ಉಜಿರೆ ಎಸ್.ಡಿ.ಎಂನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
Published Date: 15-Aug-2024
ಉಜಿರೆ: ‘ವಿಕಸಿತ ಭಾರತ’ದ ದೃಢಸಂಕಲ್ಪ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರ ಜಾಗೃತಿ ಮೂಡಿಸುವ ಸದಾಶಯದೊಂದಿಗಿನ ಆಕರ್ಷಣೀಯ ಪಥಸಂಚಲನ ಮತ್ತು ದೇಶಭಕ್ತಿಗೀತೆಗಳ ಮಾರ್ಧುರ್ಯದ ನಡುವೆ ಎಸ್.ಡಿ.ಎಂ ಕಾಲೇಜಿನ ಶ್ರೀರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು ನಡೆದ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಎಸ್.ಡಿ.ಎಂ ಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗಳ ಸಮ್ಮುಖದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಲ್ಲದೇ ಧ್ವಜಾರೋಹಣ ಮತ್ತು ವೇದಿಕೆಯನ್ನು ಸಿದ್ಧಗೊಳಿಸಿದ್ದು ಈ ಸಲದ ವಿಶೇಷವಾಗಿತ್ತು. ಧ್ವಜಾರೋಹಣ ನೆರವೇರುತ್ತಿದ್ದಂತೆ ಎಸ್.ಡಿ.ಎಂ ಕಲಾಕೇಂದ್ರದ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಪ್ರಸ್ತುತಪಡಿಸಿದರು. ವಂದೇಮಾತರಂ ಗೀತೆಯನ್ನು ಹಾಡಿದರು. ‘ಸಾರೇ ಜಹಾಂಸೆ ಅಚ್ಛಾ’ ಹಾಡಿನೊಂದಿಗೆ ಅಲ್ಲಿದ್ದವರೊಳಗೆ ದೇಶದ ಕುರಿತ ಹೆಮ್ಮೆ ಮೂಡುವಂತೆ ಪ್ರೇರಣೆ ನೀಡಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಸುವೀರ್ ಜೈನ್, ಪಿಯು ಕಾಲೇಜಿನ ಉಪನ್ಯಾಸಕರಾದ ದಿವ್ಯಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್ಸಿಸಿಯ ಆರ್ಮಿ ವಿಭಾಗದ ಕ್ಯಾಪ್ಟನ್ ಜಿ. ಆರ್. ಭಟ್, ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ಆರ್ಮಿ ಸೀನಿಯರ್ ಡಿವಿಜನ್ ಅಧಿಕಾರಿ ಲೆಫ್ಟಿನೆಂಟ್ ಡಾ.ಭಾನುಪ್ರಕಾಶ್ ಬಿ.ಇ. ಕೇರ್ ಟೇಕರ್ ಲೆಫ್ಟಿನೆಂಟ್ ಶುಭಾರಾಣಿ, ಕೇರ್ ಟೇಕರ್ ಹರೀಶ್ ಶೆಟ್ಟಿ, ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ರೋವರ್ ಸ್ಕೌಟ್ ಲೀಡರ್ ಪ್ರಸಾದ್, ರೇಂಜರ್ ಲೀಡರ್ ಗಾನವಿ ಮಾರ್ಗದರ್ಶನದಲ್ಲಿ ಧ್ವಜಾರೋಹಣ ಸಂದರ್ಭದ ಬ್ಯಾಂಡ್ಸೆಟ್ನ್ನು ವಿದ್ಯಾರ್ಥಿಗಳು ನಿರ್ವಹಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ ಹೆಗ್ಡೆ ಬಿ.ಎ ಮತ್ತಿತರ ಎಸ್.ಡಿ.ಎಂ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ನ ಸ್ವಯಂ ಸೇವಕರು ಸಿಹಿ ವಿತರಿಸಿದರು. ದೈಹಿಕ ಶಿಕ್ಷಣ ವಿಭಾಗದ ಸ್ಪೋರ್ಟ್ಸ್ ಕ್ಲಬ್ ವಿದ್ಯಾರ್ಥಿಗಳು ಇಡೀ ಕ್ರೀಡಾಂಗಣವನ್ನು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿದ್ದರು.