ವಿಶ್ವ ಬೈಸಿಕಲ್ ದಿನಾಚರಣೆ ಮತ್ತು ಪರಿಸರ ದಿನಾಚರಣೆ
Published Date: 08-Jun-2026
ಸತ್ತೂರು, ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯ ಹಾಗೂ ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಜಂಟಿಯಾಗಿ ‘ವಿಶ್ವ ಬೈಸಿಕಲ್ ದಿನಾಚರಣೆ’ ಮತ್ತು ‘ವಿಶ್ವ ಪರಿಸರ ದಿನಾಚರಣೆ’ಯನ್ನು ಆಚರಿಸಿದವು. ಇದರೊಂದಿಗೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ನ ಹತ್ತನೇ ವರ್ಷದ ಯಶಸ್ವಿ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಜೂ. 7ರಂದು ಅತ್ಯಂತ ಸಡಗರದಿಂದ ಆಚರಿಸಲಾಯಿತು.ಭಾರತದ ಮೊದಲ ಕ್ಯಾನ್ಸರ್ ಮುಕ್ತ ಸಾಧಕ ಟ್ರಯಾಥ್ಲೆಟ್ ಹಾಗೂ ಐರನ್ಮ್ಯಾನ್ (Ironman) ಪ್ರಶಸ್ತಿ ವಿಜೇತರಾದ ಡಾ. ಮಯೂರಾ ಶಿವಾಲ್ಕರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವಿಶೇಷ ಸಂದರ್ಭದ ಅಂಗವಾಗಿ ಎಸ್ಡಿಎಂ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ 10 ಕಿಲೋಮೀಟರ್ ಉದ್ದದ ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಮತ್ತು ಪರಿಸರ ಜಾಗೃತಿ ಮೂಡಿಸುವ ಈ ರ್ಯಾಲಿಯಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹುಬ್ಬಳ್ಳಿ ಬೈಸಿಕಲ್ ಕ್ಲಬ್ನ ಸದಸ್ಯರು ಸೇರಿದಂತೆ 120ಕ್ಕೂ ಹೆಚ್ಚು ಸೈಕಲ್ ಸವಾರರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಇದೇ ವೇಳೆ ಹುಬ್ಬಳ್ಳಿ ಬೈಸಿಕಲ್ ಕ್ಲಬ್ನ ಸಾಧಕರಿಗೆ, ಗಣ್ಯರು ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ. ವಿಜಯ್ ಕೆ. ಕುಲಕರ್ಣಿ, ವೈದ್ಯಕೀಯ ಅಧೀಕ್ಷಕರಾದ ಡಾ. ಕಿರಣ್ ಹೆಗಡೆ ಮತ್ತು ಸಂಘಟನಾ ಕಾರ್ಯದರ್ಶಿಯಾದ ಡಾ. ಮಹಾಂತೇಶ್ ಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಹುಬ್ಬಳ್ಳಿ ಬೈಸಿಕಲ್ ಕ್ಲಬ್ನ ಅಧ್ಯಕ್ಷರಾದ ಶೆಟ್ಟೆಪ್ಪ ಪಿರಂಗಿ ಅವರು ಸ್ವಾಗತಿಸಿದರು. ಹುಬ್ಬಳ್ಳಿ ಬೈಸಿಕಲ್ ಕ್ಲಬ್ನ ಕಾರ್ಯದರ್ಶಿಯಾದ ಶಿವಾನಂದ ದಂಡವತಿಮಠ ಅವರು ವಂದನಾರ್ಪಣೆ ಮಾಡಿದರು. ಡಾ. ವೈಷ್ಣವಿ ಮತ್ತು ಡಾ. ಅನಘಾ ಕಾರ್ಯಕ್ರಮವನ್ನು ನಿರೂಪಿಸಿದರು.