Article Image

ಎಕ್ಸಲೆಂಟ್: ಜಾನಪದ ರಸಪ್ರಶ್ನೆ ಕಾರ್ಯಕ್ರಮ

Article Image

ಎಕ್ಸಲೆಂಟ್: ಜಾನಪದ ರಸಪ್ರಶ್ನೆ ಕಾರ್ಯಕ್ರಮ

ಮೂಡುಬಿದಿರೆ: ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮೂಡುಬಿದಿರೆ ತಾಲೂಕು ಘಟಕ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಾನಪದ ರಸಪ್ರಶ್ನೆ ಕಾರ್ಯಕ್ರಮ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್ ನಿಡ್ಡೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್, ಉದ್ಯಮಿ ಸದಾಶಿವ ರಾವ್, ಸಾಹಿತಿ ಸದಾನಂದ ನಾರವಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ಕಾರ್ಯದರ್ಶಿ ಮಲ್ಲಿಕಾ ಸುರೇಶ್, ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ “ಜಾನಪದವು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ. ಇಂದಿನ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣದೊಂದಿಗೆ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯ ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ. ಜಾನಪದ ರಸಪ್ರಶ್ನೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಚಿಂತನಶಕ್ತಿ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವುದರ ಜೊತೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ವೇದಿಕೆಯಾಗಿದೆ. ಇಂತಹ ಮೌಲ್ಯಯುತ ಕಾರ್ಯಕ್ರಮಗಳಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಸದಾ ಪ್ರೋತ್ಸಾಹ ನೀಡಲಿದೆ,” ಎಂದು ಹೇಳಿದರು. ಕರ್ನಾಟಕ ಜಾನಪದ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಮಂದಾರ ರಾಜೇಶ್ ಭಟ್ ಮಾತನಾಡಿ, “ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಜೀವನದ ಬೇರುಗಳಾಗಿವೆ. ಜಾನಪದವು ಕೇವಲ ಮನರಂಜನೆಗೆ ಸೀಮಿತವಾಗದೆ ಜೀವನ ಮೌಲ್ಯಗಳು, ಸಾಮಾಜಿಕ ಅರಿವು ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ಜಾನಪದದ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ತಮ್ಮ ನೆಲ, ನುಡಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿಯೊಂದಿಗೆ ಸಂಶೋಧನಾ ಮನೋಭಾವ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತವೆ,” ಎಂದು ತಿಳಿಸಿದರು. ಕಾರ್ಯಕ್ರಮ ನಿರೂಪಕಿ ಚೇತನಾ ರಾಜೇಂದ್ರ ಹೆಗ್ಡೆ ಅವರು, “ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರು ಶಿಕ್ಷಣ ಕ್ಷೇತ್ರದ ಜೊತೆಗೆ ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಹಾಗೂ ಪೋಷಣೆಯಂತಹ ಸಮಾಜಮುಖಿ ಚಿಂತನೆ ಶ್ಲಾಘನೀಯ. ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಅವರು ನೀಡುತ್ತಿರುವ ಬೆಂಬಲಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ,” ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗಾಗಿ ಜಾನಪದ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ವಿದ್ಯಾರ್ಥಿಗಳು ಅಪಾರ ಉತ್ಸಾಹದಿಂದ ಭಾಗವಹಿಸಿ ತಮ್ಮ ಜಾನಪದ ಜ್ಞಾನವನ್ನು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರೆ, ಸತೀಶ್ ಅಬ್ಬನಡ್ಕ ವಂದಿಸಿದರು.

ಎಸ್.ಡಿ.ಎಂ: ಪ್ರತಿಷ್ಠಿತ ಇನ್‌ಸ್ಪಾ ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ

Article Image

ಎಸ್.ಡಿ.ಎಂ: ಪ್ರತಿಷ್ಠಿತ ಇನ್‌ಸ್ಪಾ ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿ

ಉಜಿರೆ: ಭಾರತೀಯ ಶಾಲಾ ಮನೋವಿಜ್ಞಾನ ಸಂಘಟನೆ (Indian School Psychology Association – INSPA) ವತಿಯಿಂದ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಮನೋವಿಜ್ಞಾನ ವಿಭಾಗಕ್ಕೆ ದೊರೆತ ಪ್ರತಿಷ್ಠಿತ “ಇನ್‌ಸ್ಪಾ” ಶೈಕ್ಷಣಿಕ ಉತ್ಕೃಷ್ಟತಾ ಪ್ರಶಸ್ತಿಯನ್ನು ಚೆನ್ನೈನಲ್ಲಿ ಎನ್.ಕೆ.ಟಿ. ನೇಶನಲ್ ಮಹಿಳಾ ಕಾಲೇಜಿನಲ್ಲಿ ನಡೆದ ಹದಿನಾರನೆ “ಇನ್‌ಸ್ಪಾ” ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್.ಡಿ.ಎಂ. ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ವಂದನಾ ಜೈನ್ ಮತ್ತು ಉಪನ್ಯಾಸಕಿ ಅಶ್ವಿನಿ ಸ್ವೀಕರಿಸಿದರು. ಎಸ್.ಡಿ.ಎಂ. ಕಾಲೇಜಿನ ಮನೋವಿಜ್ಞಾನ ವಿಭಾಗದ ಶೈಕ್ಷಣಿಕ ಗುಣಮಟ್ಟ, ತರಬೇತಿ, ಸಂಶೋಧನಾ ಸಾಧನೆ, ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳು ಹಾಗೂ ಸಮಾಜಮುಖಿ ಸೇವೆ, ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಡೀನ್ ಹಾಗೂ ಎಲ್ಲಾ ಪ್ರಾಧ್ಯಾಪಕರು ಮನೋವಿಜ್ಞಾನ ವಿಭಾಗದ ಮುಖ್ಯಸ್ಥರು ಮತ್ತು ಎಲ್ಲಾ ಪ್ರಾಧ್ಯಾಪಕರನ್ನು ಅಭಿನಂದಿಸಿದ್ದಾರೆ.

ಎಸ್.ಡಿ.ಎಂ: ಚಿಗುರು ಸಂಘ ಉದ್ಘಾಟನೆ

Article Image

ಎಸ್.ಡಿ.ಎಂ: ಚಿಗುರು ಸಂಘ ಉದ್ಘಾಟನೆ

ಉಜಿರೆ: ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ 'ಚಿಗುರು ಸಂಘ’ ದ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಕ್ರಮ ‘ಆರಂಭ್’ ಇತ್ತೀಚೆಗೆ ನಡೆಯಿತು. 'ಮಂಜುವಾಣಿ' ಮಾಸ ಪತ್ರಿಕೆಯ ಸಂಪಾದಕರಾದ ಡಾ. ಭಾಸ್ಕರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ವಿಭಾಗದ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಅಲ್ಲದೆ, ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಬಲವಾದ ವೃತ್ತಿಪರ ಪೋರ್ಟ್‌ಫೋಲಿಯೊ ಬೆಳೆಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬರೆದು, ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಲೇಖನಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ವಿಭಾಗದ ವೈವಿಧ್ಯಮಯ ಚಟುವಟಿಕೆಗಳನ್ನು ಬಿಂಬಿಸುವ ವಿಶೇಷ ‘ಭಿತ್ತಿ ಪತ್ರಿಕೆ'ಯನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಭಾಸ್ಕರ್ ಹೆಗಡೆ ಅವರು ದ್ವಿತೀಯ ಬಿ.ಎ. ಪತ್ರಿಕೋದ್ಯಮ ವಿದ್ಯಾರ್ಥಿನಿ ರಮ್ಯಾ ಅವರಿಗೆ ವೈಯಕ್ತಿಕವಾಗಿ ವಿದ್ಯಾರ್ಥಿವೇತನ ನೀಡಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುನಿಲ್ ಹೆಗ್ಡೆ, ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋದ ಸೀನಿಯರ್ ಪ್ರೊಡಕ್ಷನ್ ಅಸೋಸಿಯೇಟ್ ಸಂಹಿತಾ ಎಸ್. ಮೈಸೂರೆ, 'ರೇಡಿಯೋ ನಿನಾದ 90.4' ರ ಮುಖ್ಯಸ್ಥರಾದ ವಿ. ಕೆ. ಕಡಬ, ಕಾರ್ಯಕ್ರಮ ಸಂಯೋಜಕ ಸಂತೋಷ್, ಇ – ಲೆಕ್ಚರ್ ಸಂಯೋಜಕ ಕುಮಾರೇಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಲೋಕರ್ಪಾಣೆ

Article Image

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಲೋಕರ್ಪಾಣೆ

ಮೂಡುಬಿದಿರೆ: ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಸಹಯೋಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಸ್ಥಾಪಿಸಲಾದ, ದೇಶದ ಮೊದಲ ಐಬಿಎಂ ಎಐ ಲ್ಯಾಬ್‌ನ್ನು ಉದ್ಘಾಟಿಸಲಾಯಿತು. ಉದ್ಯಮ–ಶೈಕ್ಷಣಿಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ನೇರ ಪ್ರಾಯೋಗಿಕ ಅನುಭವ ಕಲ್ಪಿಸಲು ಈ ಲ್ಯಾಬ್ ಸ್ಥಾಪಿಸಲಾಗಿದೆ. ಐಬಿಎಂ ವಾಟ್ಸನ್‌ಎಕ್ಸ್ ಎಐ, ವಾಟ್ಸನ್‌ಎಕ್ಸ್ ಆರ್ಕೆಸ್ಟ್ರೇಟ್ ಹಾಗೂ ಎಐ ಆಧಾರಿತ ಡೆವಲಪರ್ ಉಪಕರಣಗಳಿಂದ ಸಜ್ಜುಗೊಂಡಿರುವ ಈ ಲ್ಯಾಬ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಂಟರ್‌ಪ್ರೈಸ್ ಎಐ ವೇದಿಕೆಗಳು ಹಾಗೂ ನೈಜ ಕೈಗಾರಿಕಾ ಅನ್ವಯಿಕೆಗಳ ಕುರಿತು ನೇರ ಅನುಭವ ನೀಡಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಐಬಿಎಂ ಇಂಡಿಯಾದ ವಾಟ್ಸನ್‌ಎಕ್ಸ್ ಎಐ ವಿಭಾಗದ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯಸ್ಥ ರತೀಶ್ ಮುರಳೀಧರನ್, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಸ್ಥಾಪಿಸಿದ ಎಂಜಿನಿಯರಿಂಗ್ ಕಾಲೇಜಾಗಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಎಐ ತಂತ್ರಜ್ಞಾನವು ಶಕ್ತಿಯುತ ಸಾಧನಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಿ ಜ್ಞಾನವನ್ನು ವ್ಯಾಪಕವಾಗಿ ತಲುಪಿಸಿದೆ. ಆದರೆ ಭವಿಷ್ಯದಲ್ಲಿ ಯಶಸ್ಸು ತಂತ್ರಜ್ಞಾನದಿಂದ ಮಾತ್ರ ನಿರ್ಧಾರವಾಗುವುದಿಲ್ಲ; ಕಲಿಯುವ ಆಸಕ್ತಿ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ಕಂಡುಹಿಡಿಯುವ ಮನೋಭಾವವೂ ಮುಖ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕೃತಕ ಬುದ್ಧಿಮತ್ತೆಯನ್ನು ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಿ ನೋಡಬೇಕು, ಅದು ಮಾನವನನ್ನು ಬದಲಿಸುವ ತಂತ್ರಜ್ಞಾನವಲ್ಲ. “ಮಾನವೀಯ ಸಾಮಾನ್ಯ ಜ್ಞಾನ ಮತ್ತು ಎಐ ಒಂದಾದಾಗ ವಿಶ್ವಕ್ಕೆ ಅತ್ಯುತ್ತಮ ಪರಿಹಾರಗಳನ್ನು ನೀಡಬಹುದು. ಜಾಗತೀಕರಣದಿಂದ ಹಿಡಿದು ಇಂಟರ್‌ನೆಟ್ ಕ್ರಾಂತಿಯವರೆಗೆ ಪ್ರತಿಯೊಂದು ತಂತ್ರಜ್ಞಾನ ಬದಲಾವಣೆ ಉದ್ಯೋಗಗಳ ಸ್ವರೂಪವನ್ನು ಬದಲಾಯಿಸಿದೆ ಹೊರತು ಉದ್ಯೋಗಗಳನ್ನು ಸಂಪೂರ್ಣವಾಗಿ ನಾಶ ಪಡಿಸಿಲ್ಲ. ಎಐ ಕೂಡ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳು ತಮ್ಮ ಪಠ್ಯಕ್ರಮಗಳನ್ನು ಕಾಲಾನುಗುಣವಾಗಿ ಪರಿಷ್ಕರಿಸಬೇಕು ಎಂದರು. ಈ ಐಬಿಎಂ ಎಐ ಲ್ಯಾಬ್ ಮುಂದಿನ ದಿನಗಳಲ್ಲಿ ನವೀನತೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಕೇಂದ್ರವಾಗಿದ್ದು, ವಿದ್ಯಾರ್ಥಿಗಳನ್ನು ಎಐ ಆಧಾರಿತ ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುವ ಪ್ರಮುಖ ವೇದಿಕೆಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಎಐಇಟಿಯ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಐಬಿಎಂ ಇಂಡಿಯಾದ ಎಐ ತಜ್ಞ ಮನೋಜ್ ಬಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎಐಇಟಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಐಬಿಎಂ ಸಾಫ್ಟ್ವೇರ್ ಲ್ಯಾಬ್ಸ್ ಪ್ರತಿನಿಧಿಗಳು ಇದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ ಸ್ವಾಗತಿಸಿ, ರಕ್ಷಿತಾ ರೈ ಕಾರ್ಯಕ್ರಮ ನಿರೂಪಿಸಿ, ಸಂಪತ್ ಶೆಟ್ಟಿ ವಂದಿಸಿದರು.

