ಮೂಡುಬಿದಿರೆ: ಎಕ್ಸಲೆಂಟ್ ಚಾಂಪಿಯನ್
Published Date: 11-Sep-2025
ಕ್ರೀಡೆಯಿಂದ ನಾವು ಕಲಿಯುವ ಪಾಠ ಜೀವನದುದ್ದಕ್ಕು ನಮ್ಮ ಕೈಹಿಡಿಯುತ್ತದೆ. ಮನಸ್ಸನ್ನು ಸಮತೋಲನದಲ್ಲಿ ಇಡುವಲ್ಲಿ ಕ್ರೀಡೆಯ ಪಾತ್ರ ದೊಡ್ಡದು ಎಂದು ಎಕ್ಸಲೆಂಟ್ ಮೂಡುಬಿದಿರೆಯ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಮತ್ತು ಎಕ್ಸಲೆಂಟ್ ಮೂಡುಬಿದಿರೆಯ ಸಹಯೋಗದೊಂದಿಗೆ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆದ ಅಂಡರ್ -19, ಮೂಡುಬಿದಿರೆ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷರಾಗಿ ನುಡಿದರು. ವೇದಿಕೆಯಲ್ಲಿ ಮೂಡುಬಿದಿರೆ ತಾಲೂಕು ಕ್ರೀಡಾ ಸಂಯೋಜಕರಾದ ನವೀನ್ ಎಂ.ಹೆಗ್ಡೆ, ಎಕ್ಸಲೆಂಟ್ ಮೂಡುಬಿದಿರೆಯ ದೈಹಿಕ ಶಿಕ್ಷಣ ತರಬೇತುದಾರರಾದ ಎಸ್.ಎಸ್. ಪಾಟೀಲ್ ಉಪಸ್ಥಿತರಿದ್ದರು. ಬಾಲಕರ ಹಾಗೂ ಬಾಲಕಿಯರ ವಿಭಾಗದ ಟೇಬಲ್ ಟೆನಿಸ್ನಲ್ಲಿ ಹಾಗೂ ಬಾಲಕಿಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ನಲ್ಲಿ ಎಕ್ಸಲೆಂಟ್ ಮೂಡುಬಿದಿರೆಯ ವಿದ್ಯಾರ್ಥಿಗಳು ಜಯಗಳಿಸಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. ದೈಹಿಕ ಶಿಕ್ಷಣ ತರಬೇತುದಾರ ಲೆಫ್ಟಿನೆಂಟ್ ಮಹೇಂದ್ರ ಕುಮಾರ್ ಜೈನ್ ನಿರೂಪಿಸಿ ಕನ್ನಡ ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ವಂದಿಸಿದರು.