Article Image

ಡೆಂಗ್ಯೂ ಜ್ವರ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ

Article Image

ಡೆಂಗ್ಯೂ ಜ್ವರ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ

ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಉದ್ಯಾನವನ ವಿಭಾಗದ ಸಿಬ್ಬಂದಿಗಳಿಗೆ “ಡೆಂಗ್ಯೂ ಜ್ವರ ತಡೆಗಟ್ಟುವಿಕೆ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕೀಟಶಾಸ್ತ್ರಜ್ಞರಾದ ಮಂಜುನಾಥ್ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಈ ಕಾರ್ಯಕ್ರಮವು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ ಮತ್ತು ಅವುಗಳ ನಿಯಂತ್ರಣ ಮಾಡುವ ಪ್ರಾಮುಖ್ಯತೆಯನ್ನು ತಿಳಿಸಿದರು. ಸೊಳ್ಳೆ ಕಡಿತದಿಂದ ರಕ್ಷಿಸಲು ವೈಯಕ್ತಿಕ ರಕ್ಷಣಾ ಕ್ರಮಗಳ ಬಳಕೆಗೆ ಒತ್ತು ನೀಡಿತು, ಲಾರ್ವಿವೋರಸ್ ಮೀನುಗಳ (ಗಪ್ಪಿ ಮೀನು) ಜೊತೆಗೆ ಸೊಳ್ಳೆಗಳ ಲಾರ್ವಾ ಮತ್ತು ಪ್ಯೂಪಲ್ ಹಂತಗಳ ನೇರ ಪ್ರದರ್ಶನವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜಕ ಡಾ. ಉಮೇಶ್ ಆರ್. ದೀಕ್ಷಿತ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ರಾಕೇಶ್ ಕೆ. ನಾಯಕ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್ ಸ್ವಯಂ ಸೇವಕರು ಕರಪತ್ರಗಳು ಮತ್ತು ಸ್ಕ್ಯಾಂಡಿಗಳನ್ನು ಬಳಸಿಕೊಂಡು ಸಿಬ್ಬಂದಿಗೆ ಶಿಕ್ಷಣ ನೀಡಿದರು.

ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ; ಎನ್ನೆಸ್ಸೆಸ್ ಸರಣಿ ಕಾರ್ಯಕ್ರಮಗಳ ಸಮಾರೋಪ

Article Image

ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ; ಎನ್ನೆಸ್ಸೆಸ್ ಸರಣಿ ಕಾರ್ಯಕ್ರಮಗಳ ಸಮಾರೋಪ

ಉಜಿರೆ, ಆ.7: ಕಾರ್ಗಿಲ್ ವಿಜಯ ದಿನಾಚರಣೆಯು ದೀಪಾವಳಿ ಹಬ್ಬದಂತೆ ಸಮಸ್ತ ದೇಶವಾಸಿಗಳಿಂದ ಆಚರಿಸಲ್ಪಡುತ್ತಿರುವುದು ಸಂತಸದ ಸಂಗತಿ ಎಂದು ಕಾರ್ಗಿಲ್ ಯುದ್ಧ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಇಂದು (ಆ.7) ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಆರಂಭದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆಯು ಸೈನ್ಯದಿಂದ ಮಾತ್ರ ಆಚರಿಸಲ್ಪಡುತ್ತಿತ್ತು. ಕ್ರಮೇಣ ನಾಗರಿಕರು ಆಚರಿಸಲು ಆರಂಭಿಸಿದರು. ಪ್ರಸ್ತುತ ದೇಶಾದ್ಯಂತ ವ್ಯಾಪಕವಾಗಿ ಆಚರಿಸಲ್ಪಡುತ್ತಿದೆ ಎಂದು ಅವರು ಹೇಳಿದರು. “ದೇಶದ ಪ್ರಾಂತೀಯ ಸಮಗ್ರತೆಗಾಗಿ ನಾವು ಹೋರಾಟ ಮಾಡಿದೆವು. ಕಿರಿಯ ವಯಸ್ಸಿನ ಸೈನಿಕರು ಪ್ರಾಣತ್ಯಾಗ ಮಾಡಿದರು. ಇಲ್ಲಿಯವರೆಗೆ ನಾವು ದೇಶವನ್ನು ಮುಂದೆ ತೆಗೆದುಕೊಂಡು ಬಂದಿದ್ದೇವೆ, ಇನ್ನು ಮುಂದೆ ದೇಶವನ್ನು ಮುನ್ನಡೆಸಬೇಕಾದವರು ನೀವು. ಈಗ ನಿಮ್ಮ ಸರದಿ” ಎಂದರು. “ದೇಶವು ಸುರಕ್ಷಿತ ಕೈಗಳಲ್ಲಿದೆ” ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು. “ಈ ಮಣ್ಣಿನಲ್ಲಿ ಹುಟ್ಟಲು ನಾನು ಅದೃಷ್ಟ ಮಾಡಿದ್ದೇನೆ. ಹಲವು ಜನರಿಗೆ ಹಲವು ಪ್ರಯತ್ನಗಳ ಬಳಿಕವೂ ಸೈನ್ಯ ಸೇರಲು ಸಾಧ್ಯವಾಗುವುದಿಲ್ಲ. ಆದರೆ ನಾನು ಪ್ರಥಮ ಪ್ರಯತ್ನದಲ್ಲಿಯೇ ಯಶಸ್ವಿಯಾದೆ. ಯುದ್ಧದಲ್ಲಿ ಪಾಲ್ಗೊಳ್ಳುವ ಅವಕಾಶವೂ ಸಿಕ್ಕಿತು. ಭಾರತಾಂಬೆಗೆ ಅಳಿಲುಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ದೇಶಕ್ಕೆ ಈಗ ಸೇವೆ ಮಾಡದಿದ್ದಲ್ಲಿ ಇನ್ನು ಯಾವಾಗ? ನಾವಲ್ಲದೆ ಇನ್ನಾರು?” ಎಂದು ಅವರು ಹೇಳಿದರು. ಅತಿಥಿ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ದೇಶಕ್ಕೆ ಸೈನ್ಯ ಮತ್ತು ಸೈನಿಕರು ಎಷ್ಟು ಅನಿವಾರ್ಯ ಎಂಬುವುದು ಎಲ್ಲರಿಗೂ ಗೊತ್ತು. ನಾವು ರಾತ್ರಿ ನೆಮ್ಮಯಿಂದ ಮಲಗಿ ನಿದ್ದೆ ಹೋಗುತ್ತೇವೆ ಎಂದರೆ ಅದಕ್ಕೆ ಕಾರಣ ನಮ್ಮ ಹೆಮ್ಮೆಯ ಯೋಧರು. ದೇಶವನ್ನು ಕಾಪಾಡುವವರು ಯೋಧರು. ಆದ್ದರಿಂದ ಸೈನ್ಯದ ವ್ಯವಸ್ಥೆ ದೇಶಕ್ಕೆ ಅತೀ ಅಗತ್ಯ ಎಂದರು. ಮಾತೃಋಣ, ಪಿತೃಋಣ, ಗುರುಋಣಕ್ಕಿಂತಲೂ ಸೈನ್ಯ ಋಣ ಮಿಗಿಲು. ನಮ್ಮ ನಮ್ಮ ಕರ್ತವ್ಯದಲ್ಲಿ ಸೈನಿಕರ ಬದ್ಧತೆ, ಸೇವಾ ಮನೋಭಾವ ಅಳವಡಿಸಿಕೊಳ್ಳುವ ಮೂಲಕ ಆ ಋಣ ತೀರಿಸಬಹುದು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ದೈಹಿಕ, ಮಾನಸಿಕ, ಭಾವನಾತ್ಮಕ ದೃಢತೆ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ದೇಶದ ಸೈನಿಕರು ದೇಶದ ರಕ್ಷಣೆ ಮಾಡುವಾಗ ದೇಶವಾಸಿಗಳಾದ ನಾವು ದೇಶದೊಳಗಡೆ ಏನು ಮಾಡುತ್ತಿದ್ದೇವೆ ಎಂಬುದನ್ನು ಅವಲೋಕನ ಮಾಡಬೇಕಿದೆ. ಸೈನಿಕರ ಶ್ರಮವನ್ನು ಯುವಜನರು ಅರಿತುಕೊಳ್ಳಬೇಕು. ನಮ್ಮ ಕಾಲೇಜಿನ ಎನ್ನೆಸ್ಸೆಸ್ ಘಟಕ ತನ್ನ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಸಂತಸದಾಯಕ ಎಂದರು. ಭಾರತ ಎಂದಿಗೂ ಯಾವ ದೇಶದ ಮೇಲೆಯೂ ಕೂಡ ಯುದ್ಧ ಸಾರಿಲ್ಲ. ಆದರೆ ತನ್ನ ಮೇಲೆ ದಾಳಿ ಮಾಡಿದವರನ್ನು ಎಂದಿಗೂ ಸದೆ ಬಡಿಯದೆ ಬಿಟ್ಟಿಲ್ಲ ಎಂಬುದಕ್ಕೆ ಕಾರ್ಗಿಲ್ ಯುದ್ಧವೇ ಸಾಕ್ಷಿ ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ಎಸ್ ಎಸ್ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., "24ನೇ ಕಾರ್ಗಿಲ್ ವಿಜಯ ದಿನಾಚರಣೆ ಸಂದರ್ಭದಲ್ಲಿ ನಾವು ಸರಣಿ ಕಾರ್ಯಕ್ರಮಗಳನ್ನು ನಡೆಸುವ ಸಂಕಲ್ಪ ಮಾಡಿದ್ದೆವು. ಶಾಲಾ ಕಾಲೇಜುಗಳಲ್ಲಿ ದೇಶಭಕ್ತಿ ಕುರಿತ ಸರಣಿ ಕಾರ್ಯಕ್ರಮ ನಡೆಸಿ, ಇಂದು ಸಮಾರೋಪ ಸಮಾರಂಭ ಆಯೋಜಿಸಿದ್ದೇವೆ" ಎಂದರು. ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಡೆಸಿದ ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪಟ್ಟಿಯನ್ನು ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರೊ. ದೀಪ ಆರ್.ಪಿ. ವಾಚಿಸಿದರು. ಗಣ್ಯರು ಬಹುಮಾನ ವಿತರಿಸಿದರು. ಎನ್ನೆಸ್ಸೆಸ್’ನ ಭಿತ್ತಿ ಪತ್ರಿಕೆ ‘ಯುವ ಚೇತನ’ದ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಭಾರತಾಂಬೆ ಭಾವಚಿತ್ರ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಪ್ರಥಮ ಬಿ.ಕಾಂ. ವಿದ್ಯಾರ್ಥಿ ಶಯನ್ ಕುಮಾರ್ ರಚಿಸಿದ ಪೆನ್ಸಿಲ್ ಸ್ಕೆಚ್ ಅನ್ನು ಅತಿಥಿಗೆ ನೀಡಿದರು. ಸ್ವಯಂಸೇವಕಿಯರಾದ ಶ್ವೇತಾ ಕೆ ಜಿ ನಿರೂಪಿಸಿ, ಸಿಂಚನ ಕಲ್ಲೂರಾಯ ವಂದಿಸಿದರು. ಬಳಿಕ, ಕ್ಯಾಪ್ಟನ್ ಅವರೊಂದಿಗೆ ಎನ್ನೆಸ್ಸೆಸ್ ಅಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸಂವಾದ ನಡೆಸಿದರು. ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.

ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Article Image

ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆ: "ನಮ್ಮ ಭಾರತದ ಜನಸಂಖ್ಯೆ 145 ಕೋಟಿಗೂ ಅಧಿಕವಾಗಿದ್ದು ಚೀನಾವನ್ನು ಹಿಂದಿಕ್ಕಿದೆ. ಚಾರ್ಲ್ಸ್ ಡಾರ್ವಿನ್ ಹೇಳಿದಂತೆ ಅತಿಯಾದ ಜನಸಂಖ್ಯೆಯಿಂದಾಗಿ ಉಳಿಯುವಿಕೆ ಕಷ್ಟವಾದಾಗ, ಅವರಲ್ಲಿ ಯಾರು ಬಲಿಷ್ಠನು ಹಾಗೂ ಕೌಶಲವನ್ನು ಹೊಂದಿರುತ್ತಾನೋ ಆತ ಮಾತ್ರ ಈ ಸಮಾಜದಲ್ಲಿ ಉಳಿಯಲು ಸಾಧ್ಯ" ಎಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು. ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಯೋಗದಲ್ಲಿ ಆ.8ರಂದು ಆಯೋಜಿಸಲಾಗಿದ್ದ ವಾಣಿಜ್ಯ ಕ್ಯಾಂಪಸ್ ಅಸೋಸಿಯೇಷನ್’ನ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಮನುಷ್ಯನ ಜೀವನ ಎಂದರೆ ಏಳು- ಬೀಳು ಸಹಜ. ಆದರೆ ಬಿದ್ದಾಗ ಹೇಗೆ ಎದ್ದು ನಿಂತು ಧೈರ್ಯದಿಂದ ಕಷ್ಟವನ್ನು ಎದುರಿಸುತ್ತಾನೆ ಎಂಬುದು ಬಹುಮುಖ್ಯವಾಗಿರುತ್ತದೆ. ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ನಮ್ಮ ಕಾಲೇಜು ಬಹುಮುಖ್ಯ ಪಾತ್ರವನ್ನು ವಹಿಸಲಿದ್ದು, ಮುಂದಿನ ಭವಿಷ್ಯದ‌ ಒಳಿತಿಗಾಗಿ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಿ" ಎಂದು ಅವರು ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರೀಕ್ಷಾ ಅಕಾಡೆಮಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಸಾಫ್ಟ್‌ಸ್ಕಿಲ್ಸ್ ಟ್ರೈನರ್ ಎಂ.ಆರ್. ಚಂದನ್ ರಾವ್, "ನಿಮ್ಮ ಜೀವನದಲ್ಲಿ ವಾಣಿಜ್ಯ ಎಷ್ಟು ಮುಖ್ಯ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ಅರಿಯಿರಿ. ಶ್ರದ್ಧೆ ಮತ್ತು ಕೌಶಲಗಳನ್ನು ಬಳಸಿಕೊಂಡು ನಿಮ್ಮ ವ್ಯವಹಾರ ಜ್ಞಾನವನ್ನು ವಿಸ್ತರಿಸಿ. ಆಗ ಯಶಸ್ಸು ಸದಾ ನಿಮ್ಮೊಟ್ಟಿಗಿರುತ್ತದೆ" ಎಂದು ಕಿವಿಮಾತು ಹೇಳಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ, 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ರಾಷ್ಟ್ರೀಯ ಸೇವಾಯೋಜನಾ ಘಟಕದ ಆಫೀಸರ್ ಪ್ರಶಸ್ತಿ ಪಡೆದ ಡಾ. ಲಕ್ಷ್ಮಿನಾರಾಯಣ ಕೆ.ಎಸ್. ಹಾಗೂ ಇತ್ತೀಚೆಗೆ ಪಿಎಚ್.ಡಿ. ಪದವಿ ಪಡೆದ ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. 2023 -24ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವ್ಯವಹಾರ ಆಡಳಿತ ವಿಭಾಗದ ದ್ವಿತೀಯ ಪದವಿ ವಿದ್ಯಾರ್ಥಿ ನಿಹಾಲ್ ಸಿಂಗ್ ಪಿ. ಅವರು ಪ್ರಸ್ತುತ ವ್ಯಾಪಾರ ಬೆಳವಣಿಗೆ ಮತ್ತು ನಿರ್ವಹಣೆಯ ವಿಕಸನದ ಅಗತ್ಯತೆಗಳ ಕುರಿತು ಬರೆದಿರುವ ‘ಟ್ರೆಂಡ್ ಮ್ಯಾಟ್ರಿಕ್ಸ್ – ಮಂತ್ಲಿ ಡೈಜೆಸ್ಟ್ ಆಫ್ ಬ್ಯುಸಿನೆಸ್ ಟ್ರೆಂಡ್ಸ್’ ಪುಸ್ತಕವನ್ನು ಪ್ರಾಂಶುಪಾಲರು ಬಿಡುಗಡೆಗೊಳಿಸಿದರು. ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳಿಗೆ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಪ್ರಮಾಣವಚನ ಬೋಧಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಸಹನಾ ಡೋಂಗ್ರೆ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ವಾಣಿಜ್ಯ ವಿಭಾಗದ ಭಿತ್ತಿಪತ್ರಿಕೆ ‘ವಾಣಿಕ’ ಅನಾವರಣಗೊಳಿಸಲಾಯಿತು. ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಫ್ ಕುಮಾರಿ, ವಾಣಿಜ್ಯ ನಿಕಾಯದ ಡೀನ್ ಹಾಗೂ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಕುಂತಲಾ, ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ಸಂಯೋಜಕರಾದ ಗುರುರಾಜ್ ಮತ್ತು ವಿನುತ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಷ್ಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ಸಿ.ಇ.ಒ. ದೀಕ್ಷಿತ ಸ್ವಾಗತಿಸಿ, ಸಿ.ಎಫ್.ಒ. ಶ್ರೀಗಣೇಶ್ ವಂದಿಸಿದರು. ಧಾರಿಣಿ ಮತ್ತು ಧರಿತ್ರಿ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಶ್ರೀ ಧ. ಮಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

