ಬೆಳ್ತಂಗಡಿ: ಮಹಾವೀರ ಜಯಂತಿ ಆಚರಣೆ, ಚತುರ್ವಿಂಶತಿ ತೀರ್ಥಂಕರರ ಆರಾಧನೆ
Published Date: 19-Apr-2024
ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಇದೇ 21 ರಂದು ಭಾನುವಾರ ಹತ್ತನೆ ವಾರ್ಷಿಕೋತ್ಸವ, ಚತುರ್ವಿಂಶತಿ (ಇಪ್ಪತ್ತನಾಲ್ಕು) ತೀರ್ಥಂಕರರ ಆರಾಧನೆ, ೧೦೮ ಕಲಶಾಭಿಷೇಕ ಹಾಗೂ ಭಗವಾನ್ ಮಹಾವೀರ ಜಯಂತಿ ಆಚರಣೆ ನಡೆಯಲಿದೆ ಎಂದು ಬಸದಿಯ ಅನುವಂಶೀಯ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಏಳು ಗಂಟೆಯಿಂದ ತೋರಣಮುಹೂರ್ತ, ವಿಮಾನಶುದ್ಧಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಪೂರ್ವಾಹ್ನ ಗಂಟೆ 8.45 ರಿಂದ ಸಾಮೂಹಿಕ ಚತುರ್ವಿಂಶತಿ (24) ತೀರ್ಥಂಕರರ ಆರಾಧನೆ ನಡೆಯಲಿದೆ. ಭಗವಾನ್ ಮಹಾವೀರ ಸ್ವಾಮಿಗೆ ನವಕಲಶಾಭಿಷೇಕ, ಭಗವಾನ್ ಶಾಂತಿನಾಥ ಸ್ವಾಮಿಗೆ ೧೦೮ ಕಲಶಗಳಿಂದ ಅಭಿಷೇಕ, ನೂತನ ಗಂಧಕುಟಿಯಲ್ಲಿ 24 ತೀರ್ಥಂಕರರ ಬಿಂಬಗಳ ಸ್ಥಾಪನೆ ನಡೆಯಲಿದೆ. ಅಪರಾಹ್ನ 3.00 ಗಂಟೆಗೆ ಹೊಂಬುಜ ಶ್ರೀ ಜೈನಮಠದ ಪ.ಪೂ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಹಾವೀರ ಜಯಂತಿ ಆಚರಣೆ ಬಗ್ಗೆ ಮಂಗಲ ಪ್ರವಚನ ನೀಡಲಿದ್ದಾರೆ. ಬಳಿಕ ನೂತನ ಘಂಟಾಮಂಟಪ ಹಾಗೂ ಜಲಧಾರ ಲೋಕಾರ್ಪಣೆಗೊಳ್ಳಲಿದೆ.