ಎಕ್ಸಲೆಂಟ್: ಇ ವಿ ಎಂ ಮೂಲಕ ಶಾಲಾ ಸಂಸತ್ ಚುನಾವಣೆ

Article Image

ಎಕ್ಸಲೆಂಟ್: ಇ ವಿ ಎಂ ಮೂಲಕ ಶಾಲಾ ಸಂಸತ್ ಚುನಾವಣೆ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಹಕ್ಕು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆಯನ್ನು ಆಯೋಜಿಸಲಾಗಿತ್ತು. ಭಾರತದ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ಈ ಚುನಾವಣೆ ನಡೆಸಲಾಗಿದ್ದು ಇಲೆಕ್ಟ್ರಾನಿಕ್ಸ್ ವೋಟಿಂಗ್ ಮೆಷಿನ್ ಮೂಲಕ ಮತದಾನ ಪ್ರಕ್ರಿಯೆ ಜರುಗಿತು. ವಿದ್ಯಾರ್ಥಿಗಳಿಗೆ ಮತದಾನದ ವಿಧಾನ, ಅಭ್ಯರ್ಥಿಗಳ ಆಯ್ಕೆ ಮತ್ತು ಮತ ಚಲಾಯಿಸುವ ಕ್ರಮಗಳ ಕುರಿತು ಪೂರ್ವಭಾವಿ ಮಾಹಿತಿ ನೀಡಲಾಯಿತು. ಬಳಿಕ ಮತಗಟ್ಟೆಗಳಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಸರದಿ ಸಾಲಿನಲ್ಲಿ ನಿಂತು ತಮ್ಮ ಅಮೂಲ್ಯ ಮತವನ್ನು ಚಲಾಯಿಸಿದರು. ಇವಿಎಂ ಮೂಲಕ ನಡೆದ ಮತದಾನವು ವಿದ್ಯಾರ್ಥಿಗಳಿಗೆ ನೈಜ ಚುನಾವಣೆಯ ಅನುಭವವನ್ನು ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು, “ಪ್ರಜಾಪ್ರಭುತ್ವದ ಯಶಸ್ಸು ಜಾಗೃತ ಮತದಾರರ ಮೇಲೆ ಅವಲಂಬಿತವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯ. ಇಂತಹ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ.” ಎಂದು ಹೇಳಿದರು. ಸ್ಪರ್ಧಿಸಿದ ಅಭ್ಯರ್ಥಿಗಳು ಮತ್ತು ಮತದಾರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಶಿಸ್ತು ಮತ್ತು ಉತ್ಸಾಹವನ್ನು ಶ್ಲಾಘಿಸಿದರು. ಇಂತಹ ಪ್ರಜಾಪ್ರಭುತ್ವ ಚÀಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ನಾಗರೀಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದು ಅಭಿಪ್ರಾಯಪಟ್ಟರು. ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನವೀನ್ ಅವರು ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಎಕ್ಸಲೆಂಟ್ ಶಾಲೆಯಲ್ಲಿ ಆಯೋಜಿಸಿದ ಚುನಾವಣಾ ಪ್ರಕ್ರಿಯೆಯನ್ನು ಪ್ರಶಂಶಿಸಿದರು. ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ಬೆಳೆಸುವಲ್ಲಿ ಎಕ್ಸಲೆಂಟ್ ಶಾಲೆಯ ಪಾತ್ರವನ್ನು ಕೊಂಡಾಡಿದರು. ಶಾಲೆಯ ವಿದ್ಯಾರ್ಥಿನಿ ಮಾನ್ಯತಾ ಅವರ ಪೋಷಕರಾದ ಮಧುರ ಅವರು ಮತದಾನ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರಜಾಪ್ರಭುತ್ವದ ಅರಿವು ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಅವರು ಮುಖ್ಯ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿಕೊಟ್ಟರು. ಉಪಮುಖ್ಯೋಪಾಧ್ಯಾಯರಾದ ಜಯಶೀಲ್ ಅವರು ಚುನಾವಣೆಯನ್ನು ಸಂಘಟಿಸಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮೂಡಿಬರುವಂತೆ ನೋಡಿಕೊಂಡರು. ಈ ಬಾರಿಯ ಶಾಲಾ ಸಂಸತ್ ಚುನಾವಣೆಯಲ್ಲಿ ಒಟ್ಟು 99.008 ಶೇಕಡ ಮತದಾನ ನಡೆದಿದೆ ಎಂಬುದಾಗಿ ಶಾಲಾ ಚುನಾವಣಾ ಆಯೋಗ ವರದಿಯನ್ನು ಮಾಡಿತು. ಮತದಾನ ಪ್ರಕ್ರಿಯೆ ಮುಗಿದು ಎರಡು ದಿನಗಳ ನಂತರ ಮತಎಣಿಕೆ ಕಾರ್ಯನಡೆದು ಚುನಾವಣಾ ಫಲಿತಾಂಶವನ್ನು ಘೋಷಿಸಲಾಯಿತು. ವಿಜೇತ ವಿದ್ಯಾರ್ಥಿಗಳಾದ ರಿಷಿಕೇಶ್, ಯಶ್ಮಿತ್, ತನ್ವಿ ಮತ್ತು ನಿಹಾರಿಕ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉತ್ತಮ ನಾಯಕತ್ವ ಮತ್ತು ಜವಾಬ್ದಾರಿಯುತ ನಾಗರೀಕತ್ವದ ಪಾಠವನ್ನು ಕಲಿಸುವಲ್ಲಿ ಸಫಲವಾಯಿತು.

ಸಿಎ ಅಂತಿಮ ಪರೀಕ್ಷೆ 2026: ಆಳ್ವಾಸ್‌ನ 8 ಜನ ಉತ್ತೀರ್ಣ

Article Image

ಸಿಎ ಅಂತಿಮ ಪರೀಕ್ಷೆ 2026: ಆಳ್ವಾಸ್‌ನ 8 ಜನ ಉತ್ತೀರ್ಣ

ಮೂಡುಬಿದಿರೆ: ಮೇ 2026ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ದೀಪಕ್ ಹೆಗ್ಡೆ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್‌ಗಳಿಸಿ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದಿದ್ದಾರೆ. ಇವರ ಜೊತೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಒಟ್ಟು 8 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅಮೋಘ ಸಾಧನೆ ಮೆರೆದಿದ್ದಾರೆ. ಸಿಎ ಅಂತಿಮ ಪರೀಕ್ಷೆಯಲ್ಲಿ ದೀಪಕ್ ಹೆಗ್ಡೆ, ನಿತೇಶ್ ಕಾಮತ್, ವೀಕ್ಷಾ ಶೆಟ್ಟಿ, ನಾಗರಾಜ ಮಂಜಿತ್ತಾಯ, ಪ್ರಣವ್ ಎಸ್ ಭಟ್, ವೈಷ್ಣವಿ ಜವಾರ್, ಅಕ್ಷಯ ಬಿಎಸ್, ಸುದೀಪ್ ಉತ್ತೀರ್ಣರಾಗಿ ಸಾಧನೆ ಮೆರೆದಿದ್ದಾರೆ. ದೀಪಕ್ ಹೆಗ್ಡೆ ಆಳ್ವಾಸ್‌ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣದ ಸೌಲಭ್ಯ ಪಡೆದು ಪ್ರೌಢಶಿಕ್ಷಣ, ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಪದವಿ ವ್ಯಾಸಂಗದ ಅವಧಿಯಲ್ಲೇ ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 10ನೇ ರ‍್ಯಾಂಕ್ ಗಳಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದ ಇವರು, ಇದೀಗ ಸಿಎ ಅಂತಿಮ ಪರೀಕ್ಷೆಯ ಎರಡೂ ಗ್ರೂಪ್‌ಗಳನ್ನು ಮೊದಲ ಪ್ರಯತ್ನದಲ್ಲೇ ಪಾಸಾಗಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್ ಗಳಿಸುವ ಮೂಲಕ ಮತ್ತೊಂದು ಗಮನಾರ್ಹ ಸಾಧನೆ ನಿರ್ಮಿಸಿದ್ದಾರೆ. ಸಿಎ ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಅಖಿಲ ಭಾರತ ಮಟ್ಟದಲ್ಲಿ ಶ್ರೇಷ್ಠ ರ‍್ಯಾಂಕ್ ಗಳಿಸುತ್ತಿರುವುದು ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶ ಕೇಂದ್ರಿತ ತರಬೇತಿಯ ಪ್ರತೀಕ. ಅಖಿಲ ಭಾರತ ಮಟ್ಟದಲ್ಲಿ 6, 10, 23, 28, 33ನೇ ರ‍್ಯಾಂಕ್‌ಗಳ ಜೊತೆಗೆ ನೂರಾರು ವಿದ್ಯಾರ್ಥಿಗಳು ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವುದು ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ ಸಮರ್ಪಿತ ಮಾರ್ಗದರ್ಶನ ಮತ್ತು ಸಂಸ್ಥೆಯ ಶೈಕ್ಷಣಿಕ ಬದ್ದತೆಗೆ ದೊರೆತ ಗೌರವವಾಗಿದೆ- ಡಾ ಎಂ ಮೋಹನ್ ಆಳ್ವ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚರ‍್ಯ ಡಾ ಕುರಿಯನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂಡಿ, ಸಿಎ ಸಂಯೋಜಕಿ ಅಪರ್ಣಾ ಅಭಿನಂದಿಸಿದ್ದಾರೆ.