Article Image

ಉಜಿರೆ ಶ್ರೀ ಧ. ಮಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

ಉಜಿರೆಯ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಕ್ರಿಯ ಸಂಘಗಳಾದ ಸಸ್ಯಸೌರಭ ಹಾಗೂ ಇಕೋ-ಕ್ಲಬ್ ವತಿಯಿಂದ ಉಜಿರೆಯ ರತ್ನಮಾನಸದಲ್ಲಿ ಆ.2ರಂದು ನೇಜಿ ನೆಡುವ ಕಾರ್ಯಕ್ರಮ ನಡೆಯಿತು. ರತ್ನಮಾನಸದ ಮೇಲ್ವಿಚಾರಕ ಯತೀಶ್ ಬಳಂಜ ಇವರು ನೇಜಿ ನೆಡುವ ವಿಧಾನ ಹಾಗೂ ಮಾಹಿತಿಗಳನ್ನು ನೀಡಿದರು. ದ್ವಿತೀಯ ಮತ್ತು ತೃತೀಯ ಬಿ.ಎಸ್ಸಿಯ ಸುಮಾರು 40 ವಿದ್ಯಾರ್ಥಿಗಳು ಉತ್ಸಾಹದಿಂದ ಜೊತೆಗೂಡಿ ನೇಜಿ ನಾಟಿ ಮಾಡಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಕುಂತಲಾ ಬಿ., ಅಭಿಲಾಷ್ ಕೆ.ಎಸ್., ಮಂಜುಶ್ರೀ ಹಾಗೂ ಭವ್ಯ ಡಿ. ನಾಯಕ್ ಪಾಲ್ಗೊಂಡರು. ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಇವರು ಶುಭ ಹಾರೈಸಿದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆಬಲ್ ಟೆನ್ನಿಸ್ ಪಂದ್ಯಾಟ

Article Image

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆಬಲ್ ಟೆನ್ನಿಸ್ ಪಂದ್ಯಾಟ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ-ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡುಬಿದಿರೆ ತಾಲೂಕು, ದ.ಕ ಮತ್ತು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ- ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ 2024-25ನೇ ಸಾಲಿನ ಮೂಡಬಿದಿರೆ ತಾಲೂಕು ಮಟ್ಟದ- ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ಸಿಸ್ ಪಂದ್ಯಾಟ ಆಗಸ್ಟ್ 3ರ ಶನಿವಾರದಂದು ನಡೆಯಿತು. ಪಂದ್ಯಾಟಗಳನ್ನು ಉದ್ಘಾಟಿಸಿ ಮಾತನಾಡಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್- “ಮಕ್ಕಳೇ, ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದದ್ದು, ಇಲ್ಲಿ ನಿಮಗೆ ದೊರೆಯುವ ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಿ, ಗುರಿಯಿಟ್ಟು ಛಲಬಿಡದೇ, ನಿರಂತರವಾಗಿ ಯಶಸ್ಸಿಗಾಗಿ ಶ್ರಮಿಸಿ, ಗೆದ್ದಾಗ ಅತೀಯಾಗಿ ಹಿಗ್ಗದೇ, ಸೋತಾಗ ಕುಗ್ಗದೇ, ಸೋಲನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ನಿಮ್ಮ ಗುರಿಯತ್ತ ಮುನ್ನಡೆಯಿರಿ. ಬೇರೆಯವರು ಗೆದ್ದಾಗ ಅಸೂಯೆ ಪಡದೇ, ಅವರಿಂದ ಪಾಠ ಕಲಿಯಿರಿ- ನನ್ನಿಂದಾಗದು ಎಂಬ ಕೆಟ್ಟ ಯೋಚನೆಯನ್ನು ಮನಸ್ಸಿನಿಂದ ತೆಗೆದುಹಾಕಿ. ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ನಂತಹ ಶ್ರೇಷ್ಠ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತಮಾತೆಯನ್ನು ಪ್ರತಿನಿಧಿಸಿ-ಪದಕ ಗೆಲ್ಲುವ ಸಾಧಕರು ನೀವಾಗಿ. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಅರ್ಹ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲು ಎಕ್ಸಲೆಂಟ್ ವಿದ್ಯಾಸಂಸ್ಥೆ ಸದಾ ಸಿದ್ಧವಿದೆ” ಎನ್ನುತ್ತಾ ಎಲ್ಲ ಮಕ್ಕಳಿಗೂ ಶುಭಹಾರೈಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ಮೂಡುಬಿದಿರೆಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾದ ನಿತ್ಯಾನಂದ ಶೆಟ್ಟಿಯವರು, ಈ ಆಟಗಳ ರೂಪುರೇಷೆಗಳನ್ನು ವಿವರಿಸಿ, ಅತ್ಯಂತ ಅಚ್ಚುಕಟ್ಟಾದ ಒಳಾಂಗಣ ಕ್ರೀಡಾಂಗಣದಲ್ಲಿ ಸುಂದರ ರೀತಿಯಲ್ಲಿ ಇಂದಿನ ಆಟಗಳಿಗೆ ಮಾಡಿದ ವ್ಯವಸ್ಥೆಗಳಿಗಾಗಿ ಇಲಾಖೆಯ ವತಿಯಿಂದ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮಕ್ಕಳು ಇದರ ಪ್ರಯೋಜನಗಳನ್ನು ಪಡೆದುಕೊಂಡು ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಕ್ರೀಡೆಯಲ್ಲಿ ಪ್ರತಿನಿಧಿಸುವಂತಹ ಮಕ್ಕಳಾಗಿ ಬೆಳೆಯಿರಿ ಎಂಬ ಶುಭಹಾರೈಕೆಯನ್ನಿತ್ತರು. ಈ ಸಂದರ್ಭದಲ್ಲಿ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ‍್ಯದರ್ಶಿಗಳಾದ- ರಶ್ಮಿತಾ ಜೈನ್, ಮೂಡಬಿದಿರೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ಪುತ್ರನ್, ಹಾಗೂ ಎಕ್ಸಲೆಂಟ್ ಕ್ರೀಡಾ ತರಬೇತುದಾರರಾದ- ಯಸ್.ಯಸ್ ಪಾಟೀಲ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಬೇರೆ ಬೇರೆ ಶಾಲೆಗಳಿಂದ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪಂದ್ಯಾಟಗಳಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಹದಿನೇಳು ವರ್ಷದೊಳಗಿನ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಹದಿನಾಲ್ಕು ವರ್ಷದೊಳಗಿನ ಬಾಲಕರ ಶಟಲ್ ಬ್ಯಾಡ್ಮಿಂಟನ್ ಮತ್ತು ಬಾಲಕಿಯರ ಟೇಬಲ್ ಟೆನ್ನೀಸ್ ಹದಿನೇಳು ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನೀಸ್ ತಂಡಗಳು ಜಯಗಳಿಸಿ ಜಿಲ್ಲಾ ಹಂತಕ್ಕೆ ಪ್ರವೇಶ ಪಡೆದವು. ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕರಾದ ಶಿವಪ್ರಸಾದ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು, ಸಂಸ್ಥೆಯ ವಿಜ್ಞಾನ ಶಿಕ್ಷಕ ಪ್ರಜ್ವಲ್ ಶೆಟ್ಟಿಯವರು ಕಾರ‍್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಮಾಹಿತಿ ಕಾರ್ಯಗಾರ

Article Image

ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಮಾಹಿತಿ ಕಾರ್ಯಗಾರ

ವಿದ್ಯಾಗಿರಿ: ಶಿಕ್ಷಣ ಕ್ಷೇತ್ರದಲ್ಲಿ ನಾಟಕ ಮತ್ತು ಕಲೆ ಕೇವಲ ಪಠ್ಯೇತರ ಚಟುವಟಿಕೆಗಳಲ್ಲ. ಬದಲಾಗಿ ಅವು ಸೃಜನಶೀಲತೆ, ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸಲಿರುವ ಪ್ರಬಲ ಸಾಧನಗಳಾಗಿವೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‌ರಾಮ್ ಸುಳ್ಯ ತಿಳಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ ‘ಶಿಕ್ಷಣದಲ್ಲಿ ಕಲೆ ಹಾಗೂ ನಾಟಕದ ಪಾತ್ರ’ ದ ಕುರಿತು ಕಾರ್ಯಗಾರದಲ್ಲಿ ಮಾತನಾಡಿದರು. ಶಿಕ್ಷಣದಲ್ಲಿ ಕಲೆಯನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ವಯಂ ಅಭಿವ್ಯಕ್ತಿ ಮತ್ತು ಸಂವಹನಕ್ಕಾಗಿ ಮೌಲ್ಯಯುತವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ನೃತ್ಯ, ಸಂಗೀತ, ನಾಟಕ, ಸೃಜನಶೀಲ ಬರವಣಿಗೆ, ರಂಗಭೂಮಿ ಇತ್ಯಾದಿಗಳನ್ನು ಒಳಗೊಂಡಿರಬೇಕು. ನಾಟಕಗಳು ನಮ್ಮ ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ನಮ್ಮ ಕಣ್ಣ ಮುಂದೆ ಸೃಷ್ಟಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಕಲೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯಕ. ಪ್ರದರ್ಶನದ ಕಲೆಗಳು ಮಕ್ಕಳಲ್ಲಿ ತಮ್ಮ ಭಾವನೆ ಮತ್ತು ಕಲ್ಪನೆಗಳನ್ನು ಹಾಗೂ ತಮ್ಮದೇ ಆದ ವಿಶಿಷ್ಟ ಧ್ವನಿಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತವೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಕ್ಷಕರಾದವರು ಕಲೆಗಾರರು, ನಾಟಕಗಾರರು ಆಗಿರಬೇಕು. ಯಾವುದೇ ವಿಷಯವನ್ನು ಕಲೆ ಮತ್ತು ನಾಟಕದ ಮೂಲಕ ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ವಿಷಯವನ್ನು ಮನ ಮುಟ್ಟವಂತೆ ತಿಳಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರಮೂರ್ತಿ ಹೆಚ್. ಕೆ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಜಾನೆಟ್ ಸ್ವಾಗತಿಸಿ, ಅಪೂರ್ವ ವಂದಿಸಿ, ಕಾವ್ಯ ಕೆ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Article Image

ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

ಉಜಿರೆ ಶ್ರೀ ಧ.ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕದ ಸ್ವಯಂಸೇವಕ ನಾಯಕ ರಾಮಕೃಷ್ಣ ಶರ್ಮ ಎನ್. ಅವರು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ರಾ.ಸೇ.ಯೋ. ಕೋಶದ ಸಹಯೋಗದೊಂದಿಗೆ ಆ.6 ರಿಂದ 12 ರ ವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು 20 ಸ್ವಯಂಸೇವಕರು ಪ್ರತಿನಿಧಿಸಲಿದ್ದು, ಎಸ್.ಡಿ.ಎಂ. ಎನ್.ಎಸ್.ಎಸ್. ಘಟಕವನ್ನು ರಾಮಕೃಷ್ಣ ಶರ್ಮ ಪ್ರತಿನಿಧಿಸಲಿದ್ದಾರೆ. ದ್ವಿತೀಯ ಬಿ.ಕಾಂ. ವಿದ್ಯಾರ್ಥಿಯಾಗಿರುವ ಇವರು ಬೆಳ್ತಂಗಡಿಯ ಎನ್. ಮಹಾಲಿಂಗೇಶ್ವರ ಭಟ್ ಮತ್ತು ವಿದ್ಯಾ ದಂಪತಿಯ ಪುತ್ರ.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ: ಕೆಸರಾಟ ಪಾಠ

