ಭತ್ತದ ಬೆಳೆ ಸ್ಪರ್ಧೆ: ಅರ್ಜಿ ಆಹ್ವಾನ
Published Date: 19-Aug-2024
ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸುವುದು, ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ 2024-25ನೇ ಸಾಲಿನ ಮುಂಗಾರು ಹಂಗಾಮಿನ ಭತ್ತದ ಬೆಳೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಾಲೂಕು ಮಟ್ಟ: ಪ್ರಥಮ-15,000ರೂ., ದ್ವಿತೀಯ-10,000ರೂ., ತೃತೀಯ-5,000ರೂ. ಜಿಲ್ಲಾ ಮಟ್ಟ: ಪ್ರಥಮ-30,000ರೂ., ದ್ವಿತೀಯ-25,000ರೂ., ತೃತೀಯ-20,000ರೂ. ರಾಜ್ಯ ಮಟ್ಟ: ಪ್ರಥಮ-50,000., ದ್ವಿತೀಯ-40,000ರೂ., ತೃತೀಯ-35,000ರೂ. ಬಹುಮಾನ ಮೊತ್ತ ಘೋಷಿಸಲಾಗಿದೆ. ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ಕನಿಷ್ಠ 1 ಎಕ್ರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದಿದ್ದು, ಕಂದಾಯ ಇಲಾಖೆ ಪ್ರಕಾರ ಜಮೀನು ಹೊಂದಿರಬೇಕು ಅಥವಾ ಸ್ವಂತ ಜಮೀನು ಹೊಂದಿರದಿದ್ದರೂ ಸಹ ಬೇಸಾಯದಲ್ಲಿ ತೊಡಗಿರುವ ಕೃಷಿಕರು ಜಮೀನು ಮಾಲಕರಿಂದ ಸಾಮಾನ್ಯ ವ್ಯವಹಾರಿಕ ಅಧಿಕಾರ (ಜಿಪಿಎ) ಹೊಂದಿರಬೇಕು. ಆಸಕ್ತರು ಅರ್ಜಿ ನಮೂನೆಯನ್ನು ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿಮಾಡಿ ಆ.31ರೊಳಗಾಗಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರು ಜಾತಿ ಪ್ರಮಾಣ ಪತ್ರ ಒದಗಿಸಬೇಕು ಎಂದು ಬೆಳ್ತಂಗಡಿ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.