Article Image

ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ 2 ವಿದ್ಯಾರ್ಥಿಗಳು ತೇರ್ಗಡೆ

Article Image

ಎನ್‌ಡಿಎ ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ 2 ವಿದ್ಯಾರ್ಥಿಗಳು ತೇರ್ಗಡೆ

ಎಕ್ಸಲೆಂಟ್ ಮೂಡಬಿದಿರೆ: ಎನ್‌ಡಿಎ ಲಿಖಿತ ಪರೀಕ್ಷೆ 2 ವಿದ್ಯಾರ್ಥಿಗಳು ತೇರ್ಗಡೆ ಇತ್ತೇಚೆಗೆ ನಡೆದ ದೇಶದ ಪ್ರತಿಷ್ಠಿತ ಎನ್‌ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ) ಲಿಖಿತ ಪರೀಕ್ಷೆಯಲ್ಲಿ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡಬಿದಿರೆಯ 2 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಮುಖ್, ದಿವ್ಯೇಶ್ ತೇರ್ಗಡೆಗೊಂಡಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತ ಜೈನ್, ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

ವೇಣೂರು ಐಟಿಐಗೆ ಶೇಕಡ 100 ಫಲಿತಾಂಶ

Article Image

ವೇಣೂರು ಐಟಿಐಗೆ ಶೇಕಡ 100 ಫಲಿತಾಂಶ

ವೇಣೂರು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಗೆ ಆಗಸ್ಟ್ 2024ರಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ. ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್, ಟರ್ನರ್, ಮೆಕ್ಯಾನಿಕ್ ಮೋಟಾರ್ ವಾಹನ, ರೆಫ್ರಿಜರೇಟರ್ ಎಸಿ ಟೆಕ್ನಿಷಿಯನ್ ವೃತ್ತಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಶೇಕಡ 100 ಫಲಿತಾಂಶ ದೊರೆತಿದೆ. ಒಂದು ವರ್ಷದ ವೃತ್ತಿ ಘಟಕಗಳಾದ ಮೆಕ್ಯಾನಿಕ್ ಡೀಸೆಲ್ ವೃತ್ತಿಯಲ್ಲಿ ಶೇಕಡ 98, ವೆಲ್ಡರ್ ವೃತ್ತಿಯಲ್ಲಿ ಶೇಕಡ 92 ಫಲಿತಾಂಶ ಬಂದಿದ್ದು ಒಟ್ಟು 314 ಅಭ್ಯರ್ಥಿಗಳಲ್ಲಿ 310 ಮಂದಿ ತೇರ್ಗಡೆ ಹೊಂದಿರುತ್ತಾರೆ. ಈಗಾಗಲೇ ಕ್ಯಾಂಪಸ್ ನ ಮೂಲಕ ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಗೆ ಆಯ್ಕೆಗೊಂಡಿರುವ ಈ ಎಲ್ಲಾ ವಿದ್ಯಾರ್ಥಿಗಳು ಕಂಪನಿಗಳಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿರುತ್ತಾರೆ. ಸಂಸ್ಥೆಯ ಉತ್ತಮ ಫಲಿತಾಂಶಕ್ಕಾಗಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕಾರ್ಯದರ್ಶಿಗಳಾದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಸತೀಶ್ಚಂದ್ರ ಎಸ್. ಇವರು ಸಿಬ್ಬಂದಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ ಎಂದು ಸಂಸ್ಥೆಯ ಪ್ರಾಚಾರ್ಯರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

PDO ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

Article Image

PDO ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ

ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಕೆಲವು ತಿಂಗಳ ಹಿಂದೆಯಷ್ಟೇ ಕರ್ನಾಟಕ ಲೋಕಸೇವಾ ಆಯೋಗವು(KPSC) ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು ಮತ್ತು ಅರ್ಜಿ ಸಲ್ಲಿಕೆಗೆ ನೀಡಿದ್ದ ಕೊನೆ ದಿನಾಂಕ ಕೂಡ ಮುಗಿದಿತ್ತು. ಆದರೆ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗಾಗಿ ಒಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಅದೇನೆಂದರೆ, ಸೆಪ್ಟೆಂಬರ್ 10. 2024ರ CSE 166 SEN 2014 ಪ್ರಕಾರ ಒಂದು ಬಾರಿಗೆ ಅನ್ವಯವಾಗುವಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಮೂರು ವರ್ಷಗಳ ಕಾಲ ಹೆಚ್ಚಿನ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಹೀಗಾಗಿ PDO ಹುದ್ದೆಗಳಿಗೆ KPSC ಮತ್ತೊಮ್ಮೆ ಅರ್ಜಿ ಆಹ್ವಾನ ಮಾಡಿದೆ. ಕಾರಣಾಂತರಗಳಿಂದ ಈ ಹಿಂದೆ ಅರ್ಜಿ ಸಲ್ಲಿಸಲಾಗದವರು ಹಾಗೂ ವಯಸ್ಸಿನ ಮಿತಿ ಹೆಚ್ಚಿದ್ದ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ನಿರಾಸರಾಗಿದ್ದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ನೇಮಕಾತಿ ಸಂಸ್ಥೆ:- ಕರ್ನಾಟಕ ಲೋಕಸೇವಾ ಆಯೋಗ (KPSC) ಉದ್ಯೋಗ ಸಂಸ್ಥೆ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹುದ್ದೆ ಹೆಸರು:- ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಒಟ್ಟು ಹುದ್ದೆಗಳ ಸಂಖ್ಯೆ:- 247 ಹುದ್ದೆಗಳು ಹುದ್ದೆಗಳ ವಿವರ:- * ಹೈದರಬಾದ್ ಕರ್ನಾಟಕ – 97 ಹುದ್ದೆಗಳು * ಸಾಮಾನ್ಯ – 150 ಹುದ್ದೆಗಳು ಉದ್ಯೋಗ ಸ್ಥಳ:- ಕರ್ನಾಟಕದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಇತರೆ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ ಶೈಕ್ಷಣಿಕ ವಿದ್ಯಾರ್ಹತೆ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು. ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:- * ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕನಿಷ್ಠ ವಯೋಮಿತಿ 18 ವರ್ಷಗಳು * ರಾಜ್ಯ ಸರ್ಕಾರವು ಸೆಪ್ಟೆಂಬರ್ 10 ರಂದು ಜಾರಿ ಮಾಡಿರುವ ಆದೇಶದಲ್ಲಿ ಎಲ್ಲಾ ಪ್ರವರ್ಗಗಳಿಗೆ ಒಂದು ಬಾರಿಗೆ ಅನ್ವಯಿಸುವಂತೆ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆ ನೀಡಿರುತ್ತದೆ. ಆ ಪ್ರಕಾರವಾಗಿ ಗರಿಷ್ಠ ವಯೋಮಿತಿ * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳು * ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 41 ವರ್ಷ * ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ 43 ವರ್ಷ ಅರ್ಜಿ ಸಲ್ಲಿಸುವ ವಿಧಾನ:- * ಆನ್ ಲೈನ್ ವಿಧಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ * KPSC website ಗೆ ಭೇಟಿ ನೀಡಿ PDO ಅಪ್ಲಿಕೇಶನ್ ವಿಭಾಗಕ್ಕೆ ತೆರಳಿ, ಲಿಂಕ್ ಕ್ಲಿಕ್ ಮಾಡಿ ಕೇಳಲಾಗುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು * ಪೂರಕ ದಾಖಲೆಗಳನ್ನು ಕೂಡ ಸೂಚನೆ ಪ್ರಕಾರವಾಗಿ ಸಲ್ಲಿಸಬೇಕು * ನಿಮ್ಮ ವರ್ಗಕ್ಕೆ ಅನುಕೂಲವಾಗುವ ಅರ್ಜಿ ಶುಲ್ಕ ಪಾವತಿಸಿ, ಇ-ರಸೀದಿ ಪಡೆಯಿರಿ * ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ. ಅರ್ಜಿ ಶುಲ್ಕ:- * ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600 * ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ ರೂ.300 * ಪ.ಜಾ, ಪ.ಪಂ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ * ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50 ಆಯ್ಕೆ ವಿಧಾನ:- * ಸ್ಪರ್ಧಾತ್ಮಕ ಪರೀಕ್ಷೆ * ನೇರ ಸಂದರ್ಶನ * ದಾಖಲೆಗಳ ಪರಿಶೀಲನೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ

Article Image

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ

ಕಲ್ಕೂರ ಪ್ರತಿಷ್ಠಾನ, ಮಂಗಳೂರು ಇದರ ಆಶ್ರಯದಲ್ಲಿ 2024, ಅಕ್ಟೋಬರ್ 10ರಂದು ಡಾ. ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಕಾರಂತ ಹುಟ್ಟುಹಬ್ಬ ಸಮಾರಂಭವು ಜರಗಲಿದ್ದು, ಇದರ ಸಲುವಾಗಿ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾಲೇಜು ಹಾಗೂ ಮುಕ್ತ ಎಂಬ 2 ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮೂರು ಪುಟಕ್ಕೆ ಮೀರದಂತೆ ಪ್ರಬಂಧವನ್ನು ಅಕ್ಟೋಬರ್ 6, 2024ರೊಳಗಾಗಿ ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲುಪುವಂತೆ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಬಂಧದ ವಿಷಯ ಕಾಲೇಜು ವಿಭಾಗ : ಕಾರಂತರ ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯ ಅವಲೋಕನ, ಅನುಸಂಧಾನ ಮುಕ್ತ ವಿಭಾಗ : ಕಾರಂತರ ಸಾಹಿತ್ಯ (ಕಾದಂಬರಿಗಳು) ಅವಲೋಕನ, ಅನುಸಂಧಾನ

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ

Article Image

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಸ್ಕಾಲರ್ ಶಿಪ್ ವಿತರಣೆ

ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಗಳು ರೋಟರಿ ಕ್ಲಬ್ ಬೆಂಗಳೂರು ಇಂದಿರಾ ನಗರ ಹಾಗೂ ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ತಾಲೂಕಿನ ಒಟ್ಟು 151 ವಿದ್ಯಾರ್ಥಿಗಳಿಗೆ ರೂ. 10,000ದಂತೆ ಒಟ್ಟು ರೂ. 15,10,000 ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸುತ್ತಿದೆ. ಬೆಳ್ತಂಗಡಿಯಲ್ಲಿರುವ ರೋಟರಿ ಸಭಾಭವನದಲ್ಲಿ ಇದೇ ಸೆಪ್ಟೆಂಬರ್ 21 ರಂದು ಶನಿವಾರ ಮಧ್ಯಾಹ್ನ 2:30ಕ್ಕೆ ಸರಿಯಾಗಿ ಈ ಸಮಾರಂಭ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಾದ ಎಸ್.ಡಿ.ಎಂ, ವಾಣಿ ಮತ್ತು ಅನುಗ್ರಹ ಪದವಿಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿ ಅವಶ್ಯಕವಿರುವ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ ಶಿಪ್‌ನ ಪ್ರಯೋಜನ ದೊರೆಯಲಿದೆ. ಇದರಿಂದ ಆರ್ಥಿಕವಾಗಿ ಅಗತ್ಯವಿರುವ ವಿದ್ಯಾ ರ್ಥಿಗಳಿಗೆ ಸಹಾಯವಾಗಲಿದೆ. ಪ್ರತಿಷ್ಠಿತ ಹೌಸಿಂಗ್ ಫೈನಾನ್ಸ್ ಕಂಪನಿಯಾದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್‌ನ ಮೂಲಕ ಬೆಳ್ತಂಗಡಿ ಪರಿಸರದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಮೊತ್ತವನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಉಪಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಜೋಶಿ ಪಾಲ್ಗೊಳ್ಳಲಿದ್ದಾರೆ. ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ರೋ. ವಿಕ್ರಮದತ್ತ, ರೋಟರಿ ಕ್ಲಬ್ ಬೆಂಗಳೂರು ಇಂದಿರಾ ನಗರ ರೋ. ಪಿಯೂಶ್ ಜೈನ್, ರೋ. ಜಗದೀಶ್ ಮುಗಳಿ, ರೋ. ಮೊಹಮ್ಮದ್ ವಲವೂರ್, ರೋ. ಮನೋರಮಾ ಭಟ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿ ರೋಟರಿ ಕ್ಲಬ್ ಕಳೆದ ಅನೇಕ ವರ್ಷಗಳಿಂದ ಈ ಸ್ಕಾಲರ್ಶಿಪ್ ವಿತರಣೆ ಮಾಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ನಿರತವಾಗಿದೆ. ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಪೂರನ್ ವರ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಜಿರೆ: ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಎಂಜಿನಿಯರಿಂಗ್ ವಿಧೇಯಕ 2024

Article Image

ಉಜಿರೆ: ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್ ಎಂಜಿನಿಯರಿಂಗ್ ವಿಧೇಯಕ 2024