Article Image

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ: ಕೆಸರಾಟ ಪಾಠ

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಹಾಗೂ ರೋವರ್ ರೇಂಜರ್ಸ್ ಘಟಕದ ಘಟಕದ ವತಿಯಿಂದ ಕಾರ್ಕಳದ ಮಿಯ್ಯಾರು ಗ್ರಾಮದಲ್ಲಿ ‘ಕೆಸರಾಟ ಪಾಠ’ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಿಯ್ಯಾರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಾಧವ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಿಯ್ಯಾರು ಗ್ರಾಮಕ್ಕೂ ಎನ್‌ಎಸ್‌ಎಸ್ ಚಟುವಟಿಕೆಗಳಿಗೂ ಅವಿನಾಭಾವ ನಂಟಿದೆ. ಈ ಗ್ರಾಮದಲ್ಲಿ ಹೆಚ್ಚಿನ ಎನ್‌ಎಸ್‌ಎಸ್ ಕ್ಯಾಂಪ್‌ಗಳು ನಡೆಯುತ್ತವೆ. ಈ ಕಾರ‍್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಜೀವನ ಪಾಠ ಲಭಿಸಲಿ ಎಂದು ಹಾರೈಸಿದರು. ಆಳ್ವಾಸ್ ವಿದ್ಯಾಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕೆಸರಾಟದ ಮಹತ್ವ ಹಾಗೂ ಕೃಷಿಯ ಮಹತ್ವವನ್ನು ತಿಳಿಸಿದರು. ವಿವಿಧ ಆಟಗಳಲ್ಲಿ ತಾವೂ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕೆಸರಾಟ ಪಾಠದ ಅಂಗವಾಗಿ ಹಗ್ಗ ಜಗ್ಗಾಟ, ವಾಲಿಬಾಲ್, ತ್ರೋಬಾಲ್, 100 ಮೀಟರ್ ಓಟ, 400ಮೀಟರ್ ರಿಲೇ, ಪಿರಮಿಡ್ ರಚಿಸುವುದು, ನಿಧಿ ಹುಡುಕುವುದು, ಮಡಕೆ ಒಡೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗದ್ದೆಯನ್ನು ಒದಗಿಸಿದಂತಹ ರಾಜೇಶ್ ಹಾಗೂ ಸಹಕಾರವನ್ನು ನೀಡಿದ ರಮೇಶ್ ಹೆಗ್ಡೆಯನ್ನು ಅಭಿನಂದಿಸಲಾಯಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂಡಿ, ಎನ್‌ಎಸ್‌ಎಸ್ ಘಟಕದ ಸಂಯೋಜಕರಾದ ಧರ್ಮೇಂದ್ರ ಕುದ್ರೋಳಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪ್ಳೂಣಕರ್ ರೋವರ್ ರೇಂಜರ್ಸ್ ಘಟಕದ ಸಂಯೋಜಕರಾದ ವೀಣಾ ಹಾಗೂ ಸುನಿಲ್, ಉಪನ್ಯಾಸಕ ವರ್ಗದವರು ಇದ್ದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರೋವರ್ ರೇಂಜರ್ಸ್ ಹಾಗೂ ಎನ್‌ಎಸ್‌ಎಸ್ ಘಟಕದ 175 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಕ್ಸಲೆಂಟ್: ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ

Article Image

ಎಕ್ಸಲೆಂಟ್: ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ

ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರನ್ನು ಪ್ರತೀಕ್ಷಣ ಸ್ಮರಿಸಬೇಕು. ಸೈನಿಕರು ಭಾವಜೀವಿಗಳು, ನಚೀಕೇತ್, ಸೌರಭ್ ಕಾಲಿಯಾರಂತಹ ಮೊದಲಾದ ವೀರ ಯೋಧರ ಬಲಿದಾನದ ಪ್ರತಿಫಲವಾಗಿ ಇಂದಿನ ಭಾರತ ಭವ್ಯವಾಗಿದೆ. ಕಾರ್ಗಿಲ್ ಯುದ್ಧವಲ್ಲ ಅದೊಂದು ಕಾರ್ಯಾಚರಣೆ. ಯಾಕೆ ಭಾರತಕ್ಕೆ ಕಾರ್ಗಿಲ್ ಮುಖ್ಯವೆಂದರೆ 527 ಸೈನಿಕರು ತಮ್ಮ ಯಶಸ್ವಿ ಕಾರ್ಯಚರಣೆಯಿಂದ ಭಾರತಕ್ಕೆ ಜಯ ತಂದುಕೊಟ್ಟು ಹುತಾತ್ಮರಾದರು. ಇಂದು ಆ ಕಾರ್ಯಚರಣೆಯಲ್ಲಿ ಮಡಿದ ಅಷ್ಟೂ ಸೈನಿಕರನ್ನು ಸ್ಮರಿಸಿಕೊಳ್ಳುವುದು ಅತೀ ಮುಖ್ಯ ಎಂಬುದಾಗಿ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಅಭಿಪ್ರಾಯಪಟ್ಟರು. ಎಕ್ಸಲೆಂಟ್ ಶಿಕ್ಷನ ಸಂಸ್ಥೆಗಳು ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಲ್ಲಿಯ ತನಕ ಹುತಾತ್ಮರಾದ ಎಲ್ಲಾ ಸೈನಿಕರಿಗೂ ಎದೆಗೆ ಗುಂಡುಬಿದ್ದಿದೆಯೇ ವಿನಃ ಬೆನ್ನಿಗಲ್ಲ. ಅಷ್ಟಿದ್ದರೂ ದೇಶಕ್ಕಾಗಿ ಬದುಕಬೇಕು ಎಂಬ ಭಾವುಕತೆ ಸೈನಿಕರದ್ದು. ಅವರು ದೇಶದ ರಕ್ಷಣೆ ಕಣ್ಣಮುಂದೆ ಬಂದರೆ ಸದಾ ಬಲಿದಾನಕ್ಕೆ ಮುಂದಾಗುತ್ತಾರೆ. ಬಲಿದಾನಗೈದ ವೀರಯೋಧರ ಕನಸುಗಳನ್ನು ಹೊತ್ತ ಭೂಮಿ ಇದು ಕಾರ್ಗಿಲ್ ಎಂದಿಗೂ ಭಾರತದ ಭಾಗ ಅಲ್ಲಿ ಮಡಿದ ಯೋಧರ ಪರಿಶ್ರಮ ನಮ್ಮ ನೆಮ್ಮದಿಯ ನಿದ್ರೆಗೆ ಕಾರಣ. ಆದರೆ ಇಂದು ನಾವುಗಳು ಜಾತಿ ಮತ ಭಾಷೆ ಇತ್ಯಾದಿ ಬಂಧನಗಳಿಗೆ ಒಳಗಾಗಿದ್ದೇವೆ. ಅದರಿಂದ ಹೊರಬಂದು ನಾವೆಲ್ಲಾ ಒಂದೇ, ನಾವೆಲ್ಲಾ ಭಾರತೀಯರು ಎನ್ನುವ ಹೆಮ್ಮೆ ನಮಗಿರಬೇಕು. ಜೀವನದಲ್ಲಿ ಗುರಿಯ ಸ್ಪಷ್ಟತೆ ಇದ್ದರೆ ಎಂತಹ ಸಮಸ್ಯೆಗಳನ್ನು ಮೆಟ್ಟಿನಿಲ್ಲಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಯೋಧರ ತ್ಯಾಗ ಬಲಿದಾನಗಳನ್ನು ಸದಾ ಗೌರವಿಸಬೇಕು. ದೇಶ ಮೊದಲು ಎಂಬ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ಯೋಧರ ಆದರ್ಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಈ ಕಾರ್ಗಿಲ್ ವಿಜಯ ಸುಲಭವಾಗಿ ಲಭಿಸಿದ್ದಲ್ಲ ಅದರಲ್ಲಿ ನೂರಾರು ಸೈನಿಕರು ವೀರತನದಿಂದ ಹೋರಾಡಿ ತಮ್ಮ ಬಲಿದಾನ ಮಾಡಿದ್ದಾರೆ. ಇಂದು ನಾವೆಲ್ಲಾ ಈ ಸಂಭ್ರಮಾಚರಣೆ ಮಾಡುತ್ತಿರುವುದು ಅವರಿಗೆ ಸಲ್ಲಿಸುತ್ತಿರುವ ಗೌರವ ಎಂದು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಅರಿವನ್ನು ಮೂಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪಮುಖ್ಯೋಪಾಧ್ಯಾಯ ಜಯಶೀಲ, ಎನ್ ಸಿ ಸಿ ನೌಕದಳದ ಕೇರ್‌ಟೇಕರ್ ಆಫೀಸರ್ ರೇಣುಕಾಚಾರ್ಯ, ಭೂದಳದ ಕೇರ್‌ಟೇಕರ್ ಆಫೀಸರ್ ಪ್ರಶಾಂತ್ ಜೈನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನಿಷಾ, ನವ್ಯ ಕಾರ್ಯಕ್ರಮ ನಿರೂಪಿಸಿದರು. ಹರ್ಷ ಅತಿಥಿಗಳನ್ನು ಪರಿಚಯಿಸಿದರು, ಗುಂಜನ್ ಕಾರ್ಗಿಲ್ ವಿಜಯ ದಿವಸದ ಮಹತ್ವ ತಿಳಿಸಿದರು. ಪ್ರನ್ಶು ವಂದಿಸಿದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸದ ಸವಿನೆನಪಿಗಾಗಿ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು.

ಮೂಡುಬಿದಿರೆ: ವಿಶೇಷ ಉಪನ್ಯಾಸ ಕಾರ್ಯಕ್ರಮ

Article Image

ಮೂಡುಬಿದಿರೆ: ವಿಶೇಷ ಉಪನ್ಯಾಸ ಕಾರ್ಯಕ್ರಮ

ಪ್ರತಿದಿನ ಪತ್ರಿಕೆಗಳನ್ನು ಓದುವುದರಿಂದ ಸಮಾಜದ ಆಗುಹೋಗುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಪರಿಣಾಮಕಾರಿ ಸಂವಹನ, ಶಬ್ದ ಸಂಪತ್ತಿನ ವೃದ್ಧಿ ಸಾಧ್ಯ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮೂಡಬಿದಿರೆ ತಾಲೂಕು ಘಟಕ ಹಾಗೂ ಮೂಡುಬಿದಿರೆಯ ಮಹಾವೀರ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ವಿವಿಧ ನವ ಮಾಧ್ಯಮಗಳು ನಕಾರತ್ಮಕ, ಅತಿರಂಜಿತ ಸುದ್ದಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿವೆ. ಆದರೆ ಪತ್ರಿಕೆಗಳ ಮೂಲಕ ದೊರೆಯುವ ಸಕಾರಾತ್ಮಕ ಮತ್ತು ಮಹತ್ವಪೂರ್ಣ ದಾಖಲೆಗಳು ಜ್ಞಾನದ ಜೊತೆ ಓದಿನ ಸುಖವನ್ನು ನೀಡುತ್ತವೆ ಎಂದರು. ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವ ಸಂಪಾದಕೀಯ ಪುಟ, ಸ್ಥಳೀಯ, ರಾಜ್ಯ, ರಾಷ್ಟ್ರಮಟ್ಟದ ಸುದ್ದಿಗಳ ಜೊತೆಗೆ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ಆಸಕ್ತಿದಾಯಕ ಸಂಗತಿಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು. ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಸಾಪ ಮೂಡುಬಿದಿರೆ ತಾಲೂಕು ಘಟಕ ಅಧ್ಯಕ್ಷ ಕೆ ವೇಣುಗೋಪಾಲ್ ಶೆಟ್ಟಿ, ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಬೇರೆ ಬೇರೆ ಮಾತೃಭಾಷೆಗಳನ್ನು ಹೊಂದಿದ್ದರು ಕನ್ನಡಕ್ಕೆ ವಿಶೇಷ ಸ್ಥಾನಮಾನ ನೀಡುತ್ತಾ ಅದನ್ನು ನಮ್ಮ ಜೀವನದ ಅಂಗವನ್ನಾಗಿ ಮಾಡಿಕೊಂಡಿದ್ದು ಉಲ್ಲೇಖನೀಯ ಎಂದರು. ವಿದ್ಯಾರ್ಥಿನಿ ಖ್ಯಾತಿ ಪ್ರಾರ್ಥಿಸಿ, ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ವಿಜಯಲಕ್ಷ್ಮಿ ಮಾರ್ಲಾ ವಂದಿಸಿದರು.

ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Article Image

ಶ್ರೀ ಧ. ಮಂ. ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಉಜಿರೆ: ಬ್ಯಾಂಕಿಂಗ್‌ ಸಂಸ್ಥೆಗಳು ಜಾಗತಿಕ ಆರ್ಥಿಕತೆಯಲ್ಲಿನ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತಿವೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಾಗುವ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡಾಗ ಇಂದಿನ ಆಧುನಿಕ ಯುಗದಲ್ಲಿ ಬದುಕು ಮತ್ತಷ್ಟು ಸರಾಗವಾಗುತ್ತದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗ, ವ್ಯವಹಾರ ಆಡಳಿತ ವಿಭಾಗ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ಇಂಟರ್ನಲ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸೆಲ್‌ ಸಹಯೋಗದಲ್ಲಿ ಜು.27 ಆಯೋಜಿಸಿದ್ದ ‘ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆಯಲ್ಲಿ ಇತ್ತೀಚಿನ ಪ್ರವೃತ್ತಿಗಳು’ ಕುರಿತ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 1947ರ ಸಮಯದಲ್ಲಿ ಜನರು ಕೇವಲ ರೋಟಿ, ಕಪಡಾ ಮತ್ತು ಮಕಾನ್‌ (ಅಶನ, ವಸನ, ವಸತಿ)ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದರು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರ ಬೇಡಿಕೆಗಳು ಹೆಚ್ಚಾಗಿವೆ. ಆರ್ಥಿಕ ವ್ಯವಸ್ಥೆಯನ್ನು ಸರಾಗಗೊಳಿಸುವಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು ಅನೇಕ ರೀತಿ ಯೋಜನೆಗಳನ್ನು ಮುನ್ನೆಲೆಗೆ ತರುತ್ತಿವೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಅನೇಕ ರೈತರು, ಅನಕ್ಷರಸ್ಥರು ಹಾಗೂ ಗ್ರಾಮೀಣ ಭಾಗದವರು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು. “ವಿದ್ಯಾರ್ಥಿ ಹಂತದಲ್ಲಿ ಈ ರೀತಿಯ ವಿಚಾರ ಸಂಕಿರಣಗಳ ಮೂಲಕ ಮಾಹಿತಿ ನೀಡುವುದು ಉತ್ತಮ ಆಲೋಚನೆ. ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಈ ರೀತಿಯ ಅವಕಾಶಗಳ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಅಬುದಬಿಯ ಝಯದ್‌ ಸಂಸ್ಥೆಯ ಮಾಜಿ ಹಣಕಾಸು ನಿಯಂತ್ರಕ ಸಿಎ ಅಬ್ದುಲ್ಲ ಮಾಡುಮೂಲೆ, “ನಮ್ಮ ಸುತ್ತಮುತ್ತಲಿನ ಬೆಳವಣಿಗೆ ಅರಿತುಕೊಂಡು ನಾವು ಅದಕ್ಕೆ ಹೊಂದಿಕೊಳ್ಳಬೇಕು, ಇಲ್ಲವಾದರೆ ನಮ್ಮ ಉಳಿಯುವಿಕೆ ಕಷ್ಟಸಾಧ್ಯ. ಬದಲಾವಣೆಗಳನ್ನು ಗಮನಿಸಿ ವಿಶ್ಲೇಷಿಸಿ ನಂತರ ಅವುಗಳನ್ನು ಮೈಗೂಡಿಸಿಕೊಳ್ಳುವುದು ಯಶಸ್ಸಿನ ಬಹುದೊಡ್ಡ ಮಾರ್ಗ. ನಿರಂತರ ಕಲಿಕೆ ನಮ್ಮದಾಗಲಿ” ಎಂದರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆಗಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಂಪನ್ಮೂಲ ವ್ಯಕ್ತಿ, ಮುಂಬೈ ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಸಿಎಂಎ ಡಾ. ಕಿನ್ನರಿ ಥಾಕರ್‌, ನಮ್ಮ ಯಶಸ್ಸಿನ ಮಾನದಂಡ ನಾವು ಸಮಾಜಕ್ಕೆ ಎಷ್ಟರ ಮಟ್ಟಿಗೆ ಕೊಡುಗೆ ನೀಡಬಲ್ಲೆವು ಎಂಬುದರ ಮೇಲೆ ನಿಂತಿದೆ. ಬ್ಯಾಂಕಿಂಗ್ ಸಂಸ್ಥೆಗಳು ಸಮಾಜದ ಏಳಿಗೆಗೆ ಅನಿವಾರ್ಯ ಎಂಬುದನ್ನು ನಾವು ಒಪ್ಪಲೇಬೇಕು. ಬ್ಯಾಂಕಿಂಗ್‌ ಕ್ಷೇತ್ರ ಸೇರಿದಂತೆ ಉಳಿದೆಲ್ಲ ಕ್ಷೇತ್ರಗಳು ಸುಸ್ಥಿರ ಯೋಜನೆಗಳನ್ನು ತಮ್ಮದಾಗಿಸಿಕೊಳ್ಳಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ವಾಣಿಜ್ಯ ಕ್ಷೇತ್ರದ ತಜ್ಞರು ಮತ್ತು ಗ್ರಾಹಕರ ನಡುವೆ ಸೇತುವೆ ಕಟ್ಟುವ ಕೆಲಸವಾಗಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಬ್ಯಾಂಕಿಂಗ್ ಕ್ಷೇತ್ರಗಳು ಮತ್ತಷ್ಟು ಮುಂದುವರಿದಿವೆ. ಆದರೆ ತಂತ್ರಜ್ಞಾನದ ನ್ಯೂನತೆಯಿಂದ ಎದುರಾಗುವ ಸೈಬರ್‌ ಕ್ರೈಮ್‌ ನಂತಹ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಬ್ಯಾಂಕಿಂಗ್ ವಿಚಾರದ ಹೊರತಾಗಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಆಯೋಜಿಸಲಾದ ಈ ವಿಚಾರ ಸಂಕಿರಣ ಸೂಕ್ತವಾಗಿದೆ ಎಂದು ಹೇಳಿದರು. ಕಾರ್ಯಕ್ರಮ ಸಂಯೋಜಕರಾದ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶಕುಂತಲಾ, ಶ್ರೀ ಧ. ಮಂ. ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ಸಂಘಟನಾ ಕಾರ್ಯದರ್ಶಿ, ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಶರಶ್ಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್‌. ವಂದಿಸಿದರು. ವಿದ್ಯಾರ್ಥಿನಿ ಕ್ಷಿತಿ ಹಾಗೂ ತಂಡದವರು ಪ್ರಾರ್ಥಿಸಿದರೆ, ವಾಣಿಜ್ಯ ಪ್ರಾಧ್ಯಾಪಕಿಯರಾದ ದೀಕ್ಷಿತ ಕುಮಾರಿ ಮತ್ತು ಫಾತಿಮ ಶಫೀರ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

Article Image

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಎನ್.ಸಿ.ಸಿ. ಭೂದಳ ಮತ್ತು ನೌಕಾದಳ ಘಟಕದ ವತಿಯಿಂದ ಇಂದು (ಜು.26) 25ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, "ಈ ದಿನ ಹುತಾತ್ಮರಾದ ಯೋಧರ ತ್ಯಾಗ ಬಲಿದಾನವನ್ನು ನೆನೆದು, ಯೋಧರ ಜೊತೆಗೆ ಅವರ ಕುಟುಂಬವನ್ನೂ ಸ್ಮರಿಸಬೇಕು. ಪ್ರಜ್ಞಾವಂತ ನಾಗರಿಕರಾಗಿ ದೇಶದ ಏಳಿಗೆ, ಏಕತೆ, ಸಾರ್ವಭೌಮತ್ವವನ್ನು ಹೆಚ್ಚಿಸುವ ಯೋಜನೆ ಮತ್ತು ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ" ಎಂದರು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಎನ್.ಸಿ.ಸಿ. ಕೆಡೆಟ್’ಗಳು ಹುತಾತ್ಮ ಯೋಧರಿಗೆ ರೈಫಲ್ ಸೆಲ್ಯೂಟ್ ಮುಖಾಂತರ ಗೌರವ ಸಲ್ಲಿಸಿದರು. ಕೆಡೆಟ್’ಗಳಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಕಾಲೇಜಿನ ಆಡಳಿತ ಕುಲಸಚಿವ ಡಾ. ಶಲೀಫ್ ಎ. ಪಿ., ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾಕುಮಾರಿ, ಅಸೋಸಿಯೇಟ್ ಎನ್.ಸಿ.ಸಿ. ಅಧಿಕಾರಿ (ಎಎನ್ಒ)ಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಲೆ. ಶುಭಾ ರಾಣಿ, ಕೇರ್ ಟೇಕಿಂಗ್ ಆಫೀಸರ್ (ಸಿಟಿಒ)ಗಳಾದ ಶೋಭಾ, ಹರೀಶ್ ಶೆಟ್ಟಿ, ಹಿರಿಯ ಎಎನ್ಒ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಕೆಡೆಟ್ ಗಳು ಉಪಸ್ಥಿತರಿದ್ದರು. ಕೆಡೆಟ್ ದೀಪ್ತಿ ಆಚಾರ್ಯ ಪಿ. ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

Article Image

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ

ದೇಶಪ್ರೇಮ ಎಂದಾಕ್ಷಣ ಸೇನೆ ಸೇರುವುದು ಮಾತ್ರವಲ್ಲ. ದೇಶದ ಅಭ್ಯುದಯಕ್ಕಾಗಿ ಸಲ್ಲಿಸುವ ಪ್ರತೀ ಕಾರ್ಯಕ್ರಮ ದೇಶಪ್ರೇಮವೆನಿಸುತ್ತದೆ ಎಂದು ಪತ್ರಕರ್ತ ಹಾಗೂ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ನುಡಿದರು. ಅವರು ಶುಕ್ರವಾರ (ಜು. 26) ಶಿವರಾಮ ಕಾರಂತರ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ವರ್ಷದ ಚಟುವಟಿಕೆಗಳು ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಭಾರತದ ಸ್ವಾತಂತ್ರ‍್ಯದ ನಂತರ ಐದು ಪ್ರಮುಖ ಯುದ್ಧಗಳು ನಡೆದಿವೆ. ಪಾಕಿಸ್ತಾನ ನಾಲ್ಕು ಯುದ್ಧಗಳಲ್ಲೂ ನಮ್ಮ ವಿರುದ್ಧ ಗೆಲ್ಲಲಾಗಲಿಲ್ಲ. ಸೈನಿಕರ ಸಾವು ನಮಗೆ ಸ್ವಾಭಾವಿಕ ಸಂಗತಿ ಎಂದೆನಿಸಬಾರದು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಲಿದಾನವನ್ನು ಸ್ಮರಿಸಬೇಕು. ಸೈನಿಕರ ನಿಸ್ವಾರ್ಥ ಸೇವೆ ಮತ್ತು ನಿಷ್ಠೆ ಸದಾ ಸ್ಮರಣೀಯ ಎಂದರು. ಕೆಂಗುರಸೆ ಎಂಬ ಯೋಧ ಘಾತಕ್ ಪ್ಲಟೂನ್ ಸೇರಿ ಹುತಾತ್ಮನಾದ ಮೇಲೆ ನಾಗಲ್ಯಾಂಡ್‌ನಲ್ಲಿ ಸೈನ್ಯದ ಬಗ್ಗೆ ಇದ್ದ ನಕಾರಾತ್ಮಕತೆ ಹೋಗಿ ಹೆಚ್ಚು ಹೆಚ್ಚು ಯುವಕರು ಸೇನೆ ಸೇರುವಂತಾದ ಪ್ರಸಂಗವನ್ನು ವಿವರಿಸಿದರು. ನಮ್ಮ ದೇಶದ ಮೇಲೆ ಎಷ್ಟೇ ದಾಳಿಗಳಾದರೂ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಕಾರ್ಗಿಲ್‌ಯುದ್ಧ ಪಾಕಿಸ್ತಾನ ನಮ್ಮ ಬೆನ್ನಿಗೆ ಹಾಕಿದ ಚೂರಿ. ಕ್ಯಾ.ವಿಕ್ರಂ ಬಾತ್ರ, ರಾಜೇಶ್ ಅಧಿಕಾರಿ, ಕರ್ನಲ್ ರವೀಂದ್ರನಾಥ್ ಸೇರಿ ಹಲವು ಸೈನಿಕರ ಬಲಿದಾನದ ನಂತರ ನಾವು ಕಾರ್ಗಿಲ್ ಕದನ ಗೆದ್ದೆವು. ಮೊದಲ ಬಾರಿ ಈ ದೇಶದಲ್ಲಿ ಯುದ್ಧದ ನಂತರ ಎಲ್ಲಾ ಹುತಾತ್ಮರ ದೇಹಗಳನ್ನು ಮನೆಗೆ ತಲುಪಿಸುವ ಕೆಲಸ ನಡೆಯಿತು. ಹಾಗೆಯೇ ಅದರ ಮೂಲಕ ಭಾವನಾತ್ಮಕವಾಗಿ ಭಾರತವನ್ನು ಬೇಸೆಯೋ ಕೆಲಸವಾಯಿತು. ಇಂದಿಗೂ ಯುದ್ಧ ನಿಂತಿಲ್ಲ ಆದರೆ ಯುದ್ಧದ ರೂಪ ಬದಲಾಗಿದೆ ಎಂದರು. ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಮುನಿರಾಜ ರೆಂಜಾಳ ರಾಷ್ಟ್ರೀಯ ಸೇವಾ ಯೋಜನೆಯ 2024-25ನೇ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ವೃತ್ತಿಯಲ್ಲಿ ನಿವೃತ್ತರಾದ ಪ್ರತಿಯೊಬ್ಬರಿಗೂ ಅವರ ಹಿಂದಿನ ವೃತ್ತಿಯ ಬಗ್ಗೆ ಆಸಕ್ತಿ ಇರುತ್ತದೆ. ನಾನು ಕಳೆದ 40 ವರ್ಷದಿಂದ ಎನ್.ಎಸ್.ಎಸ್. ಸಂಪರ್ಕದಲ್ಲಿದ್ದೇನೆ. ವಿಶ್ವಮಾನವನಾಗಿಸುವ ವೇದಿಕೆ ಯಾವುದಾದರೂ ಇದ್ದರೆ ಅದು ರಾ.ಸೇ.ಯೋ ಎಂದರು. ಒಂದು ಕೆಲಸವನ್ನು ಆರಂಭಿಸಿದ ನಂತರ ಅದಕ್ಕೆ ಪೂರಕವಾದ ಶ್ರಮ ಮತ್ತು ನಿರಂತರತೆ ಅಗತ್ಯ. ಈಗಿನ ಮಕ್ಕಳಲ್ಲಿ ಕಷ್ಟದ ಪರಿಚಯ ಇಲ್ಲ, ಹೊಂದಾಣಿಕೆಯೂ ಇಲ್ಲ. ಶ್ರಮಪಟ್ಟಾಗ ಮಾತ್ರ ಸುಂದರ ಜೀವನವನ್ನು ರೂಪಿಸಿಕೊಳ್ಳುಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಜೀವನದಲ್ಲಿ ಶಿಸ್ತುತನ್ನು ಪಾಲಿಸಬೇಕು. ತರಗತಿ ಹೊರಗಿನ ಶಿಕ್ಷಣ ಅದು ನಿಜವಾದ ಶಿಕ್ಷಣ. ಪ್ರಾಮಾಣಿಕವಾಗಿ ಕೆಲಸ ಮಾಡಿ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಿ. ಆಗ ಮಾತ್ರ ಜೀವನದಲ್ಲಿ ಯಶಸ್ಸುನ್ನು ಸಾದಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ಚಿ ಪ್ಳೂಣಕರ್ ಉಪಸ್ಥಿತರಿದ್ದರು. ರಾಷ್ಟೀಯ ಸೇವಾ ಯೋಜನೆಯ ಸಂಯೋಜಕ ಧರ್ಮೇಂದ್ರ ಕುದ್ರೋಳಿ ಸ್ವಾಗತಿಸಿ, ಗಣಪತಿ ನಾಯಕ್ ವಂದಿಸಿ, ಶಾಲೆಟ್ ಮೋನೀಸ್ ನಿರೂಪಿಸಿದರು.