ಆಳ್ವಾಸ್: ಇಂಡಕ್ಷನ್ ಕಾರ್ಯಕ್ರಮ ಅಂಕುರ ಉದ್ಘಾಟನೆ

Article Image

ಆಳ್ವಾಸ್: ಇಂಡಕ್ಷನ್ ಕಾರ್ಯಕ್ರಮ ಅಂಕುರ ಉದ್ಘಾಟನೆ

ಮೂಡುಬಿದಿರೆ: ಜವಾಬ್ದಾರಿಯನ್ನು ಸ್ವೀಕರಿಸಿದಾಗ ಮಾತ್ರ ಬದುಕಿನಲ್ಲಿ ಸ್ಥಾನಮಾನ ಮತ್ತು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಣದ ಜೊತೆಗೆ ಉತ್ತಮ ವ್ಯಕ್ತಿತ್ವ ಹಾಗೂ ಉತ್ತಮ ಮನಸ್ಸನ್ನು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಸ್ವಾಯತ್ತಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಇಂಡಕ್ಷನ್ ಕಾರ್ಯಕ್ರಮ ‘ಅಂಕುರ’ ಸೋಮವಾರ ಕೃಷಿಸಿರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 1998ರಲ್ಲಿ ಕೇವಲ 25 ವಿದ್ಯಾರ್ಥಿಗಳು, ಎರಡು ವಿಭಾಗ ಹಾಗೂ 11 ಅಧ್ಯಾಪಕರೊಂದಿಗೆ ತನ್ನ ಶೈಕ್ಷಣಿಕ ಪಯಣವನ್ನು ಆರಂಭಿಸಿದ್ದ ಆಳ್ವಾಸ್ ಸಂಸ್ಥೆ, ಇಂದು 54 ಶೈಕ್ಷಣಿಕ ಕಾರ್ಯಕ್ರಮಗಳು, 122 ತರಗತಿ ಕೊಠಡಿಗಳು, 188 ಶಿಕ್ಷಕರು ಹಾಗೂ 3,191 ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ. ಸಂಸ್ಥೆಯ ಈ ಸಾಧನೆಯ ಹಿಂದಿನ ನಿಜವಾದ ಶಕ್ತಿ ಮತ್ತು ಬ್ರ‍್ಯಾಂಡ್ ಇಲ್ಲಿನ ವಿದ್ಯಾರ್ಥಿಗಳು. ಮಕ್ಕಳು ತಮ್ಮ ಪಾಲಕರ ತ್ಯಾಗ ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಕನಸುಗಳ ಜೊತೆಗೆ ಜವಾಬ್ದಾರಿಗಳನ್ನೂ ಹೊತ್ತು ಸಾಗಬೇಕು. ತರಗತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಈ ಹಂತದಲ್ಲಿ ಗುರಿಯೆಡೆಗೆ ಗಮನ ಕೇಂದ್ರೀಕರಿಸಿ ಅನಗತ್ಯ ಆಕರ್ಷಣೆಗಳಿಂದ ದೂರವಿರಬೇಕು. ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳದು, ಬದಲಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ತಂತ್ರಜ್ಞಾನದ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಶ್ರೇಷ್ಠತೆ, ಉತ್ತಮ ಪರಿಸರ ನಿರ್ಮಾಣ ಮತ್ತು ಸಾಮಾಜಿಕ ಅರಿವಿನತ್ತ ಯುವಜನತೆ ಸಾಗಿದಾಗ ಮಾತ್ರ ಅರ್ಥಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಜವಾಬ್ದಾರಿಯುತ ಯುವ ಸಮೂಹವೇ ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸುರಕ್ಷಿತ ಹಾಗೂ ಪ್ರೇರಣಾತ್ಮಕ ವಾತಾವರಣ ಅತ್ಯಗತ್ಯವಾಗಿದ್ದು, ಅಭದ್ರತೆ ಇರುವಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದರು. ಒಂದು ರಾಷ್ಟ್ರದ ಭವಿಷ್ಯ ರೂಪುಗೊಳ್ಳುವುದು ತರಗತಿ ಕೊಠಡಿಗಳಲ್ಲಿಯೇ. ಆದ್ದರಿಂದ ಶಿಕ್ಷಣ ಸಂಸ್ಥೆಗಳ ಪರಿಸರವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಂತಿರಬೇಕು. ಈ ಕಾರಣಕ್ಕಾಗಿಯೇ ತರಗತಿ ಕೊಠಡಿಯನ್ನು ಇಡೀ ಜಗತ್ತಿನ ಅತಿದೊಡ್ಡ ಪವರ್‌ಹೌಸ್ ಎಂದು ಪರಿಗಣಿಸಲಾಗಿದೆ. ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಚಿಂತನೆ ಹೊಂದಿದವರೊಂದಿಗೆ ಬೆರೆಯಬೇಕು. ನಕಾರಾತ್ಮಕ ಮನೋಭಾವದ ವ್ಯಕ್ತಿಗಳಿಂದ ದೂರವಿರುವುದು ವೈಯಕ್ತಿಕ ಬೆಳವಣಿಗೆ ಮತ್ತು ಯಶಸ್ಸಿಗೆ ಸಹಕಾರಿಯಾಗುತ್ತದೆ. ಪರೀಕ್ಷಾಂಗ ಕುಲಸಚಿವ ಡಾ. ಎನ್.ಪಿ. ನಾರಾಯಣ ಶೆಟ್ಟಿ, ಕಾಲೇಜಿನ ಪರೀಕ್ಷಾ ವಿಭಾಗದ ಕಾರ್ಯವೈಖರಿ, ಪರೀಕ್ಷಾ ನಿಯಮಗಳು, ಮೌಲ್ಯಮಾಪನ ಪ್ರಕ್ರಿಯೆ ಹಾಗೂ ವಿದ್ಯಾರ್ಥಿಗಳು ಅನುಸರಿಸಬೇಕಾದ ಶೈಕ್ಷಣಿಕ ಮಾರ್ಗಸೂಚಿಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದ್ದು, ಕಾಲೇಜು ಮತ್ತು ಪೋಷಕರ ನಡುವಿನ ನಿರಂತರ ಸಂಪರ್ಕ ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ ಟಿಕೆ ರವೀಂದ್ರನ್ ಇದ್ದರು. ಡಾ ಯೋಗಿಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.

ಆಳ್ವಾಸ್‌: ಸನ್ಮಾನ ಕಾರ್ಯಕ್ರಮ

Article Image

ಆಳ್ವಾಸ್‌: ಸನ್ಮಾನ ಕಾರ್ಯಕ್ರಮ

ಮೂಡುಬಿದಿರೆ:ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಇಲ್ಲಿ ಬಾಹ್ಯಕಾಶವೇ ಮಿತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಶೇಣವ ವಕೀಲ ವೃತ್ತಿಯಲ್ಲಿ ದೊರೆಯುವ ಹೆಸರು, ಗೌರವ ಮತ್ತು ಆರ್ಥಿಕ ಯಶಸ್ಸು ಬೇರೆ ಯಾವ ಕ್ಷೇತ್ರಗಳಲ್ಲೂ ಸಿಗಲಾರದು. ಇಲ್ಲಿ ಆಕಾಶವಲ್ಲ, ಬಾಹ್ಯಾಕಾಶವೇ ನಮ್ಮ ಮಿತಿ ಎಂದರು. ಮೂರನೇ ಚುನಾವಣೆಯಲ್ಲಿ ಗೆಲುವು ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನಾಯಕತ್ವ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಬಳಿಕ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಎದುರಿಸಿದ್ದೆ. ಇದೀಗ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಮೂರನೇ ಪ್ರಮುಖ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದೇನೆ. ತಾನು ಮೂಲತಃ ವೈದ್ಯನಾಗುವ ಕನಸು ಕಂಡಿದ್ದೆ. ಆದರೆ ಪಿಸಿಎಂಬಿ ವಿಭಾಗದಲ್ಲಿ ಅನುತ್ತೀರ್ಣನಾದ ಬಳಿಕ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡೆ. ಜೀವನದ ಸೋಲುಗಳೇ ನನ್ನ ಯಶಸ್ಸಿನ ದಾರಿಯನ್ನು ರೂಪಿಸಿದವು ಎಂದು ಹೇಳಿದರು. ವಕೀಲರು ಕೇವಲ ನ್ಯಾಯಾಲಯದೊಳಗೆ ಮಾತ್ರ ಸೀಮಿತರಾಗಿರಬೇಕಿಲ್ಲ. ಉತ್ತಮ ನಾಯಕರು, ನೀತಿ ರೂಪಿಸುವವರು ಹಾಗೂ ಕಾರ್ಪೊರೇಟ್ ವಲಯದ ತಜ್ಞರಾಗಿಯೂ ಬೆಳೆಯಬಹುದು. ಇತರ ಕ್ಷೇತ್ರಗಳಲ್ಲಿ ನಿವೃತ್ತಿಯ ವಯಸ್ಸು ಇದ್ದರೂ, ವಕೀಲ ವೃತ್ತಿಯಲ್ಲಿ ಜೀವಿತಾವಧಿಯವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲ ವೃತ್ತಿಗೆ ವಿಶೇಷ ಗೌರವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲ ವೃತ್ತಿಗೆ ವಿಶೇಷ ಗೌರವವಿದೆ. ವೃತ್ತಿಯ ಘನತೆ ಮತ್ತು ನೈತಿಕತೆಯನ್ನು ಕಾಪಾಡಿಕೊಂಡರೆ ಹಣ ಹಾಗೂ ಯಶಸ್ಸು ಸಹಜವಾಗಿಯೇ ಬರುತ್ತದೆ. ವೃತ್ತಿಪರರಾಗುವುದರ ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಸಾಮಾಜಿಕ ಪ್ರಜ್ಞೆ ಜಾಗೃತವಾಗಿರಬೇಕು ಇಂದು ಸಮಾಜದಲ್ಲಿ ಹಕ್ಕುಗಳ ಬಗ್ಗೆ ಹೆಚ್ಚು ಮಾತನಾಡಲಾಗುತ್ತಿದೆ. ಆದರೆ ಕರ್ತವ್ಯಗಳ ಬಗ್ಗೆಯೂ ಸಮಾನ ಗಮನ ನೀಡಬೇಕು. ಪ್ರತಿಯೊಬ್ಬರೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಭಾರತವನ್ನು ವಿಶ್ವದ ಅಗ್ರ ರಾಷ್ಟ್ರವನ್ನಾಗಿ ರೂಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಕಾನೂನಿನ ಅನುಷ್ಠಾನದಲ್ಲಿ ಮಹತ್ತರ ಜವಾಬ್ದಾರಿಯನ್ನು ವಕೀಲರು ನಿರ್ವಹಿಸುತ್ತಾರೆ. ಆದ್ದರಿಂದಲೇ ವಕೀಲ ವೃತ್ತಿಯನ್ನು ಅತ್ಯಂತ ಗೌರವಾನ್ವಿತ ಮತ್ತು ಶ್ರೇಷ್ಠ ವೃತ್ತಿಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಸಾಲದ ಕೋಟ್ ವಕೀಲನಾಗಿ ವೃತ್ತಿ ಆರಂಭಿಸುವ ಸಂದರ್ಭದಲ್ಲಿ ಕೋಟ್ ಖರೀದಿಸಲು ಸಹ ಗೆಳೆಯನಿಂದ 1,500 ರೂಪಾಯಿ ಸಾಲ ಪಡೆದಿದ್ದೆ. ಆದರೆ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಇಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಅವಕಾಶ ದೊರೆತಿದೆ ಎಂದು ತಮ್ಮ ಜೀವನಾನುಭವ ಹಂಚಿಕೊಂಡರು. ಯುವಕರು ಸವಾಲುಗಳಿಗೆ ಹೆದರದೆ ತಮ್ಮ ಗುರಿಯತ್ತ ನಿರಂತರವಾಗಿ ಶ್ರಮಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾನೂನು ಚಿಂತನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯವಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಹಕ್ಕುಗಳ ಬಗ್ಗೆ ನಾವು ಹೆಚ್ಚು ಮಾತನಾಡುತ್ತೇವೆ. ಆದರೆ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯ. ಕಾನೂನು ಶಿಕ್ಷಣದ ಪಾವಿತ್ರ‍್ಯವನ್ನು ಕಾಪಾಡಿಕೊಂಡು ಸಮಾಜದಲ್ಲಿ ಕಾನೂನು ಜಾಗೃತಿ ಮೂಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಗುರಿಯತ್ತ ಸ್ಪಷ್ಟವಾದ ಗಮನ, ಶಿಸ್ತು ಮತ್ತು ನೈತಿಕತೆ ಯಶಸ್ಸಿನ ಮೂಲಮಂತ್ರ. ಹೊಂದಾಣಿಕೆ ಮಾಡಿಕೊಳ್ಳಬಹುದು, ಆದರೆ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ನೂತನವಾಗಿ ಅಧಿಕಾರ ಸ್ವೀಕಾರ ಮಾಡಿದ ಜಗದೀಶ್ ಶೇಣವ, ಶರತ್ ಶೆಟ್ಟಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೊಹಮ್ಮದ್ ಸಫ್ವಾನ್ ನಿರೂಪಿಸಿದರು. ಕಾರ‍್ಯಕ್ರಮದಲ್ಲಿ ಹಿರಿಯ ವಕೀಲರಾದ ಬಾಹುಬಲಿ ಪ್ರಸಾದ, ಶ್ವೇತಾ ಜೈನ್, ಮನೋಜ್ ಶೆಣೈ, ಜಯಪ್ರಕಾಶ್ ಭಂಡಾರಿ, ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಪ್ರೋ ಮಹಾಂತೇಶ್ ಜಿ ಎಸ್ ಇದ್ದರು.