ಉಜಿರೆ: ದೇಶದ ಪ್ರಗತಿಗೆ ಎಂಜಿನಿಯರ್‌ಗಳ ಸೇವೆ ಮತ್ತು ಕೊಡುಗೆ ಅಮೂಲ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಓಶಿಯನ್‌ಪರ್ಲ್ ಹೋಟೆಲ್‌ನ ಸಭಾಭವನದಲ್ಲಿ ಎಂಜಿನಿಯರ್‌ಗಳ ದಿನಾಚರಣೆ ಮತ್ತು ಅನುಮೋದನೆಗೊಂಡ ವೃತ್ತಿನಿರತ ಸಿವಿಲ್‌ಎಂಜಿನಿಯರಿಂಗ್ ವಿಧೇಯಕ-2024 “ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ ಎಂಬ ಮಾತಿದೆ. ಯಾವುದೇ ಕ್ಷೇತ್ರದಲ್ಲಿ ವೃತ್ತಿಬಾಂಧವರೆಲ್ಲ ಸಂಘಟಿತರಾಗಿ ಕೆಲಸ ಮಾಡಿದರೆ ಉನ್ನತ ಪ್ರಗತಿ ಸಾಧ್ಯವಾಗುತ್ತದೆ. ವಿಶ್ವದ ಎಲ್ಲಾ ದೇಶಗಳ ಚಿತ್ತ ಈಗ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಭಾರತದತ್ತ ಇದೆ. ವೃತ್ತಿನಿರತ ಸಿವಿಲ್ ಎಂಜಿನಿಯರ್‌ಗಳ ಸಂಘಟನೆ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಅವರು ಹಾರೈಸಿದರು. ಇದೇ ಸಂದರ್ಭದಲ್ಲಿ ಲೋಗೋ ಅನಾವರಣಗೊಳಿಸಲಾಯಿತು. ಸಿವಿಲ್‌ಎಂಜಿನಿಯರ್‌ಗಳ ರಾಜ್ಯಮಟ್ಟದ ಸಂಘಟನೆಯ ಅಧ್ಯಕ್ಷ ಶ್ರೀಕಾಂತ್ ಎಸ್. ಚನ್ನಲ್ ಮಾತನಾಡಿ, ಸಿವಿಲ್‌ ಎಂಜಿನಿಯರ್‌ಗಳು, ರಾಷ್ಟ್ರನಿರ್ಮಾಪಕರು ಒಂದು ದೇಶದ ಕಟ್ಟಡಗಳ ವಿನ್ಯಾಸ ಅಲ್ಲಿನ ಜನರ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಪ್ರತಿಬಿಂಬಿಸುತ್ತದೆ. ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟು ಹಾಗೂ ವಾಣಿಜ್ಯಸಂಕೀರ್ಣಗಳ ನಿರ್ಮಾಣದಲ್ಲಿ ಸಿವಿಲ್‌ಎಂಜಿನಿಯರ್‌ಗಳ ಸೇವೆ ಅಮೂಲ್ಯವಾಗಿದೆ. ಕೇಂದ್ರಸರ್ಕಾರ ಹತ್ತು ಲಕ್ಷ ಕೋಟಿ ರೂ. ಹಾಗೂ ಖಾಸಗಿ ವಲಯದ ಉದ್ಯಮಗಳು ಹದಿನೆಂಟು ಲಕ್ಷ ಕೋಟಿ ರೂ. ಸೇರಿದಂತೆ ಒಟ್ಟು ಇಪ್ಪತ್ತೆಂಟು ಲಕ್ಷ ಕೋಟಿ ರೂ. ಸಿವಿಲ್ ಕಟ್ಟಡ ಕಾಮಗಾರಿಗಳಿಗಾಗಿ ಈಗಾಗಲೇ ವಿನಿಯೋಗಿಸಲಾಗಿದೆ. ಆದರೆ ಪರಿಣತ ಹಾಗೂ ಅಧಿಕೃತ ಸಿವಿಲ್ ಎಂಜಿನಿಯರ್‌ಗಳು ಕಟ್ಟಡ ಕಾಮಗಾರಿಯಲ್ಲಿ ಭಾಗವಹಿಸದೆ ತಾಂತ್ರಿಕಜ್ಞಾನದ ಕೊರತೆಯಿಂದಾಗಿ ಕಟ್ಟಡಗಳ ಕುಸಿತ, ಸೇತುವೆಗಳಲ್ಲಿ ಬಿರುಕು, ರಸ್ತೆಗಳ ಕಳಪೆ ಕಾಮಗಾರಿ, ಅಣೆಕಟ್ಟುಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಆದುದರಿಂದ ಅಧಿಕೃತ ಪರವಾನಿಗೆ ಪಡೆದ ಸಿವಿಲ್ ಎಂಜಿನಿಯರ್‌ಗಳೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಬೇಕು. ಇದಕ್ಕಾಗಿ ಅನುಮೋದನೆಗೊಂಡ ವೃತ್ತಿನಿರತ ಸಿವಿಲ್‌ಎಂಜಿನಿಯರಿಂಗ್ ವಿಧೇಯಕ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈಗಾಗಲೇ ವಿಧೇಯಕವು ಸರ್ಕಾರ ಮತ್ತು ಉಭಯಸದನಗಳಲ್ಲಿ ಅನುಮೋದನೆಗೊಂಡಿದ್ದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ ಎಂದು ಅವರು ಹೇಳಿದರು. ಬೆಂಗಳೂರು ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಎಂ.ಯು. ಅಶ್ವಥ್, ಅಜಿತ್ ಕುಮಾರ್ ಮತ್ತು ಎಂ. ಆರ್. ಕಲ್‌ಗಲ್ ತಮ್ಮ ಅನಿಸಿಕೆ ತಿಳಿಸಿದರು. ವಿಶೇಷ ಸಾಧನೆ ಮಾಡಿದ ಸಿವಿಲ್‌ಎಂಜಿನಿಯರ್‌ಗಳಾದ ಉಜಿರೆಯ ಜಗದೀಶಪ್ರಸಾದ್, ಸಂಪತ್‌ರತ್ನ ರಾವ್ ಮತ್ತು ಸುಭಾಶ್ಚಂದರ ಅವರನ್ನು ಗೌರವಿಸಲಾಯಿತು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಉಜಿರೆಯ ಜಗದೀಶ ಪ್ರಸಾದ್ ಯಾವುದೇ ತಾಂತ್ರಿಕ ಮಾಹಿತಿ ಹಾಗೂ ಅರ್ಹತೆ ಇಲ್ಲದವರು ಸಿವಿಲ್‌ಎಂಜಿನಿಯರ್‌ಗಳ ಮೇಲೆ ಮಾಡುವ ಆಪಾದನೆ ಹಾಗೂ ದಬ್ಬಾಳಿಕೆ ತಡೆಯಲು ಸಂಘಟನೆ ಹಾಗೂ ವಿಧೇಯಕ ಅನಿವಾರ್ಯವಾಗಿದೆ ಎಂದರು. ಉಜಿರೆಯ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಡಾ. ರವೀಶ್ ಪಡುಮಲೆ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೆ ಮೊದಲು ಆಕರ್ಷಕ ವಾಹನ ಜಾಥಾ ನಡೆಯಿತು.

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 30 ಲಕ್ಷ ಮೌಲ್ಯದ 2 ಬಿಪಿಎಲ್ ಲೋವೆನ್‌ಸ್ಪೆöನ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು. ಡಿ. ಹರ್ಷೇಂದ್ರ ಕುಮಾರ್ ಅವರು ಹೊಸ ತಂತ್ರಜ್ಞಾನದ 2 ಐಸಿಯು ವೆಂಟಿಲೇಟರ್‌ಗಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿಯೊಂದು ಸಂಸ್ಥೆಗಳು ಕೂಡ ಸೇವೆಯ ಉದ್ದೇಶದಿಂದ ನಡೆಸಲ್ಪಡುತ್ತದೆ. ಖರ್ಚು ಬಗ್ಗೆ ಚಿಂತಿಸದೆ ಜನತೆಗೆ ಉತ್ತಮ ಸೇವೆ ನೀಡುವ ಗುರಿಯೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದೇ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವೈದ್ಯಕೀಯ ಸಲಕರಣೆಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಸುಧಾರಿತ ವೈದ್ಯಕೀಯ ಸೇವೆ ನೀಡಲು ಸಹಕಾರಿಯಾಗಿದೆ. ಹಾಗಾಗಿ ದಿನೇ-ದಿನ ಈ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚೆಗೆ ಈ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳು ಕೂಡ ಈ ಆಸ್ಪತ್ರೆಯ ಮೇಲೆ ಗ್ರಾಮೀಣ ಜನತೆಯಲ್ಲಿ ಭರವಸೆ ಹೆಚ್ಚಿಸಿದೆ. ಈ ಆಸ್ಪತ್ರೆ ಅನೇಕ ಮಂದಿಗೆ ಉದ್ಯೋಗದ ಅವಕಾಶ ನೀಡಿ ಅನೇಕ ಕುಟುಂಬಗಳು ನೆಮ್ಮದಿಗೆ ಕಾರಣವಾಗಿದೆ. ಇತರ ಅನೇಕರಿಗೆ ಪರೋಕ್ಷ ರೀತಿಯಲ್ಲಿ ವಿವಿಧ ಅವಕಾಶ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ ಎಂದರು. 9 ಹಾಸಿಗೆಗಳ ಸುಸಜ್ಜಿತ ಐಸಿಯು ಹೊಂದಿರುವ ಈ ಆಸ್ಪತ್ರೆಯು ಈಗಾಗಲೇ 6 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಈಗ ಒಟ್ಟು 8 ವೆಂಟಿಲೇಟರ್‌ಗಳಿವೆ. ಹೃದಯಾಘಾತ, ಸ್ಟ್ರೋಕ್, ಉಸಿರಾಟದ ಸಮಸ್ಯೆ ಮುಂತಾದ ತುರ್ತು ಸಂದರ್ಭದಲ್ಲಿ ಈ ಅತ್ಯಾಧುನಿಕ ವೆಂಟಿಲೇಟರ್‌ಗಳು ಬಹಳ ಉಪಯುಕ್ತವಾಗಲಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ಹಾಗೂ ರೋಗಿಯಿಂದ ಸಂಪರ್ಕ ಕಳೆದುಕೊಂಡಾಗ ಎಚ್ಚರಿಸುವ ಸೈರನ್ ಹೊಂದಿದ್ದು, ರೋಗಿಗೆ ಉಸಿರಾಟದಲ್ಲಿ ವ್ಯತ್ಯವಾಗದಂತೆ ನಿಗಾವಹಿಸುತ್ತದೆ. ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಶುಗಳಿಗೆ ಹೊಂದಾಣಿಕೆಯಾಗಬಲ್ಲದು. ಈ ವೆಂಟಿಲೇಟರ್ ಪರ‍್ಟೇಬಲ್ ಆಗಿದೆ. ಅಗತ್ಯ ಬಿದ್ದಾಗ ಆಂಬ್ಯುಲೆನ್ಸ್ಗಳಲ್ಲಿಯೂ ಅಳವಡಿಸಲು ಸಾಧ್ಯವಿದೆ. ಮಂಗಳೂರು ಬಳಿಕ ಈ ಅತ್ಯಾಧುನಿಕ ವೆಂಟಿಲೇಟರ್ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ಇಲ್ಲಿನ ವೈದ್ಯರು, ದಾದಿಯರು ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕಾವ್ಯ ರಚನಾ ಕಮ್ಮಟ

