ಅರಟಾಳ ಕ್ಷೇತ್ರದ ಕುರಿತು ಒಂದು ಕಿರುನೋಟ
Published Date: 02-Aug-2026
ಈ ಭಾಗದಲ್ಲಿ ಮಹಾಮಂಡಲೀಕ ತೈಲಪದೇವನ ಆಳ್ವಿಕೆಯ ಸಂದರ್ಭದಲ್ಲಿ ಈ ಅರಟಾಳ ಪ್ರದೇಶದಲ್ಲಿ ಪಾರ್ಶ್ವನಾಥ ಜಿನಾಲಯವು ಕ್ರಿ.ಶ 1122 ಪುಷ್ಯಮಾಸ ಆದಿತ್ಯವಾರ ಅಮವಾಸಿ ಡಿಸೇಂಬರ್ 30 ಸೂರ್ಯಗ್ರಹಣದ ದಿನ ಪ್ರತಿಷ್ಠಾಪನೆಯಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ. ಇಲ್ಲಿ ಗಮನಿಸಬೇಕಾಗಿದ್ದು ಏನೆಂದರೆ ರವಿವಾರ ಅಮವಾಸಿ ಸೂರ್ಯಗ್ರಹಣದ ಅತ್ಯಂತ ವಿಶೇಷ ಮತ್ತು ಅಪರೂಪದ ದಿನದಂದು ಪ್ರತಿಷ್ಠಾಪನೆಗೊಂಡಿರುವುದರಿಂದ ಇದು ಬಹಳ ಪ್ರಾಮುಖ್ಯತೆ ಪಡೆದಿದೆ ಮತ್ತು ನಮ್ಮ ಭಾಗದಲ್ಲಿ ಅತ್ಯಂತ ಅತಿಶಯವೂ, ಜಾಗ್ರತೆ ಸ್ಥಾನವೂ ಆಗಿದೆ. ಇಂತಹ ಐತಿಹಾಸಿಕ ಮಹತ್ವವನ್ನು ಹೊಂದಿದ ಈ ಕ್ಷೇತ್ರವು ಕಾಲಾನಂತರ ಭೂಮಿಯಲ್ಲಿ ಹುದುಗಿ ಅಗೋಚರವಾಗಿ ಭೂಗತ ದೇವಸ್ಥಾನವಾಗಿತ್ತು. ಪುಣ್ಯಭೂಮಿಯಾಗಿ ಪರಿವರ್ತನೆ:- ಇಲ್ಲಿ ದೊರೆತ ಶೀಲಾಶಾಸನಗಳಿಂದ ಈ ಸ್ಥಾನದ ಮಹಿಮೆಯನ್ನು ತಿಳಿದುಕೊಂಡು ಸುಮಾರು 17 ವರ್ಷಗಳ ಹಿಂದೆ ಅಂದರೆ 27-12-2009 ರಂದು ಉತ್ತರ ಕರ್ನಾಟಕದ ಪ್ರಭಾವಿ ಜ್ಞಾನಿಗಳು, ನಡೆದಾಡುವ ತೀರ್ಥoಕರ ಸ್ವರೂಪರೂ ಆದ ಜ್ಞಾನ ಭಾಸ್ಕರ ಸರಳ ಶೃತ ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರು ಈ ಪ್ರದೇಶವನ್ನು ಸಮಗ್ರ ಅಭಿವೃದ್ಧಿ ಮತ್ತು ಬಸದಿಯನ್ನು ಜೀರ್ಣೋದ್ದಾರ ಮಾಡುವ ಸಂಕಲ್ಪದೊಂದಿಗೆ ಕಾರ್ಯಾರಂಭ ಮಾಡಿದರು. ಕಳೆದ 17 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಆಗುತ್ತಿದೆ. ಪೂಜ್ಯ ಮುನಿ ಮಹಾರಾಜರ ಆಶೀರ್ವಾದ ಪ್ರೇರಣೆ, ಪೂಜ್ಯ ಭಟ್ಟಾರಕರ ಮಾರ್ಗದರ್ಶನ ಹಲವಾರು ದಾನಿಗಳ ಇಚ್ಚಾಶಕ್ತಿ, ಸಮಾಜದ ಸಹಕಾರ ಹಾಗೂ ಭಕ್ತರ ಅಚಲ ಭಕ್ತಿಯಿಂದ ಭವ್ಯ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಂಡಿದೆ. ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಯೂ ಸೇರಿ 24 ತೀರ್ಥoಕರರ ಪ್ರತಿಮೆ ಸ್ಥಾಪಿಲಾಗಿದೆ, ಗೋಶಾಲೆ, ಶೈಕ್ಷಣಿಕ ಸಂಸ್ಥೆ ಇತ್ಯಾದಿ ಅಭಿವೃದ್ಧಿ ಕೆಲಸಗಳು ಆಗಿವೆ. ನಡೆದ 17 ವರ್ಷಗಳ ಪಯಣವು ಕೇವಲ ಕಟ್ಟಡಗಳ ನಿರ್ಮಾಣವಲ್ಲ ಅದು ಭಕ್ತಿ, ತ್ಯಾಗ, ಸೇವೆ ಮತ್ತು ಸಮರ್ಪಣೆಯ ಜೀವಂತ ಇತಿಹಾಸವಾಗಿದೆ. ಈ ಅದ್ಭುತ ಬೆಳವಣಿಗೆಯನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ಅದರ ಸಂತೋಷ, ಹೆಮ್ಮೆ ಮತ್ತು ಧನ್ಯತೆಯ ಅನುಭವವನ್ನು ನಮ್ಮ ಹೃದಯದಲ್ಲಿ ತುಂಬಿಕೊಂಡಿದ್ದೇವೆ. ವಿಶೇಷವೆಂದರೆ ಆಚಾರ್ಯಶ್ರೀ ಪೂಜ್ಯ ಪುಣ್ಯಸಾಗರ ಮಹಾರಾಜರು ಇಲ್ಲಿ ಒಟ್ಟು ಐದು ಚತುರ್ಮಾಸ ಆಚರಣೆ ಮಾಡಿದ್ದಾರೆ. ಚತುರ್ಮಾಸ 2026 ಇದು ಆರನೇದ್ದಾಗಿದೆ. ವಿಶೇಷವೆಂದರೆ ಅಮವಾಸಿ ದಿನ ಇಲ್ಲಿ ಪೂಜೆ ಸಲ್ಲಿಸಿದರೆ ಸಕಲ ದೋಷಗಳು ಪರಿಹಾರವಾಗುತ್ತದೆ ಎನ್ನುವ ಪ್ರತೀತಿ ಇದೆ. ನಮ್ಮ ಹತ್ತಿರವೇ ಇರುವ ಈ ಅದ್ಭುತವಾದ ಜಾಗ್ರತ ಕ್ಷೇತ್ರದ ದರ್ಶನವನ್ನು ಕನಿಷ್ಠ ಪ್ರತಿ ಅಮವಾಸಿ ದಿನದಲ್ಲಿಯಾದರೂ ಮಾಡುವುದರೊಂದಿಗೆ ತಮ್ಮ ಇಷ್ಟಾರ್ಥ ಸಿದ್ಧಿ ಮಾಡಿಕೊಂಡು ಪುಣ್ಯ ಸಂಪಾದನೆ ಮಾಡಿಕೊಳ್ಳುವ ಸಂಕಲ್ಪವನ್ನು ಅನೇಕರು ಮಾಡಿಕೊಳ್ಳುತ್ತಿದ್ದಾರೆ. ಇಂದು ಮತ್ತೊಂದು ಹೊಸ ಅದ್ಯಾಯ :- ಪವಿತ್ರ ಸುಕ್ಷೇತ್ರ ಆರಟಾಳದ ಇತಿಹಾಸದಲ್ಲಿ ಇಂದು ಮತ್ತೊಂದು ಐತಿಹಾಸಿಕ ದಾಖಲೆಯಾಯಿತು, ಪರಮ ಪೂಜ್ಯ ಆಚಾರ್ಯಶ್ರೀ ಪುಣ್ಯಸಾಗರ ಮಹಾರಾಜರ ಪಾವನ ಸಾನಿಧ್ಯ ಮತ್ತು ಮುನಿಶ್ರೀ ಪುರಾಣ ಸಾಗರ ಮುನಿಮಹಾರಾಜರ ಮತ್ತು ಬಾಲ ಬ್ರಹ್ಮಚಾರಿ ಪೂಜ್ಯ ಶ್ರೀ ಸೋಮದೇವ ಬೈಯಾಜಿ ಇವರ ಉಪಸ್ಥಿತಿಯಲ್ಲಿ ಇಂದು ದಿನಾಂಕ 02-08-2026, ಭಾನುವಾರ ಮಂಗಳ ಕಲಶ ಸ್ಥಾಪನೆ ಕಾರ್ಯಕ್ರಮವನ್ನು ಬಾಗಲಕೋಟ ಜಿಲ್ಲಾ ನ್ಯಾಯಾಧೀಶರೂ ಆಚಾರ್ಯ ಪುಣ್ಯಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ರಾಜಶೇಖರ ತಿಲಗುಂಜಿ ದಂಪತಿಗಳು ಉದ್ಘಾಟಿಸಿದರು. ಗಣ್ಯ ಅತಿಥಿಗಳು, ಧರ್ಮಾಭಿಮಾನಿಗಳು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಈ ಸಮಾರಂಭ ನೆರವೇರಿತು. ಶಾಂತರಾಜ ಮಲ್ಲಸಮುದ್ರ