ರುಡ್‌ಸೆಟ್: ಉಚಿತ ಮಹಿಳಾ ಟೈಲರಿಂಗ್ ತರಬೇತಿ

Article Image

ರುಡ್‌ಸೆಟ್: ಉಚಿತ ಮಹಿಳಾ ಟೈಲರಿಂಗ್ ತರಬೇತಿ

ಉಜಿರೆ: ರುಡ್‌ಸೆಟ್ ಸಂಸ್ಥೆ, ವತಿಯಿಂದ ಆಸಕ್ತ ಮಹಿಳೆಯರಿಗೆ ಮತ್ತು ಯುವತಿಯರಿಗೆ ಉಚಿತ ಮಹಿಳಾ ಟೈಲರಿಂಗ್ ತರಬೇತಿಯು ಉಚಿತ ಊಟ ಮತ್ತು ವಸತಿಯೊಂದಿಗೆ ದಿನಾಂಕ:16.06.2026 ರಿಂದ 16.07.2026 ರ ವರೆಗೆ ನಡೆಯಲಿದೆ. ಅವಧಿ: 31 ದಿನಗಳು ಅರ್ಹತೆ: 18 ರಿಂದ 50 ವರ್ಷದೊಳಗಿನ ಮಹಿಳೆಯರು ಕನ್ನಡ ಓದು-ಬರಹ ತಿಳಿದಿರುವವರು ಸ್ವ ಉದ್ಯೋಗ ಆಸಕ್ತಿ ಇರುವವರು ಸ್ಥಳ:RUDSET Institute Siddhavana ಸಿದ್ದವನ, ಉಜಿರೆ https://maps.app.goo.gl/iQhbzzA9k3CrMuAv6 ಅರ್ಜಿ ನೋಂದಣಿ ಲಿಂಕ್:https://forms.gle/9LUE1UvHMAV21vRS7 ಸಂಪರ್ಕಿಸಿ: 6364561982 / 8296770307/9980885900 9448348569 / 8861514706 / 9591044014 / 9902594791 08256-236404 www.rudsetujire.com

ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರಸ್ವಾಮಿ ಗೌಡರಿಗೆ ಅತ್ಯುತ್ತಮ ನರ್ಸ್ ಎಜುಕೇಟರ್ ಪ್ರಶಸ್ತಿ

Article Image

ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರಸ್ವಾಮಿ ಗೌಡರಿಗೆ ಅತ್ಯುತ್ತಮ ನರ್ಸ್ ಎಜುಕೇಟರ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯತಿಕುಮಾರಸ್ವಾಮಿ ಗೌಡ ಅವರು ಕರ್ನಾಟಕ ಶುಶ್ರೂಷಕ ಶಿಕ್ಷಕರ ಸಂಘ, ಬೆಂಗಳೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯಲ್ಲಿ ಪ್ರದಾನ ಮಾಡಲಾದ ‘ಅತ್ಯುತ್ತಮ ನರ್ಸ್ ಎಜುಕೇಟರ್ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ. ಭವಿಷ್ಯದ ಆರೋಗ್ಯ ವೃತ್ತಿಪರರನ್ನು ರೂಪಿಸುವಲ್ಲಿ ಅತ್ಯುನ್ನತ ಮಟ್ಟದ ಬೋಧನೆ, ಮಾರ್ಗದರ್ಶನ ಹಾಗೂ ನರ್ಸಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಡಾ. ಯತಿಕುಮಾರಸ್ವಾಮಿ ಗೌಡ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಪತಿ ಡಾ. ಭಗವಾನ್ ಬಿ.ಸಿ. ಉಪಸ್ಥಿತರಿದ್ದರು.

ಧರ್ಮಸ್ಥಳದ ಜಿ. ಮಾಧುರ್ಯ ಶೇ. 100 ಅಂಕಗಳಿಸಿ ರಾಜ್ಯಕ್ಕೆ ಪ್ರಥಮಸ್ಥಾನ

Article Image

ಧರ್ಮಸ್ಥಳದ ಜಿ. ಮಾಧುರ್ಯ ಶೇ. 100 ಅಂಕಗಳಿಸಿ ರಾಜ್ಯಕ್ಕೆ ಪ್ರಥಮಸ್ಥಾನ

ಉಜಿರೆ: 2025-26ನೆ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ – 2ರಲ್ಲಿ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ. ಇವರು ಧರ್ಮಸ್ಥಳದ ನಿವಾಸಿ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಮಧುರಾ ದಂಪತಿಗಳ ಪುತ್ರಿ.

ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮ

Article Image

ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮ

ಉಜಿರೆ, ಮೇ 23: “ವ್ಯವಹಾರ ಹಾಗೂ ಉದ್ಯಮ ಕ್ಷೇತ್ರದಲ್ಲಿ ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯವಿರುತ್ತವೆ. ಆದರೆ ಆ ಅವಕಾಶಗಳನ್ನು ಗುರುತಿಸಿ, ಬಳಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ವೀರು ಶೆಟ್ಟಿ ಹೇಳಿದರು. ಅವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ ವತಿಯಿಂದ 30 ದಿನಗಳ ಕಾಲ ಆಯೋಜಿಸಲಾದ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಆಶಯದಂತೆ ರುಡ್‌ಸೆಟ್ ಸಂಸ್ಥೆ ಗ್ರಾಮೀಣ ಯುವಜನರಲ್ಲಿ ಸ್ವಾವಲಂಬನೆಯ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉದ್ಯಮ ಅಥವಾ ವ್ಯವಹಾರ ನಡೆಸುವ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು” ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕೇಂದ್ರ ಕಚೇರಿ ಉಜಿರೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯ ಕುಮಾರ್ ಮಾತನಾಡಿ, “ರುಡ್‌ಸೆಟ್‌ನ ತರಬೇತಿಗಳು ಕೇವಲ ಕೌಶಲ್ಯಾಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ. ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಹಾಗೂ ಉದ್ಯಮಶೀಲ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ತರಬೇತಿಯ ಮೂಲಕ ಪಡೆದ ಜ್ಞಾನ ಮತ್ತು ಕೌಶಲ್ಯಗಳನ್ನು ಜೀವನದಲ್ಲಿ ಸದುಪಯೋಗಪಡಿಸಿಕೊಂಡು ಯಶಸ್ಸಿನತ್ತ ಸಾಗಬೇಕು” ಎಂದು ಹೇಳಿದರು. ಶ್ರವಣಿ ಮತ್ತು ಜಲಜಾಕ್ಷಿ ಅವರು ಪ್ರಾರ್ಥಿಸಿ, ಸಂಸ್ಥೆಯ ನಿರ್ದೇಶಕ ಅಜೇಯ ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ಉದಯ ಹಾಗೂ ನಿತೀಶ್ ತಮ್ಮ ತರಬೇತಿ ಅನುಭವಗಳನ್ನು ಹಂಚಿಕೊಂಡು, ರುಡ್‌ಸೆಟ್ ಸಂಸ್ಥೆಯ ತರಬೇತಿಯು ತಮ್ಮ ಜೀವನದಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ್ದು, ಉದ್ಯೋಗ ಹಾಗೂ ಸ್ವಉದ್ಯೋಗದ ದಿಕ್ಕಿನಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಆಳ್ವಾಸ್:‌ ವಿಶೇಷ ಉಪನ್ಯಾಸ ಕಾರ್ಯಕ್ರಮ

Article Image

ಆಳ್ವಾಸ್:‌ ವಿಶೇಷ ಉಪನ್ಯಾಸ ಕಾರ್ಯಕ್ರಮ

ಮೂಡುಬಿದಿರೆ: ಪ್ರತಿಯೊಂದು ವೈಫಲ್ಯವೂ ಜೀವನದಲ್ಲಿ ಮಹತ್ವದ ಪಾಠವನ್ನು ಕಲಿಸಿ ವ್ಯಕ್ತಿಯನ್ನು ಯಶಸ್ಸಿಗೆ ಇನ್ನಷ್ಟು ಹತ್ತಿರಕ್ಕೆ ಕರೆದೊಯ್ಯಬಲ್ಲದು ಎಂದು ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ “ಒಲಿವ್ ಗ್ರೀನ್ ಟು ಬ್ಯೂಟಿ ಕ್ವೀನ್ – ಎ ಜರ್ನಿ ವಿದಿನ್” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವಗಳು, ಎದುರಿಸಿದ ಸವಾಲುಗಳು, ವೈಫಲ್ಯಗಳು ಹಾಗೂ ಸಾಧನೆಗಳನ್ನು ಹಂಚಿಕೊಂಡರು. ಸಂಪೂರ್ಣ ಪುರುಷ ಸೈನಿಕರಿಂದ ಕೂಡಿದ ಘಟಕದಲ್ಲಿ ಮಹಿಳಾ ಅಧಿಕಾರಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು, ಆದರೆ ಆ ಸವಾಲನ್ನು ಸ್ವೀಕರಿಸಿ ಜಯಿಸಿದ ಪರಿ, ಸದಾ ಪ್ರೇರಣಾದಾಯಕ ಎಂದರು. ಯಶಸ್ಸು ಸಾಧಿಸಲು ಏಕಾಗ್ರತೆ, ದೃಢನಿಶ್ಚಯ ಮತ್ತು ಕ್ರಿಯಾಶೀಲತೆ ಅಗತ್ಯವೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಗಿಲ್ ಯುದ್ಧದ ಅವಧಿಯಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಸೇವೆ ಸಲ್ಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಕರ್ತವ್ಯದ ವೇಳೆ ಗಂಭೀರವಾಗಿ ಗಾಯಗೊಂಡರೂ ತಮ್ಮ ಶಸ್ತ್ರಾಸ್ತ್ರ ನೆಲಕ್ಕೆ ಬೀಳದಂತೆ ಕಾಪಾಡಿಕೊಂಡ ನಿದರ್ಶನವನ್ನು ವಿವರಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮಹಿಳೆಯರು ತಮ್ಮನ್ನು ಸಾಬೀತುಪಡಿಸಲು ಕೃತಕ ಪುರುಷತ್ವದ ಗುಣಗಳನ್ನು ಅಳವಡಿಸಿಕೊಳ್ಳುವ ಬದಲು ತಮ್ಮತನವನ್ನು ಸ್ವೀಕರಿಸಿ ಮತ್ತಷ್ಟು ಬಲಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಹಿಳಾ ಸೇನಾ ಅಧಿಕಾರಿಗಳ ಸೇವಾ ಅವಧಿಯನ್ನು 10 ವರ್ಷಗಳಿಂದ 14 ವರ್ಷಗಳಿಗೆ ವಿಸ್ತರಿಸುವ ಹೋರಾಟದಲ್ಲಿಯೂ ತಾವು ಪಾತ್ರವಹಿಸಿದ್ದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ ಅವರ ಜೀವನಗಾಥೆ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣೆದಾಯಕ. ವಿಮರ್ಶೆ ಮತ್ತು ತಿರಸ್ಕಾರಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಾರ್ವಜನಿಕ ಅಭಿಪ್ರಾಯಗಳಿಗೆ ಮಣಿಯದೆ ತಮ್ಮ ಗುರಿಯತ್ತ ದೃಢವಾಗಿ ಸಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಫೋರಂ ಅಧ್ಯಕ್ಷೆ ಡಾ. ದೀಪಾ ಕೊಠಾರಿ, ಸಕ್ಷಮ ಮಹಿಳಾ ಘಟಕದ ಸಂಚಾಲಕಿ ಡಾ ಗ್ರೀಷ್ಮಾ ವಿವೇಕ ಆಳ್ವ ಇದ್ದರು. ಶ್ರದ್ಧಾ ಹೆಗ್ಡೆ ನಿರೂಪಿಸಿ, ಫಾತಿಮಾ ವಂದಿಸಿದರು.

ಮೂಡುಬಿದಿರೆ: ಆಳ್ವಾಸ್‌ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ

Article Image

ಮೂಡುಬಿದಿರೆ: ಆಳ್ವಾಸ್‌ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ

ಮೂಡುಬಿದಿರೆ: ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ರಾಜ್ಯದ ಅಗ್ರಗಣ್ಯ 10 ರ‍್ಯಾಂಕ್‌ನ ಒಳಗೆ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ 103 ವಿದ್ಯಾರ್ಥಿಗಳ ಜೊತೆಯಲ್ಲಿ ಎಸ್‌ಎಸ್‌ಎಲ್‌ಸಿ ಹಂತದಲ್ಲಿ 50%ಕ್ಕಿಂತ ಕಡಿಮೆ ಅಂಕಗಳಿಸಿ, ನಂತರ ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್ ಸೇರಿದ ನಂತರ 95%ಕ್ಕಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸುವ ಕರ‍್ಯಕ್ರಮ ಭಾನುವಾರ ನುಡಿಸಿರಿ ಸಭಾಂಗಣದಲ್ಲಿ ನಡೆಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ನೀವು ಈಗ ಕೇವಲ ನಮ್ಮ ವಿದ್ಯಾರ್ಥಿಗಳಲ್ಲ, ನಮ್ಮ ಸಂಸ್ಥೆಯ ರಾಯಭಾರಿಗಳಾಗುವವರು. ಇಲ್ಲಿ ಕಲಿತಿರುವ ಶಿಸ್ತಿನ ಜೊತೆಗೆ ಉತ್ತಮ ಸ್ವಭಾವ, ಹೋರಾಟ ಮನೋಭಾವ ಹಾಗೂ ಕೂಡಿ ಬಾಳುವ ಗುಣಗಳು ನಿಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂದರು. ಆಳ್ವಾಸ್‌ನ್ನು ‘ಮಿನಿ ಇಂಡಿಯಾ’ ಎಂದು ಕರೆಯಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಒಂದೇ ಕುಟುಂಬದAತೆ ಬೆರೆತು ಬದುಕುತ್ತಾರೆ. ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವೈವಿಧ್ಯತೆಯ ನಡುವೆಯೂ ಒಗ್ಗಟ್ಟಿನಿಂದ ಬದುಕುವುದನ್ನು ಕಲಿಸುತ್ತದೆ. ಈ ಅನುಭವವು ನಿಮ್ಮನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ನೀವು ಎಲ್ಲಿಗೆ ಹೋದರೂ ಈ ಒಗ್ಗಟ್ಟಿನ ಸಂದೇಶವನ್ನು ಸಮಾಜಕ್ಕೆ ಹಂಚುವ ಜವಾಬ್ದಾರಿ ನಿಮ್ಮ ಮೇಲಿದೆ. ಮುಂದಿನ ಶೈಕ್ಷಣಿಕ ವಿಸ್ತರಣೆಯ ಭಾಗವಾಗಿ, ಈ ವರ್ಷದಿಂದ ಎಂಬಿಬಿಎಸ್ ಕೋರ್ಸ್ನ್ನು ಪ್ರಾರಂಭಿಸಲಾಗುವುದು ಎಂದರು. ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ತನ್ನ ಸ್ವಂತ ಅನುಭವದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಸ್ಪರ್ಶ ಅತ್ಯಂತ ಮುಖ್ಯ ಎಂದರು. ವಾಣಿಜ್ಯ ವಿಭಾಗದಲ್ಲಿ 600ಕ್ಕೇ 600 (ಪೂರ್ಣಾಂಕ) ಅಂಕ ಪಡೆದ ದಿಶಾಳಿಗೆ 3 ಲಕ್ಷ ನಗದು ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ರಕ್ಷಿತಾ ಮಂಜುನಾಥ್‌ಳಿಗೆ 2 ಲಕ್ಷ ನಗದಿನೊಂದಿಗೆ ಸನ್ಮಾನಿಸಲಾಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಪ್ರೋ ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಹಾಗೂ ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಇದ್ದರು. ವೇಣುಗೋಪಾಲ ಶೆಟ್ಟಿ ಕರ‍್ಯಕ್ರಮ ನಿರ್ವಹಿಸಿದರು.