ಉಜಿರೆ, ಸೆ.12: ಸಾಹಿತ್ಯವೆನ್ನುವುದು ಸಮುದ್ರ ಇದ್ದಂತೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಡೀ ಜಗತ್ತಿನ ಸಾಹಿತ್ಯ ತಿಳಿಯಲು ಒಂದು ಜನ್ಮ ಸಾಕಾಗುವುದಿಲ್ಲ. ಯಾವ ಭಾವಕ್ಕೆ ಎಷ್ಟು ಒತ್ತು ನೀಡುತ್ತೇವೆ ಎಂಬುದು ಸಾಹಿತ್ಯದಲ್ಲಿ ಮುಖ್ಯವಾಗುತ್ತದೆ ಎಂದು ಯುವ ಕವಿ, ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಮಧು ಬಿರಾದಾರ ಹೇಳಿದರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಇಂದು (ಸೆ. 12) ಆಯೋಜಿಸಿದ್ದ ‘ಕಾವ್ಯ ಕಟ್ಟುವ ಬಗೆ’ ಕಾವ್ಯ ರಚನಾ ಕಮ್ಮಟದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಪಂಪ, ರನ್ನ, ಕುವೆಂಪು ಬರೆದಿರುವುದು ಮಹಾಭಾರತವೇ. ಆದರೆ ಅವರ ಕಾಲಘಟ್ಟ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿ ಬೇರೆಯಾಗಿದೆ. ಆದ್ದರಿಂದ ಅವರ ಕೃತಿ ವಿಶಿಷ್ಟತೆ ಹೊಂದಿದೆ. ಪ್ರವಾಹದ ಎದುರು ನಿಲ್ಲುವ ಕವಿಗಳು ಮಾತ್ರ ನೆನಪಿನಲ್ಲಿ ಇರುತ್ತಾರೆ. ಅನುಭವವಿದ್ದರೆ ಕವನ ತುಂಬಾ ಸುಲಭವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಕವಿತೆ ಬರೆಯುವುದು ಬಲು ಸುಲಭ. ಇದಕ್ಕೆ ಸೂಕ್ಷ್ಮಗ್ರಹಿಕೆ, ಸಹೃದಯತೆ ಜತೆಗೆ ವಿದ್ಯಮಾನಗಳ ಕುರಿತು ಕುತೂಹಲವಿರಬೇಕು. ಇದರ ಮೇಲೆ ನಮ್ಮ ಅಂತರಂಗದಲ್ಲಿ ಮೂಡುವ ಭಾವನೆಗಳಿಗೆ ಅಕ್ಷರ ನೀಡಿದರೆ ಅದು ಕವನವಾಗುತ್ತದೆ” ಎಂದರು. “ಪ್ರಾಸ, ಭಾವ ಪೂರ್ಣವಾಗಿದ್ದರೆ ಅದುವೇ ಕಾವ್ಯ. ಭಾವನಾತ್ಮಕವಾಗಿ ನಮ್ಮನ್ನು ಹಿಂದಕ್ಕೆ ಕರೆದೊಯ್ಯುವ ಶಕ್ತಿ ಕಾವ್ಯಕ್ಕಿದೆ. ನಾವು ಹಿಂದೆ ಕೇಳಿದ ಪದ್ಯಗಳನ್ನು ಮತ್ತೆ ಕೇಳಿದಾಗ ನಮ್ಮ ಹಿಂದಿನ ದಿನಗಳು ನೆನಪಾಗುತ್ತವೆ” ಎಂದರು. ಕನ್ನಡ ಅಧ್ಯಾಪಕರಾದ ಡಾ. ದಿವಾಕರ ಕೊಕ್ಕಡ, ಡಾ ಎಂ.ಪಿ. ಶ್ರೀನಾಥ್, ಡಾ. ರಾಜಶೇಖರ್, ಭವ್ಯಶ್ರೀ, ತೇಜಸ್ವಿ ಕಾರ್ಯಕ್ರಮ ಸಂಯೋಜಕ ಡಾ. ನಾಗಣ್ಣ ಡಿ.ಎ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ ಕೆ. ಎನ್. ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಉಲ್ಲೇಖ ವಂದಿಸಿ, ಹಿಮಾಲಿ ಎಂ. ಪಿ. ಕಾರ್ಯಕ್ರಮ ನಿರೂಪಿಸಿದರು.

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

Article Image

ಎಸ್.ಡಿ.ಎಂ. ಪಿ.ಜಿ ಸೆಂಟರ್ ಓರಿಯೆಂಟೇಶನ್ ಕಾರ್ಯಕ್ರಮ

ಉಜಿರೆ: ಕೌಶಲ್ಯಗಳನ್ನು ನವೀಕರಿಸಿಕೊಂಡು ಜ್ಞಾನಾಧಾರಿತ ಸಂಶೋಧನಾ ಪ್ರಜ್ಞೆ ಮತ್ತು ಅನ್ವಯಿಕ ಸಾಮರ್ಥ್ಯದೊಂದಿಗೆ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರುಗೊಂಡಾಗ ಮಾತ್ರ ಅಚ್ಚಳಿಯದ ಪ್ರಭಾವ ಮೂಡಿಸಿ ಯಶಸ್ಸುಗಳಿಸಲು ಸಾಧ್ಯ ಎಂದು ಬೆಂಗಳೂರಿನ ಸಿಗ್ಮಾ ಅಲ್ಡಿಜ್ ಕಂಪನಿಯ ತಾಂತ್ರಿಕ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಮುಖ್ಯಸ್ಥ ಡಾ. ರವೀಂದ್ರ ವಿಕ್ರಮ್ ಸಿಂಗ್ ಅಭಿಪ್ರಾಯಪಟ್ಟರು. ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಉದ್ದೇಶದಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ಗುರುವಾರ ಆಯೋಜಿತವಾದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ಸಿಕ್ಕಿತು. ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಹತ್ತು ವರ್ಷಗಳ ಹಿಂದಿನ ಕೌಶಲ್ಯಗಳು ಇದೀಗ ಅನ್ವಯಗೊಳ್ಳುವುದಿಲ್ಲ. ಕೋವಿಡ್ ನಂತರದ ಜಗತ್ತು ತಾಂತ್ರಿಕವಾಗಿ ಬದಲಾಗಿದೆ. ಹಳೆಯ ಕೌಶಲ್ಯಗಳ ನವೀಕರಣ ಇಂದಿನ ಅಗತ್ಯ. ತಂತ್ರಜ್ಞಾನವನ್ನು ನಿರಾಕರಿಸುವಂತಿಲ್ಲ. ಅದನ್ನು ಟೀಕಿಸಿ ದೂರ ನಿಲ್ಲುವಂತಿಲ್ಲ. ಬದುಕಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಾಸುಹೊಕ್ಕಾಗಿದೆ. ಅದರ ಮೇಲೆ ಅತಿಯಾದ ಅವಲಂಬನೆಯಾಗದೇ ಸ್ವಯಂ ಸಾಮರ್ಥ್ಯದ ಅಧಾರದಲ್ಲಿ ಮುನ್ನೆಡೆಯುವ ವಿವೇಕದೊಂದಿಗೆ ಇದ್ದಾಗ ಸಾರ್ವಕಾಲಿಕ ಗೆಲುವು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆ ಕ್ಷಣದ ಅನಿವಾರ್ಯತೆ ಮತ್ತು ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವ್ಯಕ್ತಿಗತ ಮತ್ತು ವೃತ್ತಿಪರ ಬೆಳವಣಿಗೆಯನ್ನು ಕಂಡುಕೊಳ್ಳಬೇಕು. ತಂತ್ರಜ್ಞಾನದ ವೇಗವನ್ನು ಕಂಡುಕೊಂಡು ಅದಕ್ಕನುಗುಣವಾಗಿ ವೃತ್ತಿಪರತೆಯ ಶ್ರೇಷ್ಠತೆಯ ಮಜಲುಗಳನ್ನು ದಾಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದ ಕಲಿಕೆಯ ಹಾದಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಜ್ಞಾನ, ಸ್ಪರ್ಧಾತ್ಮಕತೆ, ತಾರ್ಕಿಕ ಚಿಂತನೆ, ಕೌಶಲ್ಯ ಮತ್ತು ವಿವೇಚನಾತ್ಮಕ ಎಚ್ಚರದ ಹೊಳಹುಗಳೊಂದಿಗೆ ವಿದ್ಯಾರ್ಥಿಗಳು ಸಾಧನೆಯ ಹಾದಿಯನ್ನು ಕ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸ್ನಾತಕೋತ್ತರ ಹಂತದಲ್ಲಿ ವಿಸ್ತೃತ ಜ್ಞಾನಾರ್ಜನೆಯ ತುಡಿತ ಮತ್ತು ಪ್ರಾಯೋಗಿಕ ಅನ್ವಯಿಕತೆಯ ಪ್ರಜ್ಞೆಯೊಂದಿಗೆ ಕಲಿಕೆಯನ್ನು ಅರ್ಥಪೂರ್ಣಗೊಳಿಸಿಕೊಳ್ಳಬೇಕು ಎಂದು ನುಡಿದರು. ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಎಸ್.ಎನ್. ಕಾಕತ್ಕರ್ ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಪ್ರಾದ್ಯಾಪಕರಾದ ಡಾ. ನೆಫಿಸತ್ ಪಿ. ಹಾಗೂ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಸ್ವಾತಿ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಹೊರತಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಸಮಗ್ರ ವಿವರಗಳನ್ನೊಳಗೊಂಡ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಬ್ಬಿರುವ ರಕ್ತನಾಳದ ಸಮಸ್ಯೆ ಇರುವ 41 ವರ್ಷ ಹಾಗೂ 40 ವರ್ಷ ಪ್ರಾಯದ ಇಬ್ಬರಿಗೆ ಮೊದಲ ಬಾರಿಗೆ ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಕಿರಣ್ ಹಾಗೂ ಅರೆವಳಿಕೆ ತಜ್ಞರಾದ ಡಾ| ಚೈತ್ರಾ ಆರ್. ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ಶಸ್ತ್ರಚಿಕಿತ್ಸೆಗೆ ಒಳಗಾದ ಇಬ್ಬರು ರೋಗಿಗಳು ಕೂಡ ಅತೀ ಕಡಿಮೆ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಎಂಡೋವೆನಸ್ ಲೇಸರ್ ಶಸ್ತ್ರಚಿಕಿತ್ಸೆ ಎನ್ನುವುದು ಶಸ್ತ್ರಚಿಕಿತ್ಸೆ ಇಲ್ಲದೆ ಉಬ್ಬಿರುವ ರಕ್ತನಾಳಗಳಿಗೆ ನೀಡುವ ಚಿಕಿತ್ಸೆಯ ಹೊಸ ವಿಧಾನವಾಗಿದೆ. ಉಬ್ಬಿರುವ ರಕ್ತನಾಳಗಳನ್ನು ತೊಡೆದು ಹಾಕಲು ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯ ನಂತರ ರೋಗಿ ಬಹಳ ಬೇಗನೇ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ಸೋಂಕಿನ ಅಪಾಯ ತುಂಬಾ ಕಡಿಮೆ ಇರುತ್ತದೆ. ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ನಗರ ಪ್ರದೇಶದ ಅಸ್ಪತ್ರೆಗಳಿಗೆ ಹೋಲಿಸಿದರೆ ಈ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ': ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

Article Image

'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ': ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ

ಉಜಿರೆ: ಜೀವನವು ಮಾನಸಿಕ ವ್ಯವಸ್ಥೆಯನ್ನು ಅವಲಂಬಿಸಿದೆ ಹಾಗೂ ಆರೋಗ್ಯವೇ ಎಲ್ಲದಕ್ಕೂ ಮೂಲ ಆಧಾರ ಎಂದು ಮೈಸೂರಿನ ಆಹಾರ ಮತ್ತು ಪೌಷ್ಟಿಕಾಂಶ ತಜ್ಞ ಡಾ. ಖಾದರ್ ವಲ್ಲಿ ಹೇಳಿದರು. ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂದು (ಸೆ. 9) ಮನಃಶಾಸ್ತ್ರ ವಿಭಾಗದ (ಪದವಿ, ಸ್ನಾತಕೋತ್ತರ ಪದವಿ) ವತಿಯಿಂದ ಆಯೋಜಿಸಲಾಗಿದ್ದ 'ಸಿರಿಧಾನ್ಯ ಮತ್ತು ಮಾನಸಿಕ ಆರೋಗ್ಯ' ಕುರಿತ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. “ಇಂದಿನ ಆಧುನಿಕ ಯುಗದಲ್ಲಿ ಜನರು ಫಾಸ್ಟ್ ಫುಡ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನ ಉಂಟಾಗುತ್ತಿದೆ. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುತ್ತಿಲ್ಲ. ಪೌಷ್ಟಿಕ ಆಹಾರ ಸೇವಿಸುವ ಬದಲು ಅಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಇದರಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಅನೇಕ ಜನರು ಥೈರಾಯಿಡ್ ಮಧುಮೇಹ ರಕ್ತದೊತ್ತಡದಂತಹ ಬಳಲುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಜನರು ಸಿರಿಧಾನ್ಯಗಳನ್ನು ತಮ್ಮ ನಿತ್ಯ ದಿನನಿತ್ಯ ಆಹಾರ ಪದ್ಧತಿಯಲ್ಲಿ ಉಪಯೋಗಿಸಬಹುದು" ಎಂದರು. ಅನೇಕ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಅತಿಥಿ, ಶಿವಮೊಗ್ಗದ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ. ಪ್ರೀತಿ ವಿ. ಶಾನಭಾಗ್ ಮಾತನಾಡಿ, "ಹಿಂದಿನ ಕಾಲದಲ್ಲಿ ಆರೋಗ್ಯದ ಏರುಪೇರಿಗೆ ಔಷಧಿಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಔಷಧಿಗಳ ಜೊತೆಗೆ ಕಾಯಿಲೆಗಳು ಹೆಚ್ಚಾಗಿವೆ. ಈಗಿನ ಕಾಲದಲ್ಲಿ ತ್ವರಿತ ಪರಿಣಾಮವನ್ನು ಬಯಸುತ್ತೇವೆ. ಒಂದು ಕೆಲಸ ಆಗುವ ಮುನ್ನವೇ ಇನ್ನೊಂದು ಕೆಲಸದ ಏಳಿಗೆಗೆ ಹೆಜ್ಜೆ ಹಾಕಲು ತಯಾರಾಗಿರುತ್ತೇವೆ. ಅಧ್ಯಯನದ ಪ್ರಕಾರ ಇತ್ತೀಚಿನ ಜನಾಂಗದಲ್ಲಿ ತಾಳ್ಮೆ ಕಡಿಮೆಯಾಗಿ ಎಲ್ಲವನ್ನು ಶೀಘ್ರವಾಗಿ ಮುಗಿಸಬೇಕೆಂಬ ಒತ್ತಡ ಹೆಚ್ಚಾಗಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಮಾನವ ದೇಹವೇ ಒಂದು ರಾಸಾಯನಿಕ ವ್ಯವಸ್ಥೆ. ಹಾಗೆ ಈ ಎಲ್ಲ ರಾಸಾಯನಿಕಗಳು ನಾವು ಹೇಗೆ ಯೋಚಿಸುತ್ತೇವೆ, ಹೇಗೆ ವರ್ತಿಸುತ್ತೇವೆ, ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ತಿಳಿಸುತ್ತವೆ ಎಂದು ಹೇಳಿದರು. ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ಕಲಾ ನಿಕಾಯದ ಡೀನ್ ಡಾ. ಶ್ರೀಧರ ಎನ್. ಭಟ್, ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ಕುಮಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ರಾಜ್ಯದ ವಿವಿಧೆಡೆಯ 15 ಕಾಲೇಜುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಅನನ್ಯ ಬಳಗದವರು ಪ್ರಾರ್ಥಿಸಿದರು. ಮನಃಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವಂದನ ಜೈನ್ ಸ್ವಾಗತಿಸಿ, ಎಂ.ಎಸ್. ಸಿಂದು ವಂದಿಸಿದರು. ಸೀಮಾ ಜಂಗೀರ್ ಮತ್ತು ಜಾನವಿ ಎಮ್. ನಿರೂಪಿಸಿದರು.