ಉಜಿರೆ: ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ

Article Image

ಉಜಿರೆ: ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ

“ಗಿಡಗಳನ್ನು ಸಂರಕ್ಷಿಸುವ ಹೊಣೆಗಾರಿಕೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು” ಎಂದು ನಾಟಿ ವೈದ್ಯ ಪರಿಣತ, ಉಜಿರೆಯ ಧ.ಮಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮಾಜಿ ಸಿಬ್ಬಂದಿ ಸದಾನಂದ ಬಿ. ಮುಂಡಾಜೆ ಹೇಳಿದರು. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಸಂಘ ಮತ್ತು ಇಕೋ ಕ್ಲಬ್ ಇಂದು (ಜು.19) ಆಯೋಜಿಸಿದ್ದ ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತನ್ನ ಬೇರುಗಳ ಮೂಲಕ ನೀರನ್ನು ಹೀರಿಕೊಂಡು ಹೂ ಹಣ್ಣು ಇವನ್ನೆಲ್ಲ ನೀಡುವ ಯಾವುದೇ ಗಿಡ ಮರ ಬಳ್ಳಿಗಳು ಪ್ರಪಂಚದಲ್ಲಿ ಶ್ರೇಷ್ಠವಾದದ್ದು. ಹಲವಾರು ರೋಗಗಳನ್ನು ನಿವಾರಿಸುವಲ್ಲಿ ಸಸ್ಯಗಳ ಪಾತ್ರ ಬಹಳ ಮುಖ್ಯವಾದಂತದ್ದು. ಅಂತಹ ಗಿಡ ಮರಗಳನ್ನು ಉಳಿಸುವ ಉತ್ಸಾಹ ಅಗತ್ಯ ಎಂದು ಅವರು ಹೇಳಿದರು. ಒಂದು ರೋಗ ಬರಲು ಮನಸ್ಸು ಕಾರಣ. ಆ ರೋಗ ಗುಣವಾಗಲು ಕೂಡ ಮನಸ್ಸೇ ಕಾರಣ. ಹೀಗಾಗಿ ಔಷಧ ಕೊಡುವವನು ಮತ್ತು ತೆಗೆದುಕೊಳ್ಳುವವನ ಮಧ್ಯೆ ನಂಬಿಕೆ ಇದ್ದಾಗ ಮಾತ್ರ ಔಷಧ ಫಲಿಸುತ್ತದೆ ಎಂದು ಅವರು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ಪ್ರಕೃತಿಯಲ್ಲಿರುವ ಯಾವುದೇ ಗಿಡಗಳಲ್ಲಿ ಒಂದಲ್ಲ ಒಂದು ಔಷಧೀಯ ಗುಣ ಇದ್ದೇ ಇರುತ್ತದೆ. ಸಸ್ಯಗಳನ್ನು ಪ್ರೀತಿಸಿ, ಅವುಗಳೊಂದಿಗೆ ಮಾತನಾಡಿ. ಅವುಗಳು ಸ್ಪಂದಿಸುವ ಗುಣ ಹೊಂದಿವೆ” ಎಂದರು. ವಿಭಾಗದ ಭಿತ್ತಿಪತ್ರಿಕೆ ‘ಸಸ್ಯಸೌರಭ’ದ ‘ಹರ್ಬಲ್ಸ್ ದ್ಯಾಟ್ ಹೀಲ್’ ಸಂಚಿಕೆ ಅನಾವರಣಗೊಳಿಸಲಾಯಿತು. ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಥಮ್ ಪ್ರಾರ್ಥಿಸಿದರು. ನಯನ ಕೆ. ಸ್ವಾಗತಿಸಿ, ಲಾವಣ್ಯ ವಂದಿಸಿ, ವೈದೇಹಿ ನಿರೂಪಿಸಿದರು.

ಶಿಷ್ಯವೇತನ: ಅರ್ಜಿ ಆಹ್ವಾನ

Article Image

ಶಿಷ್ಯವೇತನ: ಅರ್ಜಿ ಆಹ್ವಾನ

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ಪದವಿ, ಡಿಪ್ಲೊಮಾ ಮತ್ತು ವೃತ್ತಿಪರ ಪದವಿವರೆಗೆ ರಾಜ್ಯದಲ್ಲಿರುವ ಹಾಗೂ ಸರಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಗಳಲ್ಲಿ ಕಲಿಯುತ್ತಿರುವ ರಾಜ್ಯದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. 1ನೇ ತರಗತಿಯಿಂದ ಅಂತಿಮ ವರ್ಷದ ಪದವಿ ಹಾಗೂ ಡಿಪ್ಲೊಮಾವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆ.15 ಹಾಗೂ ವೃತ್ತಿಪರ ಪದವಿ ವಿದ್ಯಾರ್ಥಿಗಳು ಅ.15ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

Article Image

ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ

ಉಜಿರೆ, ಜು. 23: ಯುವಜನತೆ ಕ್ಷುಲ್ಲಕ ಕಾರಣಗಳಿಗಾಗಿ ಅತಿರೇಕದ ಕ್ರಮಗಳನ್ನು ಕೈಗೊಳ್ಳುವುದು ಬಹಳ ನೋವಿನ ಸಂಗತಿ ಎಂದು ಮಂಗಳೂರು ಉತ್ತರ ವಲಯದ ಸಹಾಯಕ ಪೊಲೀಸ್ ಆಯುಕ್ತ, ಉಜಿರೆ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮನೋಜ್ ಕುಮಾರ್ ನಾಯಕ್ ಹೇಳಿದರು. ಉಜಿರೆ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಇಂದು (ಜು.23) 2024-25ನೇ ಸಾಲಿನ ವಿದ್ಯಾರ್ಥಿ ಸಂಘ(Students' Council 2024-25)ದ ವಿವಿಧ ವಿದ್ಯಾರ್ಥಿ ಚಟುವಟಿಕೆ ವೇದಿಕೆ(Students' Activity Fora)ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಯಶಸ್ವಿಯಾಗಲು ವಿಫಲವಾದ ಕೂಡಲೇ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಪ್ರಸ್ತುತ ಯುವಜನತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದೆವೆಂದು, ಪೋಷಕರು ಫೋನ್ ಕೊಡಿಸಲಿಲ್ಲ ಎಂಬ ಇತ್ಯಾದಿ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆಯಂತಹ ಅತಿರೇಕದ ಕ್ರಮಕ್ಕೆ ಮುಂದಾಗುವುದನ್ನು ಕಂಡಾಗ ನೋವಾಗುತ್ತದೆ. ವೈಫಲ್ಯ ಮತ್ತು ಒತ್ತಡವನ್ನು ನಿಭಾಯಿಸಲು ಕಲಿಯಿರಿ” ಎಂದು ಅವರು ಹೇಳಿದರು.“ವೈಫಲ್ಯಗಳನ್ನು ಸ್ವೀಕರಿಸಿ. ಪರಿಹಾರವಿಲ್ಲದ ಸಮಸ್ಯೆಯೇ ಇಲ್ಲ. ಸಮಸ್ಯೆಯಿಂದ ದೂರ ಓಡಬೇಡಿ, ಎದುರಿಸಿ. ಒಂದೋ ಯಶಸ್ಸು ಸಿಗಬಹುದು ಇಲ್ಲವೇ ವಿಫಲವಾದರೆ ಅನುಭವ ದೊರಕಬಹುದು. ಒತ್ತಡದ ಸಂದರ್ಭದಲ್ಲಿಯೇ ನಮ್ಮಿಂದ ಅತ್ಯುತ್ತಮ ಫಲಿತಾಂಶ ಲಭಿಸುತ್ತದೆ. ದೇವರು ಕಷ್ಟದ ಸಂದರ್ಭಗಳನ್ನು ನೀಡುತ್ತಿದ್ದಾನೆಂದರೆ ನಿಮ್ಮಿಂದ ಏನೋ ಸಾಧನೆ ಆಗುವುದರಲ್ಲಿದೆ ಎಂದರ್ಥ” ಎಂದರು. ಯುವಜನತೆ ಮಾದಕ ದ್ರವ್ಯಗಳ ದಾಸರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಕಾಲೇಜಿಗೆ, ಹುಟ್ಟಿದ ಊರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ, ಪೋಷಕರಿಗೆ ಉತ್ತಮ ಮಕ್ಕಳಾಗಿ. ದ್ವಿಚಕ್ರ ವಾಹನ ಓಡಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಎಷ್ಟು ಮುಖ್ಯವೋ ಶಿಸ್ತು ಸಹ ಅಷ್ಟೇ ಮುಖ್ಯ. ಎಸ್.ಡಿ.ಎಂ. ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳಿಗಷ್ಟೇ ಅಲ್ಲದೆ, ಮೌಲ್ಯ, ಕೌಶಲವೃದ್ಧಿಗೆ ಹೇರಳ ಅವಕಾಶವಿದೆ. ಸಾವಿರಾರು ಕನಸು ಹೊತ್ತು ಇಲ್ಲಿ ಬಂದಿದ್ದೀರಿ, ಒಳ್ಳೆಯ ಜಾಗಕ್ಕೆ ಬಂದಿದ್ದೀರಿ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನ ಮುಂದುವರಿಸಿ” ಎಂದು ಅವರು ಸಲಹೆ ನೀಡಿದರು. ಮುಖ್ಯ ಅತಿಥಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿದರು. ನಾಯಕತ್ವವೆಂಬುದು ರಾಜಕೀಯಕ್ಕೆ ಸೀಮಿತವಲ್ಲ. ಜೀವನದಲ್ಲಿ ನಾಯಕತ್ವ ಮುಖ್ಯ. ಶಿಕ್ಷಣದ ಸಂದರ್ಭದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘಗಳು ನೆರವಾಗುತ್ತವೆ ಎಂದು ಅವರು ತಿಳಿಸಿದರು. “ಒಬ್ಬ ಗುರುವಿಗೆ ಖುಷಿ ಸಿಗುವುದು ತನ್ನ ವಿದ್ಯಾರ್ಥಿ ಶ್ರೇಷ್ಠ ಸಾಧನೆ ಮಾಡಿದಾಗ. ನಮ್ಮ ಸಂಸ್ಥೆಯಲ್ಲಿ ಕಲಿತ ಮನೋಜ್ ಕುಮಾರ್ ನಾಯಕ್ ಶಿಸ್ತು, ಪರಿಶ್ರಮ ಹಾಗೂ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘಗಳಿಂದ ವಿದ್ಯಾರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಸಿದ್ಧಾಂತಗಳಿಂದ ಪ್ರೇರಿತರಾಗಿ ಪರಸ್ಪರ ಹೊಡೆದಾಟ, ವೈಷಮ್ಯದಿಂದ ಇರುವುದರ ಬದಲು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದು, ವ್ಯಕ್ತಿತ್ವ ವಿಕಸನ ಹೊಂದಬೇಕು ಎಂಬ ಉದ್ದೇಶದಿಂದ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಅವರ ಪರಿಕಲ್ಪನೆಯಂತೆ ವಿಭಿನ್ನ ರೀತಿಯಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ 'ಚಿಗುರು' ಹಾಗೂ ಉದ್ಘಾಟನಾ ಸಮಾರಂಭದ ಚಿತ್ರಣಗಳನ್ನೊಳಗೊಂಡ 'ಚಿಗುರು' ಭಿತ್ತಿಪತ್ರಿಕೆ ಬಿಡುಗಡೆಗೊಂಡಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೇಯಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ‌ ಅಧ್ಯಕ್ಷ, ತೃತೀಯ ಬಿಸಿಎ ವಿದ್ಯಾರ್ಥಿ ಸುದೇಶ್ ಸ್ವಾಗತಿಸಿದರು. ವೈದೇಹಿ ಮತ್ತು ತಂಡದವರು ಪ್ರಾರ್ಥಿಸಿದರು. ಧರಿತ್ರಿ ಭಿಡೆ ಅತಿಥಿ ಪರಿಚಯ ನೀಡಿದರು. ವೀಕ್ಷಾ ವಂದಿಸಿದರು. ಮಾನಸ ಅಗ್ನಿಹೋತ್ರಿ ಮತ್ತು ರುಚಿರಾ ನಿರೂಪಿಸಿದರು.

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ

Article Image

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ

ವಿದ್ಯಾರ್ಥಿಗಳು ಸದಾ ಮಾತೃಭೂಮಿಯನ್ನು ಗೌರವಿಸಬೇಕು. ಪ್ರಜಾಪ್ರಭುತ್ವ ಹಾಗೂ ರಾಜಕೀಯದ ಅರಿವು ನಿಮಗಿರಬೇಕು. ಚುನಾವಣೆ ಮತ್ತು ಅದರ ನಿಯಮಗಳನ್ನು ತಿಳಿಯುವುದರೊಂದಿಗೆ ಮತದಾನದ ಮಹತ್ವವನ್ನು ಪ್ರತಿಯೊಬ್ಬ ಪ್ರಜೆಯು ಅರಿಯುವಂತಾಗಬೇಕು. ಎಂದಿಗೂ ಮತವನ್ನು ಹಣಕ್ಕಾಗಿ ಮಾರಿಕೊಳ್ಳಬಾರದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನರು ಎಲ್ಲರಿಗೂ ತಮಗಿಷ್ಟವಾದ ಅಭ್ಯರ್ಥಿಗೆ ಮತ ನೀಡುವ ಹಕ್ಕಿದೆ. ಅದನ್ನು ಪ್ರತಿಯೊಬ್ಬರು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮನ್ನು ಆಳುವ ನಾಯಕರು ನಮ್ಮ ಸಮಸ್ಯೆಗಳಿಗೆ ಅಗತ್ಯತೆಗಳಿಗೆ ಸ್ಪಂದಿಸುವಂತಿರಬೇಕು. ಇಲ್ಲವಾದರೆ ಪ್ರಶ್ನಿಸುವ ಅಧಿಕಾರ ನಮಗಿದೆ ಅದನ್ನು ನಾವು ಮಾಡಬೇಕು. ನಾಯಕರನ್ನ ಆಯ್ಕೆ ಮಾಡಿದ ನಂತರ ಸುಮ್ಮನೆ ಕುಳಿತುಕೊಳ್ಳಬೇಡಿ. ನಾಯಕನಾದವನು ನಿಯಮಗಳನ್ನು ಮಾನವೀಯ ಮೌಲ್ಯಗಳನ್ನು ಗೌರವಿಸುವಂತವನಾಗಬೇಕು. ಅವರು ಮಾಡುವ ತಪ್ಪುಗಳನ್ನು ನೇರವಾಗಿ ಅವರಿಗೆ ತಿಳಿಸುವುದು ಪ್ರಜೆಗಳಾದ ನಿಮ್ಮ ಕರ್ತವ್ಯವಾಗಿದೆ. ವಿರೋಧ ಪಕ್ಷದ ನಾಯಕನಾದವನು ಆಡಳಿತ ಪಕ್ಷದ ಆಡಳಿತವನ್ನು ಸದಾ ವೀಕ್ಷಿಸುತ್ತಿರಬೇಕು. ಅವರ ಆಡಳಿತದಲ್ಲಿನ ತಪ್ಪುಗಳನ್ನು ಗುರುತಿಸಿ ಸರಿಪಡಿಸುವ ಅಧಿಕಾರ ಅವರಿಗಿರುತ್ತದೆ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವತ್ತ ನಿಮ್ಮ ಪ್ರಯತ್ನವಿರಲಿ ನಿಮ್ಮ ಬಗ್ಗೆ ನಿಮಗೆ ಭರವಸೆ ಇರಲಿ. ಸಮಾಜದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಿ ಎಂದು ಬೆಳ್ತಂಗಡಿಯ ಪ್ರಸಿದ್ಧ ವಕೀಲರಾದ ರೊ. ಬಿ.ಕೆ. ಧನಂಜಯ ರಾವ್ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತಿನ ಉದ್ಘಾಟನೆ ನೆರವೇರಿಸಿ ಮಾತನಾಡಿ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ತುಂಬಾ ಮುಖ್ಯವಾದದ್ದು. ಮತದಾನ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಅಂತಹ ಶಾಲಾ ಸಂಸತ್ತಿಗೆ ಸಂಬಂಧಿಸಿದ ಚುನಾವಣೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲ್ಗೊಂಡಿದ್ದೀರಿ. ಈ ಮೂಲಕ ನಮ್ಮ ಸಂವಿಧಾನ, ಆಡಳಿತದ ಬಗ್ಗೆ ಈ ಹಂತದಲ್ಲಿ ಅರಿವನ್ನು ಮಾಡಿಸಿಕೊಳ್ಳಬೇಕು. ಒಬ್ಬ ಉತ್ತಮ ನಾಯಕನಾಗುವ ಸಾಮರ್ಥ್ಯ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ಬೇಕಾದ ಮೌಲ್ಯಗಳನ್ನು ಜ್ಞಾನವನ್ನು ಆತ್ಮ ವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಪ್ರತಿ ದಿನ ಹೊಸತನ್ನು ಕಲಿಯುತ್ತೀರಿ. ಒಳ್ಳೆಯ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿ ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ಸಚಿವರುಗಳಿಗೆ ಶುಭ ಹಾರೈಸಿದರು. ಮುಖ್ಯೊಪಾಧ್ಯಾಯರಾದ ಶಿವಪ್ರಸಾದ್ ಭಟ್ ನೂತನ ವಿದ್ಯಾರ್ಥಿ ಸಚಿವರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಮುಖ್ಯೋಪಾಧ್ಯಾಯರಾದ ಜಯಶೀಲ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ದಾಮೋದರ್ ಸಚಿವರುಗಳಿಗೆ ಖಾತೆಗಳನ್ನು ಹಂಚಿದರು, ಶಾಲಾ ಸಂಸತ್ತಿನ ನಾಯಕನಾಗಿ ಶಶಾಂಕ್ ಎ.ಸಿ., ವಿರೋಧ ಪಕ್ಷದ ನಾಯಕನಾಗಿ ಗ್ಯಾನ್ ಕೆ. ಕಾಳೆ, ಸಭಾಪತಿಯಾಗಿ ಯಶಸ್ವಿನಿ, ಉಪ ನಾಯಕಿ ಚಿನ್ಮಯಿ ಅರುಣ್, ಕ್ರೀಡೆ- ಮನ್ವಿತ್ ರಾಜ್ ಜೈನ್, ಆರೋಗ್ಯ- ಲಿಖಿತ್ ಗೌಡ, ಸಾಂಸ್ಕೃತಿಕ- ಸೋನಿಕ, ಶಿಸ್ತು- ತ್ರಿಶೂಲ್, ಆಹಾರ- ಧ್ರುತಿ ಪಾಟೀಲ್, ಪರಿಸರ- ಜೋವಿನ್, ಜಲ ಮತ್ತು ವಿದ್ಯುತ್- ಖಾತೆಗಳ ಸಚಿವರಾಗಿ ಧನ್ಯತಾ ಆಯ್ಕೆಗೊಂಡರು. ವಿದ್ಯಾರ್ಥಿನಿ ಅದಿತಿ ಕಾರ್ಯಕ್ರಮವನ್ನು ನಿರೂಪಿಸಿದರು.

“ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ” ಎಂಬ ವಿಷಯದ ಕಾರ್ಯಾಗಾರ

Article Image

“ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ” ಎಂಬ ವಿಷಯದ ಕಾರ್ಯಾಗಾರ

ಸತ್ತೂರು, ಧಾರವಾಡ: ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ಶಿಕ್ಷಣ ಘಟಕವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಾಂತೀಯ ನೋಡಲ್ ಕೇಂದ್ರ, ಜೆ.ಎನ್.ಎಂ.ಸಿ. ಬೆಳಗಾವಿಯ ಸಹಯೋಗದೊಂದಿಗೆ ಜುಲೈ 16 ರಿಂದ 18, 2024ರ ವರೆಗೆ “ವೈದ್ಯಕೀಯ ಶಿಕ್ಷಣದಲ್ಲಿ ಅಧ್ಯಯನ” ಎಂಬ ವಿಷಯದ ಮೇಲೆ 3 ದಿನಗಳ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಈ ಕಾರ್ಯಾಗಾರವು ಅಧ್ಯಾಪಕರಿಗೆ, ಹೊಸ ಬೋಧನೆಯ ಮತ್ತು ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಸಹಕಾರಿಯಾಗಿದ್ದು, ಈ ಕಾರ್ಯಾಗಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದಿಸಲ್ಪಟ್ಟಿದೆ. ಅಧ್ಯಾಪಕರು ತಮ್ಮ ದೈನಂದಿನ ಜ್ಞಾನವನ್ನು ನವೀಕರಿಸಲು ಇದು ಉತ್ತಮ ವೇದಿಕೆಯಾಗಿದೆ. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ಅಧ್ಯಕ್ಷರಾದ ಡಾ. ರತ್ನಮಾಲಾ ಎಂ. ದೇಸಾಯಿ, ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಶ್ರೀ ಸಾಕೇತ್ ಶೆಟ್ಟಿ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಜೆ.ಎನ್.ಎಂ.ಸಿಯ, ಎನ್.ಎಂ.ಸಿ. ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕರಾದ ಡಾ. ಜ್ಯೋತಿ ನಾಗಮೋತಿ, ಮತ್ತಿತರರು ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಡಾ. ನಿರಂಜನ್ ಕುಮಾರ ಮತ್ತು ಡಾ. ಜ್ಯೋತಿ ನಾಗಮೋತಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ: ಪರಿಣಾಮಕಾರಿ ಬೋಧನೆಯು ವಿದ್ಯಾರ್ಥಿಗಳನ್ನು ಪರಿವರ್ತಿಸಿ ಪ್ರಬುದ್ಧಗೊಳಿಸುತ್ತದೆ. ಡಿಜಿಟಲ್ ಜ್ಞಾನದ ಕಡೆ ವಿದ್ಯಾರ್ಥಿಗಳು ಬದಲಾಗುತ್ತಿರುವುದು ಕಳಕಳಿಯ ವಿಷಯ. ಬೋಧನೆಯನ್ನು ಆಸಕ್ತಿದಾಯಕ ಮತ್ತು ಸಂವಾದಾತ್ಮಕವಾಗಿ ಮಾಡುವ ಅನಿವಾರ್ಯತೆ ಇದೆ. ಹೊಸ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸುವುದೇ ಶಿಕ್ಷಣದ ಈಗಿನ ಪ್ರಾಶಸ್ತ್ಯವಾಗಿದೆ. ಕಠಿಣ ತರಬೇತಿಯಿಂದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣವನ್ನು ಸರಳಗೋಳಿಸಬಹುದು. ದೃಢ ನಿರ್ಧಾರ ಮತ್ತು ದಿಟ್ಟತನದಿಂದ ಯಾವುದೇ ಭಯವಿಲ್ಲದೆ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು. ವೈದ್ಯಕೀಯ ಶಿಕ್ಷಣದಲ್ಲಿ ನವೀನ ಕೌಶಲ್ಯಗಳ ತರಬೇತಿ ಮತ್ತು ಹೊಸ ಜ್ಞಾನಗಳ ಅಗತ್ಯವಿದೆ. ಔಷಧಗುಣ ಶಾಸ್ತ್ರದ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ರಾಧಿಕಾ ಶೇರ್ಖಾನೆ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ರತ್ನಮಾಲಾ ದೇಸಾಯಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಆದಿತ್ಯಾ ಅಗ್ನಿಹೋತ್ರಿ ಕಾರ್ಯಕ್ರವನ್ನು ನಿರೂಪಿಸಿದರು. ಡಾ. ರಾಕೇಶ ನಾಯಕ ವಂದನಾರ್ಪಣೆ ಸಲ್ಲಿಸಿದರು.

ಉಜಿರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

Article Image

ಉಜಿರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಜನಸಂಖ್ಯಾ ಸ್ಪೋಟದಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ. ಎಲ್ಲರಿಗೂ ಆಹಾರ, ನೆಲ, ಜಲ, ಹಾಗೂ ಪರಿಶುದ್ಧವಾದ ಗಾಳಿ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆಯಾಗಿ ನಾವು ಇತರ ಗ್ರಹಗಳಿಗೆ ವಾಸ್ತವ್ಯಕ್ಕೆ ಹೋಗಬೇಕಾದ ಅನಿವಾರ್ಯತೆ ಒದಗಿ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು ಹೇಳಿದರು. ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಹಾಗೂ ಉಜಿರೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವಜನಸಂಖ್ಯಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತದಲ್ಲಿ ಪ್ರತಿದಿನ 73,781 ರಷ್ಟು ಜನಸಂಖ್ಯೆ ಹೆಚ್ಚಾಗುತ್ತಿದೆ. ಜನಸಂಖ್ಯಾ ಸ್ಪೋಟದ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಚಿಕ್ಕ ಸಂಸಾರವೇ ಚೊಕ್ಕ ಸಂಸಾರವಾಗಿದ್ದು, ಸಂತಾನ ನಿಯಂತ್ರಣ ಅನಿವಾರ್ಯವಾಗಿದೆ. ಮಹಿಳೆ ಆರೋಗ್ಯವಂತಳಾದರೆ, ಕುಟುಂಬ ಹಾಗೂ ಸಮಾಜವೂ ಆರೋಗ್ಯವಂತವಾಗಿರುತ್ತದೆ. ಮಕ್ಕಳ ಜನನದ ನಡುವಿನ ಅಂತರ ಕನಿಷ್ಠ ಮೂರು ವರ್ಷಗಳಾದರೂ ಇರಬೇಕು. ಇಂದು 144 ಕೋಟಿ ಜನಸಂಖ್ಯೆಯೊಂದಿಗೆ ಭಾರತ ಪ್ರಥಮ ಸ್ಥಾನದಲ್ಲಿರುವುದು ಪ್ರಗತಿಯ ದ್ಯೋತಕವಲ್ಲ. ಜನಸಂಖ್ಯಾ ಸ್ಪೋಟದ ನಿಯಂತ್ರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಆರೋಗ್ಯವಂತ ಯುವಜನತೆಯಿಂದ ದೇಶದ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಸಮಾರಂಭವನ್ನು ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಷಾಕಿರಣ ಕಾರಂತ ಮಾತನಾಡಿ ಗ್ರಾಮೀಣ ಪ್ರದೇಶದ ಮಹಿಳೆಯರು ಇನ್ನೂ ಹೆಚ್ಚು ಸಬಲೀಕರಣಗೊಳ್ಳಬೇಕಾಗಿದೆ. ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರು ನೀಡುವ ಮಾಹಿತಿ, ಮಾರ್ಗದರ್ಶನದ ಸದುಪಯೋಗ ಪಡೆದು ಹಾಗೂ ಸರ್ಕಾರದ ಸವಲತ್ತುಗಳ ಬಳಕೆಯೊಂದಿಗೆ ಮಹಿಳೆಯರು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಅವರು ಸಲಹೆ ನೀಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಶುಭಾಶಂಸನೆ ಮಾಡಿ, ದೇಶದ ಪ್ರಬಲ ಶಕ್ತಿಯಾದ ಯುವಜನತೆ ಎಲ್ಲಾ ಆಯಾಮಗಳಲ್ಲಿಯೂ ಸದೃಢರಾದಾಗ ದೇಶದ ಸರ್ವತೋಮುಖ ಪ್ರಗತಿಯಾಗುತ್ತದೆ. ನೌಕರರ ಕೊರತೆ ಇದ್ದರೂ ಸರ್ಕಾರಿ ಅಧಿಕಾರಿಗಳ ಕರ್ತವ್ಯಪ್ರಜ್ಞೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವದ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ದ.ಕ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೌಜನ್ಯ ಮತ್ತು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞೆ ಡಾ. ರಶ್ಮಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು. ಡಾ. ಮಂಜು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ. ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು: ತೇಜಸ್ ವಿ.ಎಸ್., ಸರ್ಕಾರಿ ಪದವಿಪೂರ್ವ ಕಾಲೇಜು, ವೇಣೂರು (ಪ್ರಥಮ). ಧನುಷ್, ಕೆ.ಎನ್. ಮುಂಡಾಜೆ ಪದವಿಪೂರ್ವ ಕಾಲೇಜು, ಮುಂಡಾಜೆ (ದ್ವಿತೀಯ). ಫಾತಿಮತ್ ಹಿಸಾನಾ, ಸಕಾಋಇ ಪದವಿಪೂರ್ವ ಕಾಲೇಜು ಕೊಯ್ಯೂರು. ಬೆಳ್ತಂಗಡಿ ತಾಲ್ಲೂಕು ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರು. ಫಾತಿಮತ್ ಸುಮಯ್ಯ, ಸರ್ಕಾರಿ ಪದವಿಪೂರ್ವ ಕಾಲೇಜು ವೇಣೂರು (ಪ್ರಥಮ), ಕುಮಾರಿ ಸುರಕ್ಷಿತಾ, ವಾಣಿ ಪದವಿಪೂರ್ವ ಕಾಲೇಜು, ಬೆಳ್ತಂಗಡಿ (ದ್ವಿತೀಯ), ಕುಮಾರಿ ಜೆನಿತಾ ಪಿರೇರಾ, ಸರ್ಕಾರಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ (ತೃತೀಯ) ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸ್ವಾಗತಿಸಿದರು. ವಿಭಾಗ ಯೋಜನಾಧಿಕಾರಿ ಅಜೇಯ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.

ಸಿ.ಎ. ಅಂತಿಮ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

Article Image

ಸಿ.ಎ. ಅಂತಿಮ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ

2024 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜಾ, ಪ್ರೀತಿಶ್ ಕುಡ್ವಾ, ಜೊನಿಟಾ ಜೋಶ್ನಿ ಸೋಜಾ ಡಿ, ಸಾಹುಲ್ ಹಮೀದ್, ಅನುಷಾ ಹೆಗ್ಡೆ, ಮೆಲ್ವಿನ್ ಜೋಸ್ವಿನ್ ಲೋಬೋ, ಪಲ್ಲವಿ ಹೆಚ್ ಆರ್, ಪ್ರಜ್ವಲ್, ವಿಲಿಟಾ ಆಲ್ವಿಶಾ ರೇಗೊ, ಆಂಚಲ್, ಸುಷ್ಮಾ ಎನ್, ಕಿರಣ್ ಚಂದ್ರಶೇಖರ್ ಶೇರಿಗಾರ್, ರೋಯ್ಡನ್, ಕೌಶಿಕ್, ಕಿರಣ್ ಭಾರಧ್ವಜ್, ರಜತ್ ಜೈನ್, ಶುಭಂಕರ್, ರಾಕೇಶ್, ಪ್ರಖ್ಯಾತ್, ಪವನ್, ನಾಗರಾಜ್ ಜಿ ಶೆಟ್ಟಿ, ಹೇಮಂತ್ ಕುಮಾರ್ ಡಿ.ಕೆ. , ಶ್ರೀನಿಧಿ ಎಸ್ ಶೆಟ್ಟಿ, ಖುಶ್ಬೂ ಮತ್ತು ಗೀತಾ ನಿಶಾ ಪಿರೇರಾ - ಒಟ್ಟು 25 ವಿದ್ಯಾರ್ಥಿಗಳು, ಹಾಗೂ ಜನವರಿ 2024ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಕ್ಲರ‍್ಸನ್, ಮೇಘಾ, ತೇಜಸ್, ವಾಣಿಶ್ರೀ, ಧಾಮಿನಿ, ದರ್ಶನ್ ಜಿ ಎಚ್, ಪ್ರಸಾದ, ನೌಫಾಲ್, ಅಂಕಿತಾ ಕಲ್ಲಪ್ಪ, ರಾಷ್ಟ್ರೀತ್ ಸಿ.ಜಿ, ಅವಿನಾಶ್, ಸುಕ್ಷ್ಮಾ, ಅಭಿಷೇಕ್ ಚೋಟಿ ಸೇರಿದಂತೆ 13 ವಿದ್ಯಾರ್ಥಿಗಳು, ಒಟ್ಟು ಈ ವರ್ಷದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಣನೀಯ ಸಾಧನೆ ಮೆರೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಉಚಿತ ಶಿಕ್ಷಣವನ್ನು ಪಡೆದವರಾಗಿದ್ದಾರೆ. ಇವರಲ್ಲಿ 10 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯ ಗ್ರೂಪ್-01 ಮತ್ತು ಗ್ರೂಪ್-02 ಎರಡೂ ವಿಭಾಗಗಳನ್ನು ಪ್ರಥಮ ಪ್ರಯತ್ನದಲ್ಲೆ ಉತ್ತೀರ್ಣರಾಗಿ ಈ ಸಾಧನೆ ಮೆರೆದಿದ್ದಾರೆ.

