ಧಾರವಾಡ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ
‘ಧಾರವಾಡದಲ್ಲಿ ಪ್ರಪ್ರಥಮ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮ ನಗರದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ವತಿಯಿಂದ ಹಿರಿಯ ಚಿತ್ರಕಲಾವಿದ ಮಹಾವೀರ ರಾಯಪ್ಪಾ ಬಾಳಿಕಾಯಿ ಅವರ ಕುರಿತು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ. ಎಚ್. ಚನ್ನೂರ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳ ಪೈಕಿ ಒಂದು ಜಿಲ್ಲೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರದಂದು ಆಯಾ ಜಿಲ್ಲೆಯಲ್ಲಿರುವ ನಾಡು-ನುಡಿ, ಕಲೆ, ಸಾಹಿತ್ಯ ಹಾಗೂ ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ, ಅವರ ಸಾಧನೆಯನ್ನು ಯುವಜನಾಂಗಕ್ಕೆ ಪರಿಚಯಿಸುವ ಉದ್ದೇಶದಿಂದ “ಸಾಧಕರೊಂದಿಗೆ ಸಂವಾದ” ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ಧಾರವಾಡ ಜಿಲ್ಲೆಯಿಂದಲೇ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿತ್ರಕಲಾವಿದರಾದ ಎಮ್. ಆರ್. ಬಾಳಿಕಾಯಿ ಅವರ ಜೀವನ-ಸಾಧನೆ ಕುರಿತು ಸಂವಾದ ಮಾಡಲಾಗುತ್ತಿದೆ ಎಂದರು. ಎಮ್. ಆರ್. ಬಾಳಿಕಾಯಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆ ಗುರುತಿಸಿ, 2023ರಲ್ಲಿ ಜರುಗಿದ ಹುಕ್ಕೇರಿ ತಾಲೂಕಾ 11ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಮ್. ಆರ್. ಬಾಳಿಕಾಯಿ ಅವರು, ತಮ್ಮ ಬಾಲ್ಯ, ಜೀವನ, ಕಲಾಕ್ಷೇತ್ರದಲ್ಲಿ ತಾವು ನಡೆದು ಬಂದ ದಾರಿಯನ್ನು ವಿವರಿಸುತ್ತ, ನನ್ನ ಸಾಧನೆಯ ಹಿಂದೆ ಇಡೀ ಸಮಾಜವೇ ಇದೆ. ಅದಕ್ಕಾಗಿ ನನ್ನ ಸಾಧನೆಯನ್ನು ಸಮಾಜಕ್ಕೇ ಅರ್ಪಿಸುತ್ತೇನೆ ಎಂದರು. ಜೀವನದಲ್ಲಿ ನಾವು ಎಷ್ಟು ಕಷ್ಟಗಳನ್ನು ಅನುಭವಿಸಿತ್ತೇವೆಯೋ ಅವುಗಳೇ ಸಾಧನೆಯ ಮೆಟ್ಟಲುಗಳಾಗುತ್ತವೆ. ಯಾವುದೇ ಕಾರ್ಯವನ್ನು ಹೃದಯಪೂರ್ವಕವಾಗಿ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅನುಭವವೇ ನನ್ನ ಜೀವನಕ್ಕೆ ದಾರಿದೀಪವಾಗಿದೆ. ಸತ್ಯದ ಹಾದಿಯಲ್ಲಿ ನಡೆದರೆ ಜೀವನ ಸುಗಮವಾಗಿರುತ್ತದೆ ಎಂದರು. ತಮ್ಮ ಸಾಧನೆಯ ಮಾರ್ಗವನ್ನು ಮತ್ತು ಗುರು-ಶಿಷ್ಯರುಗಳ ಬೆಸುಗೆಯ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು. ನಂತರ ಜರುಗಿದ ಸಂವಾದದಲ್ಲಿ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಬಿ. ಮಾರುತಿ, ಮಹದೇವ ಜಗತಾಪ, ಡಾ. ಬಿ. ಎಲ್. ಚೌಹಾನ, ಪಿ. ಎಸ್. ಕಡೇಮನಿ, ಡಾ. ಎಸ್. ಸಿ. ಪಾಟೀಲ, ಎಮ್. ಎಸ್. ಚೌಧರಿ, ಡಿ. ಎಮ್. ಬಡಿಗೇರ, ಬಿ. ಐ. ಈಳಗೇರ ಮುಂತಾದವರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಎಮ್. ಆರ್. ಬಾಳಿಕಾಯಿ ಅವರ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸುರೇಶ ಹಾಲಭಾವಿ, ಡಾ. ಶಶಿಧರ ನರೇಂದ್ರ, ಡಾ. ಬಸವರಾಜ ಕುರಿಯವರ, ಎನ್. ಆರ್. ನಾಯ್ಕರ್, ಡಾ. ರಾಯಪ್ಪಾ ಬಾಳಿಕಾಯಿ, ವಿಠ್ಠಲ ಬಸಳಿಗುಂದಿ, ಎಸ್. ಬಿ. ಕಂಕಣವಾಡಿ, ರಮೇಶಕುಮಾರ ಬಾಳಿಕಾಯಿ, ಎಸ್. ಪಿ. ಸತ್ಯನಾಯಕ ಇನ್ನಿತರರು ಇದ್ದರು. ವರದಿ: ಡಾ. ರಾಯಪ್ಪಾ ಬಾಳಿಕಾಯಿ