ಮೂಡಬಿದಿರೆ: ಸಂಸ್ಥಾಪನಾ ದಿನಾಚರಣೆ

Article Image

ಮೂಡಬಿದಿರೆ: ಸಂಸ್ಥಾಪನಾ ದಿನಾಚರಣೆ

ಮೂಡುಬಿದಿರೆ:: ಕನ್ನಡದ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಮೂಡಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಆಶ್ರಯದಲ್ಲಿ ಆಳ್ವಾಸ್ ಪದವಿ ಸ್ವಾಯತ್ತ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಪ್ರಾಧ್ಯಾಪಕ ರಾಮಪ್ರಸಾದ ಕಾಂಚೋಡು ಮಾತನಾಡಿ, ಕನ್ನಡದ ಕಟ್ಟಾಳುಗಳ ಬೆವರಿನ ಫಲವೇ ಕನ್ನಡ ಸಾಹಿತ್ಯ ಪರಿಷತ್ತು. ಅದರ ಹುಟ್ಟುಹಬ್ಬವನ್ನು ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಇಂದಿನ ಕನ್ನಡದ ವೈಭವದ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಅನೇಕ ಕಾರ್ಯಗಳಿವೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ, ಅದರ ಸೇವೆಗಳು ಮತ್ತು ಸಾಧನೆಗಳನ್ನು ಸ್ಮರಿಸಲಾಯಿತು. ಕನ್ನಡ ಭಾಷೆಯ ಅಭಿವೃದ್ಧಿಗೆ ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತೀರುವ ಸಾಹಿತ್ಯ ಪರಿಷತ್ತು, ಗ್ರಂಥ ಪ್ರಕಾಶನ, ಸಂಶೋಧನೆ, ಸಾಹಿತ್ಯ ಸಮ್ಮೇಳನಗಳು ಹಾಗೂ ಸಂಸ್ಕೃತಿ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದೆ. ಮಹಾಕಾವ್ಯಗಳು, ಶಾಸನಗಳು ಮತ್ತು ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿ ಗ್ರಂಥರೂಪದಲ್ಲಿ ಉಳಿಸುವ ಮೂಲಕ ಕನ್ನಡದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುವ ಕಾರ್ಯವನ್ನು ಇದು ನಿರಂತರವಾಗಿ ಮಾಡುತ್ತಿದೆ ಎಂದರು. ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವುದು, ಆಂಗ್ಲಮಾಧ್ಯಮ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಬೆಳೆಸುವುದು ಹಾಗೂ ತಂತ್ರಜ್ಞಾನವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಕರೆ ನೀಡಿದರು. ಮೂಡಬಿದಿರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಆಳ್ವಾಸ್ ಪದವಿ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ರಾಮಕೃಷ್ಣ ಶೆಟ್ಟಿ ಪ್ರಾರ್ಥಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ 'ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ಪ್ರಶಸ್ತಿ

Article Image

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗೆ 'ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ಪ್ರಶಸ್ತಿ

ಉಜಿರೆ,ದಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯ ಮತ್ತು ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ವತಿಯಿಂದ ʼಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ' ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಿದರು. ಪ್ರಶಸ್ತಿ ನೀಡಿದ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ಸಂಸ್ಥೆಯೂ, ಹಲವು ದಶಕಗಳಿಂದ ಶಿಕ್ಷಣ ಮತ್ತು ತತ್ಸಂಬಂಧಿ ಕ್ಷೇತ್ರಗಳ ಬೆಳವಣಿಗೆಗೆ ಪವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಶುಭಾಶಯ ತಿಳಿಸಿದರು. ಪ್ರಶಸ್ತಿಗೆ ಪಾತ್ರವಾದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಪ್ರಾಚಾರ್ಯರು, ಪೋಷಕರು ಹಾಗು ವಿದ್ಯಾರ್ಥಿಗಳು ಧನ್ಯವಾದಗಳನ್ನು ತಿಳಿಸಿರುತ್ತಾರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ವಿಜ್ಞಾನ, ಆಯುರ್ವೇದ , ಕಾನೂನು, ತಂತ್ರಜ್ಞಾನ, ಪದವಿ, ಸ್ನಾತಕೋತ್ತರ, ಮೆಡಿಕಲ್ ಸೇರಿದಂತೆ ಸಂಸ್ಥೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಶಿಸ್ತು, ಸಂಸ್ಕಾರ, ಮೌಲ್ಯ ಹಾಗು ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡುತ್ತಿದೆ. ಈಗಾಗಲೇ ನೂರಾರು ಜನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಶ್ಲಾಘಿಸಿ ಗೌರವಿಸಿದೆ. ಇದೀಗ ಬೆಂಗಳೂರಿನ ಅಕಾಡೆಮಿಕ್ ಇನ್‌ಸೈಟ್ಸ್ ವತಿಯಿಂದ ''ಇನ್ಸ್ಟಿಟ್ಯೂಷನ್ಸ್ ಆಫ್ ಲೆಗಸಿ ' ಪ್ರಶಸ್ತಿ ನೀಡಿ ಗೌರವಿಸಿರುವುದು ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಹೆಚ್ಚಿಸಿದೆ. ಅಕಾಡೆಮಿಕ್ ಇನ್‌ಸೈಟ್ಸ್ ಸಂಸ್ಥೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪರವಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ - ಡಾ. ಸತೀಶ್ಚಂದ್ರ ಎಸ್ ಕಾರ್ಯದರ್ಶಿಗಳು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ

ಆಳ್ವಾಸ್‌ನಿಂದ ಕರಾವಳಿ ಕರ್ನಾಟಕದ ಮೊದಲ ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸ ಆರಂಭ

Article Image

ಆಳ್ವಾಸ್‌ನಿಂದ ಕರಾವಳಿ ಕರ್ನಾಟಕದ ಮೊದಲ ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸ ಆರಂಭ

ಮೂಡುಬಿದಿರೆ: ಮಿಜಾರಿನ ಶೋಭಾವನ ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನೂತನವಾಗಿ ಆರಂಭವಾಗಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲೇಜು, ಈ ಶೈಕ್ಷಣಿಕ ವರ್ಷದಿಂದಲೇ ಬಹು ಬೇಡಿಕೆಯ ನಾಲ್ಕು ವರ್ಷದ ಅವಧಿಯ ಬಿಎಸ್ಸಿ (ಆನರ್ಸ್) ಅಗ್ರಿಕಲ್ಚರ್ ಮತ್ತು ಬಿ.ಟೆಕ್ ಫುಡ್ ಟೆಕ್ನಾಲಜಿ ಕೋರ್ಸಗಳನ್ನು ಪ್ರಾರಂಭಿಸುತ್ತಿದೆ. ಈ ಕಾಲೇಜು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯದಡಿಯಲ್ಲಿ ಕಾರ‍್ಯನಿರ್ವಹಿಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇದು ಕರಾವಳಿ ಕರ್ನಾಟಕದಲ್ಲಿ, ಪ್ರಥಮ ಬಾರಿಗೆ ಕೃಷಿ ವಿಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ಮಹತ್ವದ ಸಂಸ್ಥೆಯಾಗಿ ಮೂಡಿಬರಲಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಪ್ರಯೋಗಶಾಲೆ, ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದ ನೈಜ ಅನುಭವ, ಆಹಾರ ಸಂಸ್ಕರಣೆ, ಸಂರಕ್ಷಣೆ ಮತ್ತು ಗುಣಮಟ್ಟ ನಿಯಂತ್ರಣ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ, ನಿಪುಣ ಬೋಧಕ ವೃಂದ ಹಾಗೂ ಕೈಗಾರಿಕಾ ತರಬೇತಿಯ ಸೌಲಭ್ಯಗಳನ್ನು ಒದಗಿಸಲಿದೆ. ಆಳ್ವಾಸ್ ಸಂಸ್ಥೆ ಈಗಾಗಲೇ ಮಂಗಳೂರು ವಿವಿ, ರಾಜೀವ್‌ಗಾಂಧಿ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿವಿಯ ಪಠ್ಯಕ್ರಮಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿದ್ದು, ಇದೀಗ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿಭಾಗಗಳ ಸೇರ್ಪಡೆ ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಮತ್ತೊಂದು ಮೈಲುಗಲ್ಲಾಗಲಿದೆ. ಕೃಷಿ ವಿಜ್ಞಾನ ಮತ್ತು ಆಹಾರ ತಂತ್ರಜ್ಞಾನ ಪದವಿ ಕೋರ್ಸನ್ನು ಪ್ರಾರಂಬಿಸಲು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಚಲುವರಾಯಸ್ವಾಮಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ ಆರ್ ಸಿ ಜಗದೀಶ, ಕುಲಸಚಿವರಾದ ಡಾ ಕೆ.ಸಿ ಶಶಿಧರರವರ ಸಹಕಾರವನ್ನು ಸ್ಮರಿಸಲಾಗಿದೆ. 2025 ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು (9448458334, 8050585606) ಸಂಪರ್ಕಿಸಲು ಕೋರಲಾಗಿದೆ. ಕಾಲೇಜು ಕೋಡ್ ( ಫಾರ್ಮ ಸೈನ್ಸ್) 038 ಆಗಿರಲಿದೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್, ಆಳ್ವಾಸ್ ಪದವಿ( ಸ್ವಾಯತ್ತ) ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಇದ್ದರು.

ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

Article Image

ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ದ.ಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಜೈನ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 28 ಚಿನ್ನ, 20 ಬೆಳ್ಳಿ ಮತ್ತು 14 ಕಂಚಿನ ಪದಕಗಳೊಂದಿಗೆ 52 ಪದಕಗಳನ್ನು ಪಡೆದು ಬಾಲಕರ ವಿಭಾಗದಲ್ಲಿ 100 ಅಂಕ ಮತ್ತು ಬಾಲಕಿಯರ ವಿಭಾಗದಲ್ಲಿ 104 ಅಂಕ ಒಟ್ಟು 214 ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು 16 ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಜೈನ್ ಪದವಿಪೂರ್ವ ಕಾಲೇಜು 19 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕರ ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸಿನ ಸಮರ್ಥ ಪಡೆದುಕೊಂಡರೆ, ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸಿನ ನಾಗಿಣಿ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದರು.