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮೈಂಡ್ ಮ್ಯಾಪಿಂಗ್ ಕಾರ್ಯಾಗಾರ

Article Image

ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಮೈಂಡ್ ಮ್ಯಾಪಿಂಗ್ ಕಾರ್ಯಾಗಾರ

ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೈಂಡ್ ಮ್ಯಾಪಿಂಗ್ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ರಿಯಾಗಿ ಮನಶಾಸ್ತ್ರಜ್ಞ, ಮೈಂಡ್ ಟ್ರೈನರ್ ಆಗಿರುವ ಮಂಗಳೂರಿನ ಪಿಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ಸರ್ಫ್ರಾಜ್ ಜೆ. ಹಾಶಿಮ್ ಆಗಮಿಸಿದ್ದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ನಮ್ಮ ಸುಪ್ತ ಮನಸ್ಸಿಗೆ ಅದ್ಭುತವಾದ ಸಾಮರ್ಥ್ಯವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಜೀವನದಲ್ಲಿ ನಾವು ಇಟ್ಟ ಗುರಿಯನ್ನು ತಲುಪಬಹುದು. ಋಣಾತ್ಮಕ ಆಲೋಚನೆಗಳು ಬಂದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸಲು ಧನಾತ್ಮಕ ಆಲೋಚನೆಗಳನ್ನು ಮಾಡಬೇಕು. ನಮ್ಮ ಮನಸ್ಸು ನಮ್ಮ ಸ್ಥಿಮಿತದಲ್ಲಿದ್ದಲ್ಲಿ ಮಾತ್ರ ಹೊರಗಿನ ಪ್ರಪಂಚದಲ್ಲಿ ಏನೇ ಅನಿಶ್ಚಿತತೆ, ಸಮಸ್ಯೆಗಳಿದ್ದರೂ ಅದನ್ನು ಮೀರಿ ಬೆಳೆಯಲು ಸಾಧ್ಯ. ಸದಾ ಒಳಿತನ್ನೇ ಆಲೋಚಿಸಿ ಇತರರಿಗೂ ಕೇಡನ್ನು ಬಯಸದೇ ಇದ್ದಲ್ಲಿ ಶಾಂತಿಯಿಂದ ಬದುಕಬಹುದು ಎಂದರು. ಮನಸ್ಸಿನ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಅರಿವಾಗುವಂತೆ ಒಂದಷ್ಟು ಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ವಿಕ್ರಮ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಉಜಿರೆ: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Article Image

ಉಜಿರೆ: ಎನ್.ಎಸ್.ಎಸ್. ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ 2024- 25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜು. 8ರಂದು ನಡೆಯಿತು. ಮುಖ್ಯ ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ (ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ಸ್ವಯಂಸೇವಕ), ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ ಎಂ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಅವರು, “ಒಳ್ಳೆಯತನ, ಮಾನವೀಯತೆ ಇದ್ದರೆ ಜನರು ನಮ್ಮನ್ನು ಗುರುತಿಸುತ್ತಾರೆ. ಆತ್ಮವಿಶ್ವಾಸವನ್ನು ಜಾಗೃತಗೊಳಿಸಿದರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ” ಎಂದರು. "ನನ್ನ ಕಾಲೇಜು ದಿನಗಳು ಹಲವಾರು ನೆನಪುಗಳನ್ನು ಕೊಟ್ಟಿವೆ. ಬದುಕಿಗೆ ಹಲವು ಪಾಠಗಳನ್ನು ಕಲಿಸಿಕೊಟ್ಟಿವೆ. ಉಜಿರೆ ಕಾಲೇಜು ಮತ್ತು ಎನ್.ಎಸ್.ಎಸ್. ಘಟಕ ನನ್ನನ್ನು ಬೆಳೆಸಿದೆ, ಬದುಕನ್ನು ಕಲಿಸಿದೆ" ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿದರು. “ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಈ ವಾಸ್ತವ ಜಗತ್ತಿನಲ್ಲಿ ಸಮಾಜಮುಖಿಗಳಾಗಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ” ಎಂದರು. ಸೇವೆ ಎನ್ನುವುದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವಂತಹದ್ದು. ‘ನನಗಲ್ಲ ನಿನಗೆ’ ಎನ್ನುವ ಧ್ಯೇಯ ವಾಕ್ಯದಡಿ ಎನ್ಎಸ್ಎಸ್ ಘಟಕ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು. ನೂತನ ಸ್ವಯಂಸೇವಕ ನಾಯಕರಿಗೆ ಹಿರಿಯ ಸ್ವಯಂಸೇವಕರು ಅಧಿಕಾರ ಹಸ್ತಾಂತರಿಸಿದರು. ಸ್ವಯಂಸೇವಕರಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆ ಅನಾವರಣಗೊಳಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಬಳಿಕ, ನೂತನವಾಗಿ ಆಯ್ಕೆಗೊಂಡ ಸ್ವಯಂಸೇವಕರಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಡಾ. ಮಾಧವ್ ಎಂ.ಕೆ. ನೆರವೇರಿಸಿದರು. ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ, ಪ್ರಸ್ತಾವಿಸಿದರು. ಇನ್ನೋರ್ವ ಯೋಜನಾಧಿಕಾರಿ ಪ್ರೊ. ದೀಪಾ ಆರ್. ಪಿ. ವಂದಿಸಿದರು. ಸ್ವಯಂಸೇವಕಿ ಶ್ವೇತಾ ಕೆ.ಜಿ. ಕಾರ್ಯಕ್ರಮ ನಿರೂಪಿಸಿದರು.

ಸಸ್ಯಶಾಸ್ತ್ರ ವಿಭಾಗದ ಸಂಘಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Article Image

ಸಸ್ಯಶಾಸ್ತ್ರ ವಿಭಾಗದ ಸಂಘಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಮತ್ತು ಇಕೋ ಕ್ಲಬ್ ಸಂಘಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಜು. 6ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಬಿ. ಎ. ಕುಮಾರ ಹೆಗ್ಡೆ, ಸಂಘದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ವಿಭಾಗದ ‘ಸಸ್ಯಸೌರಭ’ ಭಿತ್ತಿಪತ್ರಿಕೆಯ ಶೈಕ್ಷಣಿಕ ವರ್ಷದ ಮೊದಲ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸಸ್ಯಸೌರಭ ಮತ್ತು ಇಕೋ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ ನೆರವೇರಿತು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಸ್ಯಸೌರಭ ಸಂಘದ ಅಧ್ಯಕ್ಷೆ ಮೇಘಶ್ರೀ ವಿ. ಎಸ್. ಸ್ವಾಗತಿಸಿದರು, ಇಕೋ ಕ್ಲಬ್ ಅಧ್ಯಕ್ಷೆ ಪೂರ್ವಿಕ ಜಿ. ಕೆ. ವಂದಿಸಿದರು, ಅನುಪಮ್ ಬಿ. ಮತ್ತು ಶ್ಲಾಘನಾ ವಿ. ಎಸ್. ನಿರೂಪಿಸಿದರು.

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವ

Article Image

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವ

ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರವು ಸೇವಾ ರೂಪದಲ್ಲಿ ಸಮಾಜಕ್ಕೆ ಒಳಿತನ್ನು ಮಾಡುವ ಸದುದ್ದೇಶದಿಂದ ಸಾಗುತಿತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ವ್ಯಾಪರೀಕರಣವಾಗುತ್ತಿದೆ. ಈ ನಡುವೆಯೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣ ಮಾಡದೇ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ಶ್ರಮಿಸುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ಸೋಮವಾರ ನಡೆದ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವದ ಸಲುವಾಗಿ ನಡೆದ "ಅಂಕುರ" ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ಸದಾ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಒತ್ತು ನೀಡಿದೆ. ಸಾಂಸ್ಕೃತಿಕ, ಕ್ರೀಡಾ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ದತ್ತು ಸ್ವೀಕಾರದ ಅಡಿಯಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಸಂಸ್ಥೆಯು ಈ ಹಿಂದೆ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇತ್ತು. ಆಗ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ ಇದೀಗ ಸ್ವಾಯತ್ತ ಸ್ಥಾನಮಾನದೊಂದಿಗೆ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆ, ಫಲಿತಾಂಶವನ್ನು ನೀಡಲು ಸಹಕಾರಿಯಾಗಿದೆ. ಶೈಕ್ಷಣಿಕ ವರ್ಷವನ್ನು ಸರಿಯಾದ ಸಮಯದಲ್ಲಿ ಪೂರಣಗೊಳಿಸಲು ಸಾಧ್ಯ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾವು ಬೆಳೆಯುವ ಪರಿಸರ ನಮ್ಮ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪೋಷಕರು ಇದರ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಪದವಿ ಜೀವನದಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮ ಹಾಗೂ ನಾವು ಸಂಪಾದಿಸುವ ಜ್ಞಾನ ಮತ್ತು ಸಾಧನೆಯು ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಕುಲಸಚಿವ (ಪರೀಕ್ಷಾಂಗ) ಡಾ. ನಾರಾಯಣ ಶೆಟ್ಟಿ, ಕುಲಸಚಿವ (ಆಡಳಿತ) ಡಾ. ಟಿ. ಕೆ. ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ

Article Image

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಮುಂದಿನ ತಿಂಗಳು ಉಜಿರೆಯಲ್ಲಿ ಸದಸ್ಯತ್ವ ಅಭಿಯಾನ ಆಯೋಜಿಸಲಾಗುವುದು ಎಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಹೇಳಿದರು. ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಗ್ಗೆ ಅವರು ಮಾತನಾಡಿ ಧನ ಸಂಗ್ರಹದ ಬಗ್ಗೆ ಸಲಹೆ, ಸೂಚನೆ ನೀಡಿದರು. ಕೃಷ್ಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಗಣೇಶ ಐತಾಳ, ಪದ್ಮಕುಮಾರ್ ಮತ್ತು ವಸಂತ ರಾವ್ ದೇಣಿಗೆ ಸಂಗ್ರಹದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಇತ್ತೀಚೆಗೆ ನಿಧನರಾದ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ. ಎನ್.ಜಿ. ಪಟವರ್ಧನ್ ಬಗ್ಗೆ ಆರ್.ಯನ್. ಪೂವಣಿ ನುಡಿನಮನ ಸಲ್ಲಿಸಿದರು. ಬಳಿಕ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಸಂಘದ ಕಾರ್ಯದರ್ಶಿ ವಿಶ್ವಾಸ ರಾವ್ ವರದಿ ಸಾದರ ಪಡಿಸಿದರು. ಕುಸುಮಾವತಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು.

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

Article Image

ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ, ವಿದ್ಯಾಗಿರಿ: ಸ್ನಾತಕೋತ್ತರ ವಾಣಿಜ್ಯ ವಿದ್ಯಾರ್ಥಿಗಳು ವಾಣಿಜ್ಯದ ಎಲ್ಲಾ ಆಯಾಮಗಳಲ್ಲಿ ನಿಪುಣತೆ ಹೊಂದುವುದು ಅವಶ್ಯಕ ಎಂದು ಲೆಕ್ಕಪರಿಶೋಧಕ ಎಂ. ಉಮೇಶ್ ರಾವ್ ಹೇಳಿದರು. ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತು ಒಂದು ರಣರಂಗ. ಇದನ್ನು ಎದುರಿಸುವ ಎಲ್ಲ ಕಲೆಗಳನ್ನು ವಿದ್ಯಾರ್ಥಿ ಆಗಿದ್ದಾಗಲೇ ಸಿದ್ಧ ಪಡಿಸಿಕೊಳ್ಳಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರ ಕೃತಕ ಬುದ್ಧಿಮತ್ತೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಸವಾಲಾಗಿ ರೂಪುಗೊಂಡಿದ್ದು,, ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಂಡರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದರು. ವಾಣಿಜ್ಯ ವಿದ್ಯಾರ್ಥಿಗಳು ಖಾತೆ, ತೆರಿಗೆ ಹಾಗೂ ಈ ಕ್ಷೇತ್ರದ ಇತರ ವಿಷಯಗಳ ಕುರಿತು ತಿಳಿಯುವುದು ಹಾಗೂ ವಾಣಿಜ್ಯದ ಎಲ್ಲಾ ಆಗುಹೋಗುಗಳನ್ನು ಗಮನಿಸಬೇಕು ಎಂದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಅಂತಿಮ ವರ್ಷದ ವಿದ್ಯಾರ್ಥಿಗಳ ನಿಜವಾದ ಜೀವನ ಪ್ರಾರಂಭವಾಗುತ್ತಿದೆ. ಈ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಿಮ್ಮ ಮೇಲಿನ ನಂಬಿಕೆಯನ್ನು ಬೆಳೆಸಿಕೊಳ್ಳಿ ಎಂದರು. ಧನಾತ್ಮಕ ಆಲೋಚನೆಗಳು ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಬೀಳ್ಕೊಡುಗೆ ಸಮಾರಂಭ ವಿದ್ಯಾರ್ಥಿ ಜೀವನದ ಒಂದು ಅಮೂಲ್ಯ ಕಾರ್ಯಕ್ರಮ. ಮುಂದಕ್ಕೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನಮಗೆ ಒಳ್ಳೆಯ ಹೆಸರನ್ನು ತಂದುಕೊಡಲಿ ಎಂದು ಆಶಿಸುತ್ತೇನೆ ಎಂದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ರೇಖಾ ಶೆಟ್ಟಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಪುಷ್ಪಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಿಬಾ ಫಾತಿಮಾ ಸ್ವಾಗತಿಸಿ, ಖತೀಜಾ ಇನಾಜ್ ನಿರೂಪಿಸಿದರು. ಪ್ರಜ್ಞಾಶ್ರೀ ವಂದಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

