ಅನ್ವೇಷಣಾ - ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನ
Published Date: 27-Jun-2026
ಧಾರವಾಡ/ಸತ್ತೂರು: ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಶರೀರಕ್ರೀಯಾಶಾಸ್ತ್ರ ವಿಭಾಗವು ಮೊದಲ ವರ್ಷದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗಾಗಿ ಒಂದು ದಿನದ “ಅನ್ವೇಷಣಾ - ವೈಜ್ಞಾನಿಕ ಪರಿಶೋಧನೆ” ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಎಸ್ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ: ಶರೀರಕ್ರೀಯಾಶಾಶಾಸ್ತ್ರದ ಮಾದರಿ ತಯಾರಿಕೆ ಮತ್ತು ಅಧ್ಯಯನವು ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ನೂತನ ಪರಿಕಲ್ಪನೆಯಾಗಿದೆ. ಮಾದರಿ ತಯಾರಿಕೆಯ ಅನುಭವವು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ಜೀವನಪರ್ಯಂತ ಉಪಯೋಗವಾಗಲಿದೆ. ಅಂಗರಚನಾಶಾಸ್ತ್ರ ಮತ್ತು ಶರೀರಕ್ರೀಯಾಶಾಸ್ತ್ರ ವಿಷಯಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಸಮಗ್ರವಾಗಿ ಅರ್ಥಮಾಡಿಕೊಳ್ಳಬೇಕು ಶರೀರಕ್ರೀಯಾಶಾಶಾಸ್ತ್ರದ ಜ್ಞಾನವು ದೇಶದ ಕಾರ್ಯವೈಖರಿಯನ್ನು ತಿಳಿಸುವುದಲ್ಲದೆ ಸೂಕ್ಷ್ಮ ರೀತಿಯ ರೋಗ ನಿರ್ಣಯ ಮಾಡಲು ಸಹಕಾರಿಯಾಗಿದೆ. ವೈದ್ಯರು ಶರೀರಕ್ರೀಯಾಶಾಸ್ತ್ರದ ಜ್ಞಾನವನ್ನು ವೈದ್ಯಕೀಯ ಸೇವೆಯಲ್ಲಿ ಅಳವಡಿಸಿಕೊಳ್ಳಬೇಕು ವೈದ್ಯಕೀಯ ಶಿಕ್ಷಣಕ್ಕೆ ರೋಗಿಗಳ ಪಾತ್ರ ಪ್ರಮುಖವಾಗಿರುವುದರಿಂದ ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪ ವೈದ್ಯಕೀಯ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಶರೀರಕ್ರೀಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ವಿ. ನಾಗಲಕ್ಷ್ಮಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸ್ಪರ್ಧೆ ಮತ್ತು ಪ್ರದರ್ಶನದಲ್ಲಿ ಮೊದಲ ವರ್ಷದ 150ಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಡಾ. ಸಾವಿತ್ರಿ ಸಿದ್ದನಗೌಡರ, ಡಾ. ಮಂಜುನಾಥ್ ಮೇಟಿ, ಡಾ. ಶಿವಕುಮಾರ್ ಹಾಗೂ ಡಾ. ಆದಿತ್ಯ ಅಗ್ನಿಹೋತ್ರಿ ಕಾರ್ಯನಿರ್ವಹಿಸಿದರು. ಶರೀರಕ್ರೀಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವಿದ್ಯಾ ಎಂ. ನಾಡಿಗೇರ್ ಅತಿಥಿಗಳನ್ನು ಸ್ವಾಗತಿಸಿದರು. ವಿಶಾಲ್ ಹಾಗೂ ಜಾನ್ಹವಿ ಕಾರ್ಯಕ್ರಮವನ್ನು ನಿರೂಪಿಸಿದರು. ಶರೀರಕ್ರೀಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.