ಸತ್ತೂರು, ಧಾರವಾಡ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Article Image

ಸತ್ತೂರು, ಧಾರವಾಡ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯದ, ಮನೋರೋಗ ಚಿಕಿತ್ಸಾ ವಿಭಾಗವು ಎಸ್.ಡಿ.ಎಂ. ನರ್ಸಿಂಗ್ ಕಾಲೇಜು ಅವರ ಸಹಭಾಗಿತ್ವದಲ್ಲಿ “ವಿಪತ್ತು ಮತ್ತು ತುರ್ತು ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ, ಸೇವೆಗಳಿಗೆ ಆದ್ಯತೆ” ಎಂಬ ಧ್ಯೇಯೆಯೊಂದಿಗೆ ಅಕ್ಟೋಬರ್ 10, 2025ರಂದು “ವಿಶ್ವ ಮಾನಸಿಕ ಆರೋಗ್ಯ” ದಿನವನ್ನು ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಧ್ಯೇಯೆ ವಾಕ್ಯವನ್ನು ಅನಾವರಣಗೊಳಿಸಿದರು. ಡಾ. ಸಚಿನ್ ಬಿ. ಎಸ್. ಮತ್ತು ಡಾ. ಮನೋಜ ಶೆಟ್ಟರ ಅವರು ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ: ಆರೋಗ್ಯ ವೃತ್ತಿಪರರು ತಮ್ಮ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳಬೇಕು. ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅತ್ಯಂತ ಕಾಳಜಿಯಿಂದ ಚಿಕಿತ್ಸೆ ನೀಡಬೇಕು ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯದಷ್ಟೇ ಮುಖ್ಯವಾಗಿದೆ. ಸದಾ ಉತ್ತಮ ಆರೋಗ್ಯವನ್ನು ಹೊಂದಲು ಮನಸ್ಸಿಗೆ ಆಘಾತಗಳಾಗದಂತೆ ಜಾಗೃತಿವಹಿಸಬೇಕು. ಹಣಕಾಸು ಅಧಿಕಾರಿಗಳಾದ ವಿ.ಜಿ. ಪ್ರಭು, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ ಹೆಗ್ಡೆ, ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸನ್ನ ದೇಶಪಾಂಡೆ, ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಿತ್ತಪತ್ರ ಪ್ರದರ್ಶನ ಮತ್ತು ರಸಪ್ರಶ್ನೆ ಸ್ಪರ್ಧೆಗಳ ವಿಜೆತರಿಗೆ ಬಹುಮಾನಗಳನ್ನು ವಿತರಿಸಿದರು. ಡಾ. ಸ್ಪೂರ್ತಿ ಹಾಗೂ ಡಾ. ಮೋಕ್ಷ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ನಾಗೇಶ ಅಜ್ಜವಾಡಿ ಮಠ ವಂದಣಾರ್ಪಣೆ ಸಲ್ಲಿಸಿದರು.

ಮಂಗಳೂರು ವಿ.ವಿ ಅಂತರ ಕಾಲೇಜು ಯೋಗಾಸನ ಸ್ಪರ್ಧೆ

Article Image

ಮಂಗಳೂರು ವಿ.ವಿ ಅಂತರ ಕಾಲೇಜು ಯೋಗಾಸನ ಸ್ಪರ್ಧೆ

ಮೂಡುಬಿದಿರೆ: ಬಲ್ಮಟದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪುರುಷರ ತಂಡವು ಪ್ರಥಮ ಸ್ಥಾನವನ್ನು ಪಡೆದರೆ, ಮಹಿಳೆಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಆ ಮೂಲಕ ಆಳ್ವಾಸ್ ಪದವಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಅಂತರ್ ವಿವಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 13 ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ

Article Image

ಎನ್‌ಡಿಎ ಪರೀಕ್ಷೆಯಲ್ಲಿ ಆಳ್ವಾಸ್‌ನ 13 ವಿದ್ಯಾರ್ಥಿಗಳ ಅತ್ಯದ್ಭುತ ಸಾಧನೆ

ವಿದ್ಯಾಗಿರಿ: ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು ತೇರ್ಗಡೆಯಾಗಿ, ರಾಷ್ಟ್ರಮಟ್ಟದಲ್ಲಿ ಮಹತ್ತರ ಸಾಧನೆ ಮೆರೆದಿದ್ದಾರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಹರ್ಷ ಎಂ, ಚಿನ್ಮಯ್ ಎಸ್, ಸಂಕೇತ್ ಭಟ್, ಸುಮಿತ್ ವಿ ಕೆ, ಹರ್ಷ ರೆಡ್ಡಿ, ಮೋಹಿತ್ ಕುಮಾರ್, ಪ್ರಣವ್ ವಿ ಪಂಡಿತ್, ಅಕ್ಷಯ್ ಭಾರದ್ವಾಜ್, ಅನುಷ್ ಅರುಣ್, ಪಿಯೂಷ್ ಹೆಚ್, ವಿಸ್ಮಯ ನಾರಾಯಣ್, ಮೆಲ್ರೊಯ್ ಕ್ಯಾಸ್ಟೆಲಿನೊ, ಇಶಾನ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ರಾಷ್ಟೀಯ ರಕ್ಷಣಾ ಅಕಾಡೆಮಿ- ಎನ್‌ಡಿಎ) ಮತ್ತು ಇಂಡಿಯನ್ ನೇವಲ್ ಅಕಾಡೆಮಿ (ಭಾರತೀಯ ನೌಕಾ ಅಕಾಡೆಮಿ- ಐಎನ್‌ಎ) ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆಯು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಹಕಾರಿಯಾಗಿದೆ. ಆಳ್ವಾಸ್ ಪದವಿ ಪೂರ್ವ ಕಾಲೇಜು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ನಿರಂತರ ವಾಗಿ ವಿಶೇಷ ತರಬೇತಿ, ಅಣುಕು ಪರೀಕ್ಷೆ, ಮಾರ್ಗದರ್ಶನ ಕಾರ್ಯಗಾರಗಳನ್ನು ನಡೆಸುತ್ತಾ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಸನ್ನದ್ಧರನ್ನಾಗಿಸುತ್ತಿದೆ.

ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರ

Article Image

ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರ

ಮೂಡುಬಿದಿರೆ: ಅರಣ್ಯಗಳತ್ತಾ ನಮ್ಮ ನಿಲುವು ಸದಾ ವಿವೇಚನೆಯಿಂದ ಕೂಡಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ನುಡಿದರು. ಅವರು ಆಳ್ವಾಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ, ಹಳೆವಿದ್ಯಾರ್ಥಿಗಳ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು. ಪ್ರಕೃತಿಯನ್ನು ಅವಲೋಕಿಸುವುದು ಬಹಳ ಮುಖ್ಯ. ಪ್ರಕೃತಿಯ ಪ್ರತಿಯೊಂದು ಅಂಶವೂ ನಮಗೆ ಬದುಕಿಗೆ ಪಾಠವನ್ನು ಕಲಿಸುತ್ತದೆ. ಪ್ರಕೃತಿ, ಕೇವಲ ಸಂಪನ್ಮೂಲವಲ್ಲ, ಅದು ಸುಖ-ಶಾಂತಿಯ ಅಮೂಲ್ಯ ಸಂಪತ್ತು. ಅದನ್ನು ಕಾಪಾಡುವುದು ನಮ್ಮ ನೈತಿಕ ಕರ್ತವ್ಯ ಮಾತ್ರವಲ್ಲ, ಭವಿಷ್ಯದ ಪೀಳಿಗೆಗಾಗಿ ಜೀವಸಂಪತ್ತನ್ನು ಉಳಿಸುವ ಅಗತ್ಯವೂ ನಮ್ಮದಾಗಿದೆ. ನಾವು ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಸುಖ ಮತ್ತು ಶಾಂತಿಯಿಂದ ಬದುಕಲು ಸಾಧ್ಯ. ನಾವು ವಾಸಿಸುತ್ತಿರುವ ಪ್ರದೇಶ ಜೀವ ವೈವಿಧ್ಯತೆಯ ಹಾಟ್ ಸ್ಪಾಟ್. ಜಗತ್ತಿನಲ್ಲಿ ಕೇವಲ 2 ರಿಂದ 3 ಶೇಕಡಾದಷ್ಟು ಪ್ರದೇಶವಷ್ಟೇ ಜೀವ ವೈವಿಧ್ಯ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆದ್ದರಿಂದ ಜನರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ. ಕುರಿಯನ್ ಮಾತನಾಡಿ, ತಂತ್ರಜ್ಞಾನ ಬೆಳದಂತೆ ಮನುಷ್ಯ ತನ್ನ ಎಲ್ಲಾ ಬಳಸುವ ವಸ್ತುಗಳನ್ನು ಶಸ್ತ್ರವನ್ನಾಗಿಸಿ ಮಾರ್ಪಾಡಿಸಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಕೃತಿಯೊಂದಿಗೆ ಹೋರಾಡುವುದಕ್ಕಿಂತ ಅದರಲ್ಲಿ ಬೆರೆತು ಬದುಕುವುದು ಮಾನವನ ನಿಜವಾದ ಕರ್ತವ್ಯ ಎಂದರು. ಆಗುಂಬೆಯ ಕಾನನ ಸಂಸ್ಥೆಯ ನಿರ್ದೇಶಕ, ಜೋಯೆಲ್ ಕೊರಿಯಾ ಮಾತನಾಡಿ, ನಮ್ಮ ಭೂಮಿಯ ಭವಿಷ್ಯವು ನಾವು ಇಂದು ಕೈಗೊಳ್ಳುವ ಕ್ರಮಗಳ ಮೇಲೆ ಅವಲಂಬಿತವಾಗಿವೆ. ಪರಿಸರ ಸಂರಕ್ಷಣೆಯ ಚಳವಳಿಗಳಲ್ಲಿ ಯುವ ಪೀಳಿಗೆ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ವಿಶೇಷವಾಗಿ ಲಯನ್‌ಟೈಲ್ಡ್ ಮಕಾಕ್ (Lion-tailed Macaque) ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಮಾನವನ ಹಸ್ತಕ್ಷೇಪವು ಹೇಗೆ ಅವುಗಳ ಆಹಾರ ಪದ್ಧತಿ ಮತ್ತು ವಾಸಸ್ಥಾನವನ್ನು ಅಸಮತೋಲನಗೊಳಿಸುತ್ತಿವೆ ಎಂಬುದನ್ನು ವಿವರಿಸಿದರು. ಸಂತ ಅಲೋಷಿಯಸ್ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಕಿರಣ್ ವಾಟಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡಾ. ವಿನಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ‍್ಯಗಾರ ನಡೆಸಿಕೊಟ್ಟರು. ಆಳ್ವಾಸ್ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರಾ ಇದ್ದರು. ಶ್ರಾವ್ಯ ಕಾರ‍್ಯಕ್ರಮ ನಿರೂಪಿಸಿ, ಮಾನಸ ವಂದಿಸಿದರು.

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Article Image

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ನಡೆದ ರಾಜ್ಯ ಮಟ್ಟದ ದಸರಾ ಸಿಎಂ ಕಪ್ 2025ರಲ್ಲಿ ಆಳ್ವಾಸ್ ತಂಡವು ಹಲವು ಪ್ರಶಸ್ತಿ ಮತ್ತು ಪದಕಗಳನ್ನು ಪಡೆದುಕೊಂಡಿದೆ. ತಂಡ ವಿಭಾಗದ ಕ್ರೀಡೆಗಳಾದ ಪುರುಷರ ಕಬಡ್ಡಿಯಲ್ಲಿ ಆಳ್ವಾಸ್ ತಂಡ, ಬೆಂಗಳೂರು ಸಿಟಿಯ ವಿರುದ್ಧ 13 ಅಂಕಗಳ ಅಂತರದಿಂದ ಜಯಶಾಲಿಯಾದರೆ, ಮಹಿಳೆಯರ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಆಳ್ವಾಸ್ ತಂಡ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ 30-08, 35-20 ನೇರ ಸೆಟ್‌ಗಳಿಂದ ಸೋಲಿಸಿ ಪ್ರಥಮ ಸ್ಥಾನವನ್ನು ಪಡೆಯಿತು. ಅಂತೆಯೇ ಮಹಿಳಾ ಕಬಡ್ಡಿ, ಪುರುಷರ ಖೋ-ಖೋ, ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ಆಳ್ವಾಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಅಥ್ಲೇಟಿಕ್ಸ್ನಲ್ಲಿ ಆಳ್ವಾಸ್‌ನ ನಾಗ್ರೇಂದ್ರ ಡಿಸ್ಕಸ್ ಥ್ರೋನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರೆ, 800 ಮೀ ಓಟದಲ್ಲಿ ಆಳ್ವಾಸ್‌ನ ರೇಖಾ ಬಸಪ್ಪ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ವೈಯಕ್ತಿಕ ವಿಭಾಗದ ಅಥ್ಲೆಟಿಕ್ಸ್ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಒಟ್ಟು ಕ್ರೀಡಾಕೂಟದಲ್ಲಿ 6 ಚಿನ್ನ, 2 ಬೆಳ್ಳಿ, 2 ಕಂಚಿನ ಪದಕವನ್ನು, ವೇಯ್ಟ್ ಲಿಫ್ಟಿಂಗ್‌ನಲ್ಲ್ಲಿ ಒಟ್ಟು 8 ಚಿನ್ನ, 4 ಬೆಳ್ಳಿ, 4 ಕಂಚಿನ ಪದಕವನ್ನು, ಕುಸ್ತಿ ಪಂದ್ಯಾಟದಲ್ಲಿ ಒಟ್ಟು 5 ಕಂಚಿನ ಪದಕ, ಯೋಗಾಸನ ಸ್ಪರ್ಧೆಯಲ್ಲಿ 2 ಬೆಳ್ಳಿ ಪದಕಗಳನ್ನು ಪಡೆದುಕೊಂಡಿದೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.

