂದು ಹೊಸ ಚೈತನ್ಯ ಉಂಟಾಗುತ್ತದೆ. ಸಾಂಸ್ಕೃತಿಕ, ಜೈನ ಇತಿಹಾಸ ಹಾಗೂ ಪರಂಪರೆಯ ಕುರಿತಾದ ಸಮಗ್ರ ಮಾಹಿತಿ ತಿಳಿದುಕೊಳ್ಳುವ ಅವಕಾಶಗಳು ಇಂತಹ ಪ್ರವಾಸದಿಂದ ಸಿಗುತ್ತದೆ, ಅಷ್ಟೇ ಅಲ್ಲ ನಮ್ಮ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರುತ್ತವೆ ಎಂದರೆ ನಮಗೆ ತಿಳಿಯದಿರುವ ಸಣ್ಣ ಪುಟ್ಟ ವಿಷಯಗಳನ್ನು ಆಳವಾಗಿ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ ಎನ್ನಬಹುದು. ಪ್ರವಾಸವು ಮನಸ್ಸಿಗೆ ಶಾಂತಿ ಜೀವನಕ್ಕೆ ಹೊಸ ಚೈತನ್ಯ ಮತ್ತು ಮನಸ್ಸಿಗೆ ವಿಭಿನ್ನ ಅನುಭವ ನೀಡುವ ಮಾರ್ಗ ಎಂದರೂ ತಪ್ಪಾಗುವದಿಲ್ಲ. ಸಂಪ್ರದಾಯಗಳನ್ನು ಕಲಿಯುವುದು ನಮ್ಮ ಜ್ಞಾನವನ್ನು ವಿಸ್ತರಿಕೊಳ್ಳುವದು ಅದರಲ್ಲೂ ಮುಖ್ಯವಾಗಿ ಶ್ರಾವಕರ ಶ್ರಾವಕಿಯರ ಮತ್ತು ಆತ್ಮೀಯರ ಜೊತೆಗಿನ ಪ್ರವಾಸವು ನಮ್ಮ ಸಾಮಾಜಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಎಲ್ಲರಿಗೂ ಅತ್ಯಂತ ಖುಷಿ ನೀಡಿದ ಹಾಗೂ ಯಶಸ್ವಿ ಪ್ರವಾಸಕ್ಕೆ ಕಾರಣರಾದ ಪ್ರತಿಯೊಬ್ಬರೂ ಅಭಿನಂದನಾರ್ಹರು. ವರದಿ: ಶಾಂತರಾಜ ಮಲ್ಲಸಮುದ್ರ