ಯುವನಿಧಿ: ಅರ್ಜಿ ಆಹ್ವಾನ

Article Image

ಯುವನಿಧಿ: ಅರ್ಜಿ ಆಹ್ವಾನ

ಯುವನಿಧಿ ಯೋಜನೆಗೆ 2023 ಹಾಗೂ 2024ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ 6 ತಿಂಗಳವರೆಗೆ (180 ದಿನ) ಉದ್ಯೋಗ ಸಿಗದ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯು ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರಾಗಿರಬೇಕು. ವಾಸವಿರುವ ವಿದ್ಯಾರ್ಥಿ ಎಂದರೆ ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿವರೆಗೆ ಅಧ್ಯಯನ ಮಾಡಿದವರು. ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಗರಿಷ್ಠ 2 ವರ್ಷ ಅವಧಿಯವರೆಗೆ ಮಾತ್ರ ಈ ಭತ್ತೆ ಸಿಗಲಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟು 4,023 ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 3,328 ಫಲಾನುಭವಿಗಳಿಗೆ ಜುಲೈ-2024ರ ಅಂತ್ಯಕ್ಕೆ ಒಟ್ಟು 2,02,69,500 ರೂ. ಡಿ.ಬಿ.ಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆಯಾಗಿರುತ್ತದೆ. ಅರ್ಜಿ ಸಲ್ಲಿಸುವ ವಿಧಾನ https://sevasindhugs. karnataka.gov.in ಮೂಲಕ ಲಾಗಿನ್ ಆಗಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಮೂಲಕವೂ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್‌ ಸಂಖ್ಯೆಗೆ ಜೋಡಣೆ ಆದ ಆಧಾ‌ರ್ ಸಂಖ್ಯೆಯ ಬ್ಯಾಂಕ್‌ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಸ್ವಯಂ-ದೃಢೀಕರಣ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ತಿಂಗಳು 25ನೇ ತಾರೀಕಿನೊಳಗೆ ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು https://sevasindhugs.karnataka.gov.in ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಸ್ . ಡಿ . ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

Article Image

ಎಸ್ . ಡಿ . ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ,ಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಲ್ಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಉಚಿತ ECG, BP, GRBS (Sugar Test) ಹಾಗೂ ವೈದ್ಯರ ಸಮಾಲೋಚನೆಯು ನಾಳೆ (ಆ.6) ಬೆಳಿಗ್ಗೆ 9.30ರಿಂದ ಸಂಜೆ 5.00ರ ತನಕ ನಡೆಯಲಿದೆ . ಸೂಚನೆ : ಕೆ.ಕೆವೈಸಿ ಹಾಗೂ ಸುರಕ್ಷಾ ವಿಮಾ ಹೊಂದಿರುವವರು ವಿಮಾ ಕಾರ್ಡ್‌ನ ಪ್ರತಿಯನ್ನು ತರತಕ್ಕದ್ದು. ಎಲ್ಲಾ ಶಿಕ್ಷಕರು ತಮ್ಮ ಶಾಲಾ ಅಥವಾ ಕಾಲೇಜಿನ ಗುರುತಿನ ಚೀಟಿಯನ್ನು ತರತಕ್ಕದ್ದು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ, ವೆಬ್‌ಸೈಟ್: sdmhospitalujire.com ಹೆಸರು ನೋಂದಾಯಿಸಲು ಸಂಪರ್ಕಿಸಿ: 8073349216, 7760397878

ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶಾತಿಗೆ ಆಹ್ವಾನ

Article Image

ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶಾತಿಗೆ ಆಹ್ವಾನ

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರವರ್ತಿತ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜುಲೈ ಆವೃತ್ತಿಯ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ , ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿಗಳನ್ನು ಪಡೆಯಬಹುದಾಗಿದೆ. ಸ್ನಾತಕೋತ್ತರ (ಪಿಜಿ)ದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಶಾಸ್ತ್ರ , ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಶಾಸ್ತ್ರ , ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತು ಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ ಡ್ಯುಯೆಲ್ ಸ್ಪೆಷಲೈಜೇಷನ್ ( ಅಕೌಂಟಿಂಗ್ ಮತ್ತು ಫೈನಾನ್ಸ್/ಎಚ್‌ಆರ್ ಎಂ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಎಚ್‌ಆರ್‌ಎಂ /ಫೈನಾನ್ಸ್), ಎಂ.ಸಿ.ಎ, ಎಂ.ಲಿಬ್.ಐ.ಎಸ್‌ಸಿ, ಎಂ.ಎಸ್‌ಸಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಷಿಯನ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಮೈಕ್ರೋಬಯಾಲಜಿ ಮನಃಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಫುಡ್ ಮತ್ತು ನ್ಯೂಟ್ರಿಷನ್ ಸೈನ್ಸ್ ಮಾಹಿತಿ ತಂತ್ರಜ್ಞಾನ ಡಾಟಸೈನ್, ಕಂಪ್ಯೂಟರ್‌ಸೈನ್ಸ್). ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು- ಇಂಗ್ಲಿಷ್, ಕಮ್ಯುನಿಕೇಶನ್, ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ಹಣಕಾಸು ನಿರ್ವಹಣೆ ಮಾನವ ಸಂಪನ್ಮೂಲ ನಿರ್ವಹಣೆ, ಬಿಸಿನೆಸ್ ಲಾ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್, ಅಂಬೇಡ್ಕರ್ ಅಧ್ಯಯನಗಳನ್ನು ಅಭ್ಯಸಿಸಬಹುದಾಗಿದೆ. ಡಿಪ್ಲೋಮ ಶಿಕ್ಷಣ ಕಾರ್ಯಕ್ರಮಗಳಾದ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಮತ್ತು ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್, ಅರ್ಲಿ ಚೈಲ್ಡ್ ಹುಡ್‌ಕೇರ್ ಎಜುಕೇಷನ್ ಹಾಗೂ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳಾದ(ಆರು ತಿಂಗಳು)- ಪಂಚಾಯತ್ ರಾಜ್, ನ್ಯೂಟ್ರಿಷನ್ ಮತ್ತು ಫುಡ್, ಮಾಹಿತಿ ಸಂವಹನ ತಂತ್ರಜ್ಞಾನದ (ಐಸಿಟಿ) ಕೋರ್ಸ್ ಗಳನ್ನು ಮಾಡಬಹುದಾಗಿದೆ. ಈ ಮೇಲಿನ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 917090715010, 9591546202 ಸಂಪರ್ಕಿಸಬಹುದು. ಇಲ್ಲವೇ, ಇ-ಮೇಲ್:administration@alvas.org ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು. ಆಳ್ವಾಸ್‌ನಲ್ಲಿ ಪರೀಕ್ಷಾ ಕೇಂದ್ರವನ್ನೂ ಹೊಂದಿರುವ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಲಭ್ಯವಾಗಿದೆ. ಔದ್ಯೋಗಿಕ ನೆಲೆಯಲ್ಲಿ ಸ್ನಾತಕೋತ್ತರ, ಪದವಿ, ಒಂದು ವರ್ಷದ ಡಿಪ್ಲೊಮಾ ಹಾಗೂ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳನ್ನು ವಿವಿಧ ವಿಷಯಗಳಲ್ಲಿ ಮಾಡಲು ಅವಕಾಶವಿದ್ದು, ಉದ್ಯೋಗ ಮಾಡಿಕೊಂಡು ಕೋರ್ಸ್ ಮಾಡಲು ಸುವರ್ಣಾವಕಾಶ ದೊರೆತಿದೆ.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ತರಬೇತಿಯ ಸಮಾರೋಪ ಸಮಾರಂಭ

Article Image

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಪ್ರತಿಯೊಬ್ಬರು ವೃತಿ ಜೀವನದಲ್ಲಿ ತಮ್ಮದೇ ಆದ ಶಿಸ್ತು ಅನ್ನು ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು ಜೊತೆಗೆ ದುರಭ್ಯಾಸಗಳಿಂದ ಸಹ ದೂರ ಇರುಬೇಕು. ಹಾಗೂ ಕ್ಷೌರಿಕ ವೃತಿಯಲ್ಲಿ ಹೊಸ ಬದಲಾವಣೆಗಳು ಆಗುತ್ತಿದೆ ಅದನ್ನು ಅಳವಡಿಸಿಕೊಂಡು ನಮ್ಮ ವೃತ್ತಿ ಬಗ್ಗೆ ಹೆಮ್ಮೆ ಇರಬೇಕು. ಪರಮ ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರುಡ್‌ ಸೆಟ್‌ ಸಂಸ್ಥೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳೊಂದಿಗೆ ಉಚಿತ ತರಬೇತಿ ನೀಡಿ ಸವಿತಾ ಸಮಾಜದ ಹುಡುಗರಿಗೆ ಅನುಕೂಲ ಮಾಡಿದ್ದಾರೆ ಅವರಿಗೆ ಕೃತಜ್ಞತೆಯನ್ನು ನೀವೇ ಸ್ವ ಉದ್ಯೋಗಿಗಳಾಗಿ ಯಶಸ್ಸು ಕಾಣುವುದರಾ ಮೂಲಕ ಸಲ್ಲಿಸಬೇಕೆಂದು ರಾಯಚೂರು ಮಾಜಿ ರಾಜಸಭಾ ಸದಸ್ಯರಾದ ದಿವಗಂತ ಅಶೋಕ್‌ ಗಸ್ತಿಯವರ ಧರ್ಮಪತ್ನಿ ಸುಮಾ ಅಶೋಕ್‌ ಗಸ್ತಿ ಅಭಿಪ್ರಾಯಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಮೆನ್ಸ್ ಪಾರ್ಲರ್‌ ಸಲೂನ್‌ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಅತಿಥಿಯಾಗಿದ್ದ ಶ್ರೀ ರಾಘವೇಂದ್ರ ಇಟಗಿ, ನಿರ್ದೇಶಕರು, ಕರ್ನಾಟಕ ರಾಜ್ಯ ಸವಿತಾ ಇವರು ಮಾತನಾಡಿ ವೃತಿಯನ್ನು ಹೊಸತನ ಇಟ್ಟುಕೊಂಡು ಮುಂದುವರೆಯಿರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ, ರವಿ ಕುಮಾರ್‌ ಕಡೂರು, ಉಪಸ್ಥಿತರಿದ್ದರು ವೀರೇಶ ಬಳ್ಳಾರಿ ಪ್ರಾರ್ಥನೆ ಮಾಡಿದರು. ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ವಂದಿಸಿದರು. ಸುಮಾರು 32 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ಪ್ರಭಾಕರ್‌ , ವರಪ್ರಸಾದ್‌ ತರಬೇತಿಯ ಅನುಭವ ಹಂಚಿಕೊಂಡರು.

ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್

Article Image

ಮೂಡುಬಿದಿರೆ: ‘ಸಿಎ’ ಕೌನ್ಸೆಲಿಂಗ್ ಪ್ರೋಗ್ರಾಮ್

ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಹಾಗೂ ಐ.ಸಿ.ಎ.ಐ ಮಂಗಳೂರು ಚಾಪ್ಟರ್ ವತಿಯಿಂದ ಆಳ್ವಾಸ್ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಿಎ ವೃತ್ತಿಯ ಕುರಿತು ಮಾಹಿತಿ ಕಾರ‍್ಯಕ್ರಮ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ- ಇತ್ತೀಚಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಇಲ್ಲವೇ ತಾಂತ್ರಿಕ ಪದವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನೂರಾರು ದಾರಿಗಳಿವೆ. ಅದನ್ನು ಅವರು ಅರಿತುಕೊಳ್ಳಬೇಕು ಎಂದರು. ಸಿಎಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಆರಂಭಿಕ ಹಂತದಲ್ಲೇ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಎಲ್ಲಾ ಅವಕಾಶಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪದವಿ ಪೂರ್ವ ಹಂತದಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಿಎ ಕಾರ್ತಿಕೇಯ ಶೆಣೈ ಮಾತನಾಡಿ ಸಿಎ ಆರಂಭಿಕ ಹಂತದಿಂದ ಹಿಡಿದು ಕೊನೆಯ ತನಕ ಎಲ್ಲಾ ಪರೀಕ್ಷೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸಿಎ ಗೌತಮ್ ನಾಯಕ್ ಮಾತನಾಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರ ಉದ್ದೇಶಗಳ ಬಗ್ಗೆ ವಿವರಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಎ ಡೇನಿಯಲ್ ಪಿರೇರಾ ಹಾಗೂ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ.ಡಿ ಇದ್ದರು. ವಾಣಿಜ್ಯ ಸಂಘದ ಸಂಯೋಜಕಿ ರಶ್ಮಿನ್ ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’

Article Image

ಉಜಿರೆ: ಶ್ರೀ ಧ.ಮಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’

“ಸಂಸ್ಕೃತವು ಸಾರ್ವಕಾಲಿಕ ಶ್ರೇಷ್ಠ ಭಾಷೆ ಹಾಗೂ ಜ್ಞಾನ ಪರಂಪರೆಯ ಭಾಷೆ. ನಾವು ಭಾಷೆಯನ್ನು ಕಲಿಯುವುದು, ಭಾಷೆಯ ಬಗ್ಗೆ ಕಲಿಯುವುದು ಹಾಗೂ ಭಾಷೆಯ ಮೂಲಕ ಕಲಿಯುವುದು ಇದು ಪ್ರತ್ಯೇಕ ಆಯಾಮಗಳುಳ್ಳ ವಿಷಯವಾಗಿದೆ. ಇದನ್ನು ಅರಿತರೆ ಭಾಷೆಯ ಬಗ್ಗೆ ವಿಶಾಲ ವ್ಯಾಪ್ತಿಯಲ್ಲಿ ಅರಿಯಬಹುದು” ಎಂದು ಬೆಳಾಲಿನ ಎಸ್.ಡಿ.ಎಂ. ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಆ. 30ರಂದು ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. "ಭಾಷೆಯ ಮೂಲಕ ಹಲವು ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತೇವೆ. ಅಷ್ಟೇ ಅಲ್ಲದೆ ಇತ್ತೀಚಿಗೆ ವಿದೇಶಿಗರು ಕೂಡ ಸಂಸ್ಕೃತ ಭಾಷೆಯನ್ನು ಕಲಿಯುತ್ತಿದ್ದಾರೆ. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಪ್ರೇರಣೆ ಹಾಗೂ ಪೋಷಣೆಯನ್ನು ನೀಡಿದೆ. ಶಿಕ್ಷಣದಲ್ಲಿ ಜ್ಞಾನ ಮತ್ತು ವೃತ್ತಿಯ ನಡುವೆ ಭಾಷೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದರು. “ಸಂಸ್ಕೃತ ಭಾಷೆಯ ಮೂಲಕ ನಮ್ಮ ಪ್ರಾಚೀನ ಪರಂಪರೆ ಹಾಗೂ ಸೊಗಡನ್ನು ಪಸರಿಸಬೇಕಾಗಿರುವುದು ವಿದ್ಯಾರ್ಥಿಗಳ ಜವಾಬ್ದಾರಿ" ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ. ಗಣೇಶ್ ನಾಯಕ್ ಮಾತನಾಡಿ, “ಭಾಷೆಗಳು ನಮ್ಮಲ್ಲಿರುವ ಆಲೋಚನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಸಹಕಾರಿಯಾಗುತ್ತವೆ. ಸಂಸ್ಕೃತ ಭಾಷೆಯು ವ್ಯಾವಹಾರಿಕ ಹಾಗೂ ನೈತಿಕ ಬದುಕಿಗೆ ಸಹಕಾರಿಯಾಗುತ್ತದೆ. ಸಂಸ್ಕೃತ ಭಾಷೆಯ ಮೂಲಕ ತಾಂತ್ರಿಕ ದೃಷ್ಟಿಕೋನ, ಶಬ್ದ ಭಂಡಾರ, ಭಾರತೀಯ ಸಂಸ್ಕೃತಿ, ಪರಂಪರೆ, ಐತಿಹಾಸಿಕ ನೆಲೆಯ ಬಗ್ಗೆ ತಿಳಿದುಕೊಳ್ಳಬಹುದು” ಎಂದರು. ವಿಭಾಗದ 'ಸುಬೋಧಿನೀ' ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಂಸ್ಕೃತ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಸವಿತಾ ಕುಮಾರಿ ಹಾಗೂ ಸಂಸ್ಕೃತ ವಿಭಾಗದ ಸಹ ಪ್ರಾಧ್ಯಾಪಕ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸುಮುಖ್ ಪ್ರಾರ್ಥಿಸಿ, ವಂಶಿ ಆರ್ ಭಟ್ ವಂದನಾರ್ಪಣೆಗೈದರು. ವಿದ್ಯಾರ್ಥಿನಿಯರಾದ ಸಿಂಚನ ಪಾಳಂದೆ ಹಾಗೂ ಸಿಂಚನ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಸಂಸ್ಕೃತ ಪ್ರತಿಭಾ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ. ನೆನಪಿನಂಗಳ'ದ ಹದಿನೈದನೇ ಕಂತಿನ ಕಾರ್ಯಕ್ರಮ: ಹದಿನೈದು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Article Image

ಎಸ್.ಡಿ.ಎಂ. ನೆನಪಿನಂಗಳ'ದ ಹದಿನೈದನೇ ಕಂತಿನ ಕಾರ್ಯಕ್ರಮ: ಹದಿನೈದು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಇಂದು (ಆ.31) ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಸಿಕ ಸಂವಾದ ಸರಣಿ (ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) 'ಎಸ್.ಡಿ.ಎಂ. ನೆನಪಿನಂಗಳ'ದ ಹದಿನೈದನೇ ಕಂತಿನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ, ಕಾಲೇಜಿನ ಹದಿನೈದು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ. ಸಹಾಯಧನ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಕೇಂದ್ರ ಸರಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಸೆಂಟ್ರಲ್ ಬ್ಯುರೋ ಆಫ್ ಕಮ್ಯೂನಿಕೇಶನ್ ನ ಮಂಗಳೂರು ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ್ ನಿಡ್ಲೆ (ಜಿತು ನಿಡ್ಲೆ), ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ, ಉಜಿರೆ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ ಹಾಗೂ ಮಂಗಳೂರಿನ ನ್ಯಾಶನಲ್ ಟ್ಯುಟೋರಿಯರ್ ಕಾಲೇಜಿನ ಪ್ರಾಂಶುಪಾಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯು.ಹೆಚ್. ಖಾಲಿದ್ ಮುಖ್ಯ ಅತಿಥಿಗಳಾಗಿದ್ದರು. ಜಿ. ತುಕಾರಾಮ್ ನಿಡ್ಲೆ ಮಾತನಾಡಿ, “ನೆನಪು ಮಾಡಿಕೊಳ್ಳುವುದಕ್ಕಿಂತ, ನೆನಪಿನ ಜೊತೆ ಬದುಕುವವರು ನಾವು. ಎಸ್.ಡಿ.ಎಂ. ಕಾಲೇಜಿನ ನೆನಪು ನನಗೆ ಮತ್ತೆ ಮತ್ತೆ ಆಗುತ್ತಿರುತ್ತದೆ” ಎಂದರು. “ಆ ಕಾಲದಲ್ಲಿ ಇಲ್ಲಿನಷ್ಟು ಸುಸಜ್ಜಿತ ಗ್ರಂಥಾಲಯ ಬೇರೆ ಎಲ್ಲೂ ಇರಲಿಲ್ಲ. ಸಾಹಿತಿ ಕೆ.ಟಿ. ಗಟ್ಟಿ ಅವರ ಪ್ರೇರಣೆಯಿಂದ ನಾನು ಇಂಗ್ಲಿಷ್ ಪುಸ್ತಕ ಓದಲು ಆರಂಭಿಸಿದೆ. ನಾವು ‘ಲಹರಿ’ ಎಂಬ ಕೈ ಬರಹದ ಪತ್ರಿಕೆ ಪ್ರಾರಂಭಿಸಿದ್ದೆವು. ಕಾಲೇಜು ನನಗೆ ರಂಗಭೂಮಿ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕವಾಗಿ ಬೆಳೆಯಲು ಹೇರಳ ಅವಕಾಶ ಕೊಟ್ಟಿದೆ” ಎಂದರು. ಡಾ. ಬಿ.ಪಿ. ಸಂಪತ್ ಕುಮಾರ ಮಾತನಾಡಿ, “ಬೀಜವು ಭೂಮಿಗೆ ಬಿದ್ದು ಬೃಹತ್ ವೃಕ್ಷವಾಗುವ ರೀತಿಯಲ್ಲಿಯೇ ವಿದ್ಯೆ ಕೂಡ. ಅನ್ನದಾನಕ್ಕಿಂತ ಶ್ರೇಷ್ಠದಾನ, ವಿದ್ಯಾದಾನ. ಓದಬೇಕು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಮೂಡಿದ್ದೇ ಈ ಕಾಲೇಜಿಗೆ ಬಂದ ಬಳಿಕ. ಈ ಕಾಲೇಜು, ಸಿದ್ಧವನ ಗುರುಕುಲ ವಿದ್ಯೆಯನ್ನು ನೀಡಿ ನಮ್ಮ ಜೀವನ ರೂಪಿಸಿದೆ” ಎಂದರು. “ನಿಮ್ಮ ಜೀವನದ ಯಶಸ್ಸು ಯಾವುದೆಂದರೆ ಅದು ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳುವುದು. ನೀವು ಉತ್ತಮ ಕೆಲಸ ಮಾಡಿ. ಇದರಿಂದ ನಿಮಗೂ ನಿಮ್ಮ ಮುಂದಿನವರಿಗೂ ಶ್ರೇಯಸ್ಸು ಸಿಗುತ್ತದೆ” ಎಂದು ಕಿವಿಮಾತು ಹೇಳಿದರು. ಯು.ಹೆಚ್. ಖಾಲಿದ್ ಮಾತನಾಡಿ, “ನನ್ನೆಲ್ಲಾ ಸಾಧನೆಗೆ ಕಾರಣ ಎಸ್.ಡಿ.ಎಂ. ಕಾಲೇಜು. ನನ್ನ ಬದುಕನ್ನು ಬೆಳಗಿಸಿ ನನ್ನ ಮುಂದಿನ ಬದುಕಿಗೆ ದಾರಿ ಮಾಡಿಕೊಟ್ಟಿದೆ” ಎಂದರು. “ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಮಾತಿದೆ. ಹಾಗೆಯೇ ನಮ್ಮ ಶಕ್ತಿ, ಆಸಕ್ತಿ, ಕಾಳಜಿ, ಪ್ರಯತ್ನವನ್ನು ನಾವೇ ಮೆಚ್ಚಿಕೊಳ್ಳಬೇಕು. ವಿದ್ಯಾವಂತರಾಗಿ ನೀವು ಏನು ಬೇಕಾದರೂ ಮಾಡಿ. ಆದರೆ ಸುಳ್ಳುಗಾರರು, ಪುಂಡರು, ವಂಚಕರು, ಕುಡುಕರು, ಕಟುಕರು ಆಗಬೇಡಿ” ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, “ಏನೇ ಆಗುವ ಮೊದಲು ನೀವು ಉತ್ತಮ ಮನುಷ್ಯರಾಗಿ, ನಿಮ್ಮ ಜೀವನದಲ್ಲಿ ಶಿಸ್ತು, ಗುರಿ ಇರಲಿ” ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಈಗಿನ ಮಕ್ಕಳ ಓದಿಗೆ ಸಹಾಯವಾಗಲಿ ಎಂದು ಸಹಾಯಧನ ನೀಡುತ್ತಿದ್ದಾರೆ. ಮಧ್ಯಾಹ್ನದ ಬಿಸಿ ಊಟಕ್ಕೆ ನೆರವು ನೀಡುತ್ತಿದ್ದಾರೆ. ಅವರು ನೀಡಿದ ಹಣದ ಮೌಲ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು. ಅತಿಥಿಗಳನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ. ಪಿ. ಶ್ರೀನಾಥ್ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅಭಿಲಾಷ್ ವಂದಿಸಿ, ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.

‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ

Article Image

‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ

ಮೂಡುಬಿದಿರೆ: ಎಲ್ಲರೂ ಒಂದೇ ಮನಸ್ಸಿನಿಂದ ಒಂದು ನಿಗದಿತ ಗುರಿಯೆಡೆಗೆ ಹೆಜ್ಜೆ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯ ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ಸೋಮವಾರ, ಆಳ್ವಾಸ್‌ನ ಶಿವರಾಮ್ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ- ದಿ ಮ್ಯಾಟ್ರಿಕ್ಸ್ ಗ್ರೂಪ್ ಆಯೋಜಿಸಿದ್ದ- ‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಸಾಮಾರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತು, ತಮ್ಮಲ್ಲಿರುವ ನ್ಯೂನತೆಗಳನ್ನು ಮಣಿಸಲು ಆರಂಬಿಸಿದಾಗ ಸಾಧಿಸಲು ಹೊರಟ ಕೆಲಸದಲ್ಲಿ ಜಯ ಲಭಿಸಲು ಸಾಧ್ಯ. ಇದರ ಜೊತೆಗೆ ಪ್ರತಿಯೊಬ್ಬರು ತಂಡದಲ್ಲಿ ಕೆಲಸಮಾಡುವ ಅಗತ್ಯತೆಯನ್ನು ಅರಿಯಬೇಕು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಶಸ್ತö್ಯವಿರುವುದಿಲ್ಲ. ತಂಡದ ಶ್ರೇಯಸ್ಸೇ ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಈ ಹಂತದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಈ ಪ್ರಕ್ರಿಯೆಗೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ ಎಂಬುದು ಮುಖ್ಯ. ಶಿಕ್ಷಣ ನಮ್ಮನ್ನು ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದ ವಿದ್ಯಾರ್ಥಿಗಳನ್ನಾಗಿಬೇಕು. ಈ ಹಂತದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡು ಬೆಳವಣಿಗೆ ಹೊಂದುವತ್ತಾ ಶ್ರಮಿಸಬೇಕು ಎಂದರು. ಮ್ಯಾಟ್ಟಿಕ್ಸ್ ಟೀಮ್‌ನ ಸಂಯೋಜಕ ಆದಿತ್ಯ ಟೀಮ್ ಬೆಳೆದುಬಂದ ಹಾದಿ ಹಾಗೂ ತೊಡಿಗಿಕೊಂಡಿರುವ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕುಲಸಚಿವರು ಮೌಲ್ಯಮಾಪನ ಡಾ. ನಾರಾಯಣ ಶೆಟ್ಟಿ ಇದ್ದರು. ಸನ್ವಿತ್ ಕಾರ‍್ಯಕ್ರಮ ನಿರ್ವಹಿಸಿ, ಆದರ್ಶ ಸ್ವಾಗತಿಸಿ, ವೆಂಕಟೇಶ್ ಮಲ್ಯ ಹಾಗೂ ತಂಡ ಪ್ರಾರ್ಥಿಸಿ, ಕಾರ್ತಿಕ್ ಅತಿಥಿಯನ್ನು ಪರಿಚಯಿಸಿ, ಆದಿ ಎಸ್ ರೈ ವಂದಿಸಿದರು.

ರೋಟರಿಯಿಂದ ರಕ್ಷಾಬಂಧನ ಸಂಭ್ರಮಾಚರಣೆ

Article Image

ರೋಟರಿಯಿಂದ ರಕ್ಷಾಬಂಧನ ಸಂಭ್ರಮಾಚರಣೆ

ಉಜಿರೆ : ಸಂಕುಚಿತವಾಗುತ್ತಿರುವ ಮಾನವ ಸಂಬಂಧಗಳಿಗೆ ಹಬ್ಬ- ಆಚರಣೆಗಳ ಮಹತ್ವವನ್ನು ಅರಿತುಕೊಳ್ಳಬೇಕು. ರಕ್ಷಾಬಂಧನದಂತ ಆಚರಣೆಯಿಂದ ಸಮಾಜದಲ್ಲಿ ಒಬ್ಬರನೊಬ್ಬರು ಸದಾ ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳೋಣ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯ ಕುಮಾರಿ ಅಭಿಪ್ರಾಯಪಟ್ಟರು. ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿಬೆಟ್ಟು, ರೊ.ಕೆ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ರಕ್ಷಾ ಬಂಧನ ಸಂಭ್ರಮಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪುರಾಣ ಹಾಗೂ ಇತಿಹಾಸಗಳಲ್ಲೂ ರಕ್ಷಾ ಬಂಧನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಹಬ್ಬ ಹರಿದಿನಗಳು ತಾಂತ್ರಿಕಗೊಳ್ಳುತ್ತಿರುವ ವರ್ತಮಾನದಲ್ಲಿ ಹಬ್ಬಗಳ ವೈಜ್ಞಾನಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ರೋಟರಿಯ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾ ಮಾತನಾಡಿ, ರಕ್ಷಾ ಬಂಧನ ರಕ್ಷೆ ಮತ್ತು ಪ್ರೀತಿಯ ಸಂಕೇತ. ಕೈ ಕಟ್ಟುವ ಒಂದಗಲದ ದಾರಕ್ಕೆ ತನ್ನದೇ ಆದ ಶಕ್ತಿ ಇದೆ ಎಂದರು. ದೀಪ ಬೆಳಗುವ ಮೂಲಕ ಗೌರವಿಸಿ ರಕ್ಷಾಬಂಧನವನ್ನು ಕಟ್ಟಿ ಸಿಹಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ರೊಟೆರಿಯನ್ ಸೋನಿಯಾ ವರ್ಮಾ ಸೇರಿದಂತೆ ಇತರೆ ಸದಸ್ಯರು ಉಪಸ್ಥಿತರಿದ್ದರು.

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ‘ಎಸ್ ಡಿ ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024’

Article Image

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ‘ಎಸ್ ಡಿ ಎಂ ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024’

ಉಜಿರೆ, ಆ.24: ಋಣಭಾರ ಕಡಿಮೆಯಾಗದ ಹೊರತು ಜೀವನ ಸಾರ್ಥಕ್ಯ ಕಾಣಲಾರದು. ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಋಣಭಾರ ಕಡಿಮೆ ಮಾಡಿಕೊಳ್ಳಬಹುದು ಎಂದು ಉಜಿರೆ ಎಸ್ ಡಿ ಎಂ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ಎನ್. ಸತ್ಯನಾರಾಯಣ ಹೊಳ್ಳ ಹೇಳಿದರು. ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಆ. 24ರಂದು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಪುನರ್ಮಿಲನ (ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ 2024) ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವ್ಯಕ್ತಿಗೆ ವಿದ್ಯಾಋಣ, ಅನ್ನಋಣ ಇತ್ಯಾದಿ ಋಣಗಳಿರುತ್ತವೆ. ಅದು ದೊಡ್ಡ ಭಾರವಾಗಿದ್ದು, ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮೂಲಕ ಋಣದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ನೈತಿಕ ಬೆಂಬಲ ನೀಡುವುದು, ಧನಸಹಾಯ ನೀಡುವುದು, ಸಂಘ ಸಂಸ್ಥೆಗಳ ಮೂಲಕ ನೆರವು ನೀಡುವುದು ಇತ್ಯಾದಿ ಕ್ರಮಗಳ ಮೂಲಕ ಋಣಭಾರ ಇಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು. “ಹಿರಿಯ ವಿದ್ಯಾರ್ಥಿ ಸಂಘವು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಉದ್ಯೋಗ ಪಡೆಯುವಲ್ಲಿ ನೆರವು ನೀಡುತ್ತಿದ್ದು, ಆ ಮೂಲಕ ವಿದ್ಯಾಸಂಸ್ಥೆಯ ಋಣಭಾರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದರು. ಧನಾತ್ಮಕ ಚಿಂತನೆಯೊಂದಿಗೆ, ಇಚ್ಚಾಶಕ್ತಿ ಹೊಂದಿ ಜೀವನದಲ್ಲಿ ಅಭಿವೃದ್ಧಿ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, “ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರಿಂದ ಪ್ರಾರಂಭವಾದ ಉಜಿರೆ ಎಸ್.ಡಿ.ಎಂ. ಕಾಲೇಜು 58 ವರ್ಷಗಳಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಜೀವನೋಪಾಯಕ್ಕೆ ಮಾತ್ರವಲ್ಲದೆ, ಉತ್ತಮ ಬದುಕಿಗೆ ಹೇತುವಾಗಿದೆ. ವೀರೇಂದ್ರ ಹೆಗ್ಗಡೆ ಅವರ ಪೋಷಣೆಯಲ್ಲಿ ಸಂಸ್ಥೆ ಇನ್ನಷ್ಟು ಬೆಳೆದಿದೆ. ಸಂಸ್ಥೆಯಿಂದ ಔದ್ಯೋಗಿಕ, ವೈಯಕ್ತಿಕ ಕೊಡುಗೆ ಪಡೆದಿರುವ ನಾವು ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ರೀತಿಯಲ್ಲಿ ಕೊಡುಗೆ ನೀಡುವುದು ನಮ್ಮ ಜವಾಬ್ದಾರಿ. ಹಿರಿಯ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಶ್ರೇಷ್ಠತೆ ಬರುತ್ತದೆ. ಅವರಿಂದ ಸಂಸ್ಥೆಗೆ ಬ್ರ್ಯಾಂಡ್ ವ್ಯಾಲ್ಯೂ ಲಭಿಸಿದೆ. ಸಂಸ್ಥೆಯ ಷಷ್ಟ್ಯಬ್ದಿ ಕೂಡ ಉತ್ತಮ ರೀತಿಯಲ್ಲಿ ಆಚರಿಸುವಂತಾಗಲಿ” ಎಂದರು. ಇನ್ನೋರ್ವ ಅತಿಥಿ, ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, "ಎಸ್.ಡಿ.ಎಂ. ವಿದ್ಯಾ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟ ಗ್ರಾಮೀಣ ಭಾಗದ ವಿದ್ಯಾಸಂಸ್ಥೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಯಲ್ಲಿ ನಮ್ಮ ಕಾಲೇಜು ಶ್ರೇಷ್ಠ ಸಾಧನೆಗಳನ್ನು ಮಾಡಿದೆ. ಇಂದಿನ ಕಾರ್ಯಕ್ರಮ ಮತ್ತೊಮ್ಮೆ ಹಿರಿಯ ವಿದ್ಯಾರ್ಥಿಗಳ ಮಿಲನಕ್ಕೆ ಕಾರಣವಾಗಿದೆ. ಹಿರಿಯ ವಿದ್ಯಾರ್ಥಿಗಳು ಅತ್ಯಂತ ಸಂವೇದನಾಶೀಲರಾಗಿ ಇಂದಿನ ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ. ಮುಂದೆಯೂ ಕೂಡ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಹೀಗೇ ಇರಲಿ" ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, "ಇಂದು ವಿವಿಧ ಹುದ್ದೆಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಸ್.ಡಿ.ಎಂ. ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರತ್ನವರ್ಮ ಹೆಗ್ಗಡೆ ಅವರ ಕನಸು ಸಾಕಾರಗೊಂಡಿದೆ. ಕಾಲೇಜಿನ ಬೆಳವಣಿಗಾಗಿ ಹಿರಿಯ ವಿದ್ಯಾರ್ಥಿ ಸಂಘ ಸದಾ ನಿಲ್ಲುತ್ತದೆ. ಪ್ರತಿ ತಿಂಗಳ ನೆನಪಿನಂಗಳ ಕಾರ್ಯಕ್ರಮದ ಆಯೋಜನೆ ಹಾಗೂ ವಿವಿಧ ಚಟುವಟಿಕೆಗಳ ಆಯೋಜನೆ ಮಾಡುವುದರ ಮೂಲಕ ನಮ್ಮ ಮಾತೃ ಸಂಸ್ಥೆ ಎಸ್.ಡಿ.ಎಂ. ಕಾಲೇಜಿನ ಋಣವನ್ನು ಭರಿಸಲು ಸಾಧ್ಯವಾಗಿದೆ. ಸಂಘಟನೆಗೆ ಅಂದಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಭದ್ರ ತಳಪಾಯ ಹಾಕಿದ್ದಾರೆ. ಮಾರ್ಗದರ್ಶನ ನೀಡಿದ್ದಾರೆ" ಎಂದರು. ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಸಂಘದ ವತಿಯಿಂದ 5 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಾದ ಸುಶಾಂತ್ ಶೆಟ್ಟಿ ಮತ್ತು ಸಿರಿ ಶರ್ಮ ಅವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್, "ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ. ವಿದ್ಯಾಸಂಸ್ಥೆ ವರದಾನವಾಗಿದೆ. ಇಂತಹ ವಿದ್ಯಾಸಂಸ್ಥೆಯ ಜೊತೆ ಒಡನಾಟವನ್ನು ಹಾಗೆಯೇ ಉಳಿಸಿಕೊಳ್ಳಬೇಕು, ಆಗಾಗ ಕಾಲೇಜಿಗೆ ಭೇಟಿ ನೀಡಿ ನಮ್ಮ ಸಂಬಂಧವನ್ನು ನೆನಪಿಸಿಕೊಳ್ಳಬೇಕು ಎನ್ನುವುದೇ ಸಂಘದ ಉದ್ದೇಶ” ಎಂದರು. ಎಸ್ ಡಿ ಎಂ ಹಿರಿಯ ವಿದ್ಯಾರ್ಥಿಗಳ ಸಂಘವು ಪ್ರಸ್ತುತ ಅತ್ಯಂತ ರಚನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದೆ. ಕಾಲೇಜಿನಲ್ಲಿ ಪ್ರತಿ ತಿಂಗಳು ನಿರಂತರ ಎಸ್.ಡಿ.ಎಂ. ನೆನಪಿನಂಗಳ (ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ) ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈವರೆಗೆ 14 ಕಾರ್ಯಕ್ರಮ ನಡೆದಿದ್ದು ಒಟ್ಟು 14 ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ತಲಾ 5 ಸಾವಿರದಂತೆ ಒಟ್ಟು 75 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅರ್ಹ 15 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಿ ಉದಾರತೆ ತೋರಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಗುರುನಾಥ ಪ್ರಭು, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಹಾಗೂ ಸ್ಥಳೀಯ ಎಸ್.ಡಿ.ಎಂ. ಸಂಸ್ಥೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ವೈದೇಹಿ ಮತ್ತು ಬಳಗದವರು ಪ್ರಾರ್ಥಿಸಿದರು. ಸಂಘದ ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ವಂದಿಸಿದರು. ಡಾ. ದಿವಾಕರ ಕೆ. ಮತ್ತು ದಿವ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿಯ ಕಲಾಮಯಂ ತಂಡದವರಿಂದ ವಿಶೇಷ ರಸಮಂಜರಿ ಕಾರ್ಯಕ್ರಮ ನಡೆಯಿತು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭ

Article Image

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಛಾಯಾಗ್ರಹಣ (ಫೋಟೊಗ್ರಫಿ) ವಿಶಿಷ್ಟ ಕಲೆಯಾಗಿದ್ದು, ಸಮಯ, ಸಂದರ್ಭ ಮತ್ತು ಭಾವನೆಗಳನ್ನು ಗಮನಿಸಿ ಫೋಟೊ ತೆಗೆಯುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಬೆಳಕು, ಮುಖದ ಭಾವನೆಗಳು, ಹಾಗೂ ಮಾನಸಿಕ ಸ್ಥಿತಿಯನ್ನು ಗಮನಿಸಿ ಫೋಟೊ ತೆಗೆದರೆ ಮಾತ್ರ ಅದು ಆಕರ್ಷಕವಾಗಿ ಮೂಡಿ ಬರಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳಲ್ಲಿ ನಡೆದ “ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ” ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಇಂದು ವಿವಿಧ ರೀತಿಯ ಪ್ರಿಂಟಿಂಗ್ ಪೇಪರ್‌ಗಳು ಬಂದಿವೆ. ಅದರ ಬಗ್ಯೆಯೂ ಮಾಹಿತಿ ಕಲೆ ಹಾಕಿ, ಆಲ್ಬಂ ಮಾಡುವಾಗಲೂ ಹತ್ತು ಸಾರಿ ಮತ್ತೆ ಮತ್ತೆ ನೋಡುವಂತೆ ಅದನ್ನು ತಯಾರಿಸಬೇಕು. ಜೀವನದಲ್ಲಿ ಉತ್ತಮ ಶಿಸ್ತನ್ನು ಕೂಡಾ ಅಳವಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತುಸಂಗ್ರಹಾಲಯದಲ್ಲಿ 700 ಕ್ಯಾಮರಾಗಳು ಇವೆ. ಕ್ಯಾಮರಾಗಳ ಮೌಲ್ಯವರ್ಧನೆ ಹಾಗೂ ಮಾದರಿಗಳನ್ನು ಗಮನಿಸಿ ಬುದ್ಧಿವಂತಿಕೆಯಿಂದ ಪ್ರಗತಿ ಸಾಧಿಸಬೇಕು ಎಂದು ಹೆಗ್ಗಡೆಯವರು ತಿಳಿಸಿದರು. “ಸಿರಿ” ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ರುಡ್‌ಸೆಟ್ ಬೆಳೆದು ಬಂದ ವಿಧಾನದ ಅವಲೋಕನ ಮಾಡಿದರು. ಜಯರಾಮ ಮತ್ತು ಸಿದ್ದಾರ್ಥ ತರಬೇತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮತ್ತು ಅತಿಥಿ ಉಪನ್ಯಾಸಕ ಸೂರ್ಯಪ್ರಕಾಶ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

Article Image

ಉಜಿರೆಯಲ್ಲಿ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ

ಉಜಿರೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ವರ್ಷಗಳ ಕಾಲ ಅನುಪಮವಾಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ನೌಕರರು ಸರ್ಕಾರಕ್ಕೂ, ಸಮಾಜಕ್ಕೂ ಉತ್ತಮ ಸೇವೆ ನೀಡಿದ್ದು ಸ್ವಾಭಿಮಾನದೊಂದಿಗೆ ಸ್ವಾವಲಂಬಿ ಜೀವನ ನಡೆಸಬೇಕು. ತಮ್ಮ ಅನುಭವದ ಪರಿಪಕ್ವತೆಯೊಂದಿಗೆ ನಿವೃತ್ತರು ಸಮಾಜಸೇವೆಯಲ್ಲಿ ಪ್ರವೃತ್ತರಾಗಬೇಕು ಎಂದು ಉಜಿರೆಯ ಎಸ್. ಡಿ. ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು. ಅವರು ಮಂಗಳವಾರ ಉಜಿರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ ಸದಸ್ಯತ್ವ ನೊಂದಣಿ ಮತ್ತು ಪಿಂಚಣಿ ಮಾಹಿತಿ ಸಮಾವೇಶ ಉದ್ಘಾಟಿಸಿ, ಮನವಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿಯೂ ನಿವೃತ್ತಿ ಒಂದು ಅನಿವಾರ್ಯ ಹಂತವಾಗಿದ್ದು ನಿವೃತ್ತರು ತಾಳ್ಮೆ , ಪ್ರೀತಿ-ವಿಶ್ವಾಸ ಹಾಗೂ ಮಾನಸಿಕ ಪರಿಪಕ್ವತೆಯೊಂದಿಗೆ ಆರೋಗ್ಯಪೂರ್ಣ ಜೀವನ ನಡೆಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿವೃತ್ತ ಪ್ರಾಂಶುಪಾಲರುಗಳಾದ ಪ್ರೊ ಟಿ. ಕೃಷ್ಣಮೂರ್ತಿ ಮತ್ತು ಪ್ರೊ. ಎ. ಜಯಕುಮಾರ್ ಶೆಟ್ಟಿ ಹಾಗೂ ವೇಣೂರಿನ ಶೀಲಾ ಎಸ್. ಹೆಗ್ಡೆ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲಶೆಟ್ಟಿ ಮಾತನಾಡಿ, ನಿವೃತ್ತರು ವೃದ್ಧರಲ್ಲ, ಪ್ರಬುದ್ದರು. ಕಿರಿಯರಿಗೆ ಸಕಾಲಿಕ ಮಾಹಿತಿ, ಮಾರ್ಗದರ್ಶನ ನೀಡಬೇಕು. ಪ್ರತಿಯೊಬ್ಬ ಸದಸ್ಯರೂ ಸಂಘಟನೆ ಬಗ್ಗೆ ಅಭಿಮಾನ ಮತ್ತು ಆಸಕ್ತಿಯಿಂದ ಸೇವೆ ಮಾಡಬೇಕು ಎಂದು ಹೇಳಿದರು. ಎಲ್ಲಾ ವಿಭಾಗಸಂಘಟಕರು ಮತ್ತು ಹೊಸ ಸದಸ್ಯರನ್ನು ಗೌರವಿಸಲಾಯಿತು. ಸನ್ಮತ್ ಕುಮಾರ್ ನಾರಾವಿ ಪ್ರಾಸ್ತ್ತಾವಿಕವಾಗಿ ಮಾತನಾಡಿದರು. ಬಿ ಸೋಮಶೇಖರ್ ಶೆಟ್ಟಿ ಸ್ವಾಗತಿಸಿದರು. ವಿಶ್ವಾಸ ರಾವ್ ಧನ್ಯವಾದವಿತ್ತರು. ವಸಂತ ರಾವ್ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.

ಸೂಚನೆ: ಬೆಳೆ ವಿಮೆ ಯೋಜನೆ ಜಾರಿ

Article Image

ಸೂಚನೆ: ಬೆಳೆ ವಿಮೆ ಯೋಜನೆ ಜಾರಿ

ಮಂಗಳೂರು: ಹವಾಮಾನ ವೈಪರೀತ್ಯದಿಂದ ತೋಟಗಾರಿಕೆ ಬೆಳೆ ನಷ್ಟವಾಗಿದ್ದರೆ ಪರಿಹಾರ ತುಂಬಿ ಕೊಡಲು 2024-25ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಗಳಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರಕಾರ ಜಾರಿಗೊಳಿಸಿದ್ದು, ಇದರಲ್ಲಿ ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದೆ. ಈ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆದಿರುವ ರೈತರಿಗೆ ಮಾತ್ರ ಅನ್ವಯಿಸುವಂತೆ ನೋಂದಣಿಗೊಳಿಸಲು ಆಗಸ್ಟ್ 25ರವರೆಗೆ ಅವಧಿ ವಿಸ್ತರಿಸಲಾಗಿದೆ. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಪ್ರತಿನಿಧಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರು ಮಂಜುನಾಥ ಡಿ. ಅವರ ಮೊಬೈಲ್ ಸಂಖ್ಯೆ 9448999226 ಹಾಗೂ ಟಾಟಾ ಎಐಜಿ ಸಂಸ್ಥೆಯ ಪ್ರತಿನಿಧಿ ಶುಭಂ ಅವರ ಸಂಪರ್ಕ ಸಂಖ್ಯೆ 9131962255 ಆಗಿದೆ ಎಂದು ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

Article Image

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.5 ಕೊನೆಯ ದಿನವಾಗಿದೆ. ಈ ವರ್ಷದ ಡಿ. 8ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕೆಎಸ್‌ಕ್ಯುಎಎಸಿ ವತಿಯಿಂದ ವಿದ್ಯಾರ್ಥಿ ನಿಧಿಗೆ ಅರ್ಹತಾ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ಸರಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದು, ಬಡ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಪರೀಕ್ಷೆಯ ಆನ್‌ಲೈನ್ ಅರ್ಜಿ ಕೆಎಸ್‌ಇಎಬಿಯ ವೆಬ್‌ಸೈಟ್ https://kseeb.karnataka. gov.inನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 080-23341615 ಸಂಪರ್ಕಿಸಬಹುದು.

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿಗೆ ಪ್ರಶಸ್ತಿ

Article Image

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿಗೆ ಪ್ರಶಸ್ತಿ

ಉತ್ಕರ್ಷ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ವಿಷಯದಡಿ ನಡೆದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪದವಿಪೂರ್ವ ವಿಭಾಗದಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಅದಿತಿ.ಕೆ ಪ್ರಥಮ ಹಾಗೂ ತನಿಷಾ ಹೆಚ್ ಹೆಗ್ಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಂಚೆ ಚೀಟಿ ಸಂಗ್ರಹ: ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

Article Image

ಅಂಚೆ ಚೀಟಿ ಸಂಗ್ರಹ: ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಅಂಚೆ ಇಲಾಖೆ ವತಿಯಿಂದ ವಿದ್ಯಾರ್ಥಿಗಳಲ್ಲಿ ಫಿಲಾಟೆಲಿ (ಅಂಚೆ ಚೀಟಿ ಸಂಗ್ರಹಣೆ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ದೀನ್ ದಯಾಳ್ ಸ್ಪರ್ಶ್ ಯೋಜನೆ ಸ್ಕಾಲರ್ ಶಿಪ್‌ಗಾಗಿ 6ರಿಂದ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023- 24ನೇ ಸಾಲಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸಿ, ಫಿಲಾಟೆಲಿ ಖಾತೆ ಅಥವಾ ಶಾಲಾ ಫಿಲಾಟೆಲಿ ಕ್ಲಬ್ ಸದಸ್ಯರಾಗಿರುವ ವಿದ್ಯಾರ್ಥಿಗಳು ಸೆ. 3ರ ಮೊದಲು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ವೆಬ್‌ಸೈಟ್ ವಿಳಾಸ: www.karnatakapost.gov.in ಅಥವಾ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.

