ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ನಿಧನ
ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕರಿಮಣೇಲು ಮಾಗಣೆಗುತ್ತು ನಿವಾಸಿ, ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ (71ವ) ಇವರು ಹೃದಯಾಘಾತದಿಂದ ಇಂದು(ಜೂ. 12) ಮುಂಜಾನೆ ನಿಧನ ಹೊಂದಿದರು. ಇವರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ. ಇವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ವೇಣೂರು ಮಹಾಮಸ್ತಕಾಭಿಷೇಕದ ಮಾಧ್ಯಮ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ 2000 ಇಸವಿಯ ವೇಣೂರು ಮಹಾಮಸ್ತಕಾಭಿಷೇಕದಲ್ಲಿ ಮಸ್ತಕಾಭಿಷೇಕದ ದೃಶ್ಯಗಳನ್ನು ವಿದ್ಯುನ್ಮಾನಗಳ ಮೂಲಕ ಪ್ರಚಾರ ಪಡಿಸುವ ವಿಧಾನವನ್ನು ಮೊತ್ತಮೊದಲಿಗೆ ಈ ಪರಿಸರದಲ್ಲಿ ಪ್ರಚಾರ ಪಡಿಸಿದ ಹೆಗ್ಗಳಿಕೆ ಇವರದು. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
