ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ
Published Date: 26-Jul-2024
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಎನ್.ಸಿ.ಸಿ. ಭೂದಳ ಮತ್ತು ನೌಕಾದಳ ಘಟಕದ ವತಿಯಿಂದ ಇಂದು (ಜು.26) 25ನೇ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, "ಈ ದಿನ ಹುತಾತ್ಮರಾದ ಯೋಧರ ತ್ಯಾಗ ಬಲಿದಾನವನ್ನು ನೆನೆದು, ಯೋಧರ ಜೊತೆಗೆ ಅವರ ಕುಟುಂಬವನ್ನೂ ಸ್ಮರಿಸಬೇಕು. ಪ್ರಜ್ಞಾವಂತ ನಾಗರಿಕರಾಗಿ ದೇಶದ ಏಳಿಗೆ, ಏಕತೆ, ಸಾರ್ವಭೌಮತ್ವವನ್ನು ಹೆಚ್ಚಿಸುವ ಯೋಜನೆ ಮತ್ತು ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ" ಎಂದರು. ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಎನ್.ಸಿ.ಸಿ. ಕೆಡೆಟ್’ಗಳು ಹುತಾತ್ಮ ಯೋಧರಿಗೆ ರೈಫಲ್ ಸೆಲ್ಯೂಟ್ ಮುಖಾಂತರ ಗೌರವ ಸಲ್ಲಿಸಿದರು. ಕೆಡೆಟ್’ಗಳಿಂದ ತಯಾರಿಸಲ್ಪಟ್ಟ ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ಕಾಲೇಜಿನ ಆಡಳಿತ ಕುಲಸಚಿವ ಡಾ. ಶಲೀಫ್ ಎ. ಪಿ., ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾಕುಮಾರಿ, ಅಸೋಸಿಯೇಟ್ ಎನ್.ಸಿ.ಸಿ. ಅಧಿಕಾರಿ (ಎಎನ್ಒ)ಗಳಾದ ಲೆಫ್ಟಿನೆಂಟ್ ಭಾನುಪ್ರಕಾಶ್, ಲೆ. ಶುಭಾ ರಾಣಿ, ಕೇರ್ ಟೇಕಿಂಗ್ ಆಫೀಸರ್ (ಸಿಟಿಒ)ಗಳಾದ ಶೋಭಾ, ಹರೀಶ್ ಶೆಟ್ಟಿ, ಹಿರಿಯ ಎಎನ್ಒ ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಕೆಡೆಟ್ ಗಳು ಉಪಸ್ಥಿತರಿದ್ದರು. ಕೆಡೆಟ್ ದೀಪ್ತಿ ಆಚಾರ್ಯ ಪಿ. ಕಾರ್ಯಕ್ರಮ ನಿರೂಪಿಸಿದರು.