ಆಳ್ವಾಸ್ ಪದವಿ ಪೂರ್ವ ಕಾಲೇಜು: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Article Image

ಆಳ್ವಾಸ್ ಪದವಿ ಪೂರ್ವ ಕಾಲೇಜು: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ವಿದ್ಯಾಗಿರಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘ ಮತ್ತು ಮಹಿಳಾ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಪಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಋಣಾತ್ಮಕ ಚಿಂತೆಯನ್ನು ಬಿಡಬೇಕು. ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡಬಾರದು. ದೈನಂದಿನ ಬದುಕಿನಲ್ಲಿ ಶೈಕ್ಷಣಿಕವಾಗಿ ಪರಿಶ್ರಮ ಹಾಕಬೇಕು. ವಾಣಿಜ್ಯ ಶಿಕ್ಷಣಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರೆತಿದ್ದು, ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದರೆ ವಿದ್ಯಾರ್ಥಿಗಳ ಬದುಕು ಹಸನಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಹಾಗೂ ಕಲಾವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ರಶ್ಮೀನ್ ಸ್ವಾಗತಿಸಿದರು. ಉಪನ್ಯಾಸಕ ಪ್ರಭಾತ್ ಎಸ್. ಆರ್. ವಂದಿಸಿದರು. ಉಪನ್ಯಾಸಕ ರಾಜೇಶ್ ಡಿ'ಸೋಜ ಕಾರ್ಯಕ್ರಮ ನಿರೂಪಿಸಿದರು. ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ 42 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ

Article Image

ಧರ್ಮಸ್ಥಳದಲ್ಲಿ ವ್ಯಸನ ಮುಕ್ತರ ನವಜೀವನೋತ್ಸವ

ಉಜಿರೆ: ಅನ್ನದಾಸೋಹ, ಅರಿವುದಾಸೋಹ ಮತ್ತು ಅಕ್ಷರದಾಸೋಹ ಎಂಬ ತ್ರಿವಿಧ ದಾಸೋಹದೊಂದಿಗೆ ಮನಪರಿವರ್ತನೆ ಮೂಲಕ ಕ್ರಾಂತಿಕಾರಿ ಸಮಾಜಸುಧಾರಣೆಯೊಂದಿಗೆ ಲೋಕಕಲ್ಯಾಣ ಕಾರ್ಯಗಳನ್ನು ನಿರಂತರ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರು ಸಾಧುಸಂತರಿಗಿಂತಲೂ ಮಿಗಿಲಾಗಿ ಎಲ್ಲರಿಂದಲೂ ದೇವಮಾನವರಾಗಿ ಗೌರವಿಸಲ್ಪಡುತ್ತಾರೆ. ಅವರ ದರ್ಶನದಿಂದ ದೇವರ ದರ್ಶನ ಮಾಡಿದಷ್ಟೇ ಸಂತೋಷ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ತುಮಕೂರಿನ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು. ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮದ್ಯವ್ಯಸನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರ ಶತದಿನೋತ್ಸವದ ಸಂಭ್ರಮದ ನವಜೀವನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಮದ್ಯಪಾನದಂತಹ ವ್ಯಸನಗಳಿಗೆ ಬಿದ್ದವರನ್ನು ಮತ್ತು ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದೇ ನಿಜವಾದ ಧರ್ಮವಾಗಿದೆ. “ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎನ್ನುವಂತೆ ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯವಾಗಬೇಕು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾತಾ-ಪಿತರಂತೆ ಬಹಳ ಪ್ರೀತಿ-ವಿಶ್ವಾಸದಿಂದ ಸಮಾಜದ ಸರ್ವರ ಕಲ್ಯಾಣಕ್ಕಾಗಿ ಮಾಡುತ್ತಿರುವ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾಸಬಲೀಕರಣ, ಕೆರೆಗಳ ಪುನಶ್ಚೇತನ, ಶುದ್ಧ ಕುಡಿಯುವ ನೀರಿನಘಟಕ, ಮನಪರಿವರ್ತನೆ ಮೂಲಕ ಮದ್ಯವರ್ಜನ ಶಿಬಿರಗಳು, ಸ್ವ-ಉದ್ಯೋಗ ತರಬೇತಿ ಇತ್ಯಾದಿ ಸೇವಾ ಕಾರ್ಯಕ್ರಮ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿವೆ ಎಂದರು. ತುಮಕೂರಿನಲ್ಲಿ ತಮ್ಮ ಮಠದ ಭಕ್ತರಾದ ಚಂದ್ರಶೇಖರ ಎಂಬವರು ಮದ್ಯವ್ಯಸನಿಯಾಗಿದ್ದು ಮದ್ಯವರ್ಜನ ಶಿಬಿರಕ್ಕೆ ಸೇರಿ ವ್ಯಸನಮುಕ್ತರಾಗಿ ಈಗ ಎಂಜಿನಿಯರ್‌ರಾಗಿ ಸ್ವಂತ ಉದ್ಯಮದೊಂದಿಗೆ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನು ಸ್ವಾಮೀಜಿ ಉಲ್ಲೇಖಿಸಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ವ್ಯಸನಮುಕ್ತರಾದವರು ಮನ, ವಚನ, ಕಾಯದಿಂದ ದೃಢ ಸಂಕಲ್ಪ ಮಾಡಿ ಮುಂದೆ ಸಾರ್ಥಕ ಜೀವನ ನಡೆಸಬೇಕು. ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ಪರಿಶುದ್ಧರಾಗಿ ದೇವರ ದರ್ಶನ ಮಾಡಿ ಅನುಗ್ರಹ ಪಡೆದು ಮುಂದೆ ಸುಖ-ಶಾಂತಿ, ನೆಮ್ಮದಿಯ ಕೌಟುಂಬಿಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ವ್ಯಸನಮುಕ್ತರ ಭಾಗ್ಯದ ಬಾಗಿಲು ತೆರೆದಿದೆ ಎಂದು ಅವರಿಗೆ ಉಜ್ವಲ ಭವಿಷ್ಯವನ್ನು ಹೆಗ್ಗಡೆಯವರು ಹಾರೈಸಿದರು. ಮಾಜಿ ವಿಧಾನಪರಿಷತ್ ಸದಸ್ಯ ಕೆ ಹರೀಶ್ ಕುಮಾರ್ ಶುಭಾಶಂಸನೆ ಮಾಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸು ಕಂಡ ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಹಾಗೂ ವ್ಯಸನಮುಕ್ತ ಭಾರತವನ್ನು ಹೆಗ್ಗಡೆಯವರು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶೇ. ನೂರರಷ್ಟು ನನಸಾಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ಶ ತದಿನೋತ್ಸವವನ್ನು ಆಚರಿಸಿದ ವ್ಯಸನಮುಕ್ತರು ಜೀವನಪರ್ಯಂತ ಆತ್ಮಸಾಕ್ಷಿಗೆ ಅನುಗುಣವಾಗಿ ಉತ್ತಮ ಜೀವನ ನಡೆಸಬೇಕು. ತಮಗೆ ಯಾವುದೇ ಸಮಸ್ಯೆ ಬಂದರೂ ಯೋಜನಾಧಿಕಾರಿ ಅಥವಾ ಶಿಬಿರಾಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯ ಡಾ. ಅಭಿಷೇಕ್ ಚತುರ್ವೇದಿ ಮತ್ತು ದೇರಳೆಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಮೇಖಲಾ ದಿವಾಕರ್ ಅವರು ಮದ್ಯವರ್ಜನ ಶಿಬಿರಗಳ ಬಗ್ಗೆ ರಚಿಸಿದ ಸಂಶೋಧನಾ ಪ್ರಬಂಧಗಳನ್ನು ಡಿ. ವೀರೇಂದ್ರ ಹೆಗಡೆಯವರಿಗೆ ಅರ್ಪಿಸಿದರು. ಮಂಗಳೂರಿನ ಡಾ. ಶ್ರೀನಿವಾಸ ಭಟ್, ಎಸ್. ಡಿ. ಸಂಪತ್ ಸಾಮ್ರಾಜ್ಯ, ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಅಧಿಕಾರಿ ದುಗ್ಗೇಗೌಡ, ಜಿಲ್ಲಾಧ್ಯಕ್ಷ ಪದ್ಮನಾಭ ಭಟ್, ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್, ಕಾಸಿಂ ಮಲ್ಲಿಗೆಮನೆ ಮೊದಲಾದವರು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳೊಂದಿಗೆ ವಿವೇಕ್ ವಿ. ಪಾÊಸ್, ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ನಾಗೇಶ್ ಮತ್ತು ಭಾಸ್ಕರ್, ಎನ್. ಕಾರ್ಯಕ್ರಮ ನಿರ್ವಹಿಸಿದರು.

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ತುಳುವೆರೆ ಆಟಿ ಕಾರ್ಯಕ್ರಮ

Article Image

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ತುಳುವೆರೆ ಆಟಿ ಕಾರ್ಯಕ್ರಮ

ಉಜಿರೆ: ಆಟಿ ಕಳೆಂಜ ಶಿವನ ಪ್ರತಿರೂಪ ಎಂಬ ನಂಬಿಕೆ ತುಳುನಾಡಿನಲ್ಲಿದೆ. ಆಟಿಕಳೆಂಜನ ವಿಶೇಷ ವೇಶಭೂಷಣ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿದ್ದು ಆಟಿ ಕಳೆಂಜ ಮನೆಮನೆಗೆ ಬಂದರೆ ದುಷ್ಟಶಕ್ತಿಗಳು ಹಾಗೂ ರೋಗರುಜಿನನಗಳು ದೂರವಾಗುತ್ತವೆ ಎಂದು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಕನ್ನಡ ಮುಖ್ಯಸ್ಥ ಪ್ರೊ. ಯೋಗೀಶ್ ಕೈರೋಡಿ ಹೇಳಿದರು. ಅವರು ಶನಿವಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ತುಳು ಸಂಘದ ಆಶ್ರಯದಲ್ಲಿ ಆಯೋಜಿಸಿದ ತುಳುವೆರೆ ಆಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವಜರಿಗೆ ಓದಲು, ಬರೆಯಲು ಬಾರದಿರುವುದರಿಂದ ಅವರನ್ನು ಅಜ್ಞಾನಿಗಳು ಎಂದು ಭಾವಿಸಬಾರದು. ಅನಿವಾರ್ಯತೆಯಿಂದ ಅವರು ಆಹಾರ ಪದಾರ್ಥಗಳನ್ನು ಅವರು ಸಂಶೋಧಿಸಿದರು. ಆದರೆ ಈಗ ಜನರು ಅಕ್ಷರಸ್ಥರಾದರು ತೀವ್ರ ಪೈಪೋಟಿ, ಧನದಾಹ, ಸುಖ-ಭೋಗಗಳ ಲಾಲಾಸೆ, ಹೋಲಿಕೆ, ಅಸೂಯೆ, ದ್ವೇಷಭಾವನೆಯಿಂದ ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಮಾಯವಾಗಿದೆ ಯಾರಲ್ಲಿಯೂ ಆತ್ಮೀಯ ಸಂಬಂಧವಿಲ್ಲ ಎಂದು ಅವರು ಹೇಳಿದರು. “ಮರಿ ತುಚ್ಚಿಂಡ ಮರ್ದುಂಡು, ಅರಿ ತುಚ್ಚಿಂಡ ಮರ್ದಿಜ್ಜಿ” ಎಂಬ ಮಾತಿದೆ. ಆದರೆ ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಹಿಂದೆ ಆಹಾರವೇ ಔಷಧಿಯಾಗಿದ್ದರೆ ಇಂದು ಹೆಚ್ಚಿನವರಿಗೆ ಔಷದಿಯೇ ಆಹಾರವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಆಧುನಿಕ ಜನತೆಗೆ ಆಟಿ ಅಡಂಬರವಾಗಿದೆ. ಮಾಲ್, ಹೋಟೆಲ್‌ಗಳಲ್ಲಿ ಹಬ್ಬಗಳನ್ನು ಆಚರಿಸುವಂತಾಗಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ತುಳುನಾಡಿನ ಭವ್ಯ ಇತಿಹಾಸ ಮತ್ತು ಪರಂಪರೆ ಹಾಗೂ ಆಹಾರ ಔಷಧಿಗಳ ಬಗ್ಗೆ ಅರಿವು ಜಾಗೃತಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೊಯೂರಿನ ಅಮ್ಮಿ ನಲಿಕೆ ಮತ್ತು ಬಳಗದವರ ಆಟಿಕಳೆಂಜ ವೇಷ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಾಚೀನ ವಸ್ತುಗಳ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಸನ್ಮತಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕಿ ಅಭಿಜ್ಞಾ ಉಪಾಧ್ಯಾಯ ಧನ್ಯವಾದವಿತ್ತರು. ವಿದ್ಯಾರ್ಥಿನಿಯರಾದ ಕುಮಾರಿ ಶ್ರದ್ದಾ ಮತ್ತು ಕುಮಾರಿ ಸೃಷ್ಟಿ ಕಾರ್ಯಕ್ರಮ ನಿರ್ವಹಿಸಿದರು.

First Previous

Showing 10 of 15 pages

Next Last