ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಹೆಚ್ಚು: ಪ್ರಶಸ್ತಿ ಪ್ರದಾನದಲ್ಲಿ ಎನ್. ಮುಕುಂದರಾಜ್ ಅಭಿಮತ
Published Date: 09-Oct-2025
ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತಿಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್. ಎನ್. ಮುಕುಂದರಾಜ್ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಭಾನುವಾರ ಹಮ್ಮಿಕೊಂಡಿದ್ದ 24ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು. ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ ಸೇರಿದಂತೆ ಹಲವು ಜೈನ ಸಾಹಿತಿಗಳು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಈ ಪರಂಪರೆ ಹಾಗೆಯೇ ಮುಂದುವರಿದಿದೆ. ಸಂವಿಧಾನದಲ್ಲಿರುವ ಜಾತ್ಯಾತೀತ ತತ್ವವನ್ನು ಮೊದಲು ಸಾರಿದವನು ಜೈನ ಕವಿ ಪಂಪ. ಮನುಷ್ಯ ಜಾತಿ ತಾನೊಂದೆ ವಲಂ ಎಂದು ಹೇಳುವ ಮೂಲಕ ಮನುಷ್ಯ ಜಾತಿ ಒಂದೇ ಎಂದು ಸಾರಿದ್ದ ಎಂದು ಮುಕುಂದರಾಜ್ ಸ್ಮರಿಸಿದರು. 11ನೇ ಶತಮಾನಕ್ಕೂ ಮೊದಲು ಈ ನಾಡಿನ ಒಕ್ಕಲಿಗರೆಲ್ಲರೂ ಜೈನ ಸಮುದಾಯಕ್ಕೆ ಸೇರಿದ್ದರು. ಆದರೆ ಹೊಯ್ಸಳ ದೊರೆ ಜೈನ ಸಮುದಾಯ ಪರಂಪರೆಗೆ ಸೇರಿದ ಬಿಟ್ಟಿದೇವ (ವಿಷ್ಣುವರ್ಧನ) ರಾಮಾನುಜಚಾರ್ಯರಿಂದಾಗಿ ವೈಷ್ಣವ ದೀಕ್ಷೆ ಪಡೆಯುತ್ತಾನೆ. ಆತ ಮುಂದೆ ಹಲವು ಜೈನರನ್ನು ವೈಷ್ಣವ ಪರಂಪರೆಗೆ ಮತಾಂತರಿಸುತ್ತಾನೆ. ಹೀಗೆ ಮತಾಂತರರಾದವರು ಈಗ ಒಕ್ಕಲಿಗರಾಗಿದ್ದಾರೆ ಎಂದರು. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಕಾರ್ಯದರ್ಶಿ ಡಾ.ಪದ್ಮನಿ ನಾಗರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲಿ ಎರಡು ಪ್ರಮುಖ ಸಾಲಿಗ್ರಾಮಗಳಿವೆ. ಒಂದು ಶಿವರಾಮ ಕಾರಂತರ ಸಾಲಿಗ್ರಾಮ ಇನ್ನೊಂದು ನಟ ರಾಜಕುಮಾರ್ ಅವರ ಪತ್ನಿ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಊರು, ಆ ಸಾಲಿಗ್ರಾಮದವರು ನಾವು. ರಾಜಕುಮಾರ ನಮ್ಮೂರಿನ ಅಳಿಯ ಎನ್ನಲು ನಮಗೆ ಹೆಮ್ಮೆ ಆಗುತ್ತಿದೆ. ಮುಂದಿನ ವರ್ಷ ಸಂಘದ ಬೆಳ್ಳಿ ಹಬ್ಬ ಆಚರಿಸಲಾಗುವುದು ಎಂದರು. ಈ ವೇಳೆ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರಿಗೆ ಸುಮಾ ವಂಸತ ಪ್ರಶಸ್ತಿ ಮತ್ತು ಶಿಲ್ಪ ಕಲಾವಿದ ಚಿತ್ತ ಜಿನೇಂದ್ರ ಅವರಿಗೆ ಶ್ರೇಯೋಭದ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಅಧ್ಯಕ್ಷೆ ಡಾ.ನೀರಜಾ ನಾಗೇಂದ್ರಕುಮಾರ್ ಅಜಿತ್ ಮುರುಗುಂಡೆ ಹಾಗೂ ಅಶೋಕ್ ಕುಮಾರ್ ಉಪಸ್ಥಿತರಿದ್ದರು.