Article Image

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ಜಿಲ್ಲಾ ಸಂಸ್ಥೆ: ಸಮಾಲೋಚನಾ ಕಾರ್ಯಾಗಾರ

ಮೂಡುಬಿದಿರೆ: ದೇಶದ 142 ಕೋಟಿ ಜನಸಂಖ್ಯೆಯಲ್ಲಿ 50 ಕೋಟಿಯವರೆಗೆ ವಿದ್ಯಾರ್ಥಿಗಳು ಇರುವುದು ನಮ್ಮ ಭಾಗ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಜಿಲ್ಲಾ ಆಯುಕ್ತರಾದ ಡಾ. ಎಂ. ಮೋಹನ ಆಳ್ವ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ವಿದ್ಯೆ ಹಾಗೂ ಬುದ್ಧಿಯನ್ನು ಬೆಳೆಸುವುದರ ಜೊತೆಗೆ ಒಂದು ಒಳ್ಳೆಯ ಮನಸ್ಸನ್ನು ಕಟ್ಟುವ ಅವಶ್ಯಕತೆ ಇದೆ. ಇದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ನೆರವೇರಿಸಲು ಸಾಧ್ಯ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇರುವ ಅವಕಾಶಗಳು ಅಪಾರ. ಸ್ಕೌಟ್ಸ್ ಮತ್ತು ಗೈಡ್ಸ್ ನ ಚಟುವಟಿಕೆಗಳು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಪಸರಿಸಬೇಕು ಎಂದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಸಂಪನ್ಮೂಲವಾಗಿ ಮೂಡುವ ಅವಶ್ಯಕತೆ ಇದೆ. ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಕೊರತೆ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಲ್ಲಿನ ಸಿಬ್ಬಂದಿಯದ್ದು. ಇದರಿಂದ ನಮ್ಮ ಜಿಲ್ಲೆಯು ದೇಶಕ್ಕೆ ಮಾದರಿಯಾಗಲಿದೆ ಎಂದರು. ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಸಿ. ಡಿ. ಜಯಣ್ಣ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಕಾಲೇಜು ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ನಾನು ಸ್ಕೌಟ್ಸ್ ಮತ್ತು ಗೈಡ್ಸ್ ಅನ್ನು ಪಸರಿಸುವ ಧ್ಯೇಯದ ಸಭೆಯನ್ನು ಆಯೋಜಿಸುತ್ತೇನೆ ಎಂದು ಭರವಸೆ ನೀಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತರಾದ ಪಿ. ಜಿ. ಆರ್ ಸಿಂಧ್ಯ ಮಾತನಾಡಿ, ರಾಜ್ಯದ ಶಿಕ್ಷಣ ಕ್ಷೇತ್ರದ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡುವಲ್ಲಿ ಸಹಕಾರಿಯಾಗಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ರೀತಿಯ ಸಂಭಾವನೆ ನೀಡದೆ ಇದ್ದರೂ, ನಮ್ಮ ಸಿಬ್ಬಂದಿ ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ಅಮೂಲ್ಯ ಸಮಯವನ್ನು ಸಮರ್ಪಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ದೇಶದಲ್ಲೇ ಸ್ಥಳೀಯ ಸಂಸ್ಥೆಯೊಂದಕ್ಕೆ ಇಷ್ಟು ಸುಲಲಿತವಾದ ಕಾರ್ಯಾಲಯ ಇರುವುದು ಮೂಡುಬಿದಿರೆಯಲ್ಲಿ ಮಾತ್ರ, ಇದು ಡಾ ಎಂ ಮೋಹನ ಆಳ್ವರ ಮಾರ್ಗದರ್ಶನದಿಂದ ಸಾಧ್ಯವಾಗಿದೆ. ಎಲ್ಲಾ ಪಕ್ಷ, ಜಾತಿ, ಧರ್ಮಗಳೂ ಪ್ರೀತಿಸುವ ವ್ಯಕ್ತಿ ಡಾ. ಎಂ. ಮೋಹನ ಆಳ್ವ ಅವರಿಂದ ನಮಗೆ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ನ2024-25ನೇ ಸಾಲಿನಲ್ಲಿ ನಡೆಯಲಿರುವ ಚಟುವಟಿಕೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಬಿ. ಎನ್ ತುಂಬೆ ಸ್ವಾಗತಿಸಿ, ರಾಜ್ಯ ಸಂಘಟನಾ ಆಯುಕ್ತರಾದ ಎಂ ಪ್ರಭಾಕರ ಭಟ್ ವಂದಿಸಿ, ಜಿಲ್ಲಾ ಕೋಶಾಧಿಕಾರಿಗಳಾದ ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆ

Article Image

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆ

'ವೈದ್ಯೋ ನಾರಾಯಣೋ ಹರಿ' ಎಂಬ ಉಕ್ತಿಯಂತೆ, ಜುಲೈ 1ರಂದು ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯಕೀಯ ದಿನಾಚರಣೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ದೀಪ್ತಿ ರಾವ್ ರವರು ಉಪಸ್ಥಿತರಿದ್ದು ಉತ್ತಮ ಆರೋಗ್ಯಕರವಾದ ಜೀವನ ನಡೆಸಲು ಯಾವ ಕ್ರಮವನ್ನು ಅನುಸರಿಸಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅದೇ ರೀತಿ ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್‌ರವರು ನಾವು ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಹೊಂದಿರಬೇಕು, ನಮ್ಮ ಗುರಿ ಏನಿದೆಯೋ ಅದನ್ನು ಮುಟ್ಟಲು ನಿರಂತರ ಓದು ಅಗತ್ಯ ಅನ್ನುವುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ರಶ್ಮಿತಾರವರು ವೈದ್ಯಕೀಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಂಯೋಜಕರಾದ ಶ್ರಿಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಖಾರವರು ನೆರವೇರಿಸಿ, ದಿಯಾರವರು ವಂದಿಸಿದರು.

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 'ಅಂಕುರ 2024' ಕಾರ್ಯಗಾರ

Article Image

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ 'ಅಂಕುರ 2024' ಕಾರ್ಯಗಾರ

ಮೂಡುಬಿದಿರೆ: 21ನೇ ಶತಮಾನದಲ್ಲಿ ಜನರಿಗೆ ಆಯುರ್ವೇದದ ಮಹತ್ವ ತಿಳಿಯುತ್ತಿರುವುದು ಸಂತಸದ ಬೆಳವಣಿಗೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರಿರೋಗ ತಜ್ಞೆ ಡಾ. ರೇವತಿ ಭಟ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪ್ರಸೂತಿ ತಂತ್ರ ಹಾಗೂ ಸ್ತ್ರಿರೋಗ ವಿಭಾಗದ ವತಿಯಿಂದ ಪ್ರಾಜ್ಞಾ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ‘ಎಂಡೊಮೆಟ್ರಿಯೊಸಿಸ್- ಒಂದು ಸಂಯೋಜಿತ ವಿಧಾನ’ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಕಾರ್ಯಗಾರ ಹಾಗೂ ವಿಚಾರ ಸಂಕಿರಣಗಳು ನಡೆಯಬೇಕು. ಇದರಿಂದ ಪಡೆದ ಜ್ಞಾನವನ್ನು ನಾವು ಇತರರಿಗೆ ತಿಳಿಸುವ ಅವಶ್ಯಕತೆ ಇದೆ. ಪ್ರಸ್ತುತ ವರ್ತಮಾನದಲ್ಲಿ ಜನರು ಸಾಕ್ಷಿಗಳನ್ನು ಹೆಚ್ಚು ನಂಬುತ್ತಾರೆ. ಹಾಗಾಗಿ ಸಾಕ್ಷಿಗಳ ಜೊತೆ ಆಯುರ್ವೇದದ ಬಗೆಗೆ ಜನರಿಗೆ ಖಾತರಿ ಪಡಿಸಬೇಕು ಎಂದು ಹೇಳಿದರು. ನಮ್ಮ ಹಿಂದಿನ ತಲೆಮಾರಿನ ಜನರಿಗೆ ಪ್ರಕೃತಿಯಲ್ಲಿ ದೊರೆಯುವ ಔಷಧಿಗಳ ಬಗ್ಗೆ ಅಪಾರ ಜ್ಞಾನವಿದ್ದರೂ ಅವರು ಆ ಜ್ಞಾನವನ್ನು ಮುಂದಿನ ತಲೆಮಾರಿಗೆ ಪಸರಿಸಿಲ್ಲ. ಆದರೆ ಈ ತಪ್ಪನ್ನು ನಾವು ಮಾಡಿದರೆ ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನಷ್ಟವಾಗಲಿದೆ. ಹಾಗಾಗಿ ಇಂತಹ ಕಾರ್ಯಗಾರದಲ್ಲಿ ಪಡೆದ ಜ್ಞಾನವನ್ನು ನಾವು ಸಂಗ್ರಹಿಸಿ, ಪಸರಿಸಬೇಕು ಎಂದರು. ಆಳ್ವಾಸ್ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಯಶಸ್ಸಿನ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವರ ಶ್ರಮವಿದೆ. ಇದನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು. ಕಾರ್ಯಗಾರದ ಮೊದಲ ಅವಧಿಯನ್ನು ಆಳ್ವಾಸ್ ವೈದ್ಯಕೀಯ ಕೇಂದ್ರದ ಸ್ತ್ರಿರೋಗ ತಜ್ಞೆ ಡಾ. ಹನಾ ಶೆಟ್ಟಿ ಹಾಗೂ ನಂತರದ ಅವಧಿಗಳನ್ನು ಕೇರಳದ ಸರಕಾರಿ ಆಯುರ್ವೇದ ವೈದ್ಯಕೀಯ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಮಿನಿ ಪಿ., ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರಿರೋಗ ವಿಭಾಗದ ಮುಖ್ಯಸ್ಥ ಡಾ. ಅಶೋಕನ್, ಜಾಮ್‌ನಗರ ವಿವಿಯ ಇನ್‌ಸ್ಟಿಟ್ಯೂಟ್ ಆಫ್ ಟೀಚಿಂಗ್ ಆ್ಯಂಡ್ ರಿಸರ್ಚ್ ಇನ್ ಆಯುರ್ವೇದದ ಸ್ನಾತಕೋತ್ತರ ಪ್ರಸೂತಿ ಹಾಗೂ ಸ್ತ್ರಿರೋಗ ವಿಭಾಗದ ಪ್ರಾಧ್ಯಾಪಕಿ ಡಾ. ಶಿಲ್ಪಾ ಬಿ. ಡೊಂಗಾ ನಡೆಸಿದರು. ದೇಶದ ವಿವಿಧ ಕಾಲೇಜುಗಳಿಂದ 80ಕ್ಕೂ ಅಧಿಕ ವಿದ್ಯಾರ್ಥಿಗಳು, ಪ್ರಾಧ್ಯಪಕರು ಭಾಗವಹಿಸಿದ್ದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಡಾ. ಕಾವ್ಯ ರಾವ್ ಹಾಗೂ ಡಾ. ಪ್ರವೀಣಾ ಕೆ. ನಿರೂಪಿಸಿದರು

ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Article Image

ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

ವಿದ್ಯಾಗಿರಿ: ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ನ ಸೇವೆಯ ಧ್ಯೇಯದಿಂದ ವ್ಯಕ್ತಿ ನಿರ್ಮಾಣ ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡದ ಜಿಲ್ಲೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಳ್ವಾಸ್ ರೋವರ್ಸ್ ಮತ್ತು ರೇಂಜರ್ಸ್ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಲು ಸಾಧ್ಯ. ಇಲ್ಲಿ ನಡೆಯುವ ಶಿಬಿರಗಳು ವಿದ್ಯಾರ್ಥಿಗಳ ಜೀವನಕ್ಕೆ ಅವಶ್ಯವಾದ ಪಾಠಗಳನ್ನು ಹೇಳಿಕೊಡುತ್ತವೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಆಯುಕ್ತ ಡಾ. ಮೋಹನ ಆಳ್ವ ಅವರ ಶ್ರಮದಿಂದ ಜಿಲ್ಲಾ ಘಟಕವು ಮುಂಚೂಣಿಯಲ್ಲಿದೆ. ಆಳ್ವಾಸ್ ಸಾಂಸ್ಕೃತಿಕ ಜಾಂಬೂರಿಯು ಇಡೀ ವಿಶ್ವವೇ ಮೂಡುಬಿದಿರೆಯತ್ತ ಮುಖ ಮಾಡುವಂತೆ ಮಾಡಿತ್ತು ಎಂದರು. ಪಠ್ಯದ ಕಲಿಕೆಯ ಜೊತೆಗೆ ಪಠ್ಯತರ ಚಟುವಟಿಕೆಗಳು ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಮನಸ್ಥಿತಿ ಧನಾತ್ಮನಕವಾಗಿರಲು ಸಾಧ್ಯ ಎಂದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮದ್ ಸದಾಕತ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಾರ್ಥನೆಯಿಂದಲೇ ಇದರ ಧ್ಯೇಯವನ್ನು ತಿಳಿಯಬಹುದಾಗಿದೆ. ಸೇವಾ ಮನೋಭಾವ ಎಲ್ಲಾ ವಿದ್ಯಾರ್ಥಿಗಳು ಬೆಳೆಸುವುದು ಅವಶ್ಯಕ ಎಂದರು. ಯುವಜನತೆ ದೇಶದ ಆಸ್ತಿ. ಈ ಯುವಶಕ್ತಿಯನ್ನು ಬೆಳೆಸುವ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಕೌಶಲ, ನಾಗರಿಕ ಮೌಲ್ಯಗಳು ಹಾಗೂ ದೈಹಿಕ ಸಾಮರ್ಥ್ಯ ಬೆಳೆಸುವಲ್ಲಿ ಇದರ ಪಾತ್ರ ಅನನ್ಯ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಝಾನ್ಸಿ ಪಿ. ಎನ್ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ರೋವರ್ ಸ್ಕೌಟ್ ಲೀಡರ್ ಸುನಿಲ್, ರೇಂಜರ್ ಲೀಡರ್ ವೀಣಾ, ದಳನಾಯಕ ಕಾರ್ತಿಕ್, ದಳ ನಾಯಕಿ ನಕ್ಷತ್ರ ಇದ್ದರು. ವಿದ್ಯಾರ್ಥಿನಿ ನಕ್ಷತ್ರ ಸ್ವಾಗತಿಸಿ, ವಿದ್ಯಾರ್ಥಿನಿ ವರ್ಷ ವಂದಿಸಿ, ವಿದ್ಯಾರ್ಥಿನಿ ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

First Previous

Showing 11 of 15 pages

Next Last