ಆಳ್ವಾಸ್ ಪಿಯು ಕಾಲೇಜಿನಲ್ಲಿ ನಾಟಾ ಓರಿಯೆಂಟೇಷನ್

Article Image

ಆಳ್ವಾಸ್ ಪಿಯು ಕಾಲೇಜಿನಲ್ಲಿ ನಾಟಾ ಓರಿಯೆಂಟೇಷನ್

ಮೂಡಬಿದಿರೆ: ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ನಾಟಾ ಪರೀಕ್ಷೆಯ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪ ಕ್ಷೇತ್ರದ ಭವಿಷ್ಯ ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು. ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್‌ನ ನಿರ್ದೇಶಕ ವಿನೋದ್ ರ‍್ಹಾನ ಮಾತನಾಡಿ, ವಾಸ್ತುಶಿಲ್ಪದಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕಲಾತ್ಮಕ ಚಿಂತನೆಯ ಸಮನ್ವಯ ಅಗತ್ಯ. ಪಿಯುಸಿ ನಂತರ ವಾಸ್ತುಶಿಲ್ಪ ಪದವಿಗೆ ಪ್ರವೇಶ ಪಡೆಯಲು ದೇಶದಾದ್ಯಂತ ನಡೆಯುವ ನಾಟಾ (NATA) ಹಾಗೂ ಜೆಇಇ ಬಿಆರ್ಕ್ (JEE B.Arch) ಪರೀಕ್ಷೆಗಳ ಮಹತ್ವವನ್ನು ವಿವರಿಸಿದರು. ನಾಟಾ ಪರೀಕ್ಷೆಯಲ್ಲಿ ಗಣಿತ, ರೇಖಾಚಿತ್ರ ದೃಶ್ಯಗ್ರಹಣ ಹಾಗೂ ತಾರ್ಕಿಕ ಚಿಂತನೆಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಸಿದ್ಧತೆಗಾಗಿ ಸೂಕ್ತ ಮಾರ್ಗದರ್ಶನ ಒದಗಿಸಿದರು. ಬಿ.ಆರ್ಕ ಪದವಿಯ ಕುರಿತು ಮಾತನಾಡಿ, ಈ ಐದು ವರ್ಷದ ಕೋರ್ಸ್ನಲ್ಲಿ ವಾಸ್ತು ವಿನ್ಯಾಸ, ನಗರ ಯೋಜನೆ, ಪರಿಸರ ಸ್ನೇಹಿ ನಿರ್ಮಾಣ ಮುಂತಾದ ಹಲವು ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಬಿ.ಆರ್ಕ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕರ, ನಗರ ಯೋಜನೆ ಮುಂತಾದ ಅನೇಕ ವೃತ್ತಿ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು. ನಿಟ್ಟೆ ವಿವಿಯ ಆರ್ಕಿಟೆಕ್ಚರ್ ವಿಭಾಗದ ಸಹಾಯಕ ಪ್ರಾಧ್ಯಪಕ ನಿಕಿತಾ ಮಖಾಸನ ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಾಗ ಕೇವಲ NEET, JEE, CET ಪರೀಕ್ಷೆಗಳಿಗಷ್ಟೇ ಸೀಮಿತರಾಗದೆ, ಲಭ್ಯವಿರುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಬೇಕು. ಇಂದಿನ ಪೀಳಿಗೆ ಅವಕಾಶಗಳ ಜಗತ್ತನ್ನು ಅನ್ವೇಷಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಕೇವಲ ಒಂದು ಅಥವಾ ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸದೆ, ಹೊಸ ಹೊಸ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿದರೆ ಮಾತ್ರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು. ಸಮಾಜಕ್ಕೆ ಅಗತ್ಯವಿರುವ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದರೆ, ತಮ್ಮ ವೃತ್ತಿಜೀವನದೊಂದಿಗೆ ರಾಷ್ಟ್ರ ನಿರ್ಮಾಣದಲ್ಲೂ ಸಹ ಪಾತ್ರವಹಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಸಂಯೋಜಕರಾದ ಗೌತಮ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸುಧಾರಾಣಿ ನಿರೂಪಿಸಿದರು.

ಗೌರವ ದಯೆ ಹಾಗೂ ಅರ್ಥಮಾಡಿಕೊಳ್ಳುವ ಮನೋಭಾವದಿಂದ ಶಾಂತಿ ಸಾಧ್ಯ : ಅಜೇಯ

Article Image

ಗೌರವ ದಯೆ ಹಾಗೂ ಅರ್ಥಮಾಡಿಕೊಳ್ಳುವ ಮನೋಭಾವದಿಂದ ಶಾಂತಿ ಸಾಧ್ಯ : ಅಜೇಯ

ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಪೀಳಿಗೆ ಹಾಗೂ ಮುಂದಿನ ನಾಯಕರು, ವಿಜ್ಞಾನಿಗಳು ಮತ್ತು ಸಮಾಜ ಪರಿವರ್ತಕರು. ಆದರಿಂದ ಶಾಂತಿ ನಮ್ಮಿಂದಲೇ ಆರಂಭವಾಗಬೇಕು. ನಾವು ಪರಸ್ಪರ ಮಾತನಾಡುವ ರೀತಿ, ನಾವು ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವ ವಿಧಾನ ಇವೆಲ್ಲವೂ ಶಾಂತಿಗೆ ವೇದಿಕೆ ನೀಡುತ್ತದೆ. ಎಂದು ಉಜಿರೆಯ ರೂಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ. ಧ. ಮಂ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗವು ಆಯೋಜಿಸಿದ ಅಂತರಾಷ್ಟ್ರೀಯ ಶಾಂತಿ ದಿನ ಕಾರ್ಯಕ್ರಮ ಸೆಪ್ಟಂಬರ್ 23ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಶಾಂತಿಯನ್ನು ಉತ್ತೇಜಿಸಲು ಏನು ಮಾಡಬಹುದೆಂದರೆ : ನಾವು ಮಾಡುವ ಚಿಕ್ಕ ಕೆಲಸಗಳು ಕೂಡ ಮುಂದೆ ದೊಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ನಕರಾತ್ಮಕತೆ ಹರಡುವುದನ್ನು ತಪ್ಪಿಸುವುದು ಮುಖ್ಯವಾಗಿದೆ ಹಾಗೂ ಶಾಂತಿ ಪೂರ್ಣ ಮಾತುಗಳು ಮತ್ತು ಕ್ರಿಯೆಗಳನ್ನು ನಮ್ಮ ವಯಕ್ತಿಕ ಜೀವನ ಹಾಗೂ ಕಾಲೇಜು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಹಾಗೆಯೇ "ನಮ್ಮ ಯಶಸ್ಸು ಜೀವನದ ಶಾಂತಿ" ಎಂದು ತಿಳಿಸಿದರು. ವಿಭಾಗದ ಮುಖ್ಯಸ್ಥ ನಟರಾಜ್ ಎಚ್. ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇವತ್ತು ಯುವಕರು ಯಾಕೆ ತೊಂದರೆಗೊಳಾಗುತ್ತಾರೆ ಎಂದರೆ ಇಡೀ ಪ್ರಪಂಚದಲ್ಲಿ ನೋಡುವುದಾದರೆ ಯುವಕರು ತೊಂದರೆಗೆ ಸಿಲುಕಿದಾಗಲೇ ಅಲ್ಲಿ ಶಾಂತಿ ಕದಳುತ್ತಾ ಬರುತ್ತದೆ ಕಾರಣ ಯುದ್ಧಗಳು ಹಾಗೂ ಯುದ್ಧಗಳಿಂದ ಬಲಿಯದಂತಹ ವ್ಯಕ್ತಿಗಳು. ಹಾಗೆಯೇ ಬದುಕನ್ನು ಕಟ್ಟಿಕೊಂಡವನಿಗೆ ಶಾಂತಿಯನ್ನು ಹಾಳು ಮಾಡಿಕೊಳ್ಳುವಂತಹ ದಾರಿಗಳು ಸಿಗುವುದಿಲ್ಲ. ಇಂದು ಸಾಮಾಜಿಕ ಮಾಧ್ಯಮಗಳು ಯುವಕರನ್ನು ದಾರಿ ತಪ್ಪಿಸುವಂತೆ ಮಾಡುತ್ತಿದೆ. ಹಾಗೂ ಪ್ರತಿ ಹಂತದಲ್ಲಿಯೂ ಕೂಡ ಶಾಂತಿಯನ್ನು ಪ್ರಚೋದಿಸುತ್ತಾ ಪ್ರತಿಪಾದಿಸುತ್ತಾ ಬಂದಿರುವ ದೇಶ ನಮ್ಮದು. ಇವತ್ತು ನಾವು ಭಾರತವನ್ನು ತಿರುಗಿ ನೋಡುವ ಪರಿಸ್ಥಿತಿಗೆ ಬೆಳಿತಾ ಇದ್ದೇವೆ . ಹಾಗೂ ವಿಶ್ವಗುರುವಾಗಿ ಬದಲಾಗುತ್ತಿದೆ ನಮ್ಮ ದೇಶ. ನಮ್ಮೆಲ್ಲಾರ ಉದ್ದೇಶ ಶಾಂತಿ ಸ್ಥಾಪನೆಗೋಸ್ಕರವಾಗಿದೆ . ಹಾಗೂ ಈ ದೇಶಕ್ಕೆ, ಮಣ್ಣಿಗೆ ಹಾಗೂ ಮಕ್ಕಳಿಗೆ ಶಾಂತಿ ಸ್ಥಾಪನೆಯ ಭಾಷಣ ಅವಶ್ಯಕತೆ ಇಲ್ಲ ಯಾಕೆಂದರೆ ಅದು ನಮ್ಮ ರಕ್ತದಲ್ಲೇ ಇದೆ ಎಂದು ತಿಳಿಸಿದರು. ಹಾಗೆ ರಾಜಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಕಲಿಸಿಕೊಡುತ್ತದೆ, ಶಾಂತಿ ದಿನ, ಹಾಗೂ ಕಾರ್ಗಿಲ್ ದಿನವನ್ನು ಕೂಡ ಆಚರಿಸುತ್ತಾ ಬಂದಿದೆ. ಇದರ ಉದ್ದೇಶ ವಿದ್ಯಾರ್ಥಿಗಳಿಗೆ ದೇಶದ ತ್ಯಾಗ ಹಾಗೂ ಬಲಿದಾನದ ಬಗ್ಗೆ ತೋರಿಸುವ ಉದ್ದೇಶವಾಗಿದೆ. ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಂತಿ ದಿನದ ಪ್ರಮಾಣವಚನವನ್ನು ವಿದ್ಯಾರ್ಥಿಗಳು ಹಾಗೂ ವಿಭಾಗದ ಪ್ರಾಧ್ಯಾಪಕರು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಭಾಗ್ಯಶ್ರೀ ಉಪಸ್ಥಿತರಿದ್ದರು. ವಿಭಾಗದ ವಿದ್ಯಾರ್ಥಿಗಳಾದ ಮಾನವ ನಿರೂಪಿಸಿದರು, ಶ್ರೇಯಂಕ್ ಸ್ವಾಗತಿಸಿದರು, ಪದ್ಮಶ್ರೀ ಅತಿಥಿಯನ್ನು ಪರಿಚಯಿಸಿದರು, ಹಾಗೂ ವಿಭಾಗದ ಪ್ರಾಧ್ಯಾಪಕ ಡಾ. ಶಿವಕುಮಾರ್ ವಂದಿಸಿದರು.

