ಸ್ವಾಧ್ಯಾಯದಿಂದ ಆತ್ಮಕಲ್ಯಾಣ
Published Date: 08-Jul-2025
ಉಜಿರೆ: ಜೈನಧರ್ಮ ವಿಶ್ವದ ಶ್ರೇಷ್ಠ ಧರ್ಮವಾಗಿದ್ದು ಅಹಿಂಸೆ, ಸತ್ಯ, ಅಪರಿಗ್ರಹ, ಸ್ಯಾದ್ವಾದ ಮೊದಲಾದ ಉದಾತ್ತ ತತ್ವಗಳ ಪಾಲನೆಯಿಂದ ಜೀವನ ಪಾವನವಾಗಿ, ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ರತ್ನತ್ರಯ ಧರ್ಮದ ಪಾಲನೆ ಮತ್ತು ಸ್ವಾಧ್ಯಾಯದಿಂದ ಆತ್ಮಕಲ್ಯಾಣವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಎಂದು ನಿವೃತ್ತ ಶಿಕ್ಷಕ ರಘುಚಂದ್ರ ಚೌಟ ಹೇಳಿದರು. ಅವರು ಶನಿವಾರ ಬೆಳ್ತಂಗಡಿಯಲ್ಲಿ ಅಂಬೇಡ್ಕರ್ ಭವನದಲ್ಲಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ತ್ಯಾಗ, ಸತ್ಯ, ಅಹಿಂಸೆ, ಬದುಕು ಮತ್ತು ಬದುಕಲು ಬಿಡು ಮೊದಲಾದ ಉದಾತ್ತ ತತ್ವ, ಸಿದ್ಧಾಂತಗಳನ್ನು ಬದುಕಿನಲ್ಲಿ ನಿತ್ಯವೂ ಪಾಲಿಸುವವರೆಲ್ಲರೂ ಜೈನರಾಗುತ್ತಾರೆ. ಬರೆ ಜಾತಿಜೈನರಾದರೆ ಸಾಲದು, ನೀತಿ ಜೈನರೂ ಆಗಬೇಕು ಎಂದು ಅವರು ಸಲಹೆ ನೀಡಿದರು. ಸಕಲ ಪಾಪಕರ್ಮಗಳ ಕೊಳೆ ಕಳೆದಾಗ ಆತ್ಮನೇ ಪರಮಾತ್ಮನಾಗುತ್ತಾನೆ. ಸಕಲ ಸುಖ-ಭೋಗ ಹಾಗೂ ಬಂಧನಗಳಿಂದ ಮುಕ್ತರಾಗಿ ಮೋಕ್ಷ ಪ್ರಾಪ್ತಿಯೇ ಬದುಕಿನ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಡಾ. ಜಯಕೀರ್ತಿ ಜೈನ್, ಧರ್ಮಸ್ಥಳ, ವಿಶ್ವಾಸ್ ರಾವ್, ಸನ್ಮತ್ ಕುಮಾರ್ ನಾರಾವಿ ಮತ್ತು ವಸಂತ ಸುವರ್ಣ ಉಪಸ್ಥಿತರಿದ್ದರು.