ಕರ್ನಾಟಕ ಸೀನಿಯರ್ ವಾಲಿಬಾಲ್ ಚಾಂಪಿಯನಶಿಪ್: ಆಳ್ವಾಸ್ ಚಾಂಪಿಯನ್ಸ್

Article Image

ಕರ್ನಾಟಕ ಸೀನಿಯರ್ ವಾಲಿಬಾಲ್ ಚಾಂಪಿಯನಶಿಪ್: ಆಳ್ವಾಸ್ ಚಾಂಪಿಯನ್ಸ್

ಮೂಡುಬಿದಿರೆ: ಕರ್ನಾಟಕ ವಾಲಿಬಾಲ್ ಸಂಸ್ಥೆ ಆಯೊಜಿಸಿದ್ದ ಲೋಕೆಶ್ ಗೌಡ ಟ್ರೋಫಿ ಕರ್ನಾಟಕ ಸೀನಿಯರ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಸ್ಪೋಟ್ಸ್ ಕ್ಲಬ್ ತಂಡ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರಿನ ಶ್ರೀಕಂಠಿರವ ಕ್ರೀಡಾಂಗಣದಲ್ಲಿ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ 3-1 ಅಂತರದಿಂದ ಕರ್ನಾಟಕ ರಾಜ್ಯ ಪೋಲಿಸ್ ತಂಡವನ್ನು ಮಣಿಸಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಆಳ್ವಾಸ್ ಆಟಗಾರರು ಪ್ರಶಸ್ತಿಗೆ ಮುತ್ತಿಕ್ಕಿದರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡ, ಕ್ರೀಡಾ ಹಾಸ್ಟೆಲ್ ಬಿಜಿ ತಂಡವನ್ನು 3-1 ಅಂತರದಿಂದ ಪರಭವಗೊಳಿಸಿತ್ತು. ವಿಜೇತರಿಗೆ ಕರ್ನಾಟಕದ ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಪ್ರಶಸ್ತಿ ವಿತರಿಸಿದರು. ವಿಜೇತ ತಂಡದ ಸದಸ್ಯರನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

ವಾಲಿಬಾಲ್ ಪಂದ್ಯಾಟದಲ್ಲಿ ಎಸ್ ಎನ್ ವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Article Image

ವಾಲಿಬಾಲ್ ಪಂದ್ಯಾಟದಲ್ಲಿ ಎಸ್ ಎನ್ ವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಪೂರ್ಣಪ್ರಜ್ಞಾ ಪ.ಪೂ ಕಾಲೇಜು ಅದಮಾರು, ಕಾಪು ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಎಸ್.ಎನ್.ವಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಎಸ್.ಎನ್.ವಿ. ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತಂಡ ಪ್ರತಿನಿಧಿಸಿದ್ದ ಪ್ರಥಮ ಪಿಯುಸಿ ಧನುಷ್ ಹಾಗೂ ದ್ವಿತೀಯ ಪಿಯುಸಿ ಶ್ರೀಶಾಂತ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ತರಬೇತುದಾರರು, ಕಾಲೇಜಿನ ಹಳೆ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಕೋರಿರುತ್ತಾರೆ.

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ

Article Image

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗ ಮತ್ತು ರೋವರ್ಸ್ ರೇಂಜರ್ಸ್ ಘಟಕದ ಸಹಭಾಗಿತ್ವದಲ್ಲಿ ಸೆ. 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್. ಡಿ.ಎಂ ತಾಂತ್ರಿಕ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಪ್ರಸಾದ್ ಪಿ.ಎ ಮುಖ್ಯ ಅತಿಥಿಯಾಗಿ ಮಾತನಾಡಿದರು. ಓಝೋನ್ ನ ಅನ್ವೇಷಣೆ, ವೈಜ್ಞಾನಿಕ ಹಿನ್ನಲೆ, ಓಝೋನ್ ಪದರದ ಸವೆತಕ್ಕೆ ಕಾರಣವಾಗುವ ಮಾನವನ ಚಟುವಟಿಕೆಗಳು ಮತ್ತು ಓಝೋನ್ ಪದರದ ಸವೆತ ತಡೆಗಟ್ಟುವಲ್ಲಿ ವಿಶ್ವವ್ಯಾಪಿ ಜಾರಿಯಾಗಿರುವ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ ಕೆ.ಪಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂಮಿಯ ರಕ್ಷಣೆಯಲ್ಲಿ ಓಝೋನ್ ಪದರದ ಮಹತ್ವವನ್ನು ಅರಿತು ಅದರ ಸವೆತಕ್ಕೆ ಕಾರಣವಾಗುತ್ತಿರುವ ಮಾನವ ಕ್ರಿಯೆಗಳನ್ನು ತಡೆಯುವಲ್ಲಿ ನಾವುಗಳು ಶ್ರಮಿಸಿಬೇಕಿದೆ. ವಿಜ್ಞಾನದ ವಿದ್ಯಾರ್ಥಿಗಳು ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ಮೈಗೂಡಿಸಿಕೊಂಡು ಪರಿಸರವನ್ನು ಉಳಿಸಿ, ಬೆಳೆಸುವಲ್ಲಿ ಕೈಜೋಡಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ರೋವರ್ಸ್ ರೇಂಜರ್ಸ್ ಘಟಕದ ಸಂಯೋಜಕ ಪ್ರಸಾದ್ ಕುಮಾರ್, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ.ಡಿ ಮತ್ತು ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ, ರೇಂಜರ್ ನವ್ಯಶ್ರೀ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಓಝೋನ್ ದಿನದ ಅಂಗವಾಗಿ ಸಮುದಾಯ ಜಾಗೃತಿ ಅಭಿಯಾನ ನಡೆಸಿದರು. ಮನೆ ಮನೆಗೆ ತೆರಳಿ ಓಝೋನ್ ಪದರದ ಮಹತ್ವ ತಿಳಿಸಿ, ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.

36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ

Article Image

36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್‌ನ 29 ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಆಂಧ್ರಪ್ರದೇಶದ ಗುಂಟೂರುನಲ್ಲಿ ಸೆಪ್ಟೆಂಬರ್ 23ರಿಂದ 25ರವರೆಗೆ ನಡೆಯುತ್ತಿರುವ 36ನೇ ದಕ್ಷಿಣ ವಲಯ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 29 ಮಂದಿ ಕ್ರೀಡಾಪಟುಗಳು ಭಾಗವಹಿಸಲು ಆಯ್ಕೆಯಾಗಿದ್ದಾರೆ. ಒಂದೇ ಸಂಸ್ಥೆಯಿಂದ 29 ಕ್ರೀಡಾಪಟುಗಳು ಸ್ಪರ್ಧೆಗೆ ಅವಕಾಶ ಪಡೆದಿರುವುದು ಉಲ್ಲೇಖಾರ್ಹ ಸಾಧನೆಯಾಗಿದೆ. ಇವರಲ್ಲಿ 10 ಮಂದಿ ಬಾಲಕಿಯರು ಹಾಗೂ 19 ಮಂದಿ ಬಾಲಕರು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ಬಾಲಕಿಯರ ವಿಭಾಗ: ಐಶ್ವರ್ಯ (ಚಕ್ರ ಎಸೆತ, ಗುಂಡು ಎಸೆತ), ಗೀತಾ(400 ಮೀ., 4*400 ರಿಲೇ), ನಾಗಿನಿ (1000 ಮೀ.), ಚರಿಶ್ಮಾ (1000 ಮೀ.), ವೈಷ್ಣವಿ(ಉದ್ದ ಜಿಗಿತ), ಭಾಗೀರಥಿ (3 ಕಿ.ಮೀ ನಡಿಗೆ), ನಂದಾ (ಜಾವಲಿನ್ ಎಸೆತ), ಪ್ರೇಕ್ಷಿತಾ (ಜಾವಲಿನ್ ಎಸೆತ), ಮೇಘಾ(ತ್ರ‍್ರಯಥ್ಲಾನ್ ಸಿ), ಸುಜಾತ ವೈ(ತ್ರಯಥ್ಲಾನ್ ಸಿ). ಬಾಲಕರ ವಿಭಾಗ: ನೋಯಿಲ್ (ಉದ್ದ ಜಿಗಿತ), ಮಹಮ್ಮದ್ ತಬ್ಶೀರ್ (ತ್ರಿವಿಧ ಜಿಗಿತ), ಗುರು (ಹೆಪ್ಟಾಥ್ಲಾನ್), ಯಶವಂತ (800 ಮೀ., 4*400 ರಿಲೇ), ದಯಾನಂದ (400 ಮೀ., 4*400 ರಿಲೇ), ದರ್ಶನ (5 ಕಿ.ಮೀ ನಡಿಗೆ), ರಾಮು (400 ಮೀ., 4*400 ರಿಲೇ), ಸರ್ವಜಿತ್ (4*100 ರಿಲೇ), ಅಬ್ದುಲ್ ರಜಾಕ್ (ಹ್ಯಾಮರ್ ಎಸೆತ), ಕೇಶವ ನಾಯ್ಕ (ಜಾವಲಿನ್ ಎಸೆತ), ಮನಿಷ್ (ಉದ್ದ ಜಿಗಿತ), ಡೈನ್ದೇವ್ (800 ಮೀ. ಹರ್ಡಲ್ಸ್), ಲೋಹಿತ್ ಗೌಡ (ಉದ್ದ ಜಿಗಿತ), ನವೀನ್ (ಉದ್ದ ಜಿಗಿತ), ಕೃಷ್ಣ ಪ್ರಕಾಶ (ಜಾವಲಿನ್ ಎಸೆತ), ಮೈಲಾರಿ (ಜಾವಲಿನ್ ಎಸೆತ), ಪ್ರಣವ್ (ತ್ರಯಥ್ಲಾನ್ ಎ), ಆದರ್ಶ್ (ತ್ರಯಥ್ಲಾನ್ ಬಿ), ಸುಭಾಶ್ (ತ್ರಯಥ್ಲಾನ್ ಸಿ).

ಸತ್ತೂರು ಧಾರವಾಡ: ವಿಶ್ವ ಭೌತಚಿಕಿತ್ಸಾ ಸಪ್ತಾಹ ಆಚರಣೆ

Article Image

ಸತ್ತೂರು ಧಾರವಾಡ: ವಿಶ್ವ ಭೌತಚಿಕಿತ್ಸಾ ಸಪ್ತಾಹ ಆಚರಣೆ

ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನಲ್ಲಿ ಸೆಪ್ಟೆಂಬರ್ 5ರಿಂದ 9ರವರೆಗೆ ಭೌತಚಿಕಿತ್ಸಾ ಸಪ್ತಾಹ ಮತ್ತು ವಿಶ್ವ ಭೌತ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಭೌತಚಿಕಿತ್ಸಾ ಸಪ್ತಾಹದ ಅಂಗವಾಗಿ ಪೋಸ್ಟರ್ ಪ್ರದರ್ಶನ, ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು, ಉತ್ತಮ ಆರೋಗ್ಯಕ್ಕಾಗಿ ಕಾಲ್ನಡಿಗೆ ಜಾಥಾ, ಆರೋಗ್ಯ ತಪಾಸಣಾ ಶಿಬಿರ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು. ಮುಖ್ಯ ಅತಿಥಿಗಳಾದ ಡಾ. ನಿರಂಜನ್ ಕುಮಾರ ಅವರು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ: ಆರೋಗ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುವಾಗ ಒಂದು ತಂಡವಾಗಿ ಅನಿವಾರ್ಯತೆ ಇದೆ. ಜನರ ಜೀವಿತಾವಧಿ ಹೆಚ್ಚಿಸುವಲ್ಲಿ ಭೌತಿಕ ಚಿಕಿತ್ಸಕರ ಗುಣಮಟ್ಟದ ಸೇವೆ ಶ್ಲಾಘನಿಯ. ನಾವು ಯಾವುದೇ ವೃತ್ತಿಯಲ್ಲಿದ್ದರೂ, ಶ್ರಧ್ದೆಯಿಂದ ಕಾರ್ಯನಿರ್ವಹಿಸುತ್ತಾ ವೃತ್ತಿಯನ್ನು ಗೌರವಿಸಬೇಕು. ಪ್ರಪಂಚದಾದ್ಯಂತ ಆರೋಗ್ಯ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಕೇತ. ಭೌತಚಿಕಿತ್ಸಕರು ತಮ್ಮ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು. ಈ ಕಾರ್ಯಕ್ರಮದಲ್ಲಿ ಮಾಹೆ ಮಣಿಪಾಲದ ಕಾಲೇಜ ಆಫ್ ಹೆಲ್ತ್ ಪ್ರೋಫೆಶನಲ್ಸ್ನ ಡೀನ್ ಮತ್ತು ಹಿರಿಯ ಭೌತಚಿಕಿತ್ಸಕರಾದ ಡಾ. ಜಿ. ಅರುಣ ಮಯ್ಯಾ ಹಾಗೂ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶರ್ಮಿಳಾ ದುಧಾನಿ ಅವರನ್ನು ಭೌತಚಿಕಿತ್ಸೆಯ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಪ್ರಸಿದ್ಧ ಕೈಗಾರಿಕೋಧ್ಯಮಿಯಾದ ಮಹೀಂದ್ರ ಸಿಂಘಿ ಮತ್ತು ಮಹಾವೀರ ಜೈನ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣನವರ್ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುಧೀರ್ ಭಟ್ಟಭೋಲನ್ ಮತ್ತು ಡಾ. ಸಲೀಮಾ ಬಿಜಾಪುರಿ ಸನ್ಮಾನಿತರನ್ನು ಪರಿಚಯಿಸಿದರು. ಡಾ. ತುಳಸಿ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಎಲೀಶ ಜಿಡಿ ವಂದರ್ನಾಪಣೆ ಸಲ್ಲಿಸಿದರು.

First Previous

Showing 1 of 7 